ದೀಪದ ಹಬ್ಬಕ್ಕೆ ಸುವರ್ಣ ವಾಹಿನಿಯಲ್ಲಿ ಕಾಮಿಡಿ ಕಚೇರಿ
ನವೆಂಬರ್ ತಿಂಗಳು ಪ್ರಾರಂಭವಾಗುತ್ತಲೇ ಕನ್ನಡಿಗರಿಗೆ ರಾಜ್ಯೋತ್ಸವದ ಸಂಭ್ರಮ, ಎಲ್ಲೆಡೆ ಕನ್ನಡದ ಕಂಪು ಇದನ್ನು ಇಮ್ಮಡಿಗೊಳಿಸುವಂತೆ ಹೊಂದಿಕೊಂಡು ಬರುವುದೇ ಬೆಳಕಿನ ಹಬ್ಬ ದೀಪಾವಳಿಯ ಸಡಗರ, ಅದರ ಖುಷಿಯ ಮೆಲಕು ಹಾಕುತ್ತಲಿರುವಾಗಲೇ ಮತ್ತೆ ಚಿಣ್ಣರ-ಪುಟಾಣಿಗಳ ಹಬ್ಬ.
ಈ ಎಲ್ಲ ಸಂಭ್ರಮಗಳಲ್ಲೂ ಎದ್ದುಕಾಣುವ ಸಂತಸದ ನಗುವನ್ನು ಮತ್ತಷ್ಟು ಸಂಭ್ರಮಿಸಲು ಸ್ಟಾರ್ ಸಮೂಹ ಸಂಸ್ಥೆಯ ಕನ್ನಡ ಮನೋರಂಜನೆ ಚಾನಲ್ ಸುವರ್ಣ ವಾಹಿನಿ "ಕಾಮಿಡಿ ಕಚೇರಿ" ಎಂಬ ವಿಶೇಷ ಕಾರ್ಯಕ್ರಮವನ್ನು ಇದೇ ನವೆಂಬರ್ 14 ರಂದು ಬೆಳಿಗ್ಗೆ 10 ರಿಂದ ಪ್ರಸಾರ ಮಾಡಿದೆ.
ಗಂಡು ಮೆಟ್ಟಿದ ನಾಡೆಂದೇ ಹೆಸರುವಾಸಿಯಾದ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲಿನಲ್ಲಿ ಇದೇ ನವೆಂಬರ್ 3 ರಂದು ವಾಹಿನಿಯ ಕಾಮಿಡಿ ಧಾರಾವಾಹಿ ಪಂಚರಂಗಿ ಪೊಂ ಪೊಂ ತಂಡದಿಂದ "ಕಾಮಿಡಿ ಕಚೇರಿ" ಎಂಬ ವಿಶೇಷ ಕಾರ್ಯಕ್ರಮವನ್ನು ದೀಪಾವಳಿ ಮತ್ತು ಮಕ್ಕಳ ದಿನಾಚರಣೆಯ ವಿಶೇಷವಾಗಿ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ಮೀನಾನಾಥ & ಮೀನಾಕುಮಾರಿ, ಮೈಲಾರಿ & ರೇಣುಕಾ, ಮಹಾಲಕ್ಷ್ಮೀ & ಮುಕುಂದ, ಗೋಡಂಬಿ ಗೌಸ್ & ಕೈ ಮೊದಲಾದವರುಗಳು ನೆರೆದ ಪ್ರೇಕ್ಷಕರನ್ನು ನಕ್ಕು ನಗಿಸಿ, ಅವರೊಂದಿಗೆ ನೇರ ಮಾತುಕತೆ ನಡೆಸಿ ಅವರ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಪಡೆದರು .
ಅಲ್ಲದೇ ಧಾರಾವಾಹಿ ತಂಡದವರಿಂದ ವಿಶಿಷ್ಟವಾದ ನೃತ್ಯ, ಸ್ಕಿಟ್ ಪ್ರದರ್ಶನಗಳು ಆ ದಿನದ ರಸಸಂಜೆಗೆ ಸಾಕ್ಷಿಯಾಗಿದ್ದವು. ವಿಶೇಷವಾಗಿ ಸ್ಥಳೀಯ ಪ್ರತಿಭೆ ಬೆಣ್ಣೆ ಬಸವರಾಜರಿಂದ ಹಾಸ್ಯ ಪ್ರದರ್ಶನ ಕೂಡಾ ಇತ್ತು. ಹೀಗೆ ವಿಭಿನ್ನವಾಗಿ ಕಾರ್ಯಕ್ರಮ ವೀಕ್ಷಕರನ್ನು ರೋಮಾಂಚನಗೊಳಿಸುವಲ್ಲಿ ಸಫಲವಾಯಿತೆಂದರೂ ತಪ್ಪಾಗಲಾರದು.
ವಾಹಿನಿಯ ಫಿಕ್ಷನ್ ಹೆಡ್ ಸುಧಿಂದ್ರ ಭಾರದ್ವಾಜ ಹೇಳುವ ಹಾಗೆ , "ನಮ್ಮ ವಾಹಿನಿಯ ಕಾಮಿಡಿ ಸಿರೀಯಲ್ "ಪಂಚರಂಗಿ ಪೊಂ ಪೊಂ" ಕರ್ನಾಟಕದ ನಾಲ್ಕು ಪ್ರಾಂತ್ಯಗಳ ಭಾಷೆ ಸೊಗಡನ್ನು ಬಿಂಬಿಸುತ್ತದೆ. ದಿನನಿತ್ಯದ ಜೀವನದಲ್ಲಿ ಬಳಸುವ ಭಾಷೆಯೊಳಗಿನ ಹಾಸ್ಯದ ಬಳಕೆ ಮತ್ತು ದಿನಕ್ಕೊಂದು ಕಥೆ ಧಾರಾವಾಹಿ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿದೆ ಎಂದು ಹೇಳಲು ಸಂತಸವೆನಿಸುತ್ತದೆ.
ಈ ರಾಜ್ಯೋತ್ಸವ ದೀಪಾವಳಿ ಮತ್ತು ಮಕ್ಕಳ ದಿನಾಚರಣೆಯ ವಿಶೇಷವಾಗಿ ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಕಾಮಿಡಿ ಕಚೇರಿ ವಿಶೇಷ ಕಾರ್ಯಕ್ರಮವನ್ನು ವೀಕ್ಷಕರು ನೋಡಿ ಖುಷಿ ಪಡುತ್ತಾರೆಂಬ ನಂಬಿಕೆ ನಮ್ಮದು" ಎಂದರು.


Click it and Unblock the Notifications











