ರಿಯಲ್ ಸುದ್ದಿ: ಬೀದಿಬೀದಿಯಲ್ಲಿ ಸೌತೇಕಾಯಿ, ಮಾವಿನಕಾಯಿ ಮಾರಿದ ರಾಗಿಣಿ
Recommended Video

ಒಂದ್ಕಾಲದಲ್ಲಿ 'ತುಪ್ಪ ಬೇಕಾ ತುಪ್ಪ..' ಅಂತ ಗಾಂಧಿನಗರದ ತುಂಬೆಲ್ಲಾ ಬಿಸಿ ಬಿಸಿ ತುಪ್ಪ ಮಾರಿದ್ದ ರಾಗಿಣಿ ದ್ವಿವೇದಿ ಇದೀಗ ಸೌತೇಕಾಯಿ ಹಾಗೂ ಮಾವಿನ ಕಾಯಿ ಮಾರಿದ್ದಾರೆ.
ಓ.. ಇದ್ಯಾವುದೋ ರೀಲ್ ಸುದ್ದಿ ಇರಬೇಕು... ಹಾಡೊಂದಕ್ಕಾಗಿ ರಾಗಿಣಿ ದ್ವಿವೇದಿ ಸೌತೇಕಾಯಿ, ಮಾವಿನಕಾಯಿ ಮಾರಿರಬೇಕು ಅಂತ ನೀವು ಅಂದುಕೊಳ್ಳಬೇಡಿ. ಯಾಕಂದ್ರೆ, ಇದು ಅಪ್ಪಟ ರಿಯಲ್ ಸುದ್ದಿ.
ಬಣ್ಣ ಹಚ್ಚದೆ ಬೀದಿಬೀದಿಯಲ್ಲಿ ರಾಗಿಣಿ ಸೌತೇಕಾಯಿ ಮಸಾಲೆ ಮಾರಿರುವುದು ನಿಜ. ಅದು 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮಕ್ಕಾಗಿ ಅನ್ನೋದು ವಿಶೇಷ. ಈಗಾಗಲೇ, 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ, ಶ್ರೀಮುರಳಿ, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಪ್ರಿಯಾಮಣಿ, ಮಾನ್ವಿತಾ ಹರೀಶ್ ಸೇರಿದಂತೆ ಹಲವು ತಾರೆಯರು ಜನಸಾಮಾನ್ಯರಂತೆ ಕೆಲಸ ಮಾಡಿ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದ್ದಾರೆ. ಇದೀಗ ನಟಿ ರಾಗಿಣಿ ದ್ವಿವೇದಿ ಸರದಿ.

ಈ ವಾರದ ಅತಿಥಿ ರಾಗಿಣಿ ದ್ವಿವೇದಿ
ಕಳೆದ ವಾರದ 'ಸದಾ ನಿಮ್ಮೊಂದಿಗೆ' ಸಂಚಿಕೆಯಲ್ಲಿ ನಟ ಶರಣ್ ಅವರು ಲವಣ್ ಎಂಬ 9 ವರ್ಷದ ಗೋಲ್ಡ್ ಮೆಡಲಿಸ್ಟ್ ಗೋಸ್ಕರ ರಸ್ತೆ ರಸ್ತೆಗಳಲ್ಲಿ ಸೊಳ್ಳೆಬ್ಯಾಟ್, ಪೆನ್ ಸೇರಿದಂತೆ ಇತರ ವಸ್ತುಗಳನ್ನ ಮಾರಾಟ ಮಾಡಿ ಸಹಾಯ ಮಾಡಿದ್ದರು. ಅದೇ ರೀತಿ ಈ ವಾರದ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ತುಪ್ಪದ ಬೆಡಗಿ ರಾಗಿಣಿ ಅವರು ಅತಿಥಿಯಾಗಿ ಭಾಗವಹಿಸಿದ್ದಾರೆ.

ಅಂಧ ಹುಡುಗನಿಗೆ ರಾಗಿಣಿ ಸಹಾಯ
ರಾಗಿಣಿ ಅವರು ವಿನೋದ್ ಎನ್ನುವ ಅಂಧ ಹುಡುಗನಿಗೋಸ್ಕರ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ವಿನೋದ್ ಹುಟ್ಟಿದಾಗ ಕಣ್ಣಿನ ಯಾವುದೇ ತೊಂದರೆ ಇರಲಿಲ್ಲ. ಬೆಳೆಯುತ್ತ ಬೆಳೆಯುತ್ತ ಕಣ್ಣಿನ ಸಮಸ್ಯೆಯಾಗಿ ಚಿಕಿತ್ಸೆ ಫಲಕಾರಿಯಾಗದೇ ಎರಡು ಕಣ್ಣಿನ ದೃಷ್ಠಿಯನ್ನ ಕಳೆದುಕೊಂಡಿದ್ದಾನೆ. ಈ ಹುಡುಗನಿಗೆ ಸಹಾಯ ಮಾಡಲು ರಾಗಿಣಿ ಮುಂದಾಗಿದ್ದಾರೆ.

ಮಾವಿನಕಾಯಿ ಮಾರಿದ ರಾಗಿಣಿ
ವಿನೋದ್ ನರ್ಸರಿಯನ್ನು ಪ್ರಾರಂಭಿಸಿ ಅದರಿಂದ ಸಾಕಷ್ಟು ನಷ್ಟವನ್ನು ಹೊಂದಿದ್ದಾನೆ. ಆ ಸಾಲವನ್ನು ವಾಪಸ್ ಮಾಡಲು ರಾಗಿಣಿ ಆತನ ಬೆಂಬಲವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ರಾಗಿಣಿ ಮಾವಿನಕಾಯಿ, ಸೌತೆಕಾಯಿ ಗಳನ್ನು ದಬ್ಬುವ ಬಂಡಿಯಲ್ಲಿ ಮಾರಿದ್ದಾರೆ.

ರಾಗಿಣಿ ಸಂಗ್ರಹಿಸಿದ ಹಣ ಎಷ್ಟು.?
ರಾಗಿಣಿ ಒಟ್ಟು ಎಷ್ಟು ಹಣವನ್ನು ಸಂಗ್ರಹಿಸಿದ್ದಾರೆ ಎಂಬುದನ್ನ ಈ ವಾರದ ಸಂಚಿಕೆಯಲ್ಲಿ ನೋಡಬಹುದು. "ಸದಾ ನಿಮ್ಮೊಂದಿಗೆ" ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.


Click it and Unblock the Notifications











