'ಕೃಷ್ಣ ಲೀಲಾ' ವಿಶೇಷಗಳನ್ನು ಬಿಚ್ಚಿಟ್ಟ ನಿರ್ದೇಶಕ ಶಶಾಂಕ್
ಸುದೀಪ್ ಅಭಿನಯದ ಬಚ್ಚನ್ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಶಶಾಂಕ್ ಅವರ ಮುಂದಿನ ಸಿನಿಮಾ ಕೃಷ್ಣಲೀಲಾ, ಯುಗಾದಿಯ ಮುನ್ನಾ ದಿನವಾದ ಶುಕ್ರವಾರ (ಮಾ 19) ತೆರೆಗೆ ಬರಲು ಸಿದ್ದವಾಗಿದೆ.
ಇದುವರೆಗೆ ಅವರು ನಿರ್ದೇಶಿಸಿದ್ದ ಐದೂ ಚಿತ್ರಗಳೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದವು. ಹಾಗಾಗಿ, ಅಜೇಯ್ ರಾವ್, ಮಯೂರಿ, ರಂಗಾಯಣ ರಘು, ಅಚ್ಯುತ್ ಕುಮಾರ್ ಪ್ರಮುಖ ಭೂಮಿಕೆಯಲ್ಲಿರುವ 'ಕೃಷ್ಣಲೀಲಾ' ಯಾವ ರೀತಿಯಲ್ಲಿ ಸಿನಿಪ್ರೇಮಿಗಳ ಮೇಲೆ ಲೀಲೆ ತೋರಿಸುತ್ತೆ ಎನ್ನುವ ಕುತೂಹಲ ಇದ್ದೇ ಇದೆ. (ಅಜೇಯ್ ರಾವ್ ಸಂದರ್ಶನ)
ಕಪಾಲಿ ಸೇರಿದಂತೆ ಸುಮಾರು 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಕೃಷ್ಣಲೀಲಾ' ಚಿತ್ರ ಬಿಡುಗಡೆಯಾಗಲಿದೆ. ಚಿತ್ರಕ್ಕಾಗಿ ಮೂರು ದಿನ ಪೊಲೀಸ್ ಠಾಣೆಯಲ್ಲಿ ಇದ್ದದ್ದು ಮುಂತಾದ ಅನುಭವಗಳನ್ನು ನಿರ್ದೇಶಕ ಶಶಾಂಕ್ ನಮ್ಮ ಜೊತೆಗಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಪ್ರ: ಚಿತ್ರ ಬಿಡುಗಡೆಗೆ ಮುನ್ನವೇ ನಿರ್ಮಾಪಕರು ಸೇಫ್ ಆಗಿದ್ದಾರೆ ಎನ್ನುವ ಸುದ್ದಿಯಿದೆ?
ಶಶಾಂಕ್ : ಹೌದು, ರಾಜ್ಯದ ಎಲ್ಲಾ ಭಾಗದ ರೈಟ್ಸ್ ಮಾರಾಟವಾಗಿದೆ. ಇನ್ನು, ಚಿತ್ರದ ಸ್ಯಾಟಿಲೆಟ್ ರೈಟ್ಸ್ ಉದಯ ಟಿವಿಗೆ ನೀಡಿದ್ದೇವೆ.
ಪ್ರ: ನಿಮ್ಮ ಇದುವರೆಗಿನ ಚಿತ್ರಕ್ಕಿಂತ ಕೃಷ್ಣಲೀಲಾ ಅತಿಹೆಚ್ಚು ಬಜೆಟಿನ ಚಿತ್ರ, ಹೌದೇ?
ಶಶಾಂಕ್: ಹೌದು, ಅರು ತಿಂಗಳಿನಿಂದ ಪ್ರಿ-ಪ್ರೊಡಕ್ಷನ್ ಕೆಲಸ ಶುರು ಮಾಡಿದ್ದೆವು. ರಿಯಲಿಸ್ಟಿಕ್ ಸ್ಟೋರಿ ಆಗಿರುವುದರಿಂದ ಎಲ್ಲೂ ಕಾಂಪ್ರಮೈಸ್ ಮಾಡಿಲ್ಲ. ಹಾಗಂತ ನಿರ್ಮಾಪಕ ಅಜೇಯ್ ಬಳಿ ಕೋಟ್ಯಾಂತರ ರೂಪಾಯಿ ಬ್ಯಾಂಕ್ ಬ್ಯಾಲನ್ಸ್ ಇರಲಿಲ್ಲ. ದುಡ್ಡು ಸಾಲದಿದ್ದಾಗ ನನ್ನ ಗೆಳೆಯರಿಂದಲೂ ದುಡ್ಡು ಹಾಕಿಸಿದ್ದೀನಿ.

ನೀವೇ ಈ ಚಿತ್ರವನ್ನು ಪ್ರೊಡ್ಯೂಸ್ ಮಾಡಬೇಕಾಗಿತ್ತಾ?
ಶಶಾಂಕ್: ಎರಡು ವರ್ಷದಿಂದ ಹಿಂದೆಯೇ ಈ ಚಿತ್ರ ನಿರ್ಮಿಸಲು ಮುಂದಾಗಿದ್ದೆ. ನಾನಾ ಕಮಿಟ್ಮೆಂಟ್ ಗಳಿಂದ ಚಿತ್ರ ನಿರ್ಮಿಸಲಾಗಲಿಲ್ಲ. ಈ ಚಿತ್ರ ನಿರ್ಮಿಸಲು ಅಜೇಯ್ ಒಂದು ಹೆಜ್ಜೆ ಮುಂದೆ ಹೋಗಿದ್ದರಿಂದ ಚಿತ್ರ ನಿರ್ಮಾಣದಿಂದ ಹಿಂದೆ ಸರಿದೆ. ನಾನು ನಿರ್ಮಾಪಕನಾದರೂ ಒಂದೇ, ಅಜೇಯ್ ಆದರೂ ಒಂದೆ. ನಮ್ಮಿಬ್ಬರ ಮದ್ಯೆ ರ್ಯಾಪೋ ಚೆನ್ನಾಗಿದೆ.

ಪ್ರ: ಶೂಟಿಂಗ್ ಎಲ್ಲೆಲ್ಲಿ ಮಾಡಿದ್ದೀರಿ, ಸೆಟ್ ಬಳಸಿದ್ದೀರಾ?
ಶಶಾಂಕ್ : ಶೂಟಿಂಗ್ ಫುಲ್ ಬೆಂಗಳೂರಿನಲ್ಲಿ ನಡೆದಿದ್ದು, ಕೆಲವು ಸನ್ನಿವೇಶಗಳನ್ನು ಸಕಲೇಶಪುರದಲ್ಲಿ ಶೂಟ್ ಮಾಡಿದ್ದೇನೆ. ಮೂಲ ಪಾತ್ರಧಾರಿಗಳ ಬಗ್ಗೆ ಗೊತ್ತಿರುವುದರಿಂದ ಅವರನ್ನು ರೀಚ್ ಮಾಡಲು ಬಹಳ ಪ್ರಯತ್ನ ಪಟ್ಟೆ. ಹಾಗಾಗಿ ಎಲ್ಲಾ ಶೂಟಿಂಗ್ ರಿಯಲಿಸ್ಟಿಕ್ ಆಗಿದೆ. ಹಾಡಿಗೆ ಮಾತ್ರ ಸೆಟ್ ಬಳಸಿದ್ದೇವೆ.

ಪ್ರ: ಚಿತ್ರದ ಕಥೆಯ ಬಗ್ಗೆ ಏನಾದರೂ ಹೇಳಿ?
ಶಶಾಂಕ್: ಚಿತ್ರ ಬಿಡುಗಡೆಯಾಗುವ ತನಕ ಗುಟ್ಟು ಬಿಟ್ಟು ಕೊಡೂವುದಿಲ್ಲ ಮೊಬೈಲ್ ಫೋನ್ ವಿಚಾರದಲ್ಲಿ ನಡೆಯುವ ಸ್ಟೋರಿ. ಇದರಿಂದ ಇವರ ಲೈಫೇ ಚೇಂಜ್ ಆಗುವ ಕಥೆಯಿದೆ. ಮಿಡಲ್ ಕ್ಲಾಸ್ ಫ್ಯಾಮಿಲಿ ಹದಿನೈದು ಸಾವಿರ ರೂಪಾಯಿ ಆದಾಯದಲ್ಲಿ ಹೇಗೆ ಸಂಸಾರ ಸಾಗಿಸುತ್ತಾರೆ ಎನ್ನುವ ಬಗ್ಗೆಯೂ ಚಿತ್ರದಲ್ಲಿದೆ.

ಪ್ರ: ಅಜೇಯ್ ಮತ್ತು ಮಯೂರಿ ಆಯ್ಕೆ ಬಗ್ಗೆ?
ಶಶಾಂಕ್: ಎರಡು ವರ್ಷದ ಹಿಂದೆ ಈ ಕಥೆ ಸುದ್ದಿವಾಹಿನಿಯಲ್ಲಿ ಟೆಲೆಕಾಸ್ಟ್ ಆಗಿದೆ. ಹೀರೋ ಮತ್ತು ಹೀರೋಯಿನ್ ಕ್ಯಾರೆಕ್ಟ್ ನನ್ನು ನೋಡಿದ್ದೇನೆ. ನಾಯಕನ ಪಾತ್ರಕ್ಕೆ ಅಜೇಯ್ ಸೂಟ್ ಆಗೋದು ಎಂದು ಆವಾಗಲೇ ಅಂದುಕೊಂಡಿದ್ದೆ. ಇನ್ನು, ಟಿವಿ ನೋಡುತ್ತಿದ್ದಾಗ ಅಶ್ವಿನಿ ನಕ್ಷತ್ರ ಧಾರವಾಹಿಯ ಪ್ರೊಮೋ ಬರುತ್ತಿತ್ತು. ಮಯೂರಿ ಸ್ಟೈಲ್ ನನಗೆ ಇಷ್ಟವಾಯಿತು. ಅವರನ್ನು ಅಪ್ರೋಚ್ ಮಾಡಿದೆ, ಒಪ್ಪಿಕೊಂಡರು. ನಂತರ ಡೇಟ್ಸ್ ಮ್ಯಾಚ್ ಮಾಡಿಕೊಂಡು ಚಿತ್ರ ಸೆಟ್ಟೇರಿತು.

ಪ್ರ: ಚಿತ್ರಕ್ಕಾಗಿ ಪೊಲೀಸ್ ಸ್ಟೇಷನ್ ನಲ್ಲಿದ್ರಂತೆ?
ಶಶಾಂಕ್ : ಚಿತ್ರದಲ್ಲಿ ಪೊಲೀಸ್ ಸ್ಟೇಷನ್ ಸನ್ನಿವೇಶವಿದೆ. ಹಾಗಾಗಿ ಅಲ್ಲಿ ನಿಜವಾದ ವಾತಾವರಣ ಹೇಗಿರುತ್ತೆ ಎನ್ನುವುದಕ್ಕಾಗಿ ನೆಲಮಂಗಲ ಸ್ಟೇಷನ್ ನಲ್ಲಿ ಮೂರು ದಿನ ಇದ್ದೆ. ನನ್ನ ಸ್ನೇಹಿತ ಆ ಸ್ಟೇಷನ್ ನಲ್ಲಿದ್ದ. ಹಾಗಂತ ಶೆಲ್ ನಲ್ಲಿರಲಿಲ್ಲ. ಕಥೆಗೆ ಬೇಕಾದನ್ನು ಸ್ಟಡಿ ಮಾಡಿದ್ದೇನೆ.

ಪ್ರ: ಕ್ರಿಕೆಟ್ ಫೀವರ್ ಮದ್ಯೆ, ಸಿನಿಮಾ ರಿಲೀಸ್ ಮಾಡ್ತಾ ಇದ್ದೀರಾ, ರಿಸ್ಕ್ ಅನ್ಸೋಲ್ವಾ?
ಶಶಾಂಕ್ : ಕ್ರಿಕೆಟ್ ಫೀವರ್ ಇಲ್ಲಾಂತ ಹೇಳೋಲ್ಲ. ಕ್ರಿಕೆಟ್ ಹೆಚ್ಚುಕಮ್ಮಿ ಮುಗೀತಾ ಬಂತಲ್ವಾ. ನಮ್ಮ ದೇಶ ಆಡಿದಾಗ ಮಾತ್ರ ಕಲೆಕ್ಷನ್ ತೊಂದ್ರೆ ಆಗುತ್ತೆ. ಸಿನಿಮಾ ಚೆನಾಗಿದ್ರೆ ಕ್ರಿಕೆಟ್ ನೋಡುವವನೂ ಥಿಯೇಟರ್ ಗೆ ಬರುತ್ತಾನೆ. ಎರಡು ಶೋ ಖಾಲಿ ಬಿದ್ದರೂ ವಿ ಆರ್ ಓಕೆ.

ಪ್ರ: ಕೃಷ್ಣಲೀಲಾ ಚಿತ್ರ ಯಾಕೆ ನೋಡಬೇಕು?
ಶಶಾಂಕ್ : ಇದು ಸೀರಿಯಸ್ ಸ್ಟೋರಿ ಆಗಿದ್ದರೂ, ನೋಡುವವರಿಗೆ ಇದು ಎಂಟರ್ಟೈನ್ಮೆಂಟ್ ಆಗಿ ಕಾಣಿಸುತ್ತೆ. ಪ್ರೀತಿಯನ್ನು ಹೊಸ ರೀತಿಯಲ್ಲಿ ಡಿಫೈನ್ ಮಾಡಿದ್ದೇನೆ. ಪ್ರೇಕ್ಷಕರಿಗೆ ಯಾವ ಹಂತದಲ್ಲೂ ಡ್ರಾಮಾ ತರ ಅನಿಸುವುದಿಲ್ಲ. ಕಣ್ಣೆದುರು ನಡೆಯುತ್ತಿರುವ ಘಟನೆ ತರ ಇದೆ. ಎಲ್ಲಾ ವರ್ಗದವರಿಗೂ ಸೂಟ್ ಆಗುವಂತಹ ಸಬ್ಜೆಕ್ಟ್, ಶ್ರಮ ಪಟ್ಟು ಚಿತ್ರ ಮಾಡಿದ್ದೇವೆ. ಕನ್ನಡಿಗರು ಹರಸುತ್ತಾರೆ ಎನ್ನುವ ನಂಬಿಕೆಯಿದೆ.


Click it and Unblock the Notifications











