ಬೆಂಕಿಪಟ್ಣ ಚಿತ್ರದ ಮೇಲೆ ಬಿತ್ತು ಕಾಲಿವುಡ್ ಚೇರನ್ ಕಣ್ಣು
ಸಣ್ಣ ಬಜೆಟ್ಟಿನ ಮತ್ತು ಪ್ರಮುಖ ತಾರಾಗಣವಿರದ ಚಿತ್ರಗಳು ಬಿಡುಗಡೆಗೆ ಮುನ್ನ ಮತ್ತು ನಂತರ ಸಖತ್ ಸದ್ದು ಮಾಡುತ್ತಿರುವುದು ಕನ್ನಡದಲ್ಲಿ ಹೊಸದೇನಲ್ಲ. ಈ ಚಿತ್ರಗಳ ಪಟ್ಟಿಗೆ ಟಿ ಕೆ ದಯಾನಂದ್ ನಿರ್ದೇಶನದ ಬೆಂಕಿಪಟ್ಣ ಚಿತ್ರವೂ ಸೇರಿಕೊಂಡಿದೆ.
ಅಪ್ಪಟ ನಮ್ಮ ನಾಡಿನ ಸೊಗಡನ್ನು ಸಾರುವ 'ಬೆಂಕಿಪಟ್ಣ' ಚಿತ್ರ ಬಿಡುಗಡೆಗೆ ಸಿದ್ದವಾಗಿದೆ ಮತ್ತು ಚಿತ್ರದ ಕಾರ್ಯಕಾರಿ ನಿರ್ಮಾಪಕ ದಿನೇಶ್ ಕುಮಾರ್ ಪ್ರಕಾರ ರಾಜ್ಯೋತ್ಸವದ ತಿಂಗಳಾದ ನವೆಂಬರ್ ನಲ್ಲಿ ಬಿಡುಗಡೆಯಾಗಲಿದೆ. (ಬೆಂಕಿಪಟ್ಣ ಆಡಿಯೋ ವಿಮರ್ಶೆ)
ವಿಷಯಕ್ಕೆ ಬರುವುದಾದರೆ, ಚಿತ್ರದ ಪ್ರೋಮೋ ಮತ್ತು ಹಾಡುಗಳು ಇಲ್ಲಿ ಮಾಡುತ್ತಿರುವ ಸದ್ದು ಪಕ್ಕದ ಕಾಲಿವುಡ್ ಚಿತ್ರೋದ್ಯಮಕ್ಕೂ ತಟ್ಟಿದೆ. ಬೆಂಕಿಪಟ್ಣ ಚಿತ್ರದ ಕಥೆಯನ್ನು ಕೇಳಿ ತಮಿಳು ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ನಟ ಚೇರನ್ ಫುಲ್ ಇಂಪ್ರೆಸ್ ಆಗಿದ್ದಾರೆ ಎನ್ನುವುದು ಈಗ ಸುದ್ದಿ.

ನಿರ್ದೇಶಕ ದಯಾನಂದ್ ಅವರಿಗೆ ಕರೆ ಮಾಡಿ ಚೇರನ್, ಚಿತ್ರದ ಕಥಾಹಂದರದ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ, ಈ ವಿಭಿನ್ನ ಮತ್ತು ಅಪರೂಪದ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿ ಬೆಸ್ಟ್ ಆಫ್ ಲಕ್ ಎಂದಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಭಾರೀ ಹೆಸರನ್ನು ತಂದುಕೊಟ್ಟ 'ಆಟೋಗ್ರಾಫ್' ಚಿತ್ರದ ನಿರ್ದೇಶಕ, ನಟ ಚೇರನ್ 'ಬೆಂಕಿಪಟ್ಣ' ಚಿತ್ರವನ್ನು ತಮಿಳಿನಲ್ಲಿ ರಿಮೇಕ್ ಮಾಡಲಿದ್ದಾರೆಯೇ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಹೆಸರಾಂತ ನಿರ್ದೇಶಕರೊಬ್ಬರು ಚಿತ್ರತಂಡಕ್ಕೆ ಮತ್ತು ನಿರ್ದೇಶಕರ ಮೊದಲ ಪ್ರಯತ್ನಕ್ಕೆ ಬೆನ್ನು ತಟ್ಟಿರುವುದು ಮೆಚ್ಚಬೇಕಾದ ಅಂಶ.
ಒಟ್ಟಿನಲ್ಲಿ ಬೆಂಕಿಪಟ್ಣ ಚಿತ್ರ ಮಾಡುತ್ತಿರುವ ಸದ್ದು ಸ್ಯಾಂಡಲ್ ವುಡ್ ನಲ್ಲಿ ಭಾರೀ ಭರವಸೆಯನ್ನಂತೂ ಹುಟ್ಟು ಹಾಕಿದೆ.
ಟಿ ಕೆ ದಯಾನಂದ್ ಚೊಚ್ಚಲ ನಿರ್ದೇಶನದ ಬೆಂಕಿಪಟ್ಣ ಚಿತ್ರದ ಪ್ರಮುಖ ತಾರಾಗಣದಲ್ಲಿ ಪ್ರತಾಪ್ ನಾರಾಯಣ್, ಅನುಶ್ರೀ, ಅರುಣ್ ಸಾಗರ್, ಪ್ರಕಾಶ್ ಬೆಳವಾಡಿ, ಶ್ವೇತಾ ಬಡಿಗೇರ್ ಮುಂತಾದವರಿದ್ದಾರೆ.
ಮಾಸ್ತಿ ಜಾಕೀರ್ ಆಲಂಖಾನ್ ಚಿತ್ರದ ನಿರ್ಮಾಪಕರು ಮತ್ತು ದಿನೇಶ್ ಕುಮಾರ್ ಅವರು ಕಾರ್ಯಕಾರಿ ನಿರ್ಮಾಪಕರು. ಚಿತ್ರಕ್ಕೆ ಸಂಗೀತ ನೀಡಿದವರು ಯುವ ನಿರ್ದೇಶಕರಾದ ಸ್ಟೀವ್ - ಕೌಶಿಕ್ ತಂಡ.


Click it and Unblock the Notifications











