ಸುಶಾಂತ್ ಸಿಂಗ್ ಸಾವಿನ ಪ್ರಕರಣ: ಅಖಾಡಕ್ಕೆ ಇಳಿದ 'ನಿರ್ಭಯಾ' ಕೇಸ್ ವಕೀಲೆ
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಒತ್ತಾಯಿಸುತ್ತಲೇ ಇದ್ದಾರೆ. ಬಿಹಾರದ ಎಲ್ಲ ಪಕ್ಷದವರೂ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸ್ವತಃ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
Recommended Video
ಈ ನಡುವೆ 'ನಿರ್ಭಯಾ' ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ಕು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಜಾರಿಯಾಗುವವರೆಗೂ ಏಳು ವರ್ಷ ಕಾನೂನು ಹೋರಾಟ ನಡೆಸಿದ್ದ ಖ್ಯಾತ ವಕೀಲೆ ಸೀಮಾ ಸಮೃದ್ಧಿ ಕುಶ್ವಾಹ ಕೂಡ ಸುಶಾಂತ್ ಸಾವಿನ ಹಿಂದೆ ಬೇರೆ ಏನೋ ಸಂಚು ನಡೆದಿರುವ ಸಾಧ್ಯತೆ ಇದೆ ಎಂದು ಅನುಮಾನಿಸಿದ್ದು, ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಮುಂದೆ ಓದಿ.

ಪೊಲೀಸರು ವಿಫಲರಾಗಿದ್ದಾರೆ
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. 'ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಹಿಂದಿನ ಸತ್ಯವನ್ನು ತಿಳಿಯುವ ಹಕ್ಕು ಪ್ರತಿಯೊಬ್ಬ ಭಾರತೀಯನಿಗೂ ಇದೆ. ಆದರೆ ಒಂದು ತಿಂಗಳಿಗೂ ಹೆಚ್ಚು ಸಮಯ ಕಳೆದಿದ್ದರೂ ಮುಂಬೈ ಪೊಲೀಸರು ಸತ್ಯವನ್ನು ಬಹಿರಂಗಪಡಿಸುವುದರಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ದಯವಿಟ್ಟು ಈ ನಮ್ಮ ನೆಚ್ಚಿನ ಹೀರೋನ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ' ಎಂದು ಸೀಮಾ ಟ್ವೀಟ್ ಮಾಡಿದ್ದಾರೆ.

ನೇಣು ಹಾಕಿಕೊಂಡಂತೆ ಇಲ್ಲ
ಜೂನ್ 14ರಂದು ಸಂಭವಿಸಿದ ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಂತೆ ಕಾಣಿಸುತ್ತಿಲ್ಲ. ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹವನ್ನು ಗಮನಿಸಿ. ಅದು ಪೂರ್ವನಿಯೋಜಿತ ಹತ್ಯೆಯಂತೆ ಕಾಣಿಸುತ್ತದೆ. ಅವರ ಕತ್ತಿನಲ್ಲಿರುವ ಗುರುತು ನೇಣು ಹಾಕಿಕೊಂಡಾಗ ಆಗುವಂತೆ ಇಲ್ಲ. ಈಗ ಪ್ರಶ್ನೆಯೇನೆಂದರೆ ತನಿಖೆ ಆರಂಭಿಸುವ ಮುನ್ನವೇ ಮುಂಬೈ ಪೊಲೀಸರು ಇದು ಆತ್ಮಹತ್ಯೆ ಎಂದು ಹೇಗೆ ಹೇಳಿದ್ದಾರೆ? ಎಂದು ಸೀಮಾ ಪ್ರಶ್ನಿಸಿದ್ದಾರೆ.

ಆತ್ಮಹತ್ಯೆಯೇ ಆಗಿರಬೇಕಿಲ್ಲ
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುದ್ದಿ ಹೊರಬಂದ ದಿನ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಸೀಮಾ, ಆಗಲೇ ಅನುಮಾನ ವ್ಯಕ್ತಪಡಿಸಿದ್ದರು. ಇದು ನಿಜಕ್ಕೂ ಆತ್ಮಹತ್ಯೆಯೇ ಅಥವಾ ಕೊಲೆಯೇ? ಮುಚ್ಚಿದ ಕೊಠಡಿಯ ಒಳಗೆ ನೇಣುಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದ್ದರೆ ಅದು ಆತ್ಮಹತ್ಯೆಯೇ ಆಗಿರುತ್ತದೆ ಎನ್ನುವಂತಿಲ್ಲ ಎಂದಿದ್ದರು.

ಮುಚ್ಚಿಹಾಕಲು ಪ್ರಯತ್ನ?
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆ ನಡೆಯುತ್ತಿರುವ ರೀತಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಪ್ರಮುಖವಾಗಿ ವಿಚಾರಣೆ ನಡೆಸಬೇಕಿದ್ದವರನ್ನೇ ಪೊಲೀಸರು ಕರೆಸುತ್ತಿಲ್ಲ. ಪ್ರಕರಣ ಮುಚ್ಚಿಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ವಿವಿಧ ಜನರಿಂದ ಹೇಳಿಕೆ ದಾಖಲಿಸುವ ಮೂಲಕ ಕಣ್ಣೊರೆಸುವ ತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


Click it and Unblock the Notifications











