ಕನ್ನಡ ದಿಗ್ಗಜ ಸಂಗೀತ ನಿರ್ದೇಶಕ ಜೋಡಿಯನ್ನು ಸ್ಮರಿಸಿದ ತೆಲುಗಿನ ತಮನ್
ಗುರು ಪೂರ್ಣಿಮೆಯ ದಿನದಂದು ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರು ತಮ್ಮ ಬದುಕಿಗೆ ದಾರಿ ತೋರಿಸಿದ, ತಮ್ಮ ಸಾಧನೆಗೆ ಸ್ಫೂರ್ತಿಯಾದವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಹೆಸರು ಮಾಡಿದವರೂ ತಮಗೆ ಅವಕಾಶ ನೀಡಿದ, ತಮ್ಮನ್ನು ಬೆಳೆಸಿದ, ತಾವು ಮುಖತಃ ಭೇಟಿ ಮಾಡಲು ಸಾಧ್ಯವಾಗದೆ ಇದ್ದರೂ ದ್ರೋಣಾಚಾರ್ಯರಂತೆ ಪ್ರೇರಣೆ ನೀಡಿದವರನ್ನು ಸ್ಮರಿಸಿಕೊಂಡು ಅವರಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ.
ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್. ತಮನ್ ಕೂಡ ಈ ಸಾಲಿಗೆ ಸೇರಿದ್ದಾರೆ. ಕನ್ನಡ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿರುವ ತಮನ್, ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಗುರು ಪೂರ್ಣಿಮೆಯ ದಿನದಂದು ಅವರು ಅನೇಕ ಗುರುಗಳನ್ನು ಸ್ಮರಿಸಿಕೊಂಡಿದ್ದಾರೆ. ಅವರಲ್ಲಿ ಕನ್ನಡದ ದಿಗ್ಗಜ ಜೋಡಿಯೂ ಸೇರಿದೆ. ಮತ್ತೊಂದು ವಿಶೇಷವೆಂದರೆ ತಮನ್ ಕನ್ನಡದಲ್ಲಿಯೇ ಟ್ವೀಟ್ ಮಾಡಿ ಅವರನ್ನು ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ...

ರಾಜನ್-ನಾಗೇಂದ್ರ ಜೋಡಿ
ಕನ್ನಡದಲ್ಲಿ ನೂರಾರು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ ಜೋಡಿ ರಾಜನ್ ಮತ್ತು ನಾಗೇಂದ್ರ. ಇಬ್ಬರ ಜೋಡಿ ಅನೇಕ ಸಾರ್ವಕಾಲಿಕ ಹಿಟ್ ಹಾಡುಗಳನ್ನು ನೀಡಿದೆ. ಕನ್ನಡದ ಆರಂಭದ ಬಹುತೇಕ ಎಲ್ಲ ಖ್ಯಾತ ನಟರ ಚಿತ್ರಗಳಿಗೂ ಇಬ್ಬರೂ ಸಂಗೀತ ನೀಡಿದ್ದಾರೆ. ಈಗ ನಮ್ಮ ನಡುವೆ ರಾಜನ್ ಮಾತ್ರ ಇದ್ದಾರೆ. ನಾಗೇಂದ್ರ ಅವರು 20 ವರ್ಷಗಳ ಹಿಂದೆಯೇ ನಮ್ಮನ್ನು ಅಗಲಿದ್ದರು.

ವಿವಿಧ ಭಾಷೆಗಳಲ್ಲಿ ಸಂಗೀತ
ರಾಜನ್ ಮತ್ತು ನಾಗೇಂದ್ರ ಅವರು ಕನ್ನಡವಲ್ಲದೆ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಿಗೆ ಕೂಡ ಸಂಗೀತ ನೀಡಿದ್ದರು. ಗುರು ಪೂರ್ಣಿಮೆ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಎಸ್. ತಮನ್ ಕನ್ನಡದಲ್ಲಿ ಟ್ವೀಟ್ ಮಾಡಿದ್ದು, ರಾಜನ್ ಮತ್ತು ನಾಗೇಂದ್ರ ಅವರನ್ನು ನೆನಪಿಸಿಕೊಂಡಿದ್ದಾರೆ.

ಎರಡು ಕಣ್ಣುಗಳಿಗೆ ನಮನ
ಕನ್ನಡ ಸಿನಿ ಸಂಗೀತದ ಎರಡು ಕಣ್ಣುಗಳಾದ "ರಾಜನ್ -ನಾಗೇಂದ್ರ" ರವರು ನನ್ನ ಸಂಗೀತ ಸಾಧನೆಯ ದಾರಿಗೆ ಮಾರ್ಗದರ್ಶನಮಾಡಿ ಚೈತನ್ಯ ತುಂಬಿ ಕನ್ನಡ ತಾಯಿಯ ಸೇವೆ ಮಾಡುವುದಕ್ಕೆ ಪರೋಕ್ಷ ಕಾರಣವಾಗಿರುವ ನಿಮಗೆ ಈ ಗುರುಪೌರ್ಣಮಿಯ ದಿನ ನನ್ನ ಗುರು ನಮನಗಳನ್ನು ಅರ್ಪಿಸುತ್ತಿದ್ದೇನೆ ಎಂದು ತಮನ್ ಟ್ವೀಟ್ ಮಾಡಿದ್ದಾರೆ.

ಯುವರತ್ನದ ಹಾಡುಗಳು
ಕೆಲವು ದಿನಗಳ ಹಿಂದೆಯೂ ತಮನ್ ಕನ್ನಡದಲ್ಲಿ ಟ್ವೀಟ್ ಮಾಡಿದ್ದರು. 'ಎಲ್ಲರಿಗು ನಮಸ್ಕಾರ. ನಾನು ಚೆನ್ನೈ ಅಲ್ಲಿ ಲಾಕ್ ಡೌನ್ ನಲ್ಲಿ ಇರುವ ಕಾರಣ ಕೆಲಸಗಳು ನೆಡೆಯುತ್ತಿಲ್ಲ, ಹಾಡುಗಾರರು ಮತ್ತು ಸಂಗೀತಗಾರರು ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಕಾರಣ ಯುವರತ್ನ ಚಿತ್ರದ ಹಾಡುಗಳು ತಡವಾಗಲಿದೆ. ನಿಮಗೆ ಪವರ್ ಫುಲ್ ಆಲ್ಬಮ್ ಕೊಡುವ ಜವಾಬ್ದಾರಿ ನಮ್ಮದು. ದಯವಿಟ್ಟು ಅಭಿಮಾನಿಗಳು ಸಹಕರಿಸಿ" ಎಂದು ಯುವರತ್ನ ಚಿತ್ರದ ಹಾಡುಗಳು ತಡವಾಗಿರುವುದಕ್ಕೆ ಕ್ಷಮೆ ಕೋರಿದ್ದರು.


Click it and Unblock the Notifications











