ಅಶೋಕ್ ಬಚ್ಚಾ ಕೌನ್ ಬನೇಗಾ ಶೂನ್ಯಾಧಿಪತಿ ಹೇಗಿದೆ?
ರಾಜ್ ಮ್ಯೂಸಿಕ್ ಕನ್ನಡ ಚಾನಲ್ ಮತ್ತೊಂದು ಮನರಂಜನಾ ಕಾರ್ಯಕ್ರಮವನ್ನು ಆರಂಭಿಸಿದೆ. ಸುಮಾರು ಒಂದು ತಿಂಗಳಿಂದ ಪ್ರಸಾರವಾಗುತ್ತಿರುವ ದೈನಂದಿನ ಕಾರ್ಯಕ್ರಮ 'ಕೌನ್ ಬನೇಗಾ ಶೂನ್ಯಾಧಿಪತಿ' ನಿಧಾನಕ್ಕೆ ಆರಂಭದಿಂದಲೇ ವೀಕ್ಷಕರ ಮನ/ಮನೆಗೆ ಲಗ್ಗೆಯಿಟ್ಟಿದೆ.
ಬಾಲನಟನಾಗಿ ಜನರನ್ನು ರಂಜಿಸಿದ್ದ ಮಾಸ್ಟರ್ ಆನಂದ್ ಎಂಬ ಅಭಿಜಾತ ಕಲಾವಿದ ಆನಂತರ ಕಿರುತೆರೆಯಲ್ಲಿ ಅದನ್ನು ಮುಂದುವರಿಸಿಕೊಂಡು ಬಂದಿದ್ದರು. ಇದೀಗ 'ಕೌನ್ ಬನೇಗಾ ಶೂನ್ಯಾಧಿಪತಿ' ಅವರದೇ ಸಾರಥ್ಯದಲ್ಲಿ ಬರುತ್ತಿದೆ.
ಮಾಸ್ಟರ್ ಆನಂದ್ ಅವರ ಪ್ರಯತ್ನಕ್ಕೆ ಸರಿಸಮನಾಗಿ ಕಾರ್ಯಕ್ರಮದಲ್ಲಿ ಗಮನಸೆಳೆಯುತ್ತಿರುವವರು ಅಶೋಕ್ ಶರ್ಮಾ ಎಂಬ ಮೈಸೂರಿನ ಕಲಾವಿದ. 'ಕೌನ್ ಬನೇಗಾ ಶೂನ್ಯಾಧಿಪತಿ' ಆಂಕರ್ ಇವರೇ. ಕಾರ್ಯಕ್ರಮದ ಕೇಂದ್ರಾಕರ್ಷಣೆಯೂ ಇವರೇ ಆಗಿದ್ದು, ಆಂಗಿಕ ಅಭಿನಯ, ವಿಶೇಷ/ವಿಚಿತ್ರ ಮ್ಯಾನರಿಸಂ ವೀಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.

'ಬುದ್ಧಿವಂತರಿಗಾಗಿ ದಡ್ಡರು ಮಾಡುತ್ತಿರುವ ಕಾರ್ಯಕ್ರಮ'
'ಬುದ್ಧಿವಂತರಿಗಾಗಿ ದಡ್ಡರು ಮಾಡುತ್ತಿರುವ ಕಾರ್ಯಕ್ರಮ' ಎಂಬ ಘೋಷವಾಕ್ಯದಡಿ ಭರಪೂರ್ ಮನರಂಜನೆ ಹರಿದುಬರುತ್ತಿದೆ. ಕೋಟ್ಯಾಧಿಪತಿ ಕಾರ್ಯಕ್ರಮಗಳಲ್ಲಿ ತಮ್ಮ ಬುದ್ಧಿಕಸರತ್ತಿನಿಂದ ಸ್ಪರ್ಧಿಗಳು ಲಕ್ಷ/ ಕೋಟಿಗಳನ್ನು ಗೆಲ್ಲುವಂತಾದರೆ ಇಲ್ಲಿ ಅತೀ ಬುದ್ಧಿವಂತಿಕೆ ತೋರಿ ಇದ್ದಬದ್ದ ಹಣವನ್ನೂ ಕಳೆದುಕೊಳ್ಳುವ ಸೌಭಾಗ್ಯ ಒದಗಿಬರುತ್ತದೆ. ಏಕೆಂದರೆ ಇಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೇ ಪ್ರಧಾನ ಅಂಶವಾಗಿರುವಾಗ ಉಳಿದದ್ದೆಲ್ಲ ಗೌಣವಾಗುತ್ತದೆ.

ಅಶೋಕ್ ಬಚ್ಚಾಗೆ Full Marks
ಅದಿರಲಿ ಮತ್ತೆ ಆಂಕರ್ ಅಶೋಕ್ ಬಚ್ಚಾ ಬಗ್ಗೆ ಹೇಳುವುದಾದರೆ ಅವರಿಗೆ Full Marks ಕೊಡಲೇಬೇಕಾಗುತ್ತದೆ. ಹಿರಿಯ ನಟ ಅಮಿತಾಭ್ ಬಚ್ಚನ್ ಅವರನ್ನು ಅನುಕರಣೆ ಮಾಡುತ್ತಿರುವ ಅಶೋಕ್ ಬಚ್ಚಾ ಅಮಿತಾಭ್ ಅವರ ವರ್ಚಸ್ಸಿಗೆ ಎಲ್ಲೂ ಕಳಂಕತರದಂತೆ, ಇವರದೇ ಒಂದು ಕೈ ಮೇಲು ಎಂಬಂತೆ ನಟಿಸುತ್ತಿದ್ದಾರೆ.

ಶುಭಾ ಪೂಂಜಾ ಕಾರ್ಯಕ್ರಮ ಸೂಪರ್
ನಟಿ ಶುಭಾ ಪೂಂಜಾ ಅವರು ಸ್ಪರ್ಧಾಳುವಾಗಿ ಭಾಗವಹಿಸಿದ್ದ ಕಾರ್ಯಕ್ರಮವಾಗಲಿ, ರಂಭಜಂಭಾ (ಕ್ವಾಮಲಾ?) ಹೀಗೆ ನೋಡಿದ ಒಂದೆರಡು ಕಾರ್ಯಕ್ರಮಗಳು ಸೆಂಟ್ ಪರ್ಸೆಂಟ್ ಮನರಂಜನೆ ಒದಗಿಸಿವೆ. ಕಾಲ್ ಟು ಕುಚಿಕ್ಕು, ದ್ರಾಬೆ ಎತ್ತಿ ಹಾಕು... ಈ ರೀತಿಯ ವಿಚಿತ್ರ ಲೈಫ್ ಲೈನ್ ಗಳು ಸ್ಪರ್ಧಿಗಳಿಗೆ ಮಣ್ಣುಮುಕ್ಕಿಸುವುದು ನೋಡುಗರಿಗೆ ರಸದೌತಣ ನೀಡುತ್ತದೆ.
ಆದರೆ ಇಲ್ಲಿ ಹೇಳಲೇಬಾಗಿರುವುದು ಚಿಯರ್ ಗರ್ಲ್ಸ್. ಇದು ನಿಜಕ್ಕೂ ಅನಾಕರ್ಷಕ. ಮತ್ತು BG ಬಗ್ಗೆಯೂ ಹೇಳಬೇಕು. Baxck Ground ಅನ್ನು ಸುಧಾರಿಸುವುದಕ್ಕೆ ಅವಕಾಶವಿದೆ. ಇದನ್ನು ಮತ್ತಷ್ಟು ಆಕರ್ಷವಾಗಿಸಬಹುದು.

ಟೈಮಿಂಗ್ಸ್ ದೇ ಪ್ರಾಬ್ಲಂ!
ಇಲ್ಲಿ ನೋಡಿದ ಒಂದೆರಡು ಕಾರ್ಯಕ್ರಮಗಳು ಅಂತ ಏಕೆ ಹೇಳಲಾಗುತ್ತಿದೆಯೆಂದರೆ ಇದು ಪ್ರಸಾರವಾಗುತ್ತಿರುವ ಸಮಯದ್ದೇ ಸಮಸ್ಯೆ- ರಾತ್ರಿ 9.30 ಯಿಂದ 10.30. ಈ ಕಾರ್ಯಕ್ರಮ ಹೆಚ್ಚಾಗಿ ಮಕ್ಕಳ ಮನಸೂರೆಗೊಳ್ಳುತ್ತಿದೆ. ಆದರೆ ಆ ಮಕ್ಕಳು ರಾತ್ರಿ 9.30-10 ಗಂಟೆಗೆಲ್ಲಾ ನಿದ್ದೆಗೆ ಜಾರುವ ಸಮಯ. ಹಾಗಾಗಿ ಕಾರ್ಯಕ್ರಮವನ್ನು ಇನ್ನೂ ಸ್ವಲ್ಪ ಬೇಗನೇ ಆರಂಭಿಸಿದರೆ ಮತ್ತಷ್ಟು ಯಶಸ್ವಿಯಾಗುವುದರಲ್ಲಿ ಯಾವುದೆ ಅನುಮಾನವಿಲ್ಲ.

ಕಾರ್ಯಕ್ರಮ ಸಭ್ಯತೆಯ ಎಲ್ಲೆ ಮೀರದಿರಲಿ
ಮತ್ತೊಂದು ವಿಷಯ: ಕಾರ್ಯಕ್ರಮ ಸಭ್ಯತೆಯ ಎಲ್ಲೆ ಮೀರದಿರಲಿ. ಅನಗತ್ಯವಾಗಿ ಅಡಲ್ಟ್ ಪ್ರೋಗ್ರಾಂ ಆಗದಿರಲಿ. ಮನೆಮಂದಿಯೆಲ್ಲ ಕುಳಿತು ನೋಡುವಂತಹ ಕಾರ್ಯಕ್ರಮವಾಗಿರಲಿ. ಕಾರ್ಯಕ್ರಮ ಸಕಾಲಿಕವಾಗಿರಲೆಂದು ಹೊಲಸು ರಾಜಕೀಯ ವಿಷಯಗಳನ್ನು ತುರುಕಬೇಡಿ. ನಮ್ಮ ಮಧ್ಯೆಯೇ ಮನರಂಜನೆಗೆ ಸಾಕುಬೇಕಷ್ಟು ವಿಷಯಗಳು ಇರುತ್ತವೆ. ಅದನ್ನೇ ಹೆಕ್ಕಿ ತೆಗೆಯಬಹುದು.

ಅಶೋಕ್ ಬಚ್ಚಾ-ಮಾಸ್ಟರ್ ಆನಂದ್ ಜೋಡಿ
ಮತ್ತೊಮ್ಮೆ ಅಶೋಕ್ ಬಚ್ಚಾ (ಬಾದ್ಷಾ?) ಯಾನೆ ಅಶೋಕ್ ಶರ್ಮಾ ಮತ್ತು ಮಾಸ್ಟರ್ ಆನಂದ್ ಅವರ ಪ್ರಯತ್ನಕ್ಕೆ ಮತ್ತಷ್ಟು ಯಶಸ್ಸು ಲಭಿಸಲಿ ಎಂದು ಹಾರೈಸುತ್ತಾ...


Click it and Unblock the Notifications











