'ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!
ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ-4' ಮುಕ್ತಾಯಗೊಂಡಿದೆ. ಬಹುತೇಕ ವೀಕ್ಷಕರ ಇಚ್ಚೆಯಂತೆ 'ಒಳ್ಳೆ ಹುಡುಗ' ಪ್ರಥಮ್ ವಿಜೇತರಾಗಿ ಹೊರಹೊಮ್ಮಿದ್ದಾರೆ.
''ಬಿಗ್ ಬಾಸ್ ಕನ್ನಡ-4' ವಿನ್ನರ್ ಪ್ರಥಮ್'' ಎಂದು ಸುದೀಪ್ ಅನೌನ್ಸ್ ಮಾಡ್ತಿದ್ದಂತೆ, ''ಇದು ನನ್ನ ಗೆಲುವಲ್ಲ, ಕನ್ನಡಿಗರ ಗೆಲುವು'' ಅಂತ ಸ್ಟೇಜ್ ತುಂಬಾ ಕುಣಿದಾಡಿ ಪ್ರಥಮ್ ಸಂಭ್ರಮಿಸಿದರು.[ಒನ್ಇಂಡಿಯಾ ಫೇಸ್ ಬುಕ್ ಪೋಲ್ ಪ್ರಕಾರ 'ಬಿಗ್ ಬಾಸ್' ವಿನ್ನರ್ ಇವರೇ.!]

ಆಡಿದ ಮಾತಿನಂತೆ, ತಮಗೆ ಸಿಕ್ಕ ಅರ್ಧ ಕೋಟಿ ರೂಪಾಯಿ ಬಹುಮಾನ ಹಣವನ್ನ ಕನ್ನಡಿಗರ ಒಳಿತಿಗಾಗಿ ಹಾಗೂ ಹುತಾತ್ಮ ಯೋಧರ ಕುಟುಂಬದವರಿಗೆ ನೀಡುವುದಾಗಿ ಪ್ರಥಮ್ ಹಾಗೂ ಅವರ ತಂದೆ ಮಲ್ಲಣ್ಣ ಘೋಷಿಸಿದ್ದಾರೆ.['ಬಿಗ್ ಬಾಸ್' ವಿನ್ನರ್ ವಿಜಯ್ ರಾಘವೇಂದ್ರ ಪ್ರಕಾರ ಈ ಬಾರಿ ಗೆಲ್ಲೋರು ಯಾರು?]

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಪ್ರಥಮ್ ವಿನ್ನರ್ ಆದ್ರೆ ರನ್ನರ್ ಆಪ್ ಸ್ಥಾನ ಅಲಂಕರಿಸಿದ್ದು 'ಕಿರಿಕ್' ಕೀರ್ತಿ. ಇನ್ನೂ ಮೂರನೇ ಸ್ಥಾನಕ್ಕೆ ನಟಿ ರೇಖಾ ತೃಪ್ತಿ ಪಟ್ಟುಕೊಳ್ಳಬೇಕಾಯ್ತು.

'ರನ್ನರ್ ಅಪ್' ಆದವರಿಗೆ ಟ್ರೋಫಿ ಒಂದನ್ನು ಬಿಟ್ಟು ಬಹುಮಾನ ಹಣವಿಲ್ಲದೇ ಇದ್ದರಿಂದ ತಮಗೆ ಸಿಗುವ ಸಂಭಾವನೆಯಲ್ಲಿ ಸ್ವಲ್ಪ ಹಣವನ್ನ ಕನ್ನಡ ಶಾಲೆಗಳಿಗೆ ನೀಡುವುದಾಗಿ ಕೀರ್ತಿ ಹೇಳಿದರು. ಅದಕ್ಕೆ ಕೈ ಜೋಡಿಸಿದ ಕಿಚ್ಚ ಸುದೀಪ್, ವೈಯುಕ್ತಿಕವಾಗಿ 10 ಲಕ್ಷ ರೂಪಾಯಿ ನೀಡುವುದಾಗಿ ಮಾತು ಕೊಟ್ಟಿದ್ದಾರೆ.


Click it and Unblock the Notifications











