ಇವರೆಲ್ಲ 'ಬಿಗ್ ಬಾಸ್' ಗೆಲ್ಲಬೇಕಂತೆ.! ಯಾಕಂತೆ.?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಅದಾಗಲೇ ಹದಿನಾಲ್ಕು ವಾರಗಳು ಮುಗಿಯುತ್ತಾ ಬಂತು. ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಶುರುವಾಗಿರುವಾಗಲೇ, ಈ ಬಾರಿಯ ವಿನ್ನರ್ ಯಾರಾಗುತ್ತಾರೆ ಎಂಬುದರ ಬಗ್ಗೆ ಲೆಕ್ಕಾಚಾರ ಆರಂಭವಾಗಿದೆ.
ಸದ್ಯ 'ಬಿಗ್ ಬಾಸ್' ಮನೆಯೊಳಗೆ ಏಳು ಸ್ಪರ್ಧಿಗಳಿದ್ದಾರೆ. ಈ ಏಳು ಸ್ಪರ್ಧಿಗಳ ಪೈಕಿ ಒಬ್ಬರು ವಿಜೇತರಾಗುವುದು ಗ್ಯಾರೆಂಟಿ. ಅಷ್ಟಕ್ಕೂ, ಈ ಸ್ಪರ್ಧಿಗಳೆಲ್ಲ ಯಾಕೆ ಗೆಲ್ಲಬೇಕು.? ಗೆದ್ದರೆ ಏನು ಉಪಯೋಗ ಆಗುತ್ತೆ ಎಂಬ ಪ್ರಶ್ನೆ ವೀಕ್ಷಕರಿಗೆ ಕಾಡಿರಬಹುದು. ಅದಕ್ಕೆ ಅಂತಲೇ 'ಬಿಗ್ ಬಾಸ್' ಒಂದು ವಿಶೇಷ ಅವಕಾಶ ಕಲ್ಪಿಸಿದ್ದರು.
ತಮ್ಮಲ್ಲಿರುವ ವೈಶಿಷ್ಟತೆ ಏನು ಹಾಗೂ ತಾವು ಈ ಸ್ಪರ್ಧೆಯನ್ನು ಏಕೆ ಗೆಲ್ಲಬೇಕು ಎಂದು ಎಲ್ಲರ ಮುಂದೆ ವಿವರಿಸುವ ಅವಕಾಶವನ್ನ ಎಲ್ಲ ಸ್ಪರ್ಧಿಗಳಿಗೂ 'ಬಿಗ್ ಬಾಸ್' ನೀಡಿದರು. ಇದರ ಅನುಸಾರ ತಮ್ಮ ಮನಸ್ಸಿನಲ್ಲಿ ಇರುವ ಆಸೆಯನ್ನ ಎಲ್ಲ ಸ್ಪರ್ಧಿಗಳು ಹೊರ ಹಾಕಿದರು. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ, ಓದಿರಿ....

ವಿದ್ಯಾ ಕ್ರಾಂತಿ ಮಾಡಲು ಹೊರಟ ಸಮೀರಾಚಾರ್ಯ.!
''ಬಿಗ್ ಬಾಸ್' ಎನ್ನುವುದು ಒಬ್ಬ ಸಾಮಾನ್ಯನ ಅಸಮಾನ್ಯ ಕನಸು. ವಿದ್ಯೆ ಜೊತೆ ಸಂಸ್ಕಾರ ಇದ್ದರೆ, ಅದ್ಭುತವಾದ ಸಮಾಜ ನಿರ್ಮಾಣ ಮಾಡಬಹುದು. ಹೀಗಾಗಿ ಹುಬ್ಬಳ್ಳಿಯಲ್ಲಿ ಲಕ್ಷ್ಮೀಶ ಎಡ್ಜ್ಯುಕೇಷನ್ ಸೊಸೈಟಿ ಸ್ಥಾಪನೆ ಮಾಡಿ, ಶಾಲೆ ನಡೆಸುತ್ತಿದ್ದೇವೆ. ಇಲ್ಲಿ ಡೊನೇಷನ್ ತೆಗೆದುಕೊಳ್ಳುವುದಿಲ್ಲ. ಫೀ ಮಾತ್ರ ತೆಗೆದುಕೊಳ್ಳುತ್ತೇವೆ. ಪೋಷಕರು ಕಟ್ಟಿರುವ ಫೀ ಆಧಾರದ ಮೇಲೆ, ವಿದ್ಯಾರ್ಥಿಗಳು ಶಾಲೆ ಬಿಟ್ಟು ಹೋಗುವಾಗ ಸ್ಕಾಲರ್ ಶಿಪ್ ಮೂಲಕ ನೀಡುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಸಹಾಯ ಆಗುತ್ತದೆ. ಭಗವದ್ಗೀತೆ, ಕುರಾನ್ ಹಾಗೂ ಬೈಬಲ್ ನ ಟೆಕ್ಸ್ಟ್ ಆಗಿ ನಾವು ಮಾಡಿದ್ದೇವೆ. ನಮ್ಮ ದೇವಸ್ಥಾನಕ್ಕೆ ಬಂದ ಹಣವನ್ನೆಲ್ಲ ಈ ಸಂಸ್ಥೆಗೆ ನೀಡುತ್ತಿದ್ದೇವೆ. ಹೀಗಾಗಿ, 'ಬಿಗ್ ಬಾಸ್' ಗೆದ್ದರೆ ಬರುವ ಹಣದಿಂದಲೂ, ಉತ್ತಮ ಸಮಾಜ ನಿರ್ಮಾಣ ಮಾಡುವ ಸಲುವಾಗಿ ಈ ಸಂಸ್ಥೆಗೆ ನೀಡುತ್ತೇನೆ. ನಮ್ಮ ದೇವಸ್ಥಾನವನ್ನೇ ಅಡ ಇಟ್ಟು ಈ ಸಂಸ್ಥೆ ಕಟ್ಟಿದ್ದೇವೆ ಅಂತ ದುಃಖದಿಂದ ಹೇಳುತ್ತೇನೆ. 'ಬಿಗ್ ಬಾಸ್' ವಿನ್ನರ್ ಪಟ್ಟ ಹಾಗೂ ಹಣ ಎರಡೂ ನನಗೆ ಮುಖ್ಯ ಇದೆ. 'ಬಿಗ್ ಬಾಸ್' ಗೆದ್ದರೆ, ಕರ್ನಾಟಕದಲ್ಲಿ ಅದ್ಭುತವಾದ ವಿದ್ಯಾ ಕ್ರಾಂತಿಯನ್ನೇ ಮಾಡಬಹುದು'' - ಸಮೀರಾಚಾರ್ಯ

ನಿವೇದಿತಾ ಯಾಕೆ ಗೆಲ್ಲಬೇಕು.?
''ಬಿಗ್ ಬಾಸ್' ನನಗೆ ಈ ಅವಕಾಶ ಕೊಟ್ಟಿರುವುದಕ್ಕೆ ನಾನು ತುಂಬಾ ಅದೃಷ್ಟವಂತೆ ಎಂದು ಭಾವಿಸುತ್ತೇನೆ. ಯಾಕಂದ್ರೆ, ಇದು ನನ್ನ ಕನಸು. ಇಷ್ಟು ದಿನ ನಾನು ತುಂಬಾ ಖುಷಿ ಆಗಿದ್ದೆ. ಇತರರ ಜೊತೆ ಕೂಡ ಸಂತೋಷದಿಂದಲೇ ನಡೆದುಕೊಂಡಿದ್ದೇನೆ. ನನ್ನ ಅನಿಸಿಕೆ ಹಂಚಿಕೊಂಡಿದ್ದೇನೆ. ಏನೇ ಮಾಡಿದ್ದರೂ ಮನಸ್ಸಿನಿಂದ ಮಾಡಿದ್ದೇನೆ. ಟಾಸ್ಕ್ ನಲ್ಲಿ ಹೆಚ್ಚು ಶ್ರಮ ಹಾಕಿದ್ದೇನೆ. ಇಲ್ಲಿಯವರೆಗೂ ಬಂದಿರುವುದೇ ನನ್ನ ಗೆಲುವು ಅಂತ ಭಾವಿಸುತ್ತೇನೆ. ಶೋ ಗೆದ್ದರೆ ಮನಸಾರೆ ಸ್ವೀಕರಿಸುತ್ತೇನೆ'' - ನಿವೇದಿತಾ ಗೌಡ

ದಿವಾಕರ್ ಗೆ ಗೆಲುವು ಯಾಕೆ ಬೇಕು.?
''ಜೀವನ ಪೂರ್ತಿ ತುಂಬಾ ಕಷ್ಟಪಟ್ಟು ಬಂದಿದ್ದೇನೆ. ನನ್ನ ಕೈಯಿಂದ ನಾಲ್ಕು ಜನರಿಗೆ ಸಹಾಯ ಮಾಡಬೇಕು ಎಂಬುದು ನನ್ನ ಆಸೆ. ವಯಸ್ಸಾದವರು ಭಿಕ್ಷೆ ಬೇಡುತ್ತಿದ್ದರೆ, ಮನಸ್ಸಿಗೆ ನೋವಾಗುತ್ತೆ. ನನ್ನ ಸಂಪಾದನೆಯಲ್ಲಿ ಹೆಚ್ಚು ಸಹಾಯ ಮಾಡಲು ಆಗಲ್ಲ. 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಗೆಲ್ಲುವ ಹಣದಿಂದ ಎಲ್ಲರಿಗೂ ಆಗದೇ ಹೋದರೂ, ನಾಲ್ಕು ಜನರಿಗೆ ಸಹಾಯ ಮಾಡಬೇಕು ಎಂದುಕೊಂಡಿದ್ದೇನೆ. ಗೆಲ್ಲದೇ ಹೋದರೂ ನನ್ನ ಕೈಯಲ್ಲಿ ಏನಾಗುತ್ತೆ ಅದನ್ನ ಮಾಡೇ ಮಾಡ್ತೀನಿ'' - ದಿವಾಕರ್

ಚಂದನ್ ಶೆಟ್ಟಿ ಏನಂದ್ರು.?
''ಮನುಷ್ಯನ ವ್ಯಕ್ತಿತ್ವಕ್ಕೆ ಸರ್ಟಿಫಿಕೇಟ್ ಸಿಗುವುದು 'ಬಿಗ್ ಬಾಸ್' ಮನೆಯಲ್ಲಿ ಮಾತ್ರ. ಆ ಸರ್ಟಿಫಿಕೇಟ್ ಮೇಲೆ ಗೆಲುವಿನ ಸೀಲ್ ಬಿದ್ದರೆ, ಅದರ ವಾಲ್ಯು ಹೆಚ್ಚಾಗುತ್ತದೆ. ನನ್ನ ಸರ್ಟಿಫಿಕೇಟ್ ಮೇಲೆ ಆ ಸೀಲ್ ಬೇಕು ಎನ್ನುವುದು ನನ್ನ ಆಸೆ. ಪೆನ್ನು ಪೇಪರ್, ವಾದ್ಯ ಇಲ್ಲದೆ ಹಾಡನ್ನ ಕಂಪೋಸ್ ಮಾಡಬಹುದು ಎಂಬ ಆತ್ಮ ವಿಶ್ವಾಸ ನನ್ನಲ್ಲಿ ಇರಲಿಲ್ಲ. ಆದ್ರೆ, ಈ ಮನೆ ನನಗೆ ತಂದುಕೊಡ್ತು. ಒಬ್ಬ ವ್ಯಕ್ತಿಗೆ ಅವನ ಪ್ರೋಫೈಲ್ ತುಂಬಾ ಮುಖ್ಯ. ನಾನು ಎಲ್ಲೇ ಹೋದರೂ, 'ಬಿಗ್ ಬಾಸ್ ವಿನ್ನರ್' ಅಂತ ಹೇಳಿದಾಗ ನನ್ನ ಪ್ರೋಫೈಲ್ ಗೆ ಹೆಚ್ಚು ವಾಲ್ಯು ಸಿಗುತ್ತೆ. ಹೀಗಾಗಿ ನನಗೆ 'ವಿನ್ನರ್' ಅಂತ ಟೈಟಲ್ ಬೇಕು. ದುಡ್ಡಿನ ಬಗ್ಗೆ ನನಗೆ ವ್ಯಾಮೋಹ ಇಲ್ಲ. ಆದ್ರೆ, ನಮ್ಮ ಕುಟುಂಬಕ್ಕೆ ಈ ಭೂಮಿ ಮೇಲೆ ಸ್ವಂತ ಜಾಗ ಅಂತ ಇಲ್ಲ. ಇದ್ದ ಆಸ್ತಿಯನ್ನ ಅನಿವಾರ್ಯ ಕಾರಣಗಳಿಂದ ಮಾರಬೇಕಾಯಿತು. ಸ್ವಂತ ಮನೆ ಮಾಡಬೇಕು ಎಂಬುದು ನನ್ನ ತಂದೆ ಆಸೆ. ಬರುವ ಹಣದಲ್ಲಿ ನನ್ನ ತಂದೆ ಆಸೆಯನ್ನ ಈಡೇರಿಸುತ್ತೇನೆ. ನನಗಾಗಿ ವೋಟ್ ಮಾಡಿರುವ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ'' - ಚಂದನ್ ಶೆಟ್ಟಿ

ಶ್ರುತಿ ಪ್ರಕಾಶ್ ಹೇಳಿದ್ದೇನು.?
''ಬಿಗ್ ಬಾಸ್ ಕನ್ನಡ' ಕಾರ್ಯಕ್ರಮಕ್ಕೆ ಬರ್ತೀನಿ ಅಂತ ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ಕನ್ನಡತಿ ಆಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಟಾಸ್ಕ್ ವಿಷಯದಲ್ಲಿ ನಾನು ಉತ್ತಮವಾಗಿ ಪರ್ಫಾಮ್ ಮಾಡಿದ್ದೇನೆ. ಜನರಿಗೆ ಅವರವರ ಫೇವರೇಟ್ ಸ್ಪರ್ಧಿಗಳು ಇರುತ್ತಾರೆ. ಯಾರು ಉತ್ತಮವೋ ಅವರು ಗೆಲ್ಲಲಿ ಅಂತ ಬಯಸುತ್ತೇನೆ'' - ಶ್ರುತಿ ಪ್ರಕಾಶ್

ಗೆದ್ದ ಹಣದಲ್ಲಿ ಅನುಪಮಾ ಗೌಡ ಏನ್ ಮಾಡ್ತಾರೆ.?
''ನನಗೆ ಕೆಲವು ಬದಲಾವಣೆಗಳು ಬೇಕೇ ಬೇಕಿತ್ತು. ಒಳಗೆ ಬಂದ ಮೇಲೆ ಕೆಲವು ಬದಲಾವಣೆಗಳು ಆಗಿವೆ. ಸ್ವಾರ್ಥಿಯಾಗಿ ಉತ್ತರ ಕೊಡುತ್ತೇನೆ. ನನ್ನ ಫ್ಯಾಮಿಲಿಗೆ ಸಹಾಯ ಮಾಡಬೇಕು. ನನ್ನ ತಂದೆ-ತಾಯಿಗೆ ಮನೆ ಕೊಡಿಸಬೇಕು ಅಂತಿದ್ದೀನಿ. ಐವತ್ತು ಲಕ್ಷ ಬಂದರೆ, ನನ್ನ ತಂದೆ-ತಾಯಿ ಸೆಟೆಲ್ ಆಗ್ತಾರೆ. ಅದೊಂದೇ ಕಾರಣಕ್ಕೆ ನಾನು ಗೆಲ್ಲಬೇಕು ಅಂತ ಹೇಳ್ತೀನಿ. ಅದು ಬಿಟ್ಟರೆ ಗೆಲ್ಲುವುದಕ್ಕೆ ಯಾವುದೇ ಕಾರಣಗಳು ಈ ಮನೆಯಲ್ಲಿ ಇಲ್ಲ'' - ಅನುಪಮಾ ಗೌಡ

ಜೆಕೆ ಹೇಳಿದ್ದೇನು.?
''ಹೊರಗಡೆ ನಾನು ಹೇಗಿದ್ನೋ, ಹಾಗೇ ಒಳಗೆ ಇರಲು ಪ್ರಯತ್ನ ಪಟ್ಟಿದ್ದೇನೆ. ಇಲ್ಲಿ ಜೀವನದ ಪಾಠ ಕಲಿಯುತ್ತಿದ್ದೇನೆ. ಕೆಲ ಟಾಸ್ಕ್ ಗಳಲ್ಲಿ ಮಾತ್ರ ಗೆದ್ದಿದ್ದೇನೆ. ಹಲವು ಟಾಸ್ಕ್ ಗಳಲ್ಲಿ ಸೋತಿದ್ದೇನೆ. ಸೋಲಿನಲ್ಲಿ ದುಃಖ ಪಟ್ಟಿಲ್ಲ'' - ಜಯರಾಂ ಕಾರ್ತಿಕ್


Click it and Unblock the Notifications











