ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಬಗ್ಗೆ ಕೇಳಿಬಂದ 'ರಾಜಕೀಯ' ಸಮಾಚಾರ
ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಬಗ್ಗೆ ಹೊಸ ಸಮಾಚಾರವೊಂದು ಕೇಳಿಬಂದಿದೆ. ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಶಿಲ್ಪಾ ಗಣೇಶ್ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗಿ ಕಣಕ್ಕಿಳಿಯಲು ಶಿಲ್ಪಾ ಗಣೇಶ್ ಪ್ರಯತ್ನ ಆರಂಭಿಸಿದ್ದಾರಂತೆ.
ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಕೂಡ ಆಗಿರುವ ಶಿಲ್ಪಾ ಗಣೇಶ್ ಅವರ ಮನೆ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿಯೇ ಇರುವುದರಿಂದ, ಶಿಲ್ಪಾ ಗಣೇಶ್ ರವರಿಗೆ ಟಿಕೆಟ್ ನೀಡಲು ಬಿಜೆಪಿ ನಾಯಕರು ಕೂಡ ಚಿಂತನೆ ನಡೆಸಿದ್ದಾರಂತೆ.

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧಿ ಬೇಕಿದೆ.!
2008ರಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ, 2013ರಲ್ಲಿ ಚಲನಚಿತ್ರ ನಿರ್ಮಾಪಕರೂ ಆಗಿರುವ ಕಾಂಗ್ರೆಸ್ ಪಕ್ಷದ ಮುನಿರತ್ನ, ಈ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದರು. ರಾಜರಾಜೇಶ್ವರಿ ನಗರ ಕ್ಷೇತ್ರವನ್ನ ಮತ್ತೆ ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಬಲ ಸ್ಪರ್ಧಿಯನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.

ಮುನಿರತ್ನ ವರ್ಸಸ್ ಶಿಲ್ಪಾ ಗಣೇಶ್.?
ಕಾಂಗ್ರೆಸ್ ಪಕ್ಷದಿಂದ ನಿರ್ಮಾಪಕ ಮುನಿರತ್ನ ವಿರುದ್ಧ ಸ್ಪರ್ಧಿಸಲು ಬಿಜೆಪಿಯಿಂದ ಶಿಲ್ಪಾ ಗಣೇಶ್ ರವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

ಇಬ್ಬರಿಗೂ ಚಿತ್ರರಂಗ ಹಿನ್ನಲೆಯಿದೆ.!
ಮುನಿರತ್ನ ಹಾಗೂ ಶಿಲ್ಪಾ ಗಣೇಶ್... ಇಬ್ಬರಿಗೂ ಚಿತ್ರರಂಗದ ಹಿನ್ನಲೆ ಇದೆ. ಇಬ್ಬರೂ ಚಿತ್ರ ನಿರ್ಮಾಣ ಮಾಡಿದ್ದಾರೆ.

ಯಾರಿಗೂ ಕೇರ್ ಮಾಡದ ಶಿಲ್ಪಾ ಗಣೇಶ್
ಚಿತ್ರರಂಗದ ಹಿನ್ನಲೆ ಇದ್ದರೂ, ರಮ್ಯಾ ಹಾಗೂ ಮುನಿರತ್ನ ವಿರುದ್ಧ ಶಿಲ್ಪಾ ಗಣೇಶ್ ಫೇಸ್ ಬುಕ್ ನಲ್ಲಿ ಕಿಡಿಕಾರಿದ್ದರು. ಮುನಿರತ್ನ ಹಾಗೂ ಅವರ ಬೆಂಬಲಿಗರ ವರ್ತನೆಯನ್ನ ಖಂಡಿಸಿದ್ದರು.

ಶಿಲ್ಪಾ ಬೆಂಬಲಕ್ಕೆ ಪತಿ ಗಣೇಶ್
ಶಿಲ್ಪಾ ರವರ ರಾಜಕೀಯ ಪ್ರಯತ್ನಕ್ಕೆ ಪತಿ ಗಣೇಶ್ ಕೂಡ ಬೆಂಬಲವಾಗಿ ನಿಂತಿದ್ದಾರೆ. ಇನ್ನೂ ಮಾಳವಿಕಾ ಅವಿನಾಶ್, ದೇವರಾಜ್ ಕುಟುಂಬ, ಅಮೂಲ್ಯ ಕುಟುಂಬ ಸೇರಿದಂತೆ ಚಿತ್ರರಂಗದ ಹಲವರು ಶಿಲ್ಪಾ ಗಣೇಶ್ ರವರಿಗೆ ಬೆಂಬಲ ಸೂಚಿಸುವುದರಲ್ಲಿ ಡೌಟೇ ಇಲ್ಲ.

ಸುಮಲತಾ ಅಂಬರೀಶ್ ಹೆಸರು ಕೂಡ ಕೇಳಿಬಂದಿತ್ತು
ನಟಿ ಸುಮಲತಾ ಅಂಬರೀಶ್ ರವರಿಗೆ ರಾಜರಾಜೇಶ್ವರಿ ನಗರದಿಂದ ಬಿಜೆಪಿ ಟಿಕೆಟ್ ನೀಡುವ ಕುರಿತು ಮಾತುಕತೆ ನಡೆಯುತ್ತಿದೆ ಎಂಬ ಗುಲ್ಲು ಈ ಹಿಂದೆ ಹರಿದಾಡಿತ್ತು. ಆದ್ರೀಗ, ಈ ಕ್ಷೇತ್ರದಲ್ಲಿ ಶಿಲ್ಪಾ ಗಣೇಶ್ ಹೆಸರು ದಟ್ಟವಾಗಿ ಕೇಳಿಬರುತ್ತಿದೆ.


Click it and Unblock the Notifications











