'ಡ್ರಾಮಾ ಜೂನಿಯರ್ಸ್'ನಿಂದ ಹೊರ ಬಂದ ಟಿ.ಎನ್.ಸೀತಾರಾಮ್.! ಯಾಕೆ.?
Recommended Video

'ಜೀ ಕನ್ನಡ' ವಾಹಿನಿಯ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮವನ್ನು ನೋಡುವ ವೀಕ್ಷಕರೇ... ಇನ್ನು ಮುಂದೆ ನೀವು ನಿರ್ದೇಶಕ ಟಿ.ಎನ್.ಸೀತಾರಾಮ್ ಅವರನ್ನು ಮಿಸ್ ಮಾಡಿಕೊಳ್ಳುತ್ತೀರಾ.! ಯಾಕಂದ್ರೆ, ನಿರ್ದೇಶಕ ಸೀತಾರಾಮ್ ಈಗ ಆ ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ.
'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ನಿರ್ದೇಶಕ ಸೀತಾರಾಮ್, ಹಿರಿಯ ನಟಿ ಲಕ್ಷ್ಮಿ ಮತ್ತು ನಟ ವಿಜಯ್ ರಾಘವೇಂದ್ರ ತೀರ್ಪುಗಾರರಾಗಿದ್ದರು. ಮೊದಲ ಸೀಸನ್ ಬಳಿಕ ಎರಡನೇ ಸೀಸನ್ ಗೂ ಸಹ ಈ ಮೂವರು ತೀರ್ಪುಗಾರರನ್ನೇ ವಾಹಿನಿ ಮುಂದುವರೆಸಿತ್ತು. ಆದರೆ ಇನ್ನು ಮುಂದೆ ತೀರ್ಪುಗಾರರ ಸ್ಥಾನದಲ್ಲಿ ನಿರ್ದೇಶಕ ಸೀತಾರಾಮ್ ಇರುವುದಿಲ್ಲ. ಅದಕ್ಕೆ ಕಾರಣ ಏನು.?

ನಿರ್ದೇಶಕ ಸೀತಾರಾಮ್ ಸ್ಪಷ್ಟನೆ
'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಿಂದ ಹೊರಬಂದ ನಿರ್ದೇಶಕ ಸೀತಾರಾಮ್ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಈ ಕಾರ್ಯಕ್ರಮದ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.

ಋಣಿಯಾಗಿದ್ದೇನೆ
''ಜೀ ವಾಹಿನಿಗೆ ಮತ್ತು ರಾಘು(ರಾಘವೇಂದ್ರ ಹುಣಸೂರು)ಗೆ ತೀರಿಸಲು ಸಾಧ್ಯವಿಲ್ಲದಷ್ಟು ಋಣಿಯಾಗಿದ್ದೇನೆ. ಎಲ್ಲ ಕಾಮನಬಿಲ್ಲುಗಳೂ ಕರಗಲೇಬೇಕಲ್ಲವೇ..!? ಹಾಗೆ ನನ್ನ ಬದುಕು ಎರಡು ವರ್ಷಕ್ಕೊಮ್ಮೆ ಯೂ ಟರ್ನ್ ಹೊಡೆಯುತ್ತದೆ. ತೀರ್ಪುಗಾರನ ಜಾಗದಿಂದ ಬಿಡುಗಡೆಗೊಳಿಸಿ ಎಂದು ಕೇಳಿಕೊಳ್ಳಬೇಕಾದ ಸ್ಥಿತಿ ಬಂದಿದೆ'' - ಸೀತಾರಾಮ್, ನಿರ್ದೇಶಕ

ಬೇಸರದ ಕಾಲದಲ್ಲಿ...
''ಮಹಾಪರ್ವ ಮುಗಿದ ಮೇಲೆ ಕೈಯಲ್ಲಿ ಕೆಲಸ ಇಲ್ಲದವನನ್ನು ಜನ ಗೌರವಿಸಲಾರರು ಎಂದು ಅನಿಸಲು ಶುರುವಾಗಿತ್ತು. ಬೇಸರದ ಕಾಲ ಕಳೆಯುತ್ತಿದ್ದ ನನಗೆ ಗೆಳೆಯ ರಾಘವೇಂದ್ರ ಹುಣಸೂರು ಕರೆ ಮಾಡಿ ಡ್ರಾಮಾ ಜೂನಿಯರ್ಸ್ ಗೆ ತೀರ್ಪುಗಾರನಾಗಿ ಬರಬೇಕೆಂದು ಹೇಳಿದಾಗ ನನಗೇನೂ ಅನ್ನಿಸದಿದ್ದರೂ ಅಲ್ಲಿ ಹೋದಾಗ ನನಗೆ ಹೊಸದೊಂದು ಜಾದೂನಗರಿಯ ಬಾಗಿಲು ತೆರೆದುಕೊಂಡಿತು'' - ಸೀತಾರಾಮ್, ನಿರ್ದೇಶಕ

ನನ್ನ ಬಾಲ್ಯವನ್ನು ತಂದು ಕೊಟ್ಟವು
''ಆ ಮಕ್ಕಳ ಮುಗ್ಧತೆ, ಸಂಭ್ರಮಗಳು ನನ್ನ ಬಾಲ್ಯವನ್ನು ಮತ್ತೆ ಮರಳಿ ತಂದುಕೊಟ್ಟವು..ನನ್ನ ಬೇಸರ ಒಂಟಿತನಗಳೆಲ್ಲಾ ಮ್ಯಾಜಿಕ್ ನಂತೆ ಮಾಯವಾದವು. ಜೀ ತಂಡದವರು ಕೂಡ ಅದ್ಭುತ ನಾಟಕಗಳನ್ನು ಮಾಡಿಸಿದರು'' - ಸೀತಾರಾಮ್, ನಿರ್ದೇಶಕ

ಕಾರಣ ಇಷ್ಟೆ
''ನನ್ನ ಈಗಿನ ಚಿತ್ರದ promotion ಗೋಸ್ಕರ ಮತ್ತು ಹೊಸ ಚಿತ್ರದ ತಯಾರಿಗಾಗಿ ನಾಲ್ಕು ವಾರ ವಿದೇಶ ಪ್ರವಾಸ ಮಾಡುವುದು ಅನಿವಾರ್ಯವಾಗಿದೆ...ವಿಧಾನಮಂಡಲದ ಸಾಕ್ಷ್ಯ ಚಿತ್ರಗಳಿಗಾಗಿ ಮತ್ತೆ ಮೂರು ವಾರ ಡ್ರಾಮಾ ಜೂನಿಯರ್ಸ್ ಗೆ ಹೋಗಲು ಆಗುವುದಿಲ್ಲ... ಕೆಲವರ ಜತೆ ಸೇರಿ web channel ಒಂದು ಶುರು ಮಾಡುವ ತಯಾರಿಯಲ್ಲಿ ಇದ್ದೇನೆ. ಇಷ್ಟರ ಮಧ್ಯೆ ಡ್ರಾಮಾ ಕ್ಕೆ ಹೋಗಲು ಸಾಧ್ಯವೇ ಇಲ್ಲ'' - ಸೀತಾರಾಮ್, ನಿರ್ದೇಶಕ

ವಿದಾಯ ಹೇಳುತ್ತಿದ್ದೇನೆ
''ಮೊದಲು ಒಲ್ಲೆನೆಂದರೂ ಪ್ರೀತಿಯ ರಾಘವೇಂದ್ರ ಕೊಂಚ ಮುನಿಸಿನಿಂದಲೇ ನನ್ನನ್ನು ಬಿಡುಗಡೆ ಮಾಡಿದ್ದಾರೆ. ವಿದಾಯ ಹೇಳುತ್ತಿದ್ದೇನೆ. ನನ್ನ ಜತೆ ತೀರ್ಪುಗಾರರಾಗಿದ್ದ ಲಕ್ಷ್ಮೀ ಮತ್ತು ವಿಜಯ್ ರಿಂದ ನಾನು ಪಡೆದ ಜ್ಞಾನ, ಪ್ರೀತಿ ಮತ್ತು ಆಪ್ತತೆಗಳು ನನಗೆ ಮತ್ತೆಲ್ಲೂ ಸಿಗಲಾರವು...ಆನಂದನ ತಮಾಷೆ ಪ್ರೀತಿಗಳನ್ನು ಮರೆಯಲಾರೆ'' - ಸೀತಾರಾಮ್, ನಿರ್ದೇಶಕ

ನಾನು ಸದಾ ಕೃತಜ್ಞ
''ಸದಾ ನನ್ನನ್ನು ಪ್ರೀತಿಯಿಂದ ನೋಡಿಕೊಂಡ ಜೀ ವಾಹಿನಿ, ರಾಘು ಇವರಿಗೆ ನಾನು ಸದಾ ಕೃತಜ್ಞ. ದಶಕದ ಸಾಧಕನನ್ನಾಗಿ ಮಾಡಿದಿರಿ, WWR ಸಾಧಕನನ್ನಾಗಿ ಕೂಡಿಸಿದಿರಿ...ಇದೆಲ್ಲದರ ಋಣ ಹೇಗೆ ತೀರಿಸಲಿ. ಆರ್ದ್ರ ಹೃದಯದೊಂದಿಗೆ ನಿಮ್ಮ TNS'' - ಸೀತಾರಾಮ್, ನಿರ್ದೇಶಕ


Click it and Unblock the Notifications











