ಮಧ್ಯರಾತ್ರಿ ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ: 'ಕಿರಿಕ್'ಗೆ ಕಾರಣ ಒಂದುಫೋಟೊ
ಮಾಜಿ ಬಿಗ್ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಮೇಲೆ ಮಧ್ಯ ರಾತ್ರಿ ಬಿಯರ್ ಬಾಟಲ್ನಿಂದ ಹಲ್ಲೆ ನಡೆಸಲಾಗಿದೆ. ನಿನ್ನೆ ರಾತ್ರಿ (ಡಿಸೆಂಬರ್ 02) ಸ್ನೇಹಿತರೊಂದಿಗೆ ಕಿಕ್ ಕೀರ್ತಿ ಪಬ್ಗೆ ತೆರಳಿದ್ದರು. ಅಲ್ಲಿ ಸ್ನೇಹಿತರೊಂದಿಗೆ ಇರುವಾಗ ಕಿರಿಕ್ ಕೀರ್ತಿ ಜೊತೆ ಪಬ್ನಲ್ಲಿದ್ದ ವ್ಯಕ್ತಿಯೊಬ್ಬ ಫೋಟೊ ವಿಚಾರಕ್ಕೆ ಕಿರಿಕ್ ಎತ್ತಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೋಪಗೊಂಡ ವ್ಯಕ್ತಿ ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಿದ್ದಾನೆ.
ಕಿರಿಕ್ ಕೀರ್ತಿ ಸ್ನೇಹಿತರು ಹಾಗೂ ಕುಟುಂಬದ ಜೊತೆ ಸದಾಶಿವನಗರದ ಪಬ್ ಒಂದಕ್ಕೆ ಹೋಗಿದ್ದರು. ಆಪ್ತರೊಂದಿಗೆ ಇರುವಾಗ ತಡ ರಾತ್ರಿ ಸುಮಾರು 12.30ಕ್ಕೆ ಕಿರಿಕ್ ಕೀರ್ತಿ ಹಾಗೂ ಅಲ್ಲೇ ಮದ್ಯಪಾನ ಮಾಡುತ್ತಿದ್ದ ವ್ಯಕ್ತಿಯ ನಡುವೆ ಗಲಾಟೆ ಆರಂಭ ಆಗಿದೆ. ಒಂದು ಫೋಟೊ ವಿಚಾರಕ್ಕೆ ಕಿರಿಕ್ ಕೀರ್ತಿ ಕೋಪಗೊಂಡಿದ್ದರು. ಆಗ ಇಬ್ಬರ ನಡುವೆ ವಾಗ್ವಾದ ಶುರುವಾಗಿ ಕೋಪದಿಂದ ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.

ಕಿರಿಕ್ ಕೀರ್ತಿ ಫೋಟೋ ತೆಗೆದಿದ್ದಕ್ಕೆ ಗಲಾಟೆ
ಕಿರಿಕ್ ಕೀರ್ತಿ ಹಾಗೂ ಆಪ್ತರು ಕೂತಿದ್ದ ಪಕ್ಕದ ಟೆಬಲ್ನಲ್ಲಿಯೇ ವ್ಯಕ್ತಿಯೊಬ್ಬ ಕೂತಿದ್ದ. ಆತ ಕಿರಿಕ್ ಕೀರ್ತಿಗೆ ಗೊತ್ತಿಲ್ಲದಂತೆ ಫೋಟೊ ಕ್ಲಿಕ್ಕಿಸಿದ್ದ. ಇದನ್ನು ಗಮನಿಸಿದ ಕಿರಿಕ್ ಕೀರ್ತಿ ಅನುಮತಿ ಇಲ್ಲದೆ ಫೋಟೊ ತೆಗೆದಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭ ಆಗಿದೆ. ಪಬ್ನಲ್ಲಿ ಮಧ್ಯರಾತ್ರಿ ಇಬ್ಬರೂ ಬೈದಾಡಿಕೊಂಡಿದ್ದಾರೆ. ಕಿರಿಕ್ ಕೀರ್ತಿ ಬೈದಿದ್ದಕ್ಕೆ ಕೋಪಗೊಂಡ ವ್ಯಕ್ತಿ ಪಕ್ಕದಲ್ಲೇ ಇದ್ದ ಬಿಯರ್ ಬಾಟಲ್ ತೆಗದು ಕಿರಿಕ್ ಕೀರ್ತಿ ತಲೆಗೆ ಬಾರಿಸಿದ್ದಾನೆ. ಈ ಘಟನೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಲ್ಲೆ ನಡೆಯುತ್ತಿದ್ದಂತೆ ಅಪರಿಚಿತ ವ್ಯಕ್ತಿ ಪರಾರಿ
ಒಂದು ಫೋಟೊ ವಿಚಾರಕ್ಕೆ ಈ ಹಲ್ಲೆ ನಡೆದಿದೆ. ಪಬ್ನಲ್ಲಿ ತನಗೆ ಅರಿವಿಲ್ಲದಂತೆ ಫೋಟೊ ತೆಗೆದಿದ್ದಕ್ಕೆ ಕಿರಿಕ್ ಕೀರ್ತಿ ಪ್ರಶ್ನೆ ಮಾಡಿದ್ದರು. ಆ ವೇಳೆ ಹಲ್ಲೆ ಮಾಡಿದ ವ್ಯಕ್ತಿ ನೀನು ದೊಡ್ಡ ಸೆಲೆಬ್ರಿಟಿನಾ? ಅಂತ ಪ್ರಶ್ನೆ ಮಾಡಿದ್ದ. ಇದರಿಂದ ಕಿರಿಕ್ ಕೀರ್ತಿ ಕೋಪ ನೆತ್ತಿಗೆ ಹತ್ತಿತ್ತು. ಆ ವೇಳೆ ಕುಡಿದ ಅಮಲಿನಲ್ಲಿ ಇಬ್ಬರೂ ಕಿತ್ತಾಡಿಕೊಳ್ಳಲು ಶುರುಮಾಡಿದ್ದರು. ಕೋಪದಿಂದ ಬಿಯರ್ ಬಾಟಲ್ ಎತ್ತಿ ಕಿರಿಕ್ ಕೀರ್ತಿ ತಲೆಗೆ ಬಡಿದಿದ್ದಾನೆ. ಈ ಘಟನೆ ನಡೆಯುತ್ತಿದ್ದಂತೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಆ ಕ್ಷಣ ಹಲ್ಲೆ ನಡೆಸಿದ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಕೂಡಲೇ ಕಿರಿಕ್ ಕೀರ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು.

ಕ್ಷಮೆ ಕೇಳಿದರೂ ಬಿಡಲಿಲ್ಲ ಅನ್ನುವ ಆರೋಪ
ಈ ಗಲಾಟೆಯಲ್ಲಿ ಇನ್ನೊಂದು ವಾದವಿದೆ. ಫೋಟೊ ತೆಗೆದು ಅಪರಿಚಿತ ವ್ಯಕ್ತಿ ಕಿರಿಕ್ ಕೀರ್ತಿಯ ಅಭಿಮಾನಿಯಾಗಿದ್ದ. ಹೀಗಾಗಿ ಪಬ್ಗೆ ಬಂದಿದ್ದ ಕೀರ್ತಿಯ ಫೋಟೊ ತೆಗೆದಿದ್ದ. ಅದಕ್ಕೆ ಕಿರಿಕ್ ಕೀರ್ತಿ ಪ್ರಶ್ನೆ ಮಾಡಿದಾಗ, ಆತ ಕ್ಷಮೆಯನ್ನೂ ಕೇಳಿದ್ದಾನೆ. ಆದರೆ, ಕಿರಿಕ್ ಕೀರ್ತಿ ಕೋಪ ಕಡಿಮೆ ಆಗಿರಲಿಲ್ಲ. ಆತನ ಮೊಬೈಲ್ ಫೋನ್ ಕಸಿದುಕೊಂಡು ಫೋಟೊ ಡಿಲೀಟ್ ಮಾಡಲು ಮುಂದಾಗಿದ್ದರು. ಇದರಿಂದ ಕೋಪಗೊಂಡ ವ್ಯಕ್ತಿ ಪಕ್ಕದಲ್ಲೇ ಇದ್ದ ಬಿಯರ್ ಬಾಟಲ್ ತೆಗೆದು ತಲೆಗೆ ಹೊಡೆದಿದ್ದಾನೆ ಅನ್ನೋದು ಹಲವರ ವಾದ.

2018ರಲ್ಲೂ ಕಿರಿಕ್ ಕೀರ್ತಿ ಮೇಲೆ ನಡೆದಿತ್ತು ಹಲ್ಲೆ
ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಈ ಹಿಂದೆಯೂ ಹಲ್ಲೆ ನಡೆದಿತ್ತು. 2018ರಲ್ಲಿ ಜ್ಞಾನಭಾರತಿ ಕ್ಯಾಂಪಸ್ ಸಮೀಪ ಕಿರಿಕ್ ಕೀರ್ತಿ ಮೇಲೆ ಹಲ್ಲೆ ನಡೆಸಲಾಗಿತ್ತು.ರಸ್ತೆ ಮಧ್ಯೆ ಅಡ್ಡಲಾಗಿ ನಿಲ್ಲಿಸಿದ್ದ ಬೈಕ್ ತಗೆಯುವಂತೆ ಕಿರಿಕ್ ಕೀರ್ತಿ ಹೇಳಿದ್ದರು. ಆ ವೇಳೆ ಮದ್ಯಪಾನ ಮಾಡಿದ್ದವರು ಕಿರಿಕ್ ಕೀರ್ತಿ ಹಾಗೂ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಸಾರ್ವಜನಿಕರೇ ಪಾನಮತ್ತರಾಗಿದ್ದವರನ್ನು ಹಿಡಿದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.


Click it and Unblock the Notifications











