"ಉಪ್ಪಿನಕಾಯಿ ಹಾಕೋದಕ್ಕೆ ಟ್ಯಾಕ್ಸ್ ತಗೋತಾರಾ?": ದರ್ಶನ್ ಹೇಳಿಕೆಗೆ AAP ಪಕ್ಷ ದಿಲ್ ಖುಷ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ಜನವರಿ 26ಕ್ಕೆ ರಿಲೀಸ್ ಆಗುತ್ತಿರೋ ಈ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಹೊಸ ಕ್ರಾಂತಿ ಮಾಡುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ.
ಸಿನಿಮಾ ರಿಲೀಸ್ಗೂ ಮುನ್ನವೇ ದರ್ಶನ್ ತಮ್ಮ 'ಕ್ರಾಂತಿ' ಏನು ಅನ್ನೋದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಮಹತ್ವವೇನು? ಅನ್ನೋದನ್ನು ಸಿನಿಮಾದಲ್ಲಿ ಹೇಳುವುದಕ್ಕೆ ಹೊರಟಿದ್ದಾರೆ. ಅದಕ್ಕೂ ಮುನ್ನ ತಮ್ಮ ಸಂದರ್ಶನದಲ್ಲಿಯೇ ಸರ್ಕಾರಿ ಶಾಲೆಯ ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.
ಈಗಾಗಲೇ ಈ ಬಗ್ಗೆ ಸಾಕಷ್ಟು ಸಂದರ್ಶನವನ್ನೂ ನೀಡಿದ್ದಾರೆ. ಅದರಲ್ಲೇ ಒಂದು ಹೇಳಿಕೆಯನ್ನು ಕರ್ನಾಟಕದ ಆಪ್ ಪಕ್ಷ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರಿ ಶಾಲೆಯ ಪರಿಕಲ್ಪನೆಯನ್ನು ಮೆಚ್ಚಿಕೊಂಡಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಅಂತಹದ್ದೇನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಸರ್ಕಾರದವರು 34 ಪರ್ಸೆಂಟ್ ಟ್ಯಾಕ್ಸ್ ತಗೋತಾರೆ'
ದರ್ಶನ್ 'ಕ್ರಾಂತಿ' ಸಿನಿಮಾದ ಸಂದರ್ಶನದಲ್ಲಿ ತೆರಿಗೆ ಪಾವತಿ ಬಗ್ಗೆ ಮಾತಾಡಿದ್ದಾರೆ. ಸರ್ಕಾರಕ್ಕೆ ಶೇ.34ರಷ್ಟು ತೆರಿಗೆ ಕಟ್ಟಬೇಕು. ಹೀಗಿದ್ದರೂ ಸರ್ಕಾರಿ ಶಾಲೆಗಳು ಯಾಕೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿಲ್ಲ. ಖಾಸಗಿ ಶಾಲೆಗಳ ಕಡೆಗೆ ಯಾಕೆ ಮಕ್ಕಳು ಮುಖ ಮಾಡುತ್ತಿದ್ದಾರೆ? ಅಂತ ದರ್ಶನ್ ಪ್ರಶ್ನೆ ಮಾಡಿದ್ದರು. "ಸರ್ಕಾರ ಅಂದ್ರೆ ಏನು? ಅಲ್ಲಿ ನಾನು ಶೇ.34ರಷ್ಟು ತೆರಿಗೆ ಪಾವತಿ ಮಾಡುತ್ತೇನೆ. ಸರ್ಕಾರದವರು 34 ಪರ್ಸೆಂಟ್ ಟ್ಯಾಕ್ಸ್ ತೆಗೆದುಕೊಳ್ಳುತ್ತಾರೆ. ಏನು ಉಪ್ಪಿನಕಾಯಿ ಹಾಕುವುದಕ್ಕೆ ತೆಗೆದುಕೊಳ್ಳುತ್ತಾರಾ? ಒಂದು ಕುಗ್ಗಾಗ್ರಮದಿಂದಲೋ.. ಹಳ್ಳಿಯಿಂದಾನೋ ಮಕ್ಕಳು ಎಷ್ಟೋ ಕಿಲೋ ಮೀಟರ್ ನಡೆಯುತ್ತಾರೆ. ಒಂದೊಳ್ಳೆ ಟೀಚರ್ ಅನ್ನು ಅಲ್ಲೇ ಕೊಡಿ. ಯಾಕೆ ಕಳಿಸೋದಿಲ್ಲ ಅವರು." ಎಂದಿರುವ ವಿಡಿಯೋವನ್ನು ಆಪ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿದೆ.

'ದೆಹಲಿಯಲ್ಲಿ ಸರ್ಕಾರಿ ಶಾಲೆ ಉಚಿತ'
ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳ ಬಗ್ಗೆ ದರ್ಶನ್ ಮಾತಾಡುತ್ತಿದ್ದಾರೆ. ಖಾಸಗಿ ಶಾಲೆಗಳ ದುಬಾರಿ ಶುಲ್ಕದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಪ್ರತಿ ಸಂದರ್ಶನದಲ್ಲೂ ತಮ್ಮ ಸಿನಿಮಾ ಸರ್ಕಾರಿ ಶಾಲೆ ಬಗ್ಗೆ ಸಂದೇಶವನ್ನು ಹೊತ್ತು ತಂದಿದೆ ಅನ್ನೋದನ್ನು ಹೇಳುತ್ತಿದ್ದಾರೆ. ಕರ್ನಾಟಕದ ಆಪ್ ಪಕ್ಷ ಶೇರ್ ಮಾಡಿರುವ ವಿಡಿಯೋದಲ್ಲಿ ದರ್ಶನ್ "ಸರ್ಕಾರಿ ಸಿನಿಮಾ ಬಗ್ಗೆ ಯಾಕೆ ಮಾತಾಡುತ್ತೇವೆ ಅಂದರೆ, ನಾವು ಕನೆಕ್ಟ್ ಆಗುತ್ತೇವೆ. ಇದೇ ದೆಹಲಿಯಲ್ಲಿ ಸರ್ಕಾರಿ ಶಾಲೆ ಉಚಿತವಾಗಿದೆ. ತುಂಬಾನೇ ಚೆನ್ನಾಗಿದೆ." ಎಂದು ದರ್ಶನ್ ಹೇಳಿದ್ದರು. ಈ ಹೇಳಿಕೆಯನ್ನು ಆಪ್ ಪಕ್ಷ ಹೈಲೈಟ್ ಮಾಡಿದೆ.

'ದೆಹಲಿ ಚುನಾವಣೆ ರಾಜಕಾರಣದಲ್ಲಿ ಹೊಸ ಅಧ್ಯಾಯ'
ಕರ್ನಾಟಕದ ಆಪ್ ಪಕ್ಷ ದರ್ಶನ್ ವಿಡಿಯೋವನ್ನು ಶೇರ್ ಮಾಡಿ ಸುಮ್ಮನಾಗಿಲ್ಲ. ಬದಲಾಗಿ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಸರ್ಕಾರದ ಬಗ್ಗೆನೂ ಹೇಳಿಕೊಂಡಿದೆ. "ದೆಹಲಿ ಚುನಾವಣೆ ದೇಶದ ರಾಜಕಾರಣದಲ್ಲಿ ಹೊಸ ಅಧ್ಯಾಯ ಬರೆದಿದೆ. ದೆಹಲಿಯಲ್ಲಿ ಸರ್ಕಾರದ ಕೆಲಸದ ಮೇಲೆ ಮತ. ಕೇಜ್ರಿವಾಲ್ ಅವರು ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಂತೆ ಮಾಡಿದ್ದಾರೆ." ಎಂದು ಆಪ್ ಪಕ್ಷ ಹೇಳಿಕೊಂಡಿದೆ.

ಕರ್ನಾಟಕ ಚುನಾವಣೆಗೆ ಸ್ಪರ್ಧಿಸಲು ಆಪ್ ರೆಡಿ
ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕದಲ್ಲಿ ವಿಧಾನ ಸೌಧ ಚುನಾವಣೆ ನಡೆಯಲಿದೆ. ಇದಕ್ಕಾಗಿ ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳು ಈಗಿನಿಂದಲೇ ರಣತಂತ್ರಗಳನ್ನು ರೂಪಿಸುತ್ತಿವೆ. ಈಗಾಗಲೇ ದೆಹಲಿ ಹಾಗೂ ಪಂಜಾಬ್ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರೋ ಆಪ್ ಈ ಬಾರಿ ಕರ್ನಾಟಕದಲ್ಲೂ ಚುನಾವಣಾ ಅಖಾಡಕ್ಕೆ ಇಳಿಯುತ್ತಿದೆ. ಹೀಗಾಗಿ ಆಪ್ ಕೂಡ ಪ್ರಮುಖ ರಾಜಕೀಯ ಪಕ್ಷಗಳ ಜೊತೆ ಸೆಣೆಸಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.


Click it and Unblock the Notifications











