ಅಂತೂ ಇಂತೂ ಶ್ರುತಿ ಪ್ರಕಾಶ್ ಆಸೆ ಈಡೇರಿತು.!
ಅಂತೂ ಇಂತೂ ಶ್ರುತಿ ಮೊಗದಲ್ಲಿ ಮಂದಹಾಸ ಮೂಡಿದೆ. 'ಬಿಗ್ ಬಾಸ್' ಮನೆಯೊಳಗೆ ತಮ್ಮ ತಂದೆ ಬಂದ ಕಾರಣ ಶ್ರುತಿ ಮುಖದಲ್ಲಿ ಕಳೆ ಬಂದಿದೆ. ಅಲ್ಲಿಗೆ, ಶ್ರುತಿ ಆಸೆ ಈಡೇರಿದೆ.
ಕಳೆದ ಎರಡ್ಮೂರು ವಾರಗಳಿಂದ ಶ್ರುತಿ ಕೊಂಚ ಸಪ್ಪೆ ಆಗಿದ್ದರು. ಕಾರಣ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹದಿಮೂರು ವಾರಗಳು ಕಳೆದರೂ, ತಮ್ಮ ಕುಟುಂಬದ ಕಡೆಯಿಂದ ಶ್ರುತಿಗಾಗಿ ಏನೂ ಲಭಿಸಿರಲಿಲ್ಲ.
ಪ್ರತಿ ವಾರ ಯಾರೇ ಕ್ಯಾಪ್ಟನ್ ಆದರೂ, ಅವರಿಗೆ ಅವರ ಕುಟುಂಬದ ಕಡೆಯಿಂದ ವಾಯ್ಸ್ ನೋಟ್ ಪ್ಲೇ ಆಗುತ್ತಿತ್ತು. ಒಂದು ವಾರ ಮಾತ್ರ ಯಾರ್ಯಾರು ನಾಮಿನೇಟ್ ಆಗಿದ್ದರೋ, ಅವರಿಗೆಲ್ಲ ಅವರವರ ಕುಟುಂಬದವರು ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಆದ್ರೆ, ದುರಾದೃಷ್ಟವಶಾತ್ ಅಂದು ಶ್ರುತಿ ನಾಮಿನೇಟ್ ಆಗಿರಲಿಲ್ಲ. ಹಾಗೇ, ಶ್ರುತಿ ಕ್ಯಾಪ್ಟನ್ ಆದಾಗಲೂ, 'ವಾಯ್ಸ್ ಮೆಸೇಜ್' ಭಾಗ್ಯ ಆಕೆಗೆ ಸಿಕ್ಕಿರಲಿಲ್ಲ.

'ಬಿಗ್ ಬಾಸ್' ಮನೆಯೊಳಗೆ ಶ್ರುತಿ ಕಾಲಿಡುವಾಗಲೂ, ಆಕೆಯ ಕುಟುಂಬದವರು ಹಾಜರ್ ಇರಲಿಲ್ಲ. ಕಳೆದ ವಾರ ಎಲ್ಲ ಸ್ಪರ್ಧಿಗಳ ಮನೆಯವರಿಗೆ 'ಬಿಗ್ ಬಾಸ್' ಮನೆಯೊಳಗೆ ಹೋಗುವ ಅವಕಾಶ ಕಲ್ಪಿಸಲಾಗಿತ್ತು. ಆದ್ರೆ, ಆಗಲೂ ಶ್ರುತಿ ಪ್ರಕಾಶ್ ಕುಟುಂಬ ಬರಲಿಲ್ಲ. ''ಅನಿವಾರ್ಯ ಕಾರಣಗಳಿಂದ ಬರಲು ಸಾಧ್ಯ ಆಗಲಿಲ್ಲ'' ಎಂದು ಶ್ರುತಿ ಸಹೋದರಿ ವಿಡಿಯೋ ಮೆಸೇಜ್ ಕಳುಹಿಸಿದ್ದರು.
ತಮ್ಮಿಂದ ಶೋನಲ್ಲಿ ಏನೋ ಸಮಸ್ಯೆ ಆಗಿರಬೇಕು, ಹೀಗಾಗಿ ಯಾರೂ ಬಂದಿಲ್ಲ ಎಂದು ಶ್ರುತಿ ಬೇಸರಗೊಂಡಿದ್ದರು. ಇದನ್ನೆಲ್ಲ ಗಮನಿಸಿದ ಮೇಲೆ ಶ್ರುತಿ ತಂದೆ ಪ್ರಕಾಶ್ ನಿನ್ನೆ 'ಬಿಗ್ ಬಾಸ್' ಮನೆಯೊಳಗೆ ಪ್ರತ್ಯಕ್ಷವಾಗಿದ್ದರು. ಶ್ರುತಿ ಜೊತೆಗೆ ಕೆಲ ಕಾಲ ಕಳೆದರು. ತಂದೆಯನ್ನ ನೋಡಿದ್ಮೇಲೆ ಶ್ರುತಿ ಖುಷಿ ಪಟ್ಟರು.


Click it and Unblock the Notifications











