Exclusive: 'ಸೂರ್ಯವಂಶ' ಧಾರಾವಾಹಿಯಲ್ಲಿ ಅನಿರುದ್ಧ್ ನಟನೆ: ಆರೂರು ಜಗದೀಶ್ ಹೇಳಿದ್ದೇನು?
ನಟ ಅನಿರುದ್ಧ್ ಜತ್ಕರ್ 'ಜೊತೆ ಜೊತೆಯಲಿ' ಧಾರಾವಾಹಿ ಸೆಟ್ನಲ್ಲಿ ಕಿರಿಕ್ ಮಾಡಿಕೊಂಡು ಹೊರಬಂದಿದ್ದರು. ನಿರ್ಮಾಪಕ ಆರೂರ್ ಜಗದೀಶ್ ಅವರ ದೂರಿನ ಮೇರೆಗೆ ನಿರ್ಮಾಪಕರ ಸಂಘ 2 ವರ್ಷ ಅನಿರುದ್ಧ್ ಅವರನ್ನು ಕಿರುತೆರೆ ಧಾರಾವಾಹಿ ಮತ್ತು ರಿಯಾಲಿಟಿ ಶೋಯಿಂದ ಹೊರಗಿಡಲು ತೀರ್ಮಾನಿಸಿತ್ತು.
ಅನಿರುದ್ಧ್ ಜತ್ಕರ್ ಕೈಬಿಟ್ಟು ನಿರ್ಮಾಪಕ ಆರೂರು ಜಗದೀಶ್ 'ಜೊತೆ ಜೊತೆಯಲಿ' ಧಾರಾವಾಹಿ ಮುಂದುವರೆಸಿದ್ದಾರೆ. ಕಿರುತೆರೆ ನಿರ್ಮಾಪಕರ ಸಂಘದ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿದ್ದ ನಟ ಅನಿರುದ್ಧ್ ಫಿಲ್ಮಿಬೀಟ್ಗೆ ಪ್ರತಿಕ್ರಿಯಿಸಿದ್ದರು. "ನಾನು ಯಾವುದೇ ಕಾರ್ಯಕ್ರಮದಲ್ಲಿ ಕೆಲಸ ಮಾಡುವುದನ್ನು ಯಾರು ತಡೆಯಲು ಸಾಧ್ಯವಿಲ್ಲ. ಇದು ಅವರ ಅಧಿಕೃತ ಹೇಳಿಕೆಯೂ ಅಲ್ಲ, ಈ ಬಗ್ಗೆ ನನಗೆ ಯಾವುದೇ ಪತ್ರವೂ ಬಂದಿಲ್ಲ. ಅವರು ಆ ರೀತಿ ಹೇಳುವುದಕ್ಕೆ ಸಾಧ್ಯವೂ ಇಲ್ಲ" ಎಂದಿದ್ದರು.
ಅನಿರುದ್ಧ್ ಹೇಳಿದಂತೆ ಈಗ 'ಸೂರ್ಯವಂಶ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಭಿಮಾನಿಗಳಿಗೂ ಈ ವಿಚಾರ ಖುಷಿ ತಂದಿದೆ. ಎಸ್. ನಾರಾಯಣ್ ಈ ಧಾರಾವಾಹಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅನಿರುದ್ಧ್ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿರುವ ಬಗ್ಗೆ ಆರೂರು ಜಗದೀಶ್ ಫಿಲ್ಮಿಬೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯಕ್ಕೆ ನಾನು ಏನು ಹೇಳುವುದಿಲ್ಲ
"ಅನಿರುದ್ಧ್ ಅವರನ್ನು ಕಿರುತೆರೆಯಿಂದ 2 ವರ್ಷ ದೂರ ಇಡಬೇಕು ಎಂದು ನಾನು ತೀರ್ಮಾನ ಕೈಗೊಂಡಿದ್ದಲ್ಲ. ನಿರ್ಮಾಕರ ಸಂಘ ಕೈಗೊಂಡ ನಿರ್ಧಾರ. ಸದ್ಯ ನಾನು ನನ್ನ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿ ಇದ್ದೀನಿ. ಈ ಬಗ್ಗೆ ನಿರ್ಮಾಪಕರ ಸಂಘದವರು ಮಾತನಾಡಬೇಕು" ಎಂದು 'ಜೊತೆ ಜೊತೆಯಲಿ' ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್ ಹೇಳಿದ್ದಾರೆ.

ಹೊಸ ಧಾರಾವಾಹಿಯಲ್ಲಿ ಬ್ಯುಸಿ
ಸದ್ಯ ಆರೂರು ಜಗದೀಶ್ 'ಭೂಮಿಗೆ ಬಂದ ಭಗವಂತ' ಎನ್ನುವ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಈ ಧಾರಾವಾಹಿ ಪ್ರಸಾರವಾಗಲಿದೆ. ನವೀನ್ ಕೃಷ್ಣ ಹಾಗೂ ಕೃತಿಕಾ ರವೀಂದ್ರ ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದೀನಿ. ಹಾಗಾಗಿ ಅನಿರುದ್ಧ್ ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದಿದ್ದಾರೆ.

'ಸೂರ್ಯವಂಶ' ಬಗ್ಗೆ ಸಂಜೆ ಸಭೆ
ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಭಾಸ್ಕರ್ ಅವರನ್ನು ಫಿಲ್ಮಿಬೀಟ್ ಸಂಪರ್ಕಿಸಿತ್ತು. "ಅನಿರುದ್ಧ್ 'ಸೂರ್ಯವಂಶ' ಧಾರಾವಾಹಿಯಲ್ಲಿ ನಟಿಸುತ್ತಿರುವ ಬಗ್ಗೆ ಸಂಜೆ ಒಂದು ಸಭೆ ಇದೆ. ಇದೇ ವಿಚಾರವಾಗಿ ಸಭೆಯಲ್ಲಿ ಚರ್ಚೆ ಆಗಲಿದೆ. ಅ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಗುತ್ತದೆ ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತೇನೆ" ಎಂದು ಭಾಸ್ಕರ್ ಹೇಳಿದ್ದಾರೆ.

ಆರ್ಯವರ್ಧನ್ ಆಗಿ ಹರೀಶ್ ರಾಜ್
'ಜೊತೆ ಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಹೊರಬರುತ್ತಿದ್ದಂತೆ ಕಥೆ ಮುಗೀತು. ಧಾರಾವಾಹಿ ನಿಂತು ಹೋಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ್ದ ನಿರ್ದೇಶಕ, ನಿರ್ಮಾಪಕ ಆರೂರು ಜಗದೀಶ್ ಹರೀಶ್ ರಾಜ್ ಅವರಿಗೆ ಅವಕಾಶ ಕೊಟ್ಟಿದ್ದರು. ಕಥೆಗೆ ಟ್ವಿಸ್ಟ್ ಕೊಟ್ಟು ಹೊಸ ಕಲಾವಿದರನ್ನು ಕಥೆಯಲ್ಲಿ ಸೇರ್ಪಡೆ ಮಾಡಿದ್ದಾರೆ. ಯಶಸ್ವಿಯಾಗಿ ಧಾರಾವಾಹಿ ಪ್ರಸಾರವಾಗುತ್ತಿದೆ.


Click it and Unblock the Notifications











