ಅಭಿಷೇಕ್ ಅಂಬರೀಶ್ ಮದ್ದೂರಿನಿಂದ ಸ್ಪರ್ಧೆ ಮಾಡೋದು ನಿಜವೇ? ಏನಂದ್ರು ಮರಿ ರೆಬೆಲ್?
ಮೈಸೂರಿನಲ್ಲಿ 3.5 ಕಿ.ಮೀ ಉದ್ದದ ರಸ್ತೆಗೆ ಅಂಬರೀಶ್ ಹೆಸರನ್ನು ಇಡಲಾಗಿದೆ. ಸಂಸದೆ ಸುಮಲತಾ ಅಂಬರೀಶ್ ಈ ರಸ್ತೆಯನ್ನು ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಅಭಿಷೇಕ್ ಅಂಬರೀಶ್ಗೆ ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಯಂಗ್ ರೆಬೆಲ್ ಸ್ಟಾರ್ ಉತ್ತರ ಹೀಗಿತ್ತು.
ಅಭಿಷೇಕ್ ಅಂಬರೀಶ್ ರಾಜಕೀಯ ಪ್ರವೇಶದ ಬಗ್ಗೆ ಅಂಬಿ ಅಭಿಮಾನಿಗಳಿಗೆ ಕುತೂಹಲವಿದೆ. ಮರಿ ರೆಬೆಲ್ ಸ್ಟಾರ್ ಯಾವಾಗ ರಾಜಕೀಯ ಪ್ರವೇಶ ಆಗುತ್ತಾ ಅಂತ ಎದುರು ನೋಡುತ್ತಿದ್ದಾರೆ. ಈ ವೇಳೆ ತನ್ನ ರಾಜಕೀಯ ಎಂಟ್ರಿ ಬಗ್ಗೆ ಅಭಿ ಹೀಗಂತಾರೆ.

"ನಮ್ಮ ತಾಯಿಯವರು ಒಂದು ಹೇಳುತ್ತಾರೆ. ನಾನು ರಾಜಕಾರಣಿ ಅಲ್ಲ ಅಂತ ಹೇಳಿಕೊಳ್ಳುತ್ತಾರೆ. ನಾನು ಏನು ಹೇಳುತ್ತೇನೆ ಅಂದ್ರೆ, ನಾನು ಜನಸೇವೆ ಮಾಡುವುದಕ್ಕೆ ಬಂದಿರೋದು. ಅದು ರಾಜಕಾರಣದಲ್ಲಿಯೇ ಆಗಬೇಕು ಅಂತೇನೂ ಇಲ್ಲ. ಜನರ ಜೊತೆ ಇರುತ್ತೇವೆ. ಅವಕಾಶ ಕೊಟ್ಟರೆ ಮಾಡುತ್ತಲೇ ಇರುತ್ತೇವೆ." ಅಂತಾರೆ ಅಭಿಷೇಕ್ ಅಂಬರೀಶ್.
ಜನಸೇವೆ ಮಾಡುವುದಕ್ಕೆ ರಾಜಕೀಯ ಅಷ್ಟೇ ಅಲ್ಲ. ಬೇರೆ ಬೇರೆ ರೀತಿಯಲ್ಲೂ ಜನಸೇವೆ ಮಾಡಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ರಾಜಕೀಯ ಎಂಟ್ರಿಗೆ ಇನ್ನೂ ಸಮಯವಿದೆ ಅನ್ನೂ ಸಂದೇಶ ನೀಡಿದ್ದಾರೆ. ಅಭಿಮಾನಿಗಳಿಗಿಂತ ಪವರ್ ಯಾವುದಿದೆ? ಹಾಗಂದ್ರೆ, ರಾಜಕಾರಣಿಗಳನ್ನು ಬಿಟ್ಟು ಬೇರೆಯವರು ದೇಶಕ್ಕೆ ಸೇವೆನೇ ಮಾಡಿಲ್ವಾ? ಹಲವಾರು ರೀತಿ ಸೇವೆ ಮಾಡಬಹುದು. ಹಲವಾರು ರೀತಿ ಸೇವೆ ಮಾಡೋಣ. ಇದೇ ದಾರಿ ಅಲ್ಲ ಅಂತ ನಾನು ಹೇಳುತ್ತೇನೆ." ಎನ್ನುತ್ತಾರೆ ಅಭಿಷೇಕ್ ಅಂಬರೀಶ್.

ಇದೇ ವೇಳೆ 3.5 ಕಿ.ಮೀ. ಉದ್ದದ ರಸ್ತೆಗೆ ಅಂಬರೀಶ್ ಹೆಸರಿಟ್ಟಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. "ಇಂತಹದ್ದೊಂದು ಕಾರ್ಯಕ್ರಮ ಮಾಡಿದಾಗ ಅಂಬರೀಶ್ ಅಣ್ಣನ ಮೇಲೆ ಎಷ್ಟು ಪ್ರೀತಿ, ಅಭಿಮಾನ ಎಷ್ಟಿದೆ ಅನ್ನೋದು ಇಡೀ ರಾಜ್ಯಕ್ಕೆ ತೋರಿಸುತ್ತೆ. ಇದೇ ವೇಳೆ ಮೈಸೂರು ಮಹಾನಗರ ಪಾಲಿಗೆ ಧನ್ಯವಾದಗಳನ್ನು ಹೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದಿದ್ದಾರೆ.


Click it and Unblock the Notifications











