'ಮಾರ್ಚ್ 22' ಓಡಲಿಲ್ಲ ಅಂದ್ರೆ ನಿರ್ದೇಶನಕ್ಕೆ ಗುಡ್ ಬೈ: ಕೂಡ್ಲು ರಾಮಕೃಷ್ಣ
'ಯಾರಿಗೂ ಹೇಳ್ಬೇಡಿ', 'ಕಾವ್ಯ', 'ಮಿಸ್ ಕ್ಯಾಲಿಫೊರ್ನಿಯ' ಸಿನಿಮಾಗಳ ಖ್ಯಾತಿಯ ಕೂಡ್ಲು ರಾಮಕೃಷ್ಣ ನಿರ್ದೇಶನ ಮಾಡಿರುವ ಹೊಚ್ಚ ಹೊಸ ಚಿತ್ರವೇ 'ಮಾರ್ಚ್ 22'. ಗೌರಿ ಗಣೇಶ ಹಬ್ಬದ ಪ್ರಯುಕ್ತ 'ಮಾರ್ಚ್ 22' ರಾಜ್ಯಾದ್ಯಂತ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಒಂದ್ವೇಳೆ, ''ಮಾರ್ಚ್ 22' ಸಿನಿಮಾ ಓಡಲಿಲ್ಲ ಅಂದ್ರೆ ನಿರ್ದೇಶನಕ್ಕೆ ಗುಡ್ ಬೈ ಹೇಳುತ್ತೇನೆ'' ಎಂದಿದ್ದಾರೆ ನಿರ್ದೇಶಕ ಕೂಡ್ಲು ರಾಮಕೃಷ್ಣ.

ಅಂದ್ಹಾಗೆ, ಈ ಹೇಳಿಕೆಯನ್ನ ಕೂಡ್ಲು ರಾಮಕೃಷ್ಣ ನೀಡಿದ್ದು ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ. 'ಮಾರ್ಚ್ 22' ಸಿನಿಮಾದಲ್ಲಿ ಅಭಿನಯಿಸಿರುವ ನಟ ಅನಂತ್ ನಾಗ್, ನಟಿ ಗೀತಾ ಜೊತೆ ಕೂಡ್ಲು ರಾಮಕೃಷ್ಣ ಅತಿಥಿಯಾಗಿ ಭಾಗವಹಿಸಿದ್ರು.

ಕಾರ್ಯಕ್ರಮದ 'ದಿಢೀರ್ ಬೆಂಕಿ' ಸುತ್ತಿನಲ್ಲಿ, ''ಯಾವ ಕನ್ನಡದ ನಿರ್ದೇಶಕ ನಾಳೆಯಿಂದ ನಿರ್ದೇಶನಕ್ಕೆ ಗುಡ್ ಬೈ ಹೇಳಬೇಕು'' ಎಂದು ನಿರೂಪಕ ಅಕುಲ್ ಬಾಲಾಜಿ ಪ್ರಶ್ನೆಯನ್ನ ಕೇಳಿದರು. ಅದಕ್ಕೆ, ''ಮಾರ್ಚ್ 22' ಸಿನಿಮಾ ಹಿಟ್ ಆಗ್ಲಿಲ್ಲ ಅಂದ್ರೆ ನಾನೇ ಗುಡ್ ಬೈ ಹೇಳ್ತೀನಿ. ಈ ಚಿತ್ರದ ಮೇಲೆ ನಾನು ನಂಬಿಕೆ ಇಟ್ಟುಕೊಂಡಿದ್ದೇನೆ. ಈ ಚಿತ್ರ ಓಡಲಿಲ್ಲ ಅಂದ್ರೆ ನಾನೇ ಗುಡ್ ಬೈ ಹೇಳುವೆ. ನಾನು ಹೇಗಿದ್ದರೂ ಲಾಯರ್. ಅದನ್ನೇ ನನ್ನ ವೃತ್ತಿಯಾಗಿ ಮುಂದುವರಿಸುತ್ತೇನೆ'' ಎಂದರು ನಿರ್ದೇಶಕ ಕೂಡ್ಲು ರಾಮಕೃಷ್ಣ.
ಅಂದ್ಹಾಗೆ, 'ಮಾರ್ಚ್ 22' ಜೀವಜಲದ ಮಹತ್ವ ಸಾರುವ ಸಿನಿಮಾ. ಅನಂತ್ ನಾಗ್, ಗೀತಾ, ಆರ್ಯವರ್ಧನ್, ಕಿರಣ್ ರಾಜ್, ಆಶೀಷ್ ವಿದ್ಯಾರ್ಥಿ ಮುಖ್ಯಭೂಮಿಕೆಯಲ್ಲಿ ಇರುವ 'ಮಾರ್ಚ್ 22' ಇಡೀ ಕುಟುಂಬ ಕುಳಿತು ನೋಡಬಹುದಾದ ಸದಭಿರುಚಿಯ ಸಿನಿಮಾ.


Click it and Unblock the Notifications











