ಶಿವರಾಜ್ ಕೆ ಆರ್ ಪೇಟೆ 'ಧಮಾಕ': ಯಂಗ್ ರೆಬೆಲ್ ಸ್ಟಾರ್ ಬೆಂಬಲ!
ಸ್ಯಾಂಡಲ್ವುಡ್ನಲ್ಲಿ ಹಾಸ್ಯ ಪ್ರಧಾನ ಸಿನಿಮಾ 'ಧಮಾಕ' ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಇದೇ ಸೆಪ್ಟೆಂಬರ್ 2ರಂದು ಪ್ರೇಕ್ಷಕರಿಗೆ ಮನರಂಜನೆಯ ಕಚಗುಳಿ ಇಡಲು ಥಿಯೇಟರ್ಗೆ ಲಗ್ಗೆ ಇಡುತ್ತಿದೆ. ಈ ಸಿನಿಮಾಗೆ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಚಿತ್ರತಂಡಕ್ಕೆ ಜೊತೆಯಾಗಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ 'ಧಮಾಕ' ಸಿನಿಮಾದ ಹೀರೊ ಶಿವರಾಜ್ ಕೆ ಆರ್ ಪೇಟೆ ಹಾಗೂ ಅಭಿಷೇಕ್ ಅಂಬರೀಶ್ ಆಪ್ತ ಗೆಳೆಯರು. ಹೀಗಾಗಿಯೇ ಗೆಳೆಯನ ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ. ಸಿನಿಮಾ ಬಿಡುಗಡೆ ವೇಳೆ ನಾಲ್ಕು ಒಳ್ಳೆ ಮಾತುಗಳನ್ನಾಡಿದ್ದಾರೆ.
'ಧಮಾಕ' ಸಿನಿಮಾ ಬಿಡುಗಡೆ ವೇಳೆ ಅಭಿಷೇಕ್ ಅಂಬರೀಶ್, ಶಿವರಾಜ್ ಕೆ ಆರ್ ಪೇಟೆಯನ್ನು ಹೊಗಳಿ ಅಟ್ಟಕ್ಕೇರಿಸಿದ್ದರು. "ಇಂಡಸ್ಟ್ರೀಯಲ್ಲಿ ಒಳ್ಳೆಯ ಮನುಷ್ಯ. ಶಿವಣ್ಣ.. ಶಿವಣ್ಣ. ಅಂತ ನಾವು ಅವರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳುತ್ತೇವೆ. ಅದೇ ಖುಷಿ ನೀವು ಸ್ಕ್ರೀನ್ ಮೇಲೆ ಬಂದಾಗಲೂ ಇರುತ್ತದೆ. ಶಿವಣ್ಣ ಒಂದೇ ಟ್ರ್ಯಾಕ್ನಲ್ಲಿ ನಡೆಯೋದಿಲ್ಲ. ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಬೇರೆ ಬೇರೆ ಟ್ರ್ಯಾಕ್ನಲ್ಲಿ ನಡೆಯುತ್ತಾರೆ. ಒಬ್ಬ ಆರ್ಟಿಸ್ಟ್ ಆಗಿ ಸಕ್ಸಸ್ ಕಂಡವರು. ಈಗ ಹೀರೋ ಆಗಿಯೂ ಸಕ್ಸಸ್ ಕಾಣ್ತಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯ ಮಗ. 'ಧಮಾಕ' ಟ್ರೈಲರ್ ನೋಡಿದೆ. ಫೂಟೇಜ್ ನೋಡಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. " ಎಂದು ಸಿನಿಮಾ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ಕಡೆ ಶಿವರಾಜ್ ಕೆ ಆರ್ ಪೇಟೆ ಕೂಡ ಅಭಿಷೇಕ್ ಅಂಬರೀಶ್ ಬಗ್ಗೆಒಳ್ಳೆ ಮಾತುಗಳನ್ನಾಡಿದ್ದಾರೆ. "ಮಂಡ್ಯ ಅಂದ ತಕ್ಷಣ ನೆನಪಾಗುವುದು ಕಲಿಯುವ ಕರ್ಣ ಅಂಬರೀಶಣ್ಣ. ಇಷ್ಟು ಚಿಕ್ಕ ವಯಸ್ಸಾದ್ರೂ ಅಣ್ಣ ಅಂತಾ ಕರೆಯುತ್ತೇನೆ ಎಂದರೆ ಅವರಲ್ಲಿ ನಾನು ಅಂಬರೀಶಣ್ಣನ ನೋಡ್ತಾ ಇದ್ದೇನೆ. ತಂದೆಯಷ್ಟೇ ಎಲ್ಲರಿಗೂ ಪ್ರೀತಿ ಕೊಡುತ್ತಾರೆ." ಎಂದು ಗೆಳೆಯನ ಬಗ್ಗೆ ಮಾತಾಡಿದ್ದಾರೆ.
'ಧಮಾಕ' ಸಿನಿಮಾದಲ್ಲಿ ಶಿವರಾಜ್ ಕೆ ಆರ್ ಪೇಟೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಿವು ಜೊತೆ ನಯನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮಿಮಿಕ್ರಿ ಗೋಪಾಲ್, ಅರುಣಾ ಬಾಲರಾಜ್ ಮುಂತಾದ ಕಲಾವಿದರು ಇದ್ದಾರೆ.

ಅಂದ್ಹಾಗೆ 'ಧಮಾಕ' ಸಿನಿಮಾವೊಂದು ಸಂಪೂರ್ಣ ಹಾಸ್ಯಮಯ ಸಿನಿಮಾ. ಸುನೀಲ್.ಎಸ್.ರಾಜ್ ಮತ್ತು ಅನ್ನಪೂರ್ಣ ಪಾಟೀಲ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಲಕ್ಷ್ಮೀ ರಮೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ ನೀಡಿದ್ದಾರೆ.


Click it and Unblock the Notifications











