Bettada Hoo Serial: ತನ್ನ ಮುಂದೆಯೇ ಗಂಡ ಇನ್ನೊಬ್ಬಳನ್ನ ಮದುವೆಯಾದರೇ ಹೇಗೆ..? ಇದು ಹಳ್ಳಿ ಹುಡುಗಿಯ ಅಸಹಾಯಕತೆ
ಆತನಿಗೆ ಬೆಟ್ಟದಂತ ಕನಸು. ಕನಸಿನಂತೆ ತನ್ನಿಷ್ಟ ಹುಡುಗಿಯನ್ನೇ ಪ್ರೀತಿಸಿದ್ದಾನೆ. ಆದರೆ ವಿಧಿ ಬರಹಕ್ಕೆ ಹೊಣೆ ಯಾರು? ಏನು ಅರಿಯದ, ಒಂದು ಅರಿಶಿನದ ಕೊಂಬನ್ನೇ ತಾಳಿ ಎಂದು ಭಾವಿಸುವ ಮುಗ್ಧ ಹುಡುಗಿಗೆ ಮೋಸ ಮಾಡೋದು ಎಷ್ಟು ಸರಿ. ಇಷ್ಟನ್ನು ಜೋರು ಧ್ವನಿಯಲ್ಲಿ ಹೇಳುತ್ತಾ, ಮನಸ್ಸಲ್ಲೇ ಪ್ರತಿದಿನ ಪ್ರೇಕ್ಷಕರು ಶಾಪ ಹಾಕುವಂತೆ ಮಾಡಿರುವುದೇ ʻಬೆಟ್ಟದ ಹೂʼ ಧಾರಾವಾಹಿ.
ಸ್ಟಾರ್ ಸುವರ್ಣದಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಲಿದೆ. ಎಷ್ಟರಮಟ್ಟಿಗೆ ಎಲ್ಲರನ್ನು ಆವರಿಸಿದೆ ಎಂದರೆ ಆ ಹೂವಿ ನಮ್ಮ ಮನೆಯವಳೇನೋ, ಆಕೆಗೆ ಇಷ್ಟೆಲ್ಲಾ ಅನ್ಯಾಯವಾಗುತ್ತಿದೆಯಾ ಎನ್ನುವಷ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ.

ರಾಹುಲ್ಗೆ ಗಂಟು ಬಿದ್ದ ಹೂವಿ
ಹೂವಿ ಚನ್ನವಾಲ್ಸ್ ಎಂಬ ಹಳ್ಳಿಯವಳು. ಅಲ್ಲಿಗೆ ರಾಹುಲ್ ಎಂಬಾತ ಹೋದಾಗ ಯಾವುದೋ ಸಮಸ್ಯೆಯಲ್ಲಿ ಸಿಕ್ಕಿ ಬೀಳುತ್ತಾನೆ. ಈ ಸಮಸ್ಯೆಯಿಂದ ಪಾರಾಗೋದಕ್ಕೆ ಆಗದೆ, ಹಳ್ಳಿಯವರ ಕಟ್ಟಾಜ್ಞೆಗೆ ಹೂ ಎನ್ನದೆ ವಿಧಿ ಇಲ್ಲದೆ ಹೂವಿ ಕೊರಳಿಗೆ ತಾಳಿಯನ್ನು ಕಟ್ಟುತ್ತಾನೆ. ಇನ್ನು ಮುಂದೆ ಈತನೇ ಗಂಡ ಎಂದು ಹೂವಿ ಅವ್ವ ಆಕೆಯನ್ನು ಗಂಡನ ಮನೆಗೆ ಕಳುಹಿಸುತ್ತಾಳೆ.
ಆದರೆ ರಾಹುಲ್ ಹೂವಿಯನ್ನು ಅನಿವಾರ್ಯತೆಗೆ ಕಟ್ಟು ಬಿದ್ದು ಮದುವೆಯಾದಾತ. ಆಕೆಯನ್ನೇನೋ ಮನೆಗೆ ಕರೆದುಕೊಂಡು ಬಂದ. ಆದರೆ, ಹೆಂಡತಿಯಾಗಿ ಅಲ್ಲ. ಮನೆಯ ಕೆಲಸದಾಕೆಯಾಗಿ. ಹೆಂಡತಿಯ ಸ್ಥಾನ ಕೊಡುವ ಬದಲು, ಕಟ್ಟಿದ ತಾಳಿ ಬಿಚ್ಚಿಸಿ ಮನೆ ಸ್ವಚ್ಛ ಮಾಡಲು ಇಟ್ಟುಕೊಂಡಿದ್ದಾನೆ.

ಮತ್ತೊಂದು ಮದುವೆಗೆ ರಾಹುಲ್ ತಯಾರಿ
ಏನೇ ಆಗಲಿ ಕೆಲವೊಂದು ಕಡೆ ಮದುವೆ ಅನ್ನೋದ ಬಂಧದ ಬಗ್ಗೆ ಈಗಲೂ ಸಾಕಷ್ಟು ನಂಬಿಕೆಗಳಿವೆ. ಒಂದು ಅರಿಶಿನ ಕೊಂಬನ್ನೇ ಕಟ್ಟಿದ್ದರು ಅದನ್ನು ತಾಳಿಯಂತೆ ಫೀಲ್ ಮಾಡುವ ಜನರಿದ್ದಾರೆ. ಆ ಸಾಲಿಗೆ ಸೇರಿದ್ದವರೇ ಹೂವಿ ಕುಟುಂಬ. ಗಂಡನನ್ನೇ ದೇವರೆಂದು ಆತನ ಹಿಂದೆ ಬಂದಿದ್ದಾಳೆ ಹೂವಿ.
ಗಂಡನೇ ದೇವರೆಂದುಕೊಂಡಿರುವ ಹೂವಿ ರಾಹುಲ್ ಏನೇ ಹೇಳಿದರೂ ಚಾಚು ತಪ್ಪದೆ ಪಾಲಿಸುತ್ತಿದ್ದಾಳೆ. ಹಾಗೇ ಆಗಾಗ ಮನಸ್ಸಲ್ಲೇ ಬೈಕೊಳ್ಳುತ್ತಿರುತ್ತಾಳೆ. ಇದೆಲ್ಲವನ್ನೂ ಹೂವಿ ಹೇಗೋ ಸಹಿಸಿಕೊಳ್ಳುತ್ತಾಳೆ. ಆದರೆ ತಾಳಿ ಕಟ್ಟಿದ ಹೆಂಡತಿ ಮುಂದೆಯೇ ಇನ್ನೊಂದು ಮದುವೆಯಾಗುವುದನ್ನು ಹೇಗೆ ಸಹಿಸುತ್ತಾಳೆ..?

ಹೂವಿ ಸಹೋದರಿಯನ್ನೇ ಮದುವೆಯಾಗುತ್ತಿದ್ದಾನೆ ರಾಹುಲ್..!
ಹೂವಿ ಪತಿ ಅಂದ್ರೆ ರಾಹುಲ್ ಮಾಲಿನಿಯನ್ನ ಲವ್ ಮಾಡುತ್ತಿದ್ದಾನೆ. ಈ ಮಾಲಿನಿ ಬೇರೆ ಯಾರು ಅಲ್ಲ ಹೂವಿಗೆ ಅಕ್ಕ ಆಗಬೇಕು. ಆದ್ರೆ ಈ ಸತ್ಯ ಯಾರಿಗೂ ಗೊತ್ತಿಲ್ಲ. ಹೂವಿಗೂ ಕೂಡ. ಹೂವಿ ಚನ್ನವಾಲ್ಸ್ ಎಂದಾಕ್ಷಣ ಮಾಲಿನಿ ತಂದೆಗೆ ಅನುಮಾನ ಬಂದಿದೆ. ಪದೇ ಪದೇ ಅದನ್ನ ಕೆದಕಿ ಕೆದಕಿ ಕೇಳುತ್ತಿದ್ದಾನೆ. ಆದ್ರೆ ಹೂವಿ ತನ್ನ ತಾಯಿಯ ಬಗ್ಗೆ ಯಾವ ಕುರುಹನ್ನು ಬಿಟ್ಟುಕೊಡುತ್ತಿಲ್ಲ.
ಹೂವಿ ತಂದೆಗೆ ಆ ಊರಿನ ಹೆಸರು ಕೇಳಿದಾಕ್ಷಣ ತನ್ನ ಹಳೆಯ ಪ್ರೀತಿ ನೆನಪಾಗಿದೆ. ಅದನ್ನು ತಿಳಿಯುವ ಪ್ರಯತ್ನ ಮಾಡುತ್ತಲೇ ಇದ್ದಾನೆ. ಆದರೆ ಹೂವಿ ನನ್ನ ಅವ್ವನ ಬಗ್ಗೆ ನಿಮಗ್ಯಾಕೆ ಬೇಕು ಅಂತ ದಾರಿ ತಪ್ಪಿಸುತ್ತಿದ್ದಾಳೆ.

ಮಾಡದ ತಪ್ಪಿಗೆ ಹೂವಿಗೆ ಶಿಕ್ಷೆ
ಹೂವಿಗೂ ಒಂದು ಮನಸ್ಸಿದೆ ಅನ್ನೋದನ್ನ ರಾಹುಲ್ ಮರೆತಂತೆ ಕಾಣುತ್ತಿದೆ. ಆಕೆ ಹಳ್ಳಿ ಹುಡುಗಿ ಎಂಬ ಕಾರಣಕ್ಕೆ ಮನೆಯಲ್ಲಿ ಕೆಲಸವನ್ನಷ್ಟೇ ಮಾಡಿಕೊಂಡು ಇರು, ಮನೆಯವರ ಜೊತೆ ಹೆಚ್ಚು ಬೆರೆಯ ಬೇಡ ಅಂತ ವಾರ್ನಿಂಗ್ ಕೂಡ ಕೊಟ್ಟಿದ್ದಾನೆ.
ಈ ಮಧ್ಯೆ ಮಾಲಿನಿ ಹಾಗೂ ರಾಹುಲ್ ಮದುವೆ ಸಂಭ್ರಮ ಮನೆಯಲ್ಲಿ ಕಳೆಗಟ್ಟಿದೆ. ಮನಸ್ಸಲ್ಲೇ ನೋವನ್ನ ತುಂಬಿಕೊಂಡಿರೋ ಹೂವಿ ನಗು ನಗುತ್ತಾ ಎಲ್ಲರೊಟ್ಟಿಗೆ ಓಡಾಡಿಕೊಂಡು ಮದುವೆ ಕೆಲಸ ಮಾಡುತ್ತಿದ್ದಾಳೆ. ಆದ್ರೆ ಮಾಲಿನಿ ರೂಮ್ ನಲ್ಲಿ ಲಾಕ್ ಆಗಿದ್ದಕ್ಕೆ ರಾಹುಲ್ ಕಿಡಿಕಾರಿದ್ದಾನೆ. ಅದನ್ನ ಮಾಡಿರೋದು ಹೂವಿನೇ ಇರಬೇಕು ಅಂತ ಅವಳ ಮೇಲೆ ಕೋಪಿತಗೊಂಡಿದ್ದಾನೆ. ಇದು ಹೂವಿಯನ್ನು ಮತ್ತಷ್ಟು ಘಾಸಿಗೊಳಿಸಿದೆ.


Click it and Unblock the Notifications











