ಶಂಕರ್ ನಾಗ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಮಾಹಿತಿ ಬಾಯ್ಬಿಟ್ಟ ಜೈಜಗದೀಶ್.!
ಟೈಂ ಅನ್ನೋದು ಎಲ್ಲರ ಜೀವನದಲ್ಲೂ ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಸಾಧನೆ ಹಾದಿಯಲ್ಲಿದ್ದಾಗ ಟೈಂ ಬಗ್ಗೆ ತಲೆ ಕೆಡಿಸಿಕೊಳ್ಳದವರಿಗೆ ಆನಂತರದ ದಿನಗಳು ಸಮಯದ ಪಾಠವನ್ನ ಹೇಳಿ ಕೊಡುತ್ತವೆ. ಇದಕ್ಕೆ ಯಾರೂ ಹೊರತಲ್ಲ. ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ಕನ್ನಡದ ಖ್ಯಾತ ನಟ ಶಂಕರ್ ನಾಗ್.
ಶಂಕರ್ ನಾಗ್ ಅಂದಾಕ್ಷಣ ನಮ್ಮ ಕಣ್ಮುಂದೆ ಬರೋದು ಅವರ ಕ್ರಿಯೇಟಿವ್ ಚಲನಚಿತ್ರಗಳು. ಕನ್ನಡ ಚಿತ್ರಲೋಕಕ್ಕೆ ಹೊಸತನದ ಚಿತ್ರಕಥೆಗಳನ್ನ ನೀಡುವ ಮೂಲಕ ಚಂದನವನವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋದವರು ಶಂಕರ್ ನಾಗ್.
'ಸಿಬಿಐ ಶಂಕರ್', 'ಎಸ್.ಪಿ.ಸಾಂಗ್ಲಿಯಾನ'ದಂತಹ ಹಿಟ್ ಚಿತ್ರಗಳನ್ನು ಕೊಟ್ಟ ಶಂಕರ್ ನಾಗ್ ಸೇಮ್ ಟೈಂ 'ಮಾಲ್ಗುಡಿ ಡೇಸ್' ರೀತಿಯ ಕಲಾತ್ಮಕ ಚಿತ್ರವನ್ನೂ ಮಾಡಿ ಸೈ ಎನಿಸಿಕೊಂಡರು. ಅವರ ಕ್ರಿಯಾಶೀಲ ಕಾರ್ಯಕ್ಷಮತೆಗೆ ಈ ಪ್ರಯೋಗಗಳೇ ಕೈಗನ್ನಡಿಗಳು.

ಚಿತ್ರರಂಗ ಹೊರತಾಗಿ ನಾಡಿನ ಅಭಿವೃದ್ದಿ ವಿಚಾರಗಳ ಬಗೆಗೂ ತಲೆಕೆಡಿಸಿಕೊಂಡಿದ್ದವರು ಶಂಕರ್ ನಾಗ್. ಇಂದಿನ ಮೆಟ್ರೋ ಯೋಜನೆ ಬಗ್ಗೆ ಎರಡು ದಶಕದ ಹಿಂದೆಯೇ ರೂಪುರೇಷೆ ಸಿದ್ಧ ಮಾಡಿಟ್ಟುಕೊಂಡಿದ್ದವರು ಶಂಕರ್ ನಾಗ್. ಹಾಗೇ ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಿ ಪ್ರವಾಸೋದ್ಯಮವನ್ನ ವಿಶ್ವದರ್ಜೆಗೇರಿಸುವ ಚಿಂತನೆ ರೂಪಿಸಿದ್ದವರು.
ಹೀಗೆ ಎತ್ತರದ ಸ್ಥಾನದಲ್ಲಿದ್ದ ಶಂಕರ್ ನಾಗ್ ಅವರ ಜೀವನದಲ್ಲೂ ಕಾಲ ಕೈ ಕೊಡುವ ಸಂದರ್ಭವೊಂದು ಎದುರಾಗಿತ್ತಂತೆ. ಸಾಲು ಸಾಲು ಯಶಸ್ವಿ ಚಿತ್ರಗಳನ್ನ ಕೊಟ್ಟು ಹೊಸ ಪ್ರಯೋಗಗಳಿಗೆ ಒಡ್ಡಿಕೊಂಡಿದ್ದ ಶಂಕರ್ ನಾಗ್ ಗೆ ಉತ್ತುಂಗದ ಸ್ಥಿತಿಯ ನಂತರದ ಮೂರು ವರ್ಷ ಪಟ್ಟಪಾಡು ಅಷ್ಟಿಷ್ಟಲ್ಲವಂತೆ.
ಕಷ್ಟದ ಆ ಮೂರು ವರ್ಷಗಳಲ್ಲಿ ಸಿನಿಮಾ ಜಗತ್ತಿಗೆ ಅಷ್ಟೆಲ್ಲವನ್ನ ಕೊಟ್ಟಿದ್ದ ಶಂಕರ್ ನಾಗ್ ತಮ್ಮ ಜೀವನ ನಿರ್ವಹಣೆಗೆ ಆಶ್ರಯಿಸಿದ್ದು ಫುಟ್ ಪಾತ್ ವ್ಯಾಪಾರವನ್ನ. ಕಬ್ಬನ್ ಪಾರ್ಕ್ ನ ಕ್ವೀನ್ಸ್ ಪ್ರತಿಮೆ ಬಳಿ ಆ ಕಾಲದಲ್ಲೇ ಮೆಟಾಡೋರ್ ವಾಹನವನ್ನಿಟ್ಟುಕೊಂಡು ಮೊಬೈಲ್ ಕ್ಯಾಂಟೀನ್ ತೆರೆದು ಅದರ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದರು ಶಂಕರ್ ನಾಗ್.
ಕಾಲದ ಮೆಟ್ಟಿಲೇರಿ ಮುಂದೆ ಬಂದ ಶಂಕರ್ ನಾಗ್ ಮರಳಿ ಹೊಸ ಬದುಕು ಕಟ್ಟಿಕೊಂಡರಂತೆ. ಶಂಕರ್ ನಾಗ್ ಅವರ ಸ್ವಾಭಿಮಾನದ ಬದುಕಿನ ಆ ದಿನಗಳ ಬಗೆಗಿನ ಸ್ವಾರಸ್ಯಕರ ಮಾಹಿತಿಯನ್ನ ನೀಡಿದವರು ಅಂದಿನ ಅವರ ಗೆಳೆಯ ಜೈಜಗದೀಶ್. ಅದು 'ಬಿಗ್ ಬಾಸ್' ಮನೆಯಲ್ಲಿ.
''ಒಬ್ಬ ಫೇಮಸ್ ನಟ, ಮಾರ್ಕೆಟ್ ಬಿದ್ದು ಹೋದಾಗ ಕ್ಯಾಂಟೀನ್ ಇಟ್ಟುಕೊಂಡಿದ್ದರು. ಯಾರು ಹೇಳಿ ನೋಡೋಣ.?'' ಅಂತ 'ಬಿಗ್ ಬಾಸ್' ಮನೆಯಲ್ಲಿ ಜೈಜಗದೀಶ್ ಕೇಳಿದರು. ಅದಕ್ಕೆ ಯಾರಿಗೂ ಸರಿಯಾದ ಉತ್ತರ ಗೊತ್ತಿರಲಿಲ್ಲ. ಆಗ, ಅದು ಬೇರೆ ಯಾರೂ ಅಲ್ಲ ''ಶಂಕರ್ ನಾಗ್'' ಅಂತ ಜೈಜಗದೀಶ್ ಹೇಳಿದರು.
''ಶಂಕರ್ ಗೆ ಮಾರ್ಕೆಟ್ ಇರ್ಲಿಲ್ವಾ.?'' ಅಂತ ಶಾಕ್ ಆದವರಿಗೆ ಜೈಜಗದೀಶ್ ಹೇಳಿದಿಷ್ಟು - ''ಮೂರು ವರ್ಷ ಮಾರ್ಕೆಟ್ ಬಿದ್ದು ಹೋಗಿತ್ತು. ಆಗ ಕ್ವೀನ್ಸ್ ಪ್ರತಿಮೆ ಬಳಿ ಮೆಟಡೋರ್ ನಲ್ಲಿ ಕ್ಯಾಂಟೀನ್ ರನ್ ಮಾಡುತ್ತಿದ್ದರು ಶಂಕರ್. ಆಮೇಲೆ ಮತ್ತೆ ಟಾಪ್ ಗೆ ಬಂದರು''


Click it and Unblock the Notifications











