ಜೀ ಕನ್ನಡದ ಡ್ರಾಮ ಜೂನಿಯರ್ಸ್ ಶೋಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಜಡ್ಜ್: ರೋಲ್ ಏನು?
ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟ ದಿನದಿಂದ ಅನೇಕ ಉದ್ಯಮಗಳಿಗೆ ಹಿನ್ನೆಡೆಯಾಗಿತ್ತು. ಈ ಸಾಲಿನಲ್ಲಿ ಮನರಂಜನಾ ಕ್ಷೇತ್ರವೇನೂ ಹೊರತಾಗಿಲ್ಲ. ಸಿನಿಮಾದಂತೆ ಕಿರುತೆರೆಯ ಕೆಲವು ರಿಯಾಲಿಟಿ ಶೋಗಳನ್ನು ನಿಲ್ಲಿಸಬೇಕಾಗಿತ್ತು. ಇದರಲ್ಲೊಂದು ಜೀ ಕನ್ನಡದ ರಿಯಾಲಿಟಿ ಶೋ ಡ್ರಾಮ ಜೂನಿಯರ್ಸ್. ಕಿರುತೆರೆಯ ಈ ಅಚ್ಚು ಮೆಚ್ಚಿನ ಶೋ ಮತ್ತೆ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ. ಮಕ್ಕಳು ಮತ್ತೆ ಕರುನಾಡಿನ ಜನತೆಯನ್ನು ನಕ್ಕು ನಗಿಸಲು ಆಗಮಿಸುತ್ತಿದ್ದಾರೆ.
ಡ್ರಾಮ ಜೂನಿಯರ್ಸ್ ಜೀ ಕನ್ನಡ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು. ಕಾಮಿಡಿ ಕಿಲಾಡಿಗಳಂತೆ ಪುಟಾಣಿಗಳು ಡ್ರಾಮ ಜೂನಿಯರ್ಸ್ ರಿಯಾಲಿಟಿ ಶೋ ನಲ್ಲಿ ರಂಜಿಸಿದ್ದಾರೆ. ಆದರೆ, ಕಳೆದ ಒಂದು ವರ್ಷದಿಂದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲಾಗಿತ್ತು. ಈಗ ಕೊರೊನಾ ಕ್ಷೀಣಿಸುತ್ತಿರುವುದರಿಂದ ಮತ್ತೆ ಶೋ ಆರಂಭ ಆಗಲಿದೆ. ವಿಶೇಷ ಅಂದರೆ, ಅಖಾಡಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಇಳಿದಿದ್ದಾರೆ.

ಡ್ರಾಮ ಜೂನಿಯರ್ಸ್ ರವಿಚಂದ್ರನ್ ಜಡ್ಜ್
ಡ್ರಾಮ ಜೂನಿಯರ್ಸ್ ಕಾರ್ಯಕ್ರಮ ಹೊಸ ರೂಪ ಪಡೆದು ಪ್ರಸಾರವಾಗಲಿದೆ. ಚಿಣ್ಣರ ಲೋಕ ಹಾಸ್ಯ ಹೊಸ ರೂಪ ಪಡೆದುಕೊಳ್ಳಲಿದೆ. ಪುಟಾಣಿಗಳ ಅಭಿನಯ, ಕಾಮಿಡಿ ಮೋಡಿಗೆ ಜನರು ಬಿದ್ದು ಬಿದ್ದು ನಗುವುದು ಗ್ಯಾರಂಟಿ. ಆದರೆ, ಪ್ರತಿಭಾವಂತ ಪುಟಾಣಿಗಳ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಜೀ ಕನ್ನಡ ಕ್ರೇಜಿಸ್ಟಾರ್ ರವಿಚಂದ್ರನ್ಗೆ ಕರೆದುಕೊಂಡು ಬರುತ್ತಿದೆ. ರವಿಚಂದ್ರನ್ ಪುಟಾಣಿಗಳ ಲೋಕದಲ್ಲಿ ಮಗುವಾಗಿ ಡ್ರಾಮ ಜೂನಿಯರ್ಸ್ ಡ್ರಾಮವನ್ನು ಎಂಜಾಯ್ ಮಾಡಲಿದ್ದಾರೆ.

ತೀರ್ಪು ನೀಡಲು ರವಿಚಂದ್ರನ್ ಗ್ರೀನ್ ಸಿಗ್ನಲ್
ಜೀ ಕನ್ನಡದ ಫೇಮಸ್ ರಿಯಾಲಿಟಿ ಶೋ ಡ್ರಾಮ ಜೂನಿಯರ್ಸ್ಗೆ ಜಡ್ಜ್ ಆಗಲು ವಿ. ರವಿಚಂದ್ರನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಒಂದು ಮೂಲದ ಪ್ರಕಾರ, ಜೀ ಕನ್ನಡದ ತಂಡ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಪ್ರೋಮೊ ಶೂಟ್ ಕೂಡ ಮಾಡಿದ್ದಾರೆ. ಪ್ರೋಮೊ ಕೂಡ ಅದ್ಭುತವಾಗಿ ಮೂಡಿ ಬಂದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಡ್ರಾಮ ಜೂನಿಯರ್ಸ್ ಅತೀ ಶೀಘ್ರದಲ್ಲೇ ಆರಂಭ ಆಗುವ ಎಲ್ಲಾ ಕ್ಷಣಗಳೂ ಇವೆ.

ಡ್ರಾಮ ಜೂನಿಯರ್ಸ್ಗೆ ಹೊಸ ಜಡ್ಜ್
ಈ ಹಿಂದಿನ ಡ್ರಾಮ ಜೂನಿಯರ್ಸ್ನಲ್ಲಿ ತೀರ್ಪುಗಾರರಾಗಿ, ನಿರ್ದೇಶಕ ಟಿ ಎನ್ ಸೀತಾರಾಮ್, ಹಿರಿಯ ನಟಿ ಲಕ್ಷ್ಮಿ ಹಾಗೂ ನಟ ವಿಜಯ ರಾಘವೇಂದ್ರ ಕಾಣಿಸಿಕೊಂಡಿದ್ದರು. ಆದರೆ, ಈ ಬಾರಿ ಹಲವು ಕಾರಣಗಳಿಂದ ತೀರ್ಪುಗಾರರೂ ಕೂಡ ಬದಲಾಗಲಿದ್ದಾರೆ ಎನ್ನಲಾಗಿದೆ. ಹಿರಿಯ ನಟಿ ಲಕ್ಷ್ಮಿ ಒಬ್ಬರೇ ತೀರ್ಪುಗಾರರಾಗಿ ಉಳಿದುಕೊಳ್ಳಲಿದ್ದು, ಟಿ ಎನ್ ಸೀತಾರಾಮ್ ಜಾಗಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಆಗಮಿಸಲಿದ್ದಾರೆ. ಇನ್ನು ವಿಜಯ್ ರಾಘವೇಂದ್ರ ಸ್ಥಾನಕ್ಕೆ ಕನ್ನಡದ ಫೇಮಸ್ ನಟಿಯೊಬ್ಬರನ್ನು ಕರೆತರುವ ಪ್ರಯತ್ನದಲ್ಲಿ ಜೀ ಕನ್ನಡವಿದೆ ಎನ್ನಲಾಗಿದೆ.

ಡ್ರಾಮ ಜೂನಿಯರ್ಸ್ ಎದುನೋಡುತ್ತಿರುವ ಕರುನಾಡು
ಬಾಲ್ಯದಲ್ಲಿಯೇ ನಟನೆಯಲ್ಲಿ ಆಸಕ್ತಿ ಹೊಂದಿದವರಿಗೆ ಡ್ರಾಮ ಜೂನಿಯರ್ಸ್ ವೇದಿಕೆಯಾಗಲಿದೆ. ಪೋಷಕರು ಕೂಡ ತಮ್ಮ ಮಕ್ಕಳಿಗೆ ಇಂತಹದ್ದೊಂದು ವೇದಿಕೆಯನ್ನು ಹುಡುಕುತ್ತಲೇ ಇರುತ್ತಾರೆ. ಅದರಂತೆ ಮತ್ತೆ ಡ್ರಾಮ ಜೂನಿಯರ್ಸ್ ಆರಂಭ ಆಗುತ್ತಿರುವುದು ಖುಷಿಕೊಟ್ಟಿದೆ. ಇನ್ನು ಕೆಲವೇ ದಿನಗಳಲ್ಲಿ ಡ್ರಾಮ ಜೂನಿಯರ್ಸ್ ತಂಡ ಕನ್ನಡದ ಕಿರುತೆರೆ ವೀಕ್ಷಕರ ಮುಂದೆ ಪ್ರತ್ಯಕ್ಷ ಆಗಲಿದೆ. ಆದರೆ, ರವಿಚಂದ್ರನ್ ತೀರ್ಪುಗಾರರಾಗಿರುವ ಬಗ್ಗೆ ಜೀ ಕನ್ನಡ ಹಾಗೂ ಸ್ವತಃ ಕ್ರೇಜಿಸ್ಟಾರ್ ಇದೂವರೆಗೂ ಎಲ್ಲೂ ಅಧಿಕೃತ ಮಾಹಿತಿಯನ್ನು ಹೊರ ಹಾಕಿಲ್ಲ.


Click it and Unblock the Notifications











