'ಗೋಮುಖ ವ್ಯಾಘ್ರ' ರಿಯಾಝ್ ಔಟ್ ಆದರೆ ಪಾರ್ಟಿ ಮಾಡ್ತಾರಂತೆ ಚಂದನ್ ಶೆಟ್ಟಿ.!
Recommended Video

ಇಷ್ಟು ದಿನ ಯಾವುದೇ ವಿವಾದಗಳಿಗೆ ಸಿಲುಕದೆ, ಕೇವಲ ಟಾಸ್ಕ್ ಮೇಲೆ ಮಾತ್ರ ಗಮನ ಹರಿಸುತ್ತಿದ್ದ ಚಂದನ್ ಶೆಟ್ಟಿ ಇದೀಗ ರಿಯಾಝ್ ಮೇಲೆ ಕೆಂಡಕಾರಲು ಆರಂಭಿಸಿದ್ದಾರೆ.
ಕೆಲವೇ ವಾರಗಳ ಹಿಂದೆ ತಾವು ಕ್ಯಾಪ್ಟನ್ ಆಗಿದ್ದಾಗ, ರಿಯಾಝ್ ರನ್ನ ಚಂದನ್ ಶೆಟ್ಟಿ ಬಚಾವ್ ಮಾಡಿದ್ದರು. ಆದ್ರೀಗ, ಅದೇ ಚಂದನ್ ಶೆಟ್ಟಿ ''ರಿಯಾಝ್ ಔಟ್ ಆಗಬೇಕು'' ಎಂದು ಹೇಳುತ್ತಿದ್ದಾರೆ.
ಈ ವಾರ ರಿಯಾಝ್ ಔಟ್ ಆಗಲಿ ಎಂದು ಚಂದನ್ ಶೆಟ್ಟಿ ದೇವರಿಗೆ ಹರಕೆ ಹೊರುತ್ತಾರಂತೆ. ರಿಯಾಝ್ ಔಟ್ ಆಗ್ಬಿಟ್ಟರೆ, 'ಬಿಗ್ ಬಾಸ್' ಮನೆಯಲ್ಲಿ ಚಂದನ್ ಶೆಟ್ಟಿ ಪಾರ್ಟಿ ಮಾಡ್ತಾರಂತೆ.!
ಆರು ವಾರಗಳ ಕಾಲ ಅಣ್ಣ-ತಮ್ಮಂದಿರಂತೆ ಇದ್ದ ರಿಯಾಝ್ ಹಾಗೂ ಚಂದನ್ ಶೆಟ್ಟಿ ನಡುವೆ ಇದೀಗ ದೊಡ್ಡ ಭಿನ್ನಾಭಿಪ್ರಾಯ ಮೂಡಲು ಕಾರಣ 'ಬಲೂನ್' ಟಾಸ್ಕ್. ಬಲೂನ್ ಗಳ ಜೊತೆಗೆ ರಿಯಾಝ್ ಹಾಗೂ ಚಂದನ್ ಶೆಟ್ಟಿ ನಡುವೆ ಇದ್ದ ಗೆಳೆತನ ಕೂಡ ಒಡೆದು ಹೋಗಿದೆ. ಮುಂದೆ ಓದಿರಿ...

'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ ಏನು.?
ಮನೆಯ ಸದಸ್ಯರಿಗೆ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಅದರ ಅನುಸಾರ, ಸದಸ್ಯರನ್ನ ಎರಡು ತಂಡಗಳಾಗಿ ವಿಭಜಿಸಲಾಗಿತ್ತು. ತಮ್ಮ ತಂಡದ ಸದಸ್ಯರು ಬಲೂನ್ ಗಳನ್ನು ಊದಿ ಎದುರಾಳಿ ತಂಡದ ಬೋರ್ಡ್ ಮೇಲೆ ಅಂಟಿಸಬೇಕಿತ್ತು. ಜೊತೆಗೆ ತಮ್ಮ ತಂಡದ ಬಲೂನ್ ಗಳನ್ನ ಎದುರಾಳಿ ತಂಡದಿಂದ ಕಾಪಾಡಿಕೊಳ್ಳಬೇಕಿತ್ತು. ಯಾವ ತಂಡ ಅತಿ ಹೆಚ್ಚು ಬಲೂನ್ ಊದಿ ಬೋರ್ಡ್ ಮೇಲೆ ಅಂಟಿಸುತ್ತಾರೋ, ಆ ತಂಡ ವಿಜಯಶಾಲಿ ಆಗುತ್ತಿತ್ತು.

ಬೇರೆ ಬೇರೆ ತಂಡದಲ್ಲಿ ಇದ್ದ ಚಂದನ್ ಶೆಟ್ಟಿ-ರಿಯಾಝ್
ಬಲೂನ್ ಟಾಸ್ಕ್ ನಲ್ಲಿ ರಿಯಾಝ್ ಹಾಗೂ ಚಂದನ್ ಶೆಟ್ಟಿ ಬೇರೆ ಬೇರೆ ತಂಡದಲ್ಲಿ ಇದ್ದರು. ಟಾಸ್ಕ್ ನಲ್ಲಿ ರಿಯಾಝ್ ರನ್ನ ಎಳೆಯುವುದು, ತಳ್ಳುವುದನ್ನು ಚಂದನ್ ಶೆಟ್ಟಿ ಮಾಡುತ್ತಿದ್ದರು.

ರಿಯಾಝ್ ಗೆ ಪೆಟ್ಟಾಯ್ತು.!
ಎದುರಾಳಿ ತಂಡದ ಬಲೂನ್ ನಾಶ ಮಾಡುವ ಭರದಲ್ಲಿದ್ದ ರಿಯಾಝ್ ಗೆ ಚಂದನ್ ಶೆಟ್ಟಿ ಕಡೆಯಿಂದ ಪೆಟ್ಟು ಬಿತ್ತು. ಪೆಟ್ಟು ಬಿದ್ದ ಸಿಟ್ಟಿನಲ್ಲಿ ಕ್ಯಾಪ್ಟನ್ ಜೆಕೆಗೆ ಚಂದನ್ ಶೆಟ್ಟಿ ಮೇಲೆ ರಿಯಾಝ್ ದೂರು ಹೇಳಿದರು.

ಏಕವಚನ ಪ್ರಯೋಗ ಮಾಡಿದ ಚಂದನ್ ಶೆಟ್ಟಿ
''ನೀನು ಸಾಚಾ ತರಹ ಆಡಬೇಡ'' ಅಂತ ಇದೇ ಸಮಯಕ್ಕೆ ರಿಯಾಝ್ ಜೊತೆ ಏಕವಚನದಲ್ಲಿ ಚಂದನ್ ಶೆಟ್ಟಿ ಮಾತನಾಡಲು ಶುರು ಮಾಡಿದರು. ಇದರಿಂದ ಬೇಸರಗೊಂಡ ರಿಯಾಝ್, ''ಮೊದಲ ದಿನದಿಂದಲೂ ನಾನು ತಮ್ಮನ ಹಾಗೆ ಮಾತನಾಡಿಸಿದರೆ...'' ಅಂತ ಹೇಳುವಷ್ಟರಲ್ಲಿ, ''ನಾನು ಇವತ್ತಿನಿಂದ ಹಾಗೇ ಮಾತನಾಡಿಸುತ್ತೇನೆ'' ಎಂದುಬಿಟ್ಟರು ಚಂದನ್ ಶೆಟ್ಟಿ.

ಗೋಮುಖ ವ್ಯಾಘ್ರ ಅಂತೆ.!
''ಗೋಮುಖ ವ್ಯಾಘ್ರ ತರಹ ಅವರು (ರಿಯಾಝ್). ಒಳಗಡೆ ಸಿಂಹ ಇರುವುದು. ಮುಖ ಮಾತ್ರ ಹಸು ತರಹ'' ಅಂತ ಬ್ರೇಕ್ ಟೈಮ್ ನಲ್ಲಿ ದಿವಾಕರ್ ಜೊತೆ ಚಂದನ್ ಶೆಟ್ಟಿ ಹೇಳುತ್ತಿದ್ದರು.

ಈ ವಾರ ಔಟ್ ಆಗಬೇಕು.!
''ಈ ವಾರ ಅವರು ಹೊರಗೆ ಹೋಗಬೇಕು. ನಾನು ಪಾರ್ಟಿ ಮಾಡಿ ಬಿಡುತ್ತೇನೆ ಮನೆಯಲ್ಲಿ. ತುಂಬಾ ಪ್ಲಾನ್ ಮಾಡಿ ಆಟ ಆಡುತ್ತಿದ್ದಾನೆ. ನೀನು ಹುಷಾರಾಗಿರು.
ಇನ್ಮೇಲೆ ಅವನಿಗೆ ಮರ್ಯಾದೆ ಕೊಡಲ್ಲ. ಸುಳ್ಳು ಹೇಳುತ್ತಾನೆ. ನಾನು ಹೊಡೆದಿಲ್ಲ. ಈ ವಾರ ನೋಡು ಯಾರು ಹೋಗುತ್ತಾರೆ ಅಂತ, ಬೇಕಾದರೆ ನಾನು ದೇವರಿಗೆ ಹರಕೆ ಹೊರುತ್ತೇನೆ'' ಎಂದೆಲ್ಲ ಚಂದನ್ ಶೆಟ್ಟಿ ಹೇಳಿದ್ದಾರೆ.

ನನ್ನ ಹೆಸರು ಯಾಕೆ.?
''ನಾನು ಆಕ್ರಮಣಕಾರಿ ಆಗಲಿಲ್ಲ. ಜಗನ್ ಆಕ್ರಮಣಕಾರಿ ಆಗಿ ಆಡುತ್ತಿದ್ದರು. ಆದ್ರೆ ರಿಯಾಝ್ ಮಾತ್ರ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದರು'' - ಚಂದನ್ ಶೆಟ್ಟಿ

ಚಂದನ್ ಶೆಟ್ಟಿ ತಲೆಯಲ್ಲಿ ಇದೆಲ್ಲ ಇರಲಿಲ್ಲ.!
''ನಮಗೆ ಆ ತರಹ ಮೈಂಡ್ ಸೆಟ್ ಇರಲಿಲ್ಲ. ಅವರೇ ಬಂದು ನಮ್ಮ ತಲೆಗೆ ತುಂಬಿದ್ರಿಂದ, ಅವರ ಮಾತನ್ನ ನಾವು ಕೇಳಲು ಶುರು ಮಾಡಿದ್ವಿ. ಈ ಸಲ ಶ್ರುತಿ ರನ್ನ ಕಳುಹಿಸಿ ಬಿಡೋಣ ಅಂತ ಹೇಳಿದರು. ನಾನು ಆ ಮಾತುಕತೆಯಲ್ಲಿ ಇರಲೇ ಇಲ್ಲ. ನಮ್ಮ ಮೇಲೆ ತುಂಬಾ ಹೇರಿಕೆ ಮಾಡುತ್ತಿದ್ದಾರೆ'' ಅಂತ ರಿಯಾಝ್ ವಿರುದ್ಧ ದಿವಾಕರ್ ಹಾಗೂ ನಿವೇದಿತಾ ಬಳಿ ಚಂದನ್ ಶೆಟ್ಟಿ ಹೇಳಿದ್ದಾರೆ.

ದಿವಾಕರ್ ಬದಲಾಗಿದ್ದಕ್ಕೆ ಕಾರಣ ಯಾರು.?
''ನಾನು ಎಲ್ಲರ ಹತ್ತಿರ ಚೆನ್ನಾಗಿ ಇದ್ದೇನೆ ಅಂದ್ರೆ ಅದಕ್ಕೆ ಕಾರಣ ನನ್ನಲ್ಲಿ ಇರುವ ತಾಳ್ಮೆ'' ಎಂದು ದಿವಾಕರ್ ಹೇಳಿದರೆ, ''ದಿವಾಕರ್ ಬದಲಾಗುವುದಕ್ಕೆ ತಾವೇ (ರಿಯಾಝ್) ಕಾರಣ ಅಂತ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ. ಅದಕ್ಕೆ ನಾನು ಒಪ್ಪಲ್ಲ'' ಎಂದಿದ್ದಾರೆ ಚಂದನ್ ಶೆಟ್ಟಿ.

ಇಬ್ಬರಲ್ಲಿ ಯಾರು ಸರಿ.?
ಚಂದನ್ ಶೆಟ್ಟಿ ಹಾಗೂ ರಿಯಾಝ್.... ಇಬ್ಬರಲ್ಲಿ ಗೋಮುಖ ವ್ಯಾಘ್ರ ಯಾರು.? ಯಾರ ನಡವಳಿಕೆ ಸರಿ.? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ, 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಲೈಕ್ ಮಾಡಿ ಕಾಮೆಂಟ್ ಮಾಡಿ...


Click it and Unblock the Notifications











