'ಉತ್ತರ ಕರ್ನಾಟಕ' ಅಂತ ಕರೆಯುವುದು ಯಾಕೆ ಅಂತ್ಲೇ ಸೋನು ಪಾಟೀಲ್ ಗೆ ಗೊತ್ತಿಲ್ಲ.!
''ನಾನು ಉತ್ತರ ಕರ್ನಾಟಕದ ಮನೆ ಮಗಳು'' ಅಂತ ಪದೇ ಪದೇ ಹೇಳಿಕೊಳ್ಳುವಾಕೆ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಸ್ಪರ್ಧಿ ಸೋನು ಪಾಟೀಲ್.
ಉತ್ತರ ಕರ್ನಾಟಕದ ಭಾಷೆಯಲ್ಲೇ ಸದಾ ಮಾತನಾಡುವ 'ಜವಾರಿ ಹುಡುಗಿ' ಸೋನು ಪಾಟೀಲ್, ಮೊನ್ನೆ ಮೊನ್ನೆಯಷ್ಟೇ ''ನಮ್ಮ ಉತ್ತರ ಕರ್ನಾಟಕದ ಮಂದಿ ಕಾಲು ಧೂಳಿನ ಸಮ ಅಲ್ಲ ನೀನು. ಉತ್ತರ ಕರ್ನಾಟಕದ ಮಂದಿ ಸಪೋರ್ಟ್ ಮಾಡಿದ್ದಕ್ಕೆ ಮೂರು ವಾರದಿಂದ ಇದ್ದೇನೆ. ಚಾಲೆಂಜ್ ಹಾಕುವೆ... ಮೊದಲು ನಾನು ಹೋಗುತ್ತೇನೋ, ನೀನು ಹೋಗ್ತೀಯೋ ನೋಡೋಣ. ಉತ್ತರ ಕರ್ನಾಟಕದ ಮಂದಿ ಪವರ್ ಏನು ಅಂತ ತೋರಿಸ್ತೀನಿ ಬಾ'' ಅಂತ ಆಂಡ್ರ್ಯೂಗೆ ಸವಾಲು ಎಸೆದಿದ್ದರು.
ಮಾತು ಮಾತಿಗೂ ಉತ್ತರ ಕರ್ನಾಟಕ ಅಂತ ಹೇಳುವ ಸೋನು ಪಾಟೀಲ್, ''ಉತ್ತರ ಕರ್ನಾಟಕ ಮಂದಿಯನ್ನ ದುರುಪಯೋಗ ಪಡಿಸಿಕೊಳ್ತಿದ್ದಾರೆ'' ಅಂತ ಆಂಡ್ರ್ಯೂ ಆರೋಪಿಸಿದ್ದರು.
ಇಷ್ಟೆಲ್ಲಾ ಆದ್ಮೇಲೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ 'ಉತ್ತರ ಕರ್ನಾಟಕ'ದ ಬಗ್ಗೆ ಸೋನು ಪಾಟೀಲ್ ಗೆ ಕೆಲ ಪ್ರಶ್ನೆಗಳನ್ನು ಸುದೀಪ್ ಕೇಳಿದರು. ದುರಂತ ಅಂದ್ರೆ... ''ಉತ್ತರ ಕರ್ನಾಟಕದ ಮುದ್ದಿನ ಮಗಳು'' ಸೋನು ಪಾಟೀಲ್ ಗೆ ''ಉತ್ತರ ಕರ್ನಾಟಕ ಎಂಬ ಹೆಸರು ಯಾಕೆ ಬಂತು'' ಅನ್ನೋದೇ ಗೊತ್ತಿಲ್ಲ.!
ವೋಟ್ ಗಳಿಗಾಗಿ ಆಗಾಗ 'ಉತ್ತರ ಕರ್ನಾಟಕ'ದ ಹೆಸರು ಹೇಳುವ ಸೋನು ಪಾಟೀಲ್ ಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಮುಂದೆ ಓದಿರಿ...

ಸೋನುಗೆ ಸುದೀಪ್ ಕ್ಲಾಸ್
ಆನಂದ್ ನಡೆಸಿಕೊಟ್ಟ ಕ್ವಿಝ್ ಶೋ ಬಗ್ಗೆ ಮಾತನಾಡುತ್ತಿದ್ದಾಗ, ''ರಾಯಚೂರು ಯಾವ ಊರು ಪಕ್ಕಾ ಬರುತ್ತೆ.?'' ಎಂದು ಸುದೀಪ್ ಕೇಳಿದಾಗ, ''ಉತ್ತರ ಕರ್ನಾಟಕದಲ್ಲಿ.. ಗುಲ್ಬರ್ಗ ಪಕ್ಕದಲ್ಲಿ ಎಲ್ಲೋ ಬರುತ್ತೆ'' ಅಂತ ಕವಿತಾ ಹೇಳಿದರು. ಇದೇ ಪ್ರಶ್ನೆಯನ್ನ ''ಉತ್ತರ ಕರ್ನಾಟಕದ ಮನೆ ಮಗಳು'' ಎಂದು ಪದೇ ಪದೇ ಹೇಳಿಕೊಳ್ಳುವ ಸೋನು ಪಾಟೀಲ್ ಗೆ ಸುದೀಪ್ ಕೇಳಿದರು. ಅದಕ್ಕೆ, ''ಗದಗ ಸೈಡ್ ಬರುತ್ತೆ ಅಂದುಕೊಳ್ಳುತ್ತೇನೆ'' ಎಂದರು ಸೋನು.

ಸೋನುಗೆ ಪ್ರಶ್ನಿಸಿದ ಸುದೀಪ್
''ಉತ್ತರ ಕರ್ನಾಟಕದ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳುವೆ ಸೋನು ಅವರೇ...'' ಎನ್ನುತ್ತಾ ''ಉತ್ತರ ಕರ್ನಾಟಕ ಅಂತ ಯಾಕೆ ಕರೆಯುತ್ತಾರೆ.?'' ಎಂದು ಸೋನು ಪಾಟೀಲ್ ಗೆ ಸುದೀಪ್ ಪ್ರಶ್ನಿಸಿದರು.

ಸೋನು ಕೊಟ್ಟ 'ಉತ್ತರ' ಏನ್ಗೊತ್ತಾ.?
''ನಮ್ಮ ಮಂದಿ ಉತ್ತರ ಕೊಡುವುದರಲ್ಲಿ ಜಾಸ್ತಿ ಫೇಮಸ್. ಯಾವುದಕ್ಕೂ ಹೆದರಲ್ಲ. ಎಲ್ಲದಕ್ಕೂ ಹೊಂದುಕೊಂಡು ಹೋಗುತ್ತಾರೆ. ಮುಖಕ್ಕೆ ಹೊಡೆದ ಹಾಗೆ ಮಾತನಾಡುತ್ತಾರೆ'' ಎಂದರು ಸೋನು ಪಾಟೀಲ್.! ದುರಂತ ಅಂದ್ರೆ ಇದೇ ನೋಡಿ... ಸೋನು ಪಾಟೀಲ್ ಗೆ 'ಉತ್ತರ ಕರ್ನಾಟಕ'ದ ಅರ್ಥವೇ ಗೊತ್ತಿಲ್ಲ.!

ಪ್ರಶ್ನೆಗಳ ಸುರಿಮಳೆ
''ಮಲೆನಾಡು ಅಂತ ಕರೆಯುತ್ತಾರೆ.?'' ಎಂದು ಸುದೀಪ್ ಪ್ರಶ್ನಿಸಿದಾಗ, ''ಆ ಕಡೆ ನಾನು ಹೋಗಿಲ್ಲ. ಅದಕ್ಕೆ ನನಗೆ ಗೊತ್ತಿಲ್ಲ'' ಎಂದರು ಸೋನು ಪಾಟೀಲ್. ''ಕರಾವಳಿ ಅಂತ ಯಾಕೆ ಕರೆಯುತ್ತಾರೆ.?'' ಎಂದು ಸುದೀಪ್ ಕೇಳಿದಾಗ, ''ಅಲೆಗಳು ಬೀಸಿಕೊಂಡು ಹೋಗುತ್ತವೆ ಅದಕ್ಕೆ. ಅಲ್ಲಿ ಮೀನು ಹಿಡಿಯುತ್ತಾರೆ'' ಅಂತ ಸೋನು ಪಾಟೀಲ್ ಹೇಳಿದರು.

ದಕ್ಷಿಣದ ಅರ್ಥ ಗೊತ್ತಿದೆ.!
''ದಕ್ಷಿಣ ಕರ್ನಾಟಕ ಅಂತ ಯಾಕೆ ಕರೆಯುತ್ತಾರೆ.?'' ಎಂದು ಸುದೀಪ್ ಪ್ರಶ್ನಿಸಿದಾಗ, ''ದಕ್ಷಿಣಕ್ಕೆ ಮುಖ ಮಾಡಿಕೊಂಡಿದೆ. ಅದಕ್ಕೆ'' ಎಂದರು ಸೋನು ಪಾಟೀಲ್.

ಪಾಠ ಮಾಡಿದ ಸುದೀಪ್
''ನಿಮ್ಮ ಊರು ಉತ್ತರ ದಿಕ್ಕಿನಲ್ಲಿದೆ. ಅದಷ್ಟಿಕ್ಕೆ ಉತ್ತರ ಕರ್ನಾಟಕ. ಉತ್ತರ ಚೆನ್ನಾಗಿ ಕೊಡ್ತೀರಾ ಅಂತಲ್ಲ. ಉತ್ತರ ಕರ್ನಾಟಕದವರು ಬೇರೆ ಭಾಗದ ಜನರನ್ನು ಪ್ರೀತಿಸಲ್ಲ ಅಂತಲ್ಲ. ಭಾಗ ಮಾಡಬೇಡಿ. ಹಾಗ್ನೋಡಿದ್ರೆ, ಮಂಗಳೂರಿನವರು ನಿಮಗೆ ವೋಟ್ ಹಾಕುವ ಹಾಗಿಲ್ಲ'' ಎಂದು ಸೋನು ಪಾಟೀಲ್ ಗೆ ಸುದೀಪ್ ಬಿಸಿ ಮುಟ್ಟಿಸಿದರು.

ಭಾಗ ಮಾಡುತ್ತಿರುವ ಸೋನು.!
''ಭಾಗ ಮಾಡಿಲ್ಲ'' ಎಂದು ಸೋನು ಪಾಟೀಲ್ ಹೇಳಿದಾಗ, ''ಮಾಡ್ತಿದ್ದೀರಾ... ಕರ್ನಾಟಕದ ಒಳಗೆ ಎಲ್ಲರೂ ಇರೋದು. ಮಾತು ಮಾತಿಗೆ ಸೀಮಿತ ಮಾಡಿಕೊಳ್ಳಬೇಡಿ. ಪ್ರೀತಿಗೆ ಅರ್ಹರಾದಾಗ ಉತ್ತರ ಕರ್ನಾಟಕದವರು ಎಲ್ಲರನ್ನೂ ಪ್ರೀತಿಸುತ್ತಾರೆ. ನಮ್ಮ ಗುರುತು ನಾವು ಎಲ್ಲಿ ಹುಟ್ಟಿದ್ದೀವಿ ಅನ್ನೋದರ ಮೇಲೆ ಇರಲ್ಲ. ನಾವು ಜೀವನದಲ್ಲಿ ಏನು ಮಾಡಿದ್ದೀವಿ ಅನ್ನೋದರ ಮೇಲೆ ಗುರುತು ಸಿಗುತ್ತೆ'' ಎಂದು ಸೋನು ಪಾಟೀಲ್ ಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು.


Click it and Unblock the Notifications











