ಸರಳ ಜೀವನ ವಾಹಿನಿಯಲ್ಲಿ ಬರುವ ಪ್ರಧಾನ ಕಾರ್ಯಕ್ರಮಗಳು
ಫೆಬ್ರವರಿ ಹತ್ತೊಂಬತ್ತರಿಂದ ಆರಂಭವಾಗಲಿರುವ 'ಸರಳ ಜೀವನ' ವಾಹಿನಿಯ ಪ್ರಮುಖ ಕಾರ್ಯಕ್ರಮಗಳ ಪಟ್ಟಿ ಕೆಳಗಿನಂತಿದೆ.
ಮಹಾಪಯಣ - (ಸೋಮ -ಶನಿ ರಾತ್ರಿ 9.00 ಕ್ಕೆ): ಇದು ರಾಮಾಯಣವನ್ನು ಪಾತ್ರಗಳ ಮೂಲಕವಲ್ಲದೇ ಕ್ಷೇತ್ರ ಪರಿಚಯದ ಮೂಲಕ ವೀಕ್ಷಕರ ಮುಂದಿಡುವ ವಿಶೇಷ ಪ್ರಯತ್ನ. ಅಯೋಧ್ಯೆಯಿಂದ ಶ್ರೀಲಂಕೆಯವರೆಗೆ ಶ್ರೀರಾಮನ ಹೆಜ್ಜೆಯ ಜಾಡು ಹುಡುಕುತ್ತಾ ಸಾಗುವ ವಿಭಿನ್ನ ಕಾರ್ಯಕ್ರಮವೇ ಮಹಾಪಯಣ.

ಮನುಕುಲದ ಒಳಿತಿಗಾಗಿ - (ಸೋಮ - ಭಾನು ಸಂಜೆ 8:00 ಕ್ಕೆ) : ಮನುಷ್ಯನ ಪ್ರತಿ ಸಮಸ್ಯೆಗೂ ಆತ ವಾಸಿಸುವ ಮನೆ ಅಥವಾ ಕಚೇರಿಯ ವಾಸ್ತು ಕಾರಣ ಅಂತ ಹೇಳಲಾಗುತ್ತದೆ. ಮನುಕುಲದ ಒಳಿತಿಗಾಗಿ ಎಂಬ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ್ ಗುರೂಜಿಯವರು ಕೃಷಿ, ಶಿಕ್ಷಣ, ಉದ್ಯೋಗ, ಸಂಬಂಧ, ಆರೋಗ್ಯ, ಸಂಪತ್ತು ಮುಂತಾದ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿಕೊಡಲಿದ್ದಾರೆ.
ಜ್ಞಾನಪದ - (ಸೋಮ - ಶನಿ ಸಂಜೆ 7:00 ಕ್ಕೆ ಮತ್ತು ರಾತ್ರಿ 10:30ಕ್ಕೆ) : ನಮ್ಮ ಹಿರಿಯರ ಅಪರೂಪದ ಜ್ಞಾನ ಸಂಪತ್ತು ಹಾಡುಗಳ ರೂಪದಲ್ಲಿ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಗೊಳ್ಳುತ್ತಾ ಬಂದಿದೆ. ಆ ಜಾನಪದ ಜ್ಞಾನ ಮುಂದಿನ ತಲೆಮಾರುಗಳಿಗೂ ದೊರಕುವಂತಾಗುವ ನಿಟ್ಟಿನಲ್ಲಿ ಪ್ರಸಿದ್ಧ ಗಾಯಕರು ಪ್ರತಿ ಸಂಚಿಕೆಯಲ್ಲೂ ಜಾನಪದ ಹಾಡುಗಳನ್ನು ವೀಕ್ಷಕರಿಗೆ ಉಣಬಡಿಸುವ ಕಾರ್ಯಕ್ರಮವೇ ಜಾನಪದ.

ಇತಿಹಾಸ - (ಸೋಮ - ಶನಿ ರಾತ್ರಿ 9:30ಕ್ಕೆ) : ಇದು ಐತಿಹಾಸಿಕ ವ್ಯಕ್ತಿಗಳೂ, ವ್ಯಕ್ತಿತ್ವಗಳೂ, ರಾಜ ಮಹಾರಾಜರು, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯ ಅನಾವರಣ. ರಾಜರುಗಳ ಜೀವನದ ಬಗ್ಗೆ, ಅವರ ಯುದ್ಧ ನೀತಿ, ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ವೀರರ ಚರಿತ್ರೆಯನ್ನು, ದೃಶ್ಯ, ಗ್ರಾಫಿಕ್ಸ್ ಮತ್ತು ನಕ್ಷೆಗಳ ಮೂಲಕ ಪ್ರಸ್ತುತ ಪಡಿಸಲಾಗುತ್ತದೆ.
ಸಾಧು ಪರಂಪರೆ - (ಸೋಮ- ಶನಿ ರಾತ್ರಿ 10:00ಕ್ಕೆ): ಆಧ್ಯಾತ್ಮಿಕ ಗುರುಗಳು, ಧಾರ್ಮಿಕ ಪ್ರತಿನಿಧಿಗಳು ಅನ್ನಿಸಿಕೊಂಡ ಅಘೋರ, ನಾಗಾ, ಬೈರಾಗಿ, ಆನಂದಮಾರ್ಗಿ, ಕಾಪಾಲಿಕಾ ಮುಂತಾದ ಪ್ರತಿಯೊಂದು ಗುಂಪುಗಳಲ್ಲಿನ ವಿಭಿನ್ನ ಆಚರಣೆಗಳು ಹಾಗೂ ನಿಗೂಢ ರಹಸ್ಯಗಳ ಅನಾವರಣವೇ ಸಾಧು ಪರಂಪರೆ.
ಮಣ್ಣಿನ ಮಗ - (ಸೋಮ-ಶನಿ ಸಂಜೆ 7:30ಕ್ಕೆ) : ರಾಷ್ಟ್ರಕ್ಕೆ ಅನ್ನ ನೀಡುವ ಮಣ್ಣಿನ ಮಗ ಅನ್ನದಾತನಿಗೆ ಈ ಕಾರ್ಯಕ್ರಮ ಅರ್ಪಿತವಾಗಲಿದೆ. ಕಾರ್ಯಕ್ರಮ ಆಸಕ್ತ ರೈತರಿಗೆ ಸಹಾಯ ಹಸ್ತ ನೀಡುವ ಗೆಳೆಯ. ಯಶಸ್ವೀ ಕೃಷಿಕರ ಸಾಧನೆಯ ಕತೆಗಳ ಜೊತೆಜೊತೆಗೆ, ಕೃಷಿಯಲ್ಲಿ ಹೆಚ್ಚು ಉತ್ಪನ್ನ ಪಡೆಯುವುದು ಹೇಗೆ ಎಂಬ ಮಾಹಿತಿ, ಪರಿಣಾಮಕಾರಿ ಬೇಸಾಯಕ್ಕೆ ಅನುಕೂಲವಾಗುವ ಮಾರ್ಗದರ್ಶಿ ಈ ಕಾರ್ಯಕ್ರಮ.

ಅಜ್ಜಿ ಹೇಳಿದ ಕತೆ - (ಸೋಮ- ಶನಿ ಸಂಜೆ 6:15ಕ್ಕೆ ಮತ್ತು ಭಾನು ಮಧ್ಯಾಹ್ನ 1:00ಕ್ಕೆ) : ಅಕ್ಬರ್ ಬೀರ್ ಬಲ್, ಝೆನ್ ಮೊದಲಾದ ನೀತಿ ಕತೆಗಳ ಸರಣಿ. ಅನಿಮೇಷನ್ ಮತ್ತು ಗ್ರಾಫಿಕ್ಸ್ ಸಹಾಯದಿಂದ ಕಥೆಗಳ ನಿರೂಪಣೆ. ಕಥೆಯ ಕೊನೆಯಲ್ಲಿ ಕ್ಯಾರಿಕೆಚರ್ ಮೂಲಕ ಕತೆಯ ನೀತಿ ತಿಳಿಸಿಕೊಡುವುದಾಗಿದ್ದು. ದಕ್ಷಿಣ ಭಾರತೀಯ ವಾಹಿನಿಗಳಲ್ಲಿ ಇದು ಮೊಟ್ಟಮೊದಲ ಪ್ರಯೋಗವಾಗಿದೆ. ಮಕ್ಕಳ ಜೊತೆ ಎಲ್ಲಾ ವಯಸ್ಸಿನವರೂ ಇಷ್ಟಪಡುವಂತಹ ಕಾರ್ಯಕ್ರಮ ಇದಾಗುತ್ತದೆ.
ಪುಣ್ಯಕ್ಷೇತ್ರ - (ಸೋಮ- ಶನಿ ಸಂಜೆ 6:30ಕ್ಕೆ ಮತ್ತು ಬೆಳಿಗ್ಗೆ. 9:00 ಕ್ಕೆ): ಬದುಕಿನ ಅವಧಿಯಲ್ಲಿ ನಾವೂ ನೀವೂ ನೋಡಲೇಬೇಕಾದ ಪುಣ್ಯ ಕ್ಷೇತಗಳನ್ನು ವೀಕ್ಷಕರ ಮುಂದೆ ತಂದು ಅವರಿಗೆ ಧಾರ್ಮಿಕ ಸಾರ್ಥಕ್ಯವನ್ನು ನೀಡುವ ಪ್ರಯತ್ನ ಇದಾಗಿದ್ದು. ಕ್ಷೇತ್ರಗಳ ವಿವರಣೆ ಜೊತೆಗೆ ಅಲ್ಲಿಗೆ ತಲುಪುವ ಮಾಹಿತಿಯನ್ನೂ ನೀಡಲಾಗುವುದು.
ಸರಳ ಜೀವನ ಸ್ಯಾಟ್ಲೈಟ್ ವಾಹಿನಿಯಾಗಿದ್ದು ಬೆಂಗಳೂರಿನಲ್ಲಿ ಫೆಬ್ರವರಿ 19ರಂದು ಲೋಕಾರ್ಪಣೆಗೊಳ್ಳಲಿದೆ. ಕರ್ನಾಟಕದಾದ್ಯಂತ ಎಲ್ಲ ಎಮ್.ಎಸ್.ಒ ಗಳಲ್ಲೂ ದೊರೆಯುತ್ತದೆ ಹಾಗೂ ಡಿ.ಟಿ.ಎಚ್ ನಲ್ಲಿ ಶೀಘ್ರದಲ್ಲಿ ಲಭ್ಯವಾಗಲಿದೆ.


Click it and Unblock the Notifications











