ಶಂಕರ್ ಸಾವಿಗೆ ಕಾರಣಳಾದ ಆ ಮಾಯಾವಿ ಯಾರು?
"ನನ್ನ ಶಂಕರನ ಸಾವಿಗೆ ಆಕೆಯೇ ಕಾರಣ. ಆಕೆ ಹೆಂಗಸಲ್ಲ; ಹೆಮ್ಮಾರಿ. ಶಂಕರನ ಪಾಲಿನ ಮಾಯಾವಿ. ಸಾಕ್ಷಾತ್ ಯಮ ಸ್ವರೂಪಿ. ಯಾರನ್ನಾದರೂ ಕ್ಷಮಿಸಿಯೇನು, ಆದರೆ ಆಕೆಯನ್ನು ಏಳೇಳು ಜನ್ಮದಲ್ಲೂ ಕ್ಷಮಿಸಲಾರೆ. ಏಕೆಂದರೆ ನನ್ನ ಜೀವಕ್ಕೆ ಜೀವವಾಗಿದ್ದ ಪರಮಾಪ್ತ ತಮ್ಮನನ್ನು, ಗೆಳೆಯನನ್ನು ಕೊಂದ ಪರಮ ಪಾತಕಿ ಆಕೆ..."
ಎಂದು ಹೇಳುತ್ತಾ ಅನಂತ್ ಒಮ್ಮೆ ಜೋರಾಗಿ ಟೇಬಲನ್ನು ಗುದ್ದಿದರು. ಅಸ್ವಸ್ಥ ವಾಕ್ಯ ರಚನೆ. ಅನಂತ್ ಕುಡಿದಿದ್ದರು. ಒಂದೆರಡು ಪೆಗ್ಗಲ್ಲ; ಬರೋಬ್ಬರಿ ಏಳೆಂಟು ಪೆಗ್! ಅದು ಹುಬ್ಬಳ್ಳಿಯ ಉಣಕಲ್ ಕೆರೆ ದಂಡೆಯಲ್ಲಿರುವ ನವೀನ್ ಹೋಟೆಲು. ಆಗಿನ ಕಾಲಕ್ಕೆ ಹುಬ್ಬಳ್ಳಿಯ ಪ್ರತಿಷ್ಠಿತ ಅದ್ದೂರಿ ಹೋಟೆಲ್. ಅನಂತ್ಗೆ ಆ ಹೋಟೆಲೆಂದರೆ ಅಚ್ಚುಮೆಚ್ಚು. ಹುಬ್ಬಳ್ಳಿ ಕಡೆ ಹೋದಾಗಲೆಲ್ಲಾ ಅಲ್ಲೇ ಹಾಲ್ಟ್. ಅಂದೂ ಅಷ್ಟೇ.
ನಾವೆಲ್ಲಾ, ಅಂದರೆ ನಾನು, ರವಿಬೆಳಗೆರೆ, ಉದಯ ಮರಕಿಣಿ ಮತ್ತು ಅನಂತನಾಗ್ ಜತೆಯಾಗಿಯೇ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದೆವು. ಕಾರಣ ಸ್ಪಷ್ಟ; ಆಗ ರವಿ ಬೆಳಗೆರೆ ಮತ್ತು ನಾನು 'ಕರ್ಮವೀರ' ವಾರಪತ್ರಿಕೆಯ ನಿರ್ವಹಣೆಯ ಹೊಣೆ ಹೊತ್ತಿದ್ದೆವು. ಇದು ವ್ಯವಸ್ಥಾಪಕ ಸಂಪಾದಕರಾದ ಕೆ.ಶಾಮರಾವ್ ಅವರ ಆಜ್ಞೆ. ನಿಂತು ಹೋದ 'ಕರ್ಮವೀರ'ಕ್ಕೆ ದೊಡ್ಡ ಚಿಕಿತ್ಸೆಯೇ ಆಗಬೇಕಿತ್ತು.

ಒಬ್ಬೊಬ್ಬರದು ಒಂದೊಂದು ಐಡಿಯಾ. ಅನಂತನಾಗ್ ಕೈಲಿ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಿದರೆ 'ಕರ್ಮವೀರ'ಕ್ಕೆ ಪ್ರಚಾರ ಸಿಗುತ್ತದೆ ಎನ್ನುವುದು ನನ್ನ ಐಡಿಯಾ. ಐಡಿಯಾ ವರ್ಕೌಟ್ ಆಯಿತು. ಶಾಮರಾಯರ ಒಪ್ಪಿಗೆಯ ಮುದ್ರೆ ಬಿದ್ದದ್ದೇ ತಡ ನಾನು, ರವಿಬೆಳಗೆರೆ ಮತ್ತು ಉದಯ ಮರಕಿಣಿ ಕಾರ್ಯಪ್ರವೃತ್ತರಾದೆವು. ಉದಯ್ ಆಗ 'ಸಂಯುಕ್ತ ಕರ್ನಾಟಕ' ಪತ್ರಿಕೆಯ ಸಿನಿಮಾ ವಿಭಾಗದ 'ಚಿತ್ರ ಸೌರಭ'ವನ್ನು ನೋಡಿಕೊಳ್ಳುತ್ತಿದ್ದರು. ಜತೆಗೆ ಗೆಳೆಯ ಬೇರೆ.
ನಮ್ಮ ಮೂವರನ್ನು ಸಂ.ಕ. ಗೆಳೆಯರು ಮೆನೋನ್ ಬ್ರದರ್ಸ್ ಎಂದೇ ಕರೆಯುತ್ತಿದ್ದರು. ರವಿ ದಪ್ಪ, ಉದಯ್ ಉದ್ದ, ನಾನು ಕುಳ್ಳ. ನಮ್ಮ ನಡುವಿನ ಕಾಮನ್ ಫ್ಯಾಕ್ಟರೆಂದರೆ ಗಡ್ಡ ಮಾತ್ರ! ಅನಂತನಾಗ್ರನ್ನು ಒಪ್ಪಿಸಿದ್ದಾಯಿತು. ಸಂ.ಕ.ದ ಬೇಸ್ ಉತ್ತರ ಕರ್ನಾಟಕವಾದುದರಿಂದ ಮತ್ತು ಅನಂತ್ಗೆ ಆ ಕಡೆ ಹೆಚ್ಚು ಅಭಿಮಾನಿಗಳಿದ್ದುದರಿಂದ ಹುಬ್ಬಳ್ಳಿ ಕಾರ್ಯಾಲಯದಲ್ಲೇ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸುವುದೆಂದು ನಿರ್ಧಾರವಾಯಿತು. ಅನಂತ್ ಕೂಡ ಒಪ್ಪಿದರು.


Click it and Unblock the Notifications











