ಅನಿರುದ್ಧ್ಗೆ 'ಸೂರ್ಯವಂಶ' ಕೂಡ ಕೈ ತಪ್ಪುತ್ತಾ? ಎಸ್. ನಾರಾಯಣ್ ಕೊಟ್ಟ ಸುಳಿವೇನು?
'ಜೊತೆ ಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಜತ್ಕರ್ ಅವರನ್ನು ಕೈಬಿಟ್ಟಿದ್ದು ಹಳೇ ಸುದ್ದಿ. ಎಸ್. ನಾರಾಯಣ್ ನಿರ್ದೇಶನದ 'ಸೂರ್ಯವಂಶ' ಧಾರಾವಾಹಿಯಲ್ಲಿ ನಟಿಸುತ್ತಿರುವುದು ಈಗ ಲೇಟೆಸ್ಟ್ ಸಮಾಚಾರ. ಆದರೆ ಅನಿರುದ್ಧ್ ಬ್ಯಾನ್ ವಿಚಾರ ಮಾತ್ರ ಇನ್ನು ತಣ್ಣಗಾಗಿಲ್ಲ.
ಶಿಸ್ತಿನ ವಿಚಾರವನ್ನು ಮುಂದಿಟ್ಟು ಅನಿರುದ್ಧ್ ಅವರಿಗೆ 2 ವರ್ಷಗಳ ಕಾಲ ಕಿರುತೆರೆ ಕಾರ್ಯಕ್ರಮದಲ್ಲಿ ಅವಕಾಶ ನೀಡದಿರಲು ನಿರ್ಮಾಪಕರ ಸಂಘ ನಿರ್ಧರಿಸಿತ್ತು. ಬ್ಯಾನ್ ಪದ ಬಳಸದೇ ನಿರ್ಮಾಪರೆಲ್ಲಾ ಸೇರಿ ಒಕ್ಕೊರಲಿನಿಂದ ಇದಕ್ಕೆ ಸಮ್ಮತಿ ಸೂಚಿಸಿದ್ದರು. ಆದರೆ ಇದ್ದಕ್ಕಿದಂತೆ ಅನಿರುದ್ಧ್ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಕಿರುತೆರೆ ನಿರ್ಮಾಪಕರ ಸಂಘಕ್ಕೆ ಅಚ್ಚರಿ ತಂದಿದೆ. ಜೊತೆಗೆ ತಮಗೆ ಹಿನ್ನಡೆ ಆಗಿದೆ ಎಂದು ಭಾವಿಸಿದ್ದಾರೆ. ಈ ಸಂಬಂಧ ನಿನ್ನೆ ಸಭೆ ನಡೆಸಿ ಚರ್ಚಿಸಿದ್ದರು. ಈಗ ನಿರ್ದೇಶಕ ನಿರ್ದೇಶಕ ಎಸ್. ನಾರಾಯಣ್ ಬಳಿ ವಿಶೇಷ ಮನವಿ ಮಾಡಿದ್ದಾರೆ.
ನಟ ಅನಿರುದ್ಧ್ ಬ್ಯಾನ್ ವಿಚಾರವಾಗಿ ಕಲಾಸಾಮ್ರಾಟ್ ಎಸ್. ನಾರಾಯಣ್ ಅವರ ಕಛೇರಿಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಭಾಗಿ ಆಗಿದ್ದರು. ಸಭೆಯ ನಂತರ ಎಸ್. ನಾರಾಯಣ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಶಿಸ್ತಿನ ವ್ಯಕ್ತಿಯನ್ನು ಪ್ರೋತ್ಸಾಹಿಸಬೇಡಿ
"ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಡೆದ ಘಟನೆಗಳನೆಲ್ಲಾ ನಿರ್ಮಾಪಕರು ಸಂಘದವರು ಬಂದು ವಿವರಿಸಿದ್ದಾರೆ. ನನಗೆ ಇದೆಲ್ಲಾ ಗೊತ್ತಿರಲಿಲ್ಲ. ಯಾವುದೇ ಧಾರಾವಾಹಿಯಲ್ಲಿ ಅನಿರುದ್ಧ್ ಅವರನ್ನು ಹಾಕಿಕೊಳ್ಳಬಾರದು ಎಂದು ನಿರ್ಧರಿಸಿದ್ದೇವೆ. ನೀವು ಸಹ ನಿಮ್ಮ ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ದೂರ ಇಡಿ. ಸಹಕಾರ ಕೊಡಿ. ನೀವು ಶಿಸ್ತಿನ ವ್ಯಕ್ತಿಯಾಗಿ ಅಶಿಸ್ತಿನ ವ್ಯಕ್ತಿಯನ್ನು ಪ್ರೋತ್ಸಾಹಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ" ಎಂದು ಎಸ್. ನಾರಾಯಣ್ ಹೇಳಿದ್ದಾರೆ.

ಎಸ್. ನಾರಾಯಣ್ ನಿರ್ಧಾರ ಏನು?
"ನಾನು ಸದ್ಯ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಇದು ಇನ್ನು ಆರಂಭ. ಚಿತ್ರರಂಗದಲ್ಲಿ ಸಾಕಷ್ಟು ಹಿರಿಯರು ಇದ್ದಾರೆ. ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನನಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಂಬಂಧಪಟ್ಟವರ ಜೊತೆ ಮಾತನಾಡುವುದಾಗಿ ನಾನು ಹೇಳಿದ್ದೇನೆ. ಇದು ಒಳ್ಳೆಯ ರೀತಿಯಲ್ಲಿ ಮುಗಿಯಬೇಕು ಯಾರಿಗೂ ಯಾರಿಂದಲೂ ತೊಂದರೆ ಆಗಬಾರದು" ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಅನ್ನದಾತರು ಕಣ್ಣೀರು ಹಾಕಬಾರದು
"ಅಣ್ಣಾವ್ರು ನಿರ್ಮಾಪಕರೇ ಅನ್ನದಾತರು ಎನ್ನುತ್ತಿದ್ದರು. ವಿಷ್ಣುವರ್ಧನ್ ಅವರು ಕೂಡ ಅದೇ ಮಾತು ಹೇಳುತ್ತಿದ್ದರು. ಅನ್ನದಾತರ ಕಣ್ಣಲ್ಲಿ ನೀರು ಬರಬಾರದು. ಅದು ಉದ್ಯಮಕ್ಕೆ ಒಳ್ಳೆಯದಾಗುವುದಿಲ್ಲ. ನಾವೆಲ್ಲಾ ನಮ್ಮ ಕರ್ತವ್ಯದ ಕಡೆ ಗಮನ ಕೊಡಬೇಕು. ಬೇರೆಯದರ ಕಡೆ ಅಲ್ಲ. ಎಲ್ಲಿವರೆಗೂ ಕರ್ತವ್ಯವನ್ನು ಪ್ರೀತಿಸುತ್ತೀವೋ ಅಲ್ಲಿಯವರೆಗೂ ಒಳ್ಳೆ ಹೆಸರು ಬರುತ್ತದೆ. ಇದನ್ನು ನಾನು ಅವರಿಗೆ ಮನವರಿಕೆ ಮಾಡಿ ಕೊಡುತ್ತೇನೆ. ಸಂಜೆ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯುತ್ತೆ. ಅಲ್ಲಿ ಏನಾಗುತ್ತೋ ನೋಡೋಣ."

ಅನಿರುದ್ಧ್ ಬಳಿ ಬ್ಯಾನ್ ಬಗ್ಗೆ ಮಾತನಾಡಿಲ್ಲ
"ಈ ವಿಚಾರದ ಬಗ್ಗೆ ನಾನು ಅನಿರುದ್ಧ್ ಬಳಿ ಏನು ಮಾತನಾಡಿಲ್ಲ. ನನಗೆ ಏನಾಗಿದೆ ಗೊತ್ತಿರಲಿಲ್ಲ. ಅವಶ್ಯಕತೆ ಇರಲಿಲ್ಲ. ಈ ಕಥೆಯ ಬಗ್ಗೆ ಮಾತ್ರ ಅವರೊಟ್ಟಿಗೆ ಚರ್ಚಿಸಿದ್ದೆ. ಆದರೆ ಅವರು ಒಂದಷ್ಟು ವಿಚಾರ ಹೇಳಿದ್ದರು. ಸಮಯಕ್ಕೆ ಸರಿಯಾಗಿ ಬರುತ್ತಿರಲಿಲ್ಲ. ಸಂಭಾಷಣೆ ಕೊಟ್ಟರೆ ಹೇಳುತ್ತಿರಲಿಲ್ಲ ಹೀಗೆ ಒಂದಷ್ಟು ಸಂಗತಿ ಹೇಳಿದ್ದಾರೆ. ಅದು ಅವರ ವರ್ಷನ್. ಅದು ನಿಜವೋ ಸುಳ್ಳೋ ಗೊತ್ತಿಲ್ಲ. ನಾವು ಒಂದು ಕಡೆ ಕೇಳಿ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ."

ಉದ್ಯಮಕ್ಕೆ ಯಾರು ಮಸಿ ಬಳಿಯಬಾರದು
"ಸಂಜೆ 5 ಗಂಟೆಗೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಸಭೆ ಕರೆದಿದ್ದಾರೆ ಎಂದು ನಿರ್ಮಾಪಕ ಸಂಘದವರು ಹೇಳಿದ್ದಾರೆ. ಯಾರನ್ನು ಕರೆದಿದ್ದಾರೆ. ಯಾರು ಹೋಗುತ್ತಿದ್ದಾರೆ ಗೊತ್ತಿಲ್ಲ. ಇದೆಲ್ಲಾ ಸುಸೂತ್ರವಾಗಿ ಮುಗಿಯಬೇಕು. ಯಾರೊ ಒಬ್ಬರು ತಪ್ಪು ಮಾಡಿದರೆ ಇಡೀ ಉದ್ಯಮಕ್ಕೆ ಮಸಿ ಬಳದಂತೆ ಆಗುತ್ತದೆ. ಚಿತ್ರರಂಗಕ್ಕೆ ಉದ್ಯಮಕ್ಕೆ ಮಸಿ ಬಳಿದಂತೆ ಆಗುತ್ತದೆ. ಮಸಿ ಬಳಿಯುವ ಕೆಲಸ ಮಾಡಬಾರದು" ಎಂದು ಎಸ್. ನಾರಾಯಣ್ ಹೇಳಿದ್ದಾರೆ. ಈ ಹಿಂದೆ ವಿಷ್ಣುವರ್ಧನ್ ನಟನೆಯ 'ಸೂರ್ಯವಂಶ' ಸಿನಿಮಾ ನಿರ್ದೇಶಿಸಿದ್ದ ಎಸ್. ನಾರಾಯಣ್ ಈಗ ಅದೇ ಟೈಟಲ್ನ ಧಾರಾವಾಹಿಗೆ ಆಕ್ಷನ್ ಕಟ್ ಹೇಳ್ತಿದ್ದಾರೆ.


Click it and Unblock the Notifications











