'ದೊಡ್ಮನೆ'ಯ ದೊಡ್ಡ ಗುಣ ಬಲ್ಲಿರಾ.?
ಗೌರವ... ಪ್ರೀತಿ... ಅಭಿಮಾನದಿಂದ ಎಲ್ಲರಿಂದ 'ದೊಡ್ಮನೆಯವರು' ಎಂದೇ ಕರೆಯಿಸಿಕೊಳ್ಳುವ ಡಾ.ರಾಜ್ ಕುಟುಂಬ ಅಕ್ಷರಶಃ ದೊಡ್ಡ ಮನಸ್ಸಿನ ಕುಟುಂಬವೇ. ಬೇಡಿ ಬಂದವರನ್ನ ಎಂದೂ ಖಾಲಿ ಕೈಯಲ್ಲಿ ಕಳುಹಿಸದ 'ದೊಡ್ಮನೆ'ಯವರ ದೊಡ್ಡತನದ ಬಗ್ಗೆ ಮೀಡಿಯಾ ಜರ್ನಲಿಸ್ಟ್ ಜನಾರ್ಧನ ರಾವ್ ಸಾಳಂಕೆ ಬರೆದಿರುವ ವರದಿ ಇಲ್ಲಿದೆ - ಫಿಲ್ಮಿಬೀಟ್ ಕನ್ನಡ ಸಂಪಾದಕ.
''2010 ರಲ್ಲಿ ತನ್ನ ಎರಡು ಕಿಡ್ನಿಗಳು ವಿಫಲಗೊಂಡು ಚಿಕಿತ್ಸೆಗೆ ಹಣವಿಲ್ಲದೆ ಕಷ್ಟದಲ್ಲಿದ್ದ ಹುಡುಗ ಅಕ್ಷಯ್. ಪ್ರಥಮ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದ. ಹೆಚ್ಚು ಓದದ ತಂದೆ ಆಟೋ ಓಡಿಸಿ ಕುಟುಂಬ ನಡೆಸುತ್ತಿದ್ದರು. ಆರ್ಥಿಕ ತೊಂದರೆ ಹೆಚ್ಚು ಇದ್ದುದರಿಂದ ಮಡದಿಯು ಸಹ ಮೂರ್ನಾಲ್ಕು ಮನೆಗಳಲ್ಲಿ ಕೆಲಸ ಮಾಡಿ ಸಂಸಾರ ತೂಗುತ್ತಿದ್ದರು.[ಪತಿಯ ಹಾದಿಯಲ್ಲಿ ಪತ್ನಿ: ಅಂಧರ ಬಾಳಲ್ಲಿ ಹೊಸಬೆಳಕು ಮೂಡಿಸಲಿರುವ 'ದೊಡ್ಮನೆ' ಅಮ್ಮ]

ಪ್ರತಿ ವಾರವೂ ಡಯಾಲಿಸಿಸ್ ಮಾಡಿಸಲು ಅವರ ಬಳಿ ಹಣವಿರಲಿಲ್ಲ. ಬಂಧು-ಬಳಗದವರು ಎಷ್ಟು ತಾನೇ ಸಹಾಯ ಮಾಡಿಯಾರು.? ಆ ಹುಡುಗನ ಚಿಕಿತ್ಸೆಯ ರಶೀತಿ ಮತ್ತು ಆಪರೇಷನ್ ಗೆ ತಗಲುವ ವೆಚ್ಚದ ಪ್ರತಿ ಹಿಡಿದು ನನಗೆ ತೋಚಿದ ಪ್ರಮುಖ ಸಂಘ ಸಂಸ್ಥೆಗಳು, ಟ್ರಸ್ಟ್ ಗಳು, ಸಿನಿಮಾ ನಟರು, ನಿರ್ಮಾಪಕರ ಮನೆ ಬಾಗಿಲಿಗೆ ಎಡತಾಗಿದೆನು. ಆದರೆ ನಿರಾಸೆಯಿಂದ ಹಿಂತಿರುಗಬೇಕಾಯಿತು. ಪತ್ರಿಕೆಗಳಲ್ಲಿ ಜಾಹಿರಾತು ಸಹ ನೀಡಲಾಯ್ತು. ಸ್ವಲ್ಪ ಮಟ್ಟಿಗೆ ನೆರವು ದೊರೆಯಿತು.[ಇದಕ್ಕೆ ವಿಚಿತ್ರ ಅಂತೀರೋ.. ಕಾಕತಾಳೀಯ ಅಂತೀರೋ.. ನಿಮಗೆ ಬಿಟ್ಟಿದ್ದು.!]
ಕೊನೆಗೆ ನನ್ನ ಸ್ವಂತ ಚಿಕ್ಕಮ್ಮನ ಮಗ ಲೇಖಕರಾದ ಜಗನ್ನಾಥ ರಾವ್ ಬಹುಳೆ ಅವರು "ಒಮ್ಮೆ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿ'' ಎಂದು ಸಲಹೆ ನೀಡಿದರು. ಇವರು ವರನಟ ಡಾ.ರಾಜ್ ಕುಮಾರ್ ಕುಮಾರ್ ಅವರ ಬಗ್ಗೆ ಪುಸ್ತಕ ಮತ್ತು ಲೇಖನಗಳನ್ನು ಬರೆದಿದ್ದಾರೆ. ಅವರ ಅಣತಿಯಂತೆ ಮಾರನೆಯ ದಿನವೇ ನಾನು ಮತ್ತು ನನ್ನ ಸ್ನೇಹಿತ ಶ್ರೀನಿವಾಸರಾಜು ಗಾಂಧಿನಗರದ ವಜ್ರೇಶ್ವರಿ ಕಂಬೈನ್ಸ್ ಕಚೇರಿಗೆ ಎಡತಾಕಿದೆವು. ರಾಘವೇಂದ್ರ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಿದೆ. ಮೊದಲು ತಾವು ಚಹಾ ಸೇವಿಸಿ ನಂತರ ಮಾತನಾಡೋಣ ಎಂದು ಹೇಳಿದರು. ಆ ನಂತರ ಹುಡುಗನ ವಿಷಯ ತಿಳಿದು ರಾಘಣ್ಣ "ಖಂಡಿತ ನಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ. ನಮಗೆ ಒಂದು ವಾರ ಸಮಯಾವಕಾಶ ನೀಡಿ" ಎಂದರು. ಹವ್ಯಾಸಿ ಪತ್ರಕರ್ತನಾದರೂ ಸಹ ನನ್ನನ್ನ ಬಹಳ ಪ್ರೀತಿ ಮತ್ತು ವಿಶ್ವಾಸದಿಂದ ಮಾತನಾಡಿಸಿದರು.

ಅವರು ಹೇಳಿದಂತೆಯೇ ಐದನೇ ದಿನಕ್ಕೆ ನನಗೆ ವಜ್ರೇಶ್ವರಿಯಿಂದ ಕರೆ ಬಂದಿತು. ''ನೀವು ಬಂದು ರಾಘಣ್ಣ ಅವರನ್ನು ಬಂದು ಕಾಣಬೇಕು'' ಎಂದರು. ನಾನೇದಾರು ಅವರ ಕಚೇರಿಗೆ ಹೋಗಿ ತಪ್ಪು ಮಾಡಿದೆನೋ ಎಂದು ಭಾವಿಸಿದೆ. ಸ್ವಲ್ಪ ಅಳುಕಿನಲ್ಲಿಯೇ ನಾನು ಅವರನ್ನು ಭೇಟಿ ಮಾಡಿದೆ. ಹುಡುಗನ ಬಗ್ಗೆ ವಿಚಾರಿಸಿದ ರಾಘಣ್ಣ ನನ್ನ ಕೈಗೆ ಒಂದು ಕವರ್ ನೀಡಿ "ಅಕ್ಷಯ್ ಶಸ್ತ್ರ ಚಿಕಿತ್ಸೆಗೆ ನಮ್ಮ ಚಿಕ್ಕ ಕಾಣಿಕೆ ಎಂದರು". ಎರಡು ಕೈಗಳನ್ನು ಜೋಡಿಸಿ "ಸರ್ ನಿಮ್ಮ ಸಹಾಯವನ್ನು ನಾವು ಮರೆಯುವುದಿಲ್ಲ. ನೀವು ನಮ್ಮ ಮನವಿಗೆ ಸ್ಪಂದಿಸಿದ್ದೇ ಒಂದು ಭಾಗ್ಯ ಎಂದು ಭಾವಿಸುವೆ" ಎಂದು ಹೇಳಿ ಅಲ್ಲಿಂದ ಮನೆಗೆ ಬಂದೆವು.
ಕಚೇರಿಯ ಹೊರಬಂದು ಕವರ್ ತೆರೆದೆನು "ಅಕ್ಷಯ ಹೆಸರಿನಲ್ಲಿ 25,000 ರೂಪಾಯಿಗಳ ಚೆಕ್ ಇತ್ತು. ಧನ್ಯೋಸ್ಮಿ ಎಂದು ಹೇಳಿ ಅಲ್ಲಿಂದ ನೇರವಾಗಿ ಆತನ ಬ್ಯಾಂಕ್ ಖಾತೆಗೆ ಜಮೆ ಮಾಡಿದೆನು. ಅಕ್ಷಯ್ ನ ಕಿಡ್ನಿ ಕಸಿ ಕೆಲಸ ಕೋರಮಂಗಲದ ಸಂತ ಜೋಸೆಫರ ಆಸ್ಪತ್ರೆಯಲ್ಲಿ 21ನೇ ಜೂಲೈ 2010ರಲ್ಲಿ ನಡೆಯಿತು. ಸ್ವತಃ ಆತನ ತಾಯಿಯೇ ಒಂದು ಕಿಡ್ನಿ ದಾನ ಮಾಡಿದರು. ಸ್ನೇಹಿತರು ಮತ್ತು ಕುಟುಂಬ ವರ್ಗದವರ ಸಹಾಯದಿಂದ ಶಸ್ತ್ರ ಚಿಕಿತ್ಸೆಗೆ ಬೇಕಿದ್ದ ಹಣ ಜಮಾ ಆಯಿತು. ಚಿಕಿತ್ಸೆಯು ಸಹ ಯಶಸ್ವಿಯಾಯಿತು. ಸಹಾಯ ಮಾಡಿದರೆ ಎಲ್ಲಾ ಪುಣ್ಯಾತ್ಮರನ್ನು ಸ್ಮರಿಸಿಕೊಂಡೆವು.
ಅಂದು ರಾಘಣ್ಣ ಹೇಳಿದ ಮತ್ತೊಂದು ಮಾತು ಇಂದಿಗೂ ಸಹ ನೆನಪಿದೆ. "ದೇವರ ಮೇಲೆ ಭಾರ ಹಾಕಿ, ಒಳ್ಳೆಯವರಿಗೆ ದೇವರು ಕೈ ಬಿಡುವುದಿಲ್ಲ. ಶಸ್ತ್ರಚಿಕಿತ್ಸೆ ಆದ ನಂತರ ಅಕ್ಷಯನ ಕಾಲೇಜು ಪ್ರವೇಶ ವೆಚ್ಚ ಮತ್ತು ಪುಸ್ತಕಗಳನ್ನು ತಾವು ನೀಡುತ್ತೇವೆ" ಎಂದು ಹೇಳಿದ್ದರು.
ರಾಜ್ ಕುಟುಂಬದವರು ಇಂತಹ ಅಸಂಖ್ಯಾತ ದಾನಧರ್ಮಗಳನ್ನು ಮಾಡಿದ್ದಾರೆ. ಅವರ ಒಂದೊಂದು ಕೆಲಸವೂ ಸಹ ದೀನ-ದಲಿತರ ಮನೆ ಬೆಳಗಿದೆ ಎಂದರೆ ತಪ್ಪಾಗಲಾರದು'' - ಜನಾರ್ಧನ ರಾವ್ ಸಾಳಂಕೆ, ಮೀಡಿಯಾ ಜರ್ನಲಿಸ್ಟ್


Click it and Unblock the Notifications











