'ಬಿಗ್ ಬಾಸ್ 2' ಶೋನಲ್ಲಿ ಇವರೆಲ್ಲಾ ಇರ್ತಾರಾ?
ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಮತ್ತೊಂದು ಸುತ್ತಿನ ಸುನಾಮಿ ಎಬ್ಬಿಸಲು ಬರುತ್ತಿದೆ 'ಬಿಗ್ ಬಾಸ್ 2'. ಈ ಬಾರಿಯೂ ಕಿಚ್ಚ ಸುದೀಪ್ ಅವರು ಕಾರ್ಯಕ್ರಮವನ್ನು ನಿರೂಪಿಸುತ್ತಿರುವುದು ವಿಶೇಷ. ಈ ಬಾರಿಯ ಸೀಸನ್ ನಲ್ಲಿ ಯಾರೆಲ್ಲಾ ಇರುತ್ತಾರೆ ಎಂಬ ಬಗ್ಗೆ ಈಗಲೇ ಊಹಾಪೋಹಗಳು ಶುರುವಾಗಿವೆ.
ಈ ಬಗ್ಗೆ ಸುದೀಪ್ ಅವರು ಈಗಾಗಲೆ ಟ್ವೀಟಿಸಿದ್ದು, ಈ ಬಾರಿ ಯಾರೆಲ್ಲಾ ಹೊಸಬರಿರುತ್ತಾರೆ ಎಂಬ ಬಗ್ಗೆ ತಮಗೂ ಗೊತ್ತಿಲ್ಲ ಎಂದು ಸ್ಮಾರ್ಟ್ ಆಗಿ ಉತ್ತರಿಸಿದ್ದಾರೆ. ಆದರೆ ಕಿರುತೆರೆ ವೀಕ್ಷಕರು ಮಾತ್ರ ಸುದೀಪ್ ಅವರಿಗೆ ಗೊತ್ತಿಲ್ಲದೆ ಇರಲು ಹೇಗೆ ಸಾಧ್ಯ? ಎಂಬ ಗುಮಾನಿ ವ್ಯಕ್ತಪಡಿಸಿದ್ದಾರೆ. ['ಬಿಗ್ ಬಾಸ್ 2' ಸುವರ್ಣ ಪಾಲು; ಸುದೀಪ್ ನಿರೂಪಣೆ]
ಈ ಬಾರಿಯ ಸೀಸನ್ ನಲ್ಲಿ ಯಾರೆಲ್ಲಾ ಹೊಸಬರಿರುತ್ತಾರೆ ಎಂಬುದರ ಮೇಲೊಮ್ಮೆ ಕಣ್ಣಾಡಿಸೋಣ. ಮೂಲಗಳ ಪ್ರಕಾರ ಈ ಬಾರಿ ಹಲವು ಹೆಸರುಗಳು ಕೇಳಿಬಂದಿವೆ. ರವಿಚಂದ್ರನ್, ರಾಗಿಣಿ, ಜಗ್ಗೇಶ್, ರೇಣುಕಾಚಾರ್ಯ ಮುಂತಾದವರ ಈ ಬಾರಿಯ ಸೀಸನ್ ನಲ್ಲಿ ಸ್ಥಾನ ಸಂಪಾದಿಸಿದ್ದಾರಂತೆ. ಬನ್ನಿ ಒಮ್ಮೆ ಸ್ಲೈಡ್ ನಲ್ಲಿ ನೋಡೋಣ...

ಕ್ರೇಜಿಸ್ಟಾರ್ ರವಿಚಂದ್ರನ್
ನಲ್ಲ ಮತ್ತು ಮಲ್ಲರ ಕಾಂಬಿನೇಷನ್ ನಲ್ಲಿ ಬಂದಂತಹ 'ಮಾಣಿಕ್ಯ' ಹಿಟ್ ದಾಖಲಿಸಿದೆ. ಈ ಬಾರಿ ಕ್ರೇಜಿಸ್ಟಾರ್ ಅವರೂ ಬಿಗ್ ಬಾಸ್ 2 ನಲ್ಲಿ ಕಾಣಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದು ನಂಬಲು ಸ್ವಲ್ಪ ಕಷ್ಟವಾದರೂ ಅವರು ವಿಶೇಷ ಅತಿಥಿಯಾಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ
ರವಿಚಂದ್ರನ್ ಬರ್ತಾರೆ ಎಂದರೆ ರಾಗಿಣಿ ಯಾಕಾಗಬಾರದು? ಇದೂ ನಂಬಿಕೆಗೆ ದೂರವಾದ ಮಾತಾದರೂ ಇವರೂ ಅಪರೂಪದ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬರವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಸ್ಯಾಂಡಲ್ ವುಡ್ ಗೆ 'ವೀರಮದಕರಿ' ಚಿತ್ರದ ಮೂಲಕ ರಾಗಿಣಿ ಅವರನ್ನು ಪರಿಚಯಿಸಿದ್ದೇ ಕಿಚ್ಚ ಸುದೀಪ್ ಅಲ್ಲವೆ?

ಮಾಜಿ ಸಚಿವ ಎಸ್.ಎ.ರಾಮದಾಸ್ ಪ್ರೇಯಸಿ
ಮಾಜಿ ಸಚಿವ ಎಸ್.ಎ. ರಾಮದಾಸ್ ನನಗೆ ನಂಬಿಸಿ ಮೋಸ ಮಾಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ರಂಪಾಟ ಮಾಡಿಕೊಂಡಿದ್ದ ಪ್ರೇಮಕುಮಾರಿ ಅವರು ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಒಂದು ವೇಳೆ ಪ್ರೇಮಾಕುಮಾರಿ ಬಿಗ್ ಬಾಸ್ ಸೀಸನ್ ಗೆ ಅಡಿಯಿಟ್ಟರೆ ಇನ್ನೇನು ಕಾದಿದೆಯೋ ಏನೋ.

ಸ್ಯಾಂಡಲ್ ವುಡ್ ಅರ್ಜುನ್ ರಾಂಪಾಲ್
ಸುದೀಪ್ ಅಭಿನಯದ ಬಹುತೇಕ ಚಿತ್ರಗಳಲ್ಲಿ ಕಾರ್ತಿಕ್ ವಿಲನ್. ಜರಾಸಂಧ, ಜಾನಿ ಮೇರಾ ನಾಮ್ ಚಿತ್ರಗಳಲ್ಲಿ ದುನಿಯಾ ವಿಜಯ್ ಜೊತೆ ಅಭಿನಯಿಸಿದ್ದಾರೆ. ಕನ್ನಡ ಕಿರುತೆರೆಯಲ್ಲೂ ಸೂಪರ್ ಸ್ಟಾರ್ ಜೆಕೆ ಆಗಿ ಮಿಂಚಿದ್ದಾರೆ. ಜಯಕಾರ್ತಿಕ್ ಬಿಗ್ ಬಾಸ್ ಗೆ ಅಡಿಯಿಟ್ಟರೆ ಚೆನ್ನಾಗಿರುತ್ತದೆ.

ಮಾಜಿ ಅಬಕಾರಿ ಸಚಿವ ರೇಣುಕಾಚಾರ್ಯ
ಮಾಜಿ ಅಬಕಾರಿ ಸಚಿವ ರೇಣುಕಾಚಾರ್ಯ ಈಗ ಹೇಗಿದ್ದರೂ ಫ್ರೀಯಾಗಿದ್ದಾರೆ. ಒಂದಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಬಂದು ರಿಲ್ಯಾಕ್ಸ್ ಆಗಿಹೋಗಬಹುದು. ಆದರೆ ಇನ್ನೂ ಕನ್ಫರ್ಮ್ ಇಲ್ಲದೆ ಇರುವ ಕಾರಣ ರೇಣುಕಾಚಾರ್ಯ ಎಂಟ್ರಿ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ.

ಪ್ರತಿಭಾನ್ವಿತ ನಟ ಮಾಸ್ಟರ್ ಆನಂದ್
ಮಾಸ್ಟರ್ ಆನಂದ್ ಎಂದೇ ಜನಪ್ರಿಯರಾಗಿರುವ ನಟ ಎಚ್ ಆನಂದ್. ಬೆಳ್ಳಿತೆರೆಯಲ್ಲಿ ನಕ್ಕುನಲಿಸಿದ್ದ ಮಾಸ್ಟರ್ ಆನಂದ್ ಅವರು ಕಿರುತೆರೆಯಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿ 'ಎಸ್ಎಸ್ಎಲ್ಸಿ ನನ್ ಮಕ್ಳು', 'ಪಡುವಾರಳ್ಳಿ ಪಡ್ಡೆಗಳು' ಜನಪ್ರಿಯರಾದವರು. ಬಿಗ್ ಬಾಸ್ ಗೆ ಅಡಿಯಿಟ್ಟರೆ ಆನಂದವೋ ಆನಂದ.

ನಟಿ ರಾಧಿಕಾ ಕುಮಾರಸ್ವಾಮಿ
ನಟಿ ರಾಧಿಕಾ ಕುಮಾರಸ್ವಾಮಿ ಅವರು ಈಗ ಹಲವಾರು ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಒಂದು ವೇಳೆ ಅವರು ಬಿಗ್ ಬಾಸ್ ಮನೆಗೆ ಅಡಿಯಿಟ್ಟರೆ ಮನೆಗೆ ಬಂದ ಮಹಾಲಕ್ಷ್ಮಿಯೇ ಆಗುತ್ತಾರೆ.

ಮಿಂಚಿನ ತಾರೆ ಸುಮನ್ ರಂಗನಾಥ್
ಮಿಂಚಿ ಹೋಗುವ ಪಾತ್ರಗಳಲ್ಲಿ ಬಂದು ಮರೆಯಾಗುವ ಬೆಡಗಿ ಸುಮನ್ ರಂಗನಾಥ್. ಬುದ್ಧಿವಂತ' ಚಿತ್ರದಲ್ಲಿ ಚಿತ್ರಾನ್ನ ಚಿತ್ರಾನ್ನ ಎಂದು ರಸಿಕರಿಗೆ ಪಂಚಾಮೃತ ಬಡಿಸಿದ್ದ ತಾರೆ. ಬಿಗ್ ಬಾಸ್ ಮನೆಗೆ ಅಡಿಯಿಟ್ಟರೆ ಇನ್ನಷ್ಟು ಅಚ್ಚರಿಗಳನ್ನು ನಿರೀಕ್ಷಿಸಬಹುದು. ಸಿಸಿಎಲ್ ಕ್ರಿಕೆಟ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಸದಾ ಬೆಂಬಲ ವ್ಯಕ್ತಪಡಿಸುತ್ತಿದ್ದ ಸುಮನ್ ರಂಗನಾಥ್ ಬಂದರೂ ಅಚ್ಚರಿಪಡಬೇಕಿಲ್ಲ.

ಖ್ಯಾತ ಕಿರುತೆರೆ ನಟಿ ಸುಷ್ಮಾ ಕೆ.ರಾವ್
ಖ್ಯಾತ ಕಿರುತೆರೆ ತಾರೆ ಸುಷ್ಮಾ ಕೆ ರಾವ್ ಅವರ ಹೆಸರು ಈ ಬಾರಿಯ ಬಿಗ್ ಬಾಸ್ 2 ನಲ್ಲಿ ಕೇಳಿಬಂದಿದೆ. ಸುಷ್ಮಾ ಅವರು ಅಡಿಯಿಟ್ಟರೆ ಒಂದಷ್ಟು ಗಾಸಿಪ್, ಇನ್ನೊಂದಿಷ್ಟು ಮನರಂಜನೆ ಗ್ಯಾರಂಟಿ.


Click it and Unblock the Notifications











