ಸುವರ್ಣ ವಾಹಿನಿಯಲ್ಲಿ ಹೊಸ ಶೋ ನಿರ್ಭಯ
ಸದಾ ಹೊಸತನದ ಕಾರ್ಯಕ್ರಮಗಳನ್ನು ತನ್ನ ವೀಕ್ಷಕ ಬಳಗಕ್ಕೆ ಉಣಬಡಿಸುತ್ತಿರುವ ಸ್ಟಾರ್ ನೆಟ್ ವರ್ಕ್ಸ್ ನ ಕನ್ನಡ ಮನರಂಜನಾ ವಾಹಿನಿ ಸುವರ್ಣ ಇದೀಗ ಮತ್ತೊಂದು ವಿಭಿನ್ನ ಕಾರ್ಯಕ್ರಮವನ್ನು ಸಮರ್ಪಿಸುತ್ತಿದೆ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಅಪರಾಧಿ ಸುದ್ದಿಗಳನ್ನು ತೆರೆದಿಡಲಿದೆ 'ನಿರ್ಭಯ' ಕಾರ್ಯಕ್ರಮ ಶೀಘ್ರದಲ್ಲೇ ಪ್ರಸಾರ ಆರಂಭಿಸಲಿದೆ.
ಈ ಕಾರ್ಯಕ್ರಮ ಇದೇ ಫೆಬ್ರವರಿ 15ರಿಂದ ಪ್ರಸಾರವಾಗುತ್ತಿದ್ದು ಪ್ರತಿ ಭಾನುವಾರ ರಾತ್ರಿ 10ಕ್ಕೆ ಈ ಕಾರ್ಯಕ್ರಮವನ್ನು ವೀಕ್ಷಿಸಬಹುದು. ಸಾಮಾನ್ಯವಾಗಿ ಕ್ರೈಂ ಆಧಾರಿತ ಶೋಗಳ ಬಗ್ಗೆ ಮಹಿಳೆಯರು, ಗರ್ಭಿಣಿಯರು, ಹಿರಿಯ ನಾಗರೀಕರಲ್ಲಿ ಕೊಂಚ ಅಳುಕು ಇದ್ದೇ ಇದೆ. ಆದರೆ ಈ ಕಾರ್ಯಕ್ರಮವನ್ನು ಯಾವುದೇ ಭಯವಿಲ್ಲದೆ ನಿರ್ಭಯದಿಂದ ನೋಡಬಹುದು ಎನ್ನುತ್ತದೆ ವಾಹಿನಿ.

ಅಪರಾಧ ಎಲ್ಲಿ, ಯಾವಾಗ, ಹೇಗೆ ಬೇಕಾದರೂ ನಡೆಯಬಹುದು. ಈ ಬಗ್ಗೆ ಸದಾ ಜಾಗೃತರಾಗಿರುವಂತೆ ನಿರ್ಭಯ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಅತ್ಯಾಚಾರ, ಅಪಹರಣ, ವರದಕ್ಷಿಣೆ ಕಿರುಕುಳದಿಂದ ಸಾವು, ಲೈಂಗಿಕ ದೌರ್ಜನ್ಯ, ಆಸಿಡ್ ದಾಳಿ, ಗಂಡನ ದಬ್ಬಾಳಿಕೆ, ಯುವತಿಯರನ್ನು ಕಾಡುವುದು (ಈವ್ ಟೀಸಿಂಗ್) ಇದೇ ಮೊದಲಾದ ಅಪರಾಧ ಸುದ್ದಿಗಳನ್ನು ನಿರ್ಭಯ ಹೊತ್ತು ತರಲಿದೆ.
ಈ ಕಾರ್ಯಕ್ರವನ್ನು ನಟ ಆದಿ ಲೋಕೇಶ್ ನಿರೂಪಿಸುತ್ತಿರುವುದು ವಿಶೇಷ. ಈಗಾಗಲೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತವರ್ಷಿಣಿ, ಮಿಲನ, ಅರಗಿಣಿ, ಅವನು ಮತ್ತೆ ಶ್ರಾವಣಿ, ಮಧುಬಾಲ, ಅನುರೂಪ, ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ, ಶ್ರೀಮತಿ ಭಾಗ್ಯಲಕ್ಷ್ಮಿ ಜನಪ್ರಿಯ ಕಾರ್ಯಕ್ರಮಗಳ ಜೊತೆಗೆ ನಿರ್ಭಯ ಹೊಸ ಸೇರ್ಪಡೆ ಎನ್ನಬಹುದು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











