'ವಿಶ್ವರೂಪಂ' ಮೇಲೆ ಕನ್ನಡದ 'ಸ್ವಸ್ತಿಕ್' ನೆರಳು

'ವಿಶ್ವರೂಪಂ' ಹಾಗೂ 'ಸ್ವಸ್ತಿಕ್' ಈ ಎರಡೂ ಚಿತ್ರಗಳ ಸಬ್ಜೆಕ್ಟ್ ಒಂದೇ. ಎರಡರಲ್ಲೂ ಭಯೋತ್ಪಾದನೆಯ ಕಥಾಹಂದರವಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ಈ ಬಗ್ಗೆ ಕ್ಯಾತೆ ತೆಗೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ನಡೆಸಿದ್ದಾರೆ.
ಉಪ್ಪಿಗೆ ಅಭಿಮಾನಿಯೊಬ್ಬ ಹೀಗೆ ಟ್ವೀಟ್ ಮಾಡಿದ್ದಾರೆ..."ಸಾರ್ ಎರಡೂ ಚಿತ್ರಗಳಲ್ಲೂ ಬಹಳಷ್ಟು ಸಾಮ್ಯತೆಗಳಿವೆ. ಎರಡೂ ಚಿತ್ರಗಳು ಇಷ್ಟವಾದವು. ಒಂದೇ ಒಂದು ವ್ಯತ್ಯಾಸ ಏನೆಂದರೆ ನೀವು ಸಾಕಷ್ಟು ವರ್ಷಗಳ ಹಿಂದೆಯೇ ಈ ಚಿತ್ರ ಮಾಡಿದಿರಿ. 'ವಿಶ್ವರೂಪಂ' ಈಗ ಮಾಡಿದ್ದಾರೆ ಅಷ್ಟೇ" ಎಂದಿದ್ದಾರೆ.
ಹದಿಮೂರು ವರ್ಷಗಳ ಹಿಂದೆ ತೆರೆಕಂಡ ಸ್ವಸ್ತಿಕ್ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಸಿಬಿಐ ಅಧಿಕಾರಿಯೊಬ್ಬ ತಾನು ಉಗ್ರನೆಂದು ಮಾಧ್ಯಮಗಳು ಹಾಗೂ ಜನಸಾಮಾನ್ಯರನ್ನು ನಂಬಿಸಿ ಕಡೆಗೆ ಉಗ್ರರನ್ನು ಮಟ್ಟ ಹಾಕುವ ಕಥಾವಸ್ತುವೇ ಸ್ವಸ್ತಿಕ್.
ಹೆಚ್ಚು ಕಡಿಮೆ ಇದೇ ರೀತಿಯ ಕಥಾವಸ್ತುವನ್ನು ವಿಶ್ವರೂಪಂ ಚಿತ್ರವೂ ಒಳಗೊಂಡಿದೆ. ರಾ ಅಧಿಕಾರಿಯಾಗಿ ಕಮಲ್ ಅಭಿನಯಿಸಿದ್ದು ಉಗ್ರರನ್ನು ಸದೆಬಡಿಯುವ ಕಥಾನಕವಿದೆ. ಅಮೆರಿಕಾ ಹಾಗೂ ಆಪ್ಘಾನಿಸ್ತಾನದಲ್ಲಿ ಈ ಚಿತ್ರವನ್ನು ಚಿತ್ರಿಸಲಾಗಿದೆ.
"ಕಮಲ್ ಅವರ 'ವಿಶ್ವರೂಪಂ' ಚಿತ್ರ ಮುಸ್ಲಿಂ ವಿರೋಧಿಯಲ್ಲ, ಭಯೋತ್ಪಾದನೆಯ ವಿರೋಧಿ. ಚಿತ್ರಮಂದಿರದಲ್ಲೇ ಚಿತ್ರವನ್ನು ವೀಕ್ಷಿಸಿ. ಅದ್ಭುತ ಅಭಿನಯ. ಪೈರಸಿ ಕಾಪಿಯನ್ನು ನೋಡಬೇಡಿ ಎಂದು ಉಪೇಂದ್ರ ತಮ್ಮ ಅಭಿಮಾನಿಗಳಲ್ಲಿ" ಎಂದು ವಿನಂತಿಸಿಕೊಂಡಿದ್ದಾರೆ.
ಈ ಹಿಂದೆ ಶಂಕರ್ ನಿರ್ದೇಶಿಸಿದ್ದ 'ಎಂಧಿರನ್' ಚಿತ್ರಕ್ಕೂ ಉಪೇಂದ್ರ ನಿರ್ದೇಶನದ 'ಹಾಲಿವುಡ್' ಚಿತ್ರಕ್ಕೂ ಸಾಮ್ಯತೆಗಳಿದ್ದವು. ಆಗಲೂ ಇದೇ ರೀತಿಯ ಮಾತುಗಳು ಕೇಳಿಬಂದಿದ್ದವು. ಈಗಲೂ ಅಂಥಹದ್ದೇ ಒಂದು ವಾತಾವರಣ ನಿರ್ಮಾಣವಾಗಿದೆ.


Click it and Unblock the Notifications











