ಗೆದ್ದ ಪವರ್ ಸ್ಟಾರ್: ನಂಬರ್ ಒನ್ ನಾನಾ, ನೀನಾ?
ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ವಾರ್ ಹೊಸದೇನಲ್ಲ, ಅಂತೆಯೇ ಸ್ಯಾಂಡಲ್ ವುಡ್ ನಲ್ಲಿ ಕೂಡಾ. ಪ್ರಮುಖ ನಾಯಕ ನಟರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಲಾಭ ನಷ್ಟ ಅನುಭವಿಸಿದ ವರದಿಯ ಪ್ರಕಾರ ಯಾರು ಕನ್ನಡದಲ್ಲಿ ನಂಬರ್ ಒನ್ ಎನ್ನುವ ಬಹಳಷ್ಟು ಚರ್ಚೆಗಳು ಈ ಹಿಂದೆ ಕೂಡಾ ನಡೆದಿದ್ದವು.
ಬಾಕ್ಸಾಫೀಸಿನಲ್ಲಿ ಭರ್ಜರಿ ಬೆಳೆ ತೆಗೆದ ಪುನೀತ್ ರಾಜಕುಮಾರ್ ಅಭಿನಯದ ಪವರ್ ಸ್ಟಾರ್ ಚಿತ್ರ ಸದ್ದು ಮಾಡುತ್ತಿದ್ದಂತೆಯೇ, ಸ್ಯಾಂಡಲ್ ವುಡ್ ನಲ್ಲಿ ಯಾರು ನಂಬರ್ ಒನ್ ಹೀರೋ ಎನ್ನುವ ಚರ್ಚೆ ಮತ್ತೆ ಆರಂಭವಾಗಿದೆ.
ಈ ಚರ್ಚೆ ಮತ್ತೆ ಆರಂಭವಾಗಲು ಕಾರಣ ಇಲ್ಲದಿಲ್ಲ. ಪುನೀತ್ ಅಭಿನಯದ ಕಳೆದ ಐದು ಚಿತ್ರಗಳು (ಹುಡುಗ್ರು, ಪರಮಾತ್ಮ, ಅಣ್ಣಾಬಾಂಡ್, ಯಾರೇ ಕೂಗಾಡಲಿ, ನಿನ್ನಿಂದಲೇ) ಸಾಧಾರಣ ಯಶಸ್ಸನ್ನು ಮಾತ್ರ ಕಂಡಿದ್ದವು. ಅದರಲ್ಲೂ ನಿನ್ನಿಂದಲೇ ಚಿತ್ರ ಸೋಲು ಕಂಡಿತ್ತು. (ನಂಬಲಾಗದ ಸ್ಯಾಂಡಲ್ ವುಡ್ ಭಲೇ ಜೋಡಿ)
ಪುನೀತ್ ಸಿನಿಮಾ ವೃತ್ತಿ ಜೀವನದಲ್ಲಿನ ಈ ಅಪರೂಪದ ಹಿನ್ನಡೆಯ ನಂತರ ಬಂದ ಮತ್ತೊಂದು ಅವರ ರಿಮೇಕ್ ಚಿತ್ರ ಪವರ್ ಸ್ಟಾರ್. ಕನ್ನಡ ಚಿತ್ರೋದ್ಯಮದ ಇದುವರೆಗಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎನ್ನುವಂತೆ ಬಿಡುಗಡೆಯಾದ ದಿನ ದಾಖಲೆಯ 1200ಶೋ ಪ್ರದರ್ಶನ ಕಂಡಿತ್ತು.
ನಂಬರ್ ಒನ್ ಸ್ಥಾನದಲ್ಲಿ ಯಾರು ಎನ್ನುವ ಅಧಿಕೃತ ಲೆಕ್ಕಾಚಾರ ಸಿಗುವುದಿಲ್ಲವಾದರೂ, ಅವರವರ ಅಭಿಮಾನಿಗಳಿಗೆ ಅವರ ಹೀರೋಗಳೇ ನಂಬರ್ ಒನ್. ಮುಂದೆ ಓದಿ..

ಪವರ್ ಮೊದಲ ವಾರದ ಗಳಿಕೆ
ಪವರ್ ಚಿತ್ರದ ಮೊದಲದ ವಾರದ ಗಳಿಗೆ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು. ಹಂಚಿಕೆದಾರರು, ನಿರ್ಮಾಪಕರು ಉಸ್ಸಪ್ಪಾ ಎಂದಿದ್ದರು, ಹಾಗೂ ಚಿತ್ರದ ನಾಯಕಿ ತ್ರಿಷಾ ಕೃಷ್ಣನ್ ಸಂತೋಷಕ್ಕೂ ಪಾರವೇ ಇರಲಿಲ್ಲ. ಯಾಕೆಂದರೆ ಇದು ಅವರ ಮೊದಲ ಕನ್ನಡ ಚಿತ್ರವಾಗಿತ್ತು.

ನವೀನ್ ಕುಮಾರ್ ಗೌಡ ಆಲಿಯಾಸ್ ರಾಕಿಂಗ್ ಸ್ಟಾರ್ ಯಶ್
ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಕನ್ನಡ ಚಿತ್ರೋದ್ಯಮದಲ್ಲಿ ಅಗ್ರ ಪಂಕ್ತಿಯ ನಾಯಕ ನಟನ ಸ್ಥಾನಕ್ಕೆ ಬಂದ ಹೀರೋ ರಾಕಿಂಗ್ ಸ್ಟಾರ್ ಯಶ್. ನಿರ್ಮಾಪಕರ ಪಾಲಿಗೆ ಡಾರ್ಲಿಂಗ್ ಆಗಿರುವ ಯಶ್ ಇತ್ತೀಚಿನ ಎಲ್ಲಾ ಚಿತ್ರಗಳು ಸೂಪರ್ ಹಿಟ್. ಯಶ್ ಅಭಿನಯದ ಸತತ ಏಳು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡಿದ್ದವು. ಕಿರಾತಕ, ಲಕ್ಕಿ, ಜಾನು, ಡ್ರಾಮಾ, ಗೂಗ್ಲಿ, ರಾಜಾಹುಲಿ ಮತ್ತು ಗಜಕೇಸರಿ ಚಿತ್ರಗಳು ಭಾರೀ ಯಶಸ್ಸು ಸಂಪಾದಿಸಿದ್ದವು.

ಚಾಲೆಂಜಿಂಗ್ ಸ್ಟಾರ್ ದರ್ಶನ್
2011ರಲ್ಲಿ ಬಿಡುಗಡೆಯಾದ ಸಾರಥಿ ಚಿತ್ರದ ಯಶಸ್ಸಿನ ನಂತರ ದರ್ಶನ್ ಹಿಂದಿರುಗಿ ನೋಡಲೇ ಇಲ್ಲ. ಇದಾದ ನಂತರ ಬಂದ ಚಿಂಗಾರಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬುಲ್ ಬುಲ್ ಮತ್ತು ಬೃಂದಾವನ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದವು. ಅವರ ಮುಂದಿನ 'ಅಂಬರೀಶ' ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್
ಒಟ್ಟಾರೆಯಾಗಿ ಪುನೀತ್ ಸಿನಿಮಾಗಳು ಗೆದ್ದ ಉದಾಹರಣೆಗಳೇ ಹೆಚ್ಚು. ಹುಡುಗ್ರು, ಪರಮಾತ್ಮ, ಅಣ್ಣಾಬಾಂಡ್, ಯಾರೇ ಕೂಗಾಡಲಿ ಚಿತ್ರಗಳು ನಿರೀಕ್ಷಿತ ಯಶಸ್ಸು ಗಳಿಸದಿದ್ದರೂ ನಿರ್ಮಾಪಕರಿಗಾಗಲಿ ಅಥವಾ ಹಂಚಿಕೆದಾರರಿಗಾಗಲಿ ಮೋಸ ಮಾಡಲಿಲ್ಲ. ಜೊತೆಗೆ ಈ ಸಮಯದಲ್ಲಿ ಬಂದ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ಪುನೀತ್ ಗೆ ಉತ್ತಮ ಹೆಸರು ತಂದುಕೊಟ್ಟಿತ್ತು. ಈಗ ಪವರ್ ಚಿತ್ರದ ಭರ್ಜರಿ ಗಳಿಗೆಯಿಂದಾಗಿ ಪುನೀತ್ ಈಸ್ ಬ್ಯಾಕ್ ಆನ್ ಟ್ರ್ಯಾಕ್.

ಬಿಗ್ ಬಾಸ್ ಸುದೀಪ್
ಸತತ ಸೋಲಿನಿಂದ ಕಂಗೆಟ್ಟಿದ್ದ ಕಿಚ್ಚ ಸುದೀಪ್ ಗೆ ಬ್ರೇಕ್ ನೀಡಿದ ಚಿತ್ರ ಕೆಂಪೇಗೌಡ. ಇದಾದ ನಂತರ ಕಿರುತೆರೆಯಲ್ಲಿನ ಇವರ ನಿರೂಪಣೆಯ ಬಿಗ್ ಬಾಸ್ 1 ರಿಯಾಲಿಟಿ ಶೋ ಪ್ರಚಂಡ ಯಶಸ್ಸು ಪಡೆಯಿತು. ವಿಷ್ಣುವರ್ಧನ, ತೆಲುಗು ಚಿತ್ರ ಈಗ, ವರದನಾಯಕ, ಬಚ್ಚನ್, ಮಾಣಿಕ್ಯ ಚಿತ್ರಗಳು ಹಿಟ್ ಆದವು. ಸುದೀಪ್ ಈಗ ಬಿಗ್ ಬಾಸ್ 2 ರಿಯಾಲಿಟಿ ಶೋನ ನಿರೂಪಕರಾಗಿರುವ ಜೊತೆ 'ರನ್ನ' ಚಿತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ
ಚಿತ್ರೋದ್ಯಮದಲ್ಲಿ ಸದಾ ಚಾಲ್ತಿಯಲ್ಲಿರುವ ಇನ್ನೊಂದು ಹೆಸರೆಂದರೆ ರಿಯಲ್ ಸ್ಟಾರ್ ಉಪೇಂದ್ರ. ದಶಕಗಳ ನಂತರ ಚಿತ್ರ ನಿರ್ದೇಶನಕ್ಕೆ ಮುಂದಾದ ಉಪ್ಪಿಯ ಸೂಪರ್ ಚಿತ್ರ ಸೂಪರ್ ಹಿಟ್ ಆಗಿತ್ತು. ಅದಾದ ನಂತರ ಉಪ್ಪಿ ನಟನೆಯ ಶ್ರೀಮತಿ, ಆರಕ್ಷಕ, ಕಠಾರಿವೀರ ಸುರಸುಂದರಾಂಗಿ, ಗಾಡ್ ಫಾದರ್, ಕಲ್ಪನಾ, ಟೋಪಿವಾಲ, ಬ್ರಹ್ಮ ಹೀಗೆ ಏಳು ಚಿತ್ರಗಳಲ್ಲಿ ನಾಲ್ಕು ಚಿತ್ರಗಳು ಬಾಕ್ಸಾಫೀಸಿನಲ್ಲಿ ಸದ್ದು ಮಾಡಿದ್ದವು.

ಗೋಲ್ಡನ್ ಸ್ಟಾರ್ ಗಣೇಶ್
ಸಿನಿಮಾ ವೃತ್ತಿ ಜೀವನದಲ್ಲಿ ಹಲವು ಏರುಪೇರುಗಳನ್ನು ಕಂಡ ಗಣೇಶ್ ಗೆ ಇತ್ತೀಚಿನ ದಿನಗಳಲ್ಲಿ ಅದ್ಭುತ ಯುಶಸ್ಸು ತಂದುಕೊಟ್ಟ ಚಿತ್ರ 'ಶ್ರಾವಣಿ ಸುಬ್ರಮಣ್ಯ'. ಇದಾದ ನಂತರ ಬಂದ ದಿಲ್ ರಂಗೀಲ ಚಿತ್ರ ಐವತ್ತು ದಿನ ಪೂರೈಸಿತ್ತು. ಈ ಮಧ್ಯೆ ಗಣೇಶ್ ಕಿರುತೆರೆಯ ಕಾರ್ಯಕ್ರಮದಲ್ಲಿ ನಿರೂಪಕರಾಗಿಯೂ ಕಾಣಿಸಿಕೊಂಡಿದ್ದಾರೆ.

ಖಾಲಿ ಕ್ವಾಟ್ರು ಶರಣ್
ಹಾಸ್ಯನಟನಾಗಿ ಮನೆಮಾತಾಗಿರುವ ಶರಣ್ ನಾಯಕ ನಟನಾಗಿ ನಟಿಸಿದ್ದ ಮೂರೂ ಚಿತ್ರಗಳು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದದ್ದು ಗಾಂಧಿನಗರ ಬೆಚ್ಚಿಬೀಳಿಸುವಂತೆ ಮಾಡಿದೆ. ಶರಣ್ ನಾಯಕ ನಟನಾಗಿ ನಟಿಸಿದ್ದ ವಿಕ್ಟರಿ ಚಿತ್ರ ಭರ್ಜರಿ ಗಳಿಕೆ ಕಂಡಿದ್ದರೆ, ಜೈಲಲಿತಾ ನಿರ್ಮಾಪಕರಿಗೆ ಮೋಸ ಮಾಡಲಿಲ್ಲ. ಶರಣ್ ಅಭಿನಯದ ಲೇಟೆಸ್ಟ್ ಅಧ್ಯಕ್ಷ ಚಿತ್ರ ಯಾವಪಾಟಿ ದುಡ್ಡು ಬಾಚುತ್ತಿದೆಯೆಂದರೆ ಬಿಡುಗಡೆಯಾದ ಚಿತ್ರಮಂದಿರದಲ್ಲಿ ಥಿಯೇಟರ್ ಮಾಲೀಕರು ಬೇರೆ ಚಿತ್ರ ಪ್ರದರ್ಶನಕ್ಕೆ ಆಸಕ್ತಿ ತೋರಿಸುತ್ತಿಲ್ಲ.


Click it and Unblock the Notifications











