'ಮಹಿಳೆಯನ್ನು ನಾಯಿ ನರಿ, ಕ್ರಿಮಿ, ಕೀಟ ಎನ್ನುವ ಹೀರೋ...': ನಟ ಚೇತನ್ ಕಿಡಿಕಾರಿದ್ದು ಯಾರ ವಿರುದ್ಧ?
'ಆ ದಿನಗಳು' ಖ್ಯಾತಿಯ ಚೇತನ್, ಅನೇಕ ಸಾಮಾಜಿಕ ಕಾರ್ಯಗಳು, ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾಗಳಿಗಿಂತ ಅವರು ಸಮಾಜದಲ್ಲಿ ಸಂಕಷ್ಟದಲ್ಲಿರುವ, ಅನ್ಯಾಯಕ್ಕೆ ಒಳಗಾದ, ದೀನ ದಲಿತರ ಪರ ಹೋರಾಟಗಳಲ್ಲಿ ಹೆಚ್ಚು ಕಾರ್ಯೋನ್ಮುಖರಾಗಿದ್ದಾರೆ. ತಮ್ಮ ವಿಭಿನ್ನ ಸೈದ್ಧಾಂತಿಕ ನಿಲುವುಗಳ ಕಾರಣ ಅವರು ಚಿತ್ರರಂಗ, ರಾಜಕೀಯ ಸೇರಿದಂತೆ ವಿವಿಧ ವಲಯಗಳಲ್ಲಿ ಸ್ನೇಹಿತರನ್ನು ಪಡೆದಿದ್ದಾರೆ, ಅದೇ ರೀತಿ ವಿರೋಧಿಗಳನ್ನೂ ಹೊಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಚೇತನ್ ತಮ್ಮ ಅಭಿಪ್ರಾಯಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿರುತ್ತಾರೆ. ಅದಕ್ಕಾಗಿ ಟೀಕೆ, ನಿಂದನೆ, ಬೆದರಿಕೆಗಳನ್ನೂ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ಅವರ ಅವೈಜ್ಞಾನಿಕ ಟ್ವೀಟ್ ಅನ್ನು ಖಂಡಿಸಿದ್ದ ಅವರು ಸುದೀಪ್ ಅಭಿಮಾನಿಗಳಿಂದ ಅವಾಚ್ಯ ನಿಂದನೆಗೆ ಒಳಗಾಗಿದ್ದರು. ಈಗ ಅವರು ಚಿತ್ರರಂಗದ ಮತ್ತೊಬ್ಬ ನಟನ ಕುರಿತು ಮಾತನಾಡಿದ್ದಾರೆ. ಆ ನಟ ಯಾರು? ಅವರು ಹೇಳಿದ್ದೇನು? ಮುಂದೆ ಓದಿ...

ಅಂಬೇಡ್ಕರ್ ಜಯಂತಿ ಶುಭಾಶಯ
ಏಪ್ರಿಲ್ 14 ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ. ಅಂದು ಅನೇಕರು ಅಂಬೇಡ್ಕರ್ ಜನ್ಮದಿನದ ಶುಭಾಶಯ ಕೋರಿದ್ದರು. ಅವರಲ್ಲಿ ಚಿತ್ರರಂಗದ ಖ್ಯಾತ ನಟರೊಬ್ಬರು ಮಾಡಿರುವ ಟ್ವೀಟ್ ಹಾರೈಕೆಗೆ ಚೇತನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಟ್ವೀಟ್ಗಿಂತ ಆ ವ್ಯಕ್ತಿಯ ಸಿನಿಮಾ ಮತ್ತು ವ್ಯಕ್ತಿತ್ವದ ಬಗ್ಗೆ ಚೇತನ್ ಕಿಡಿಕಾರಿದ್ದಾರೆ.

ಮೀ ಟೂ ಅಭಿಯಾನದ ಮೆಲುಕು
ತಮ್ಮ ಟ್ವೀಟ್ನಲ್ಲಿ ಚೇತನ್ ಆ ನಟನ ಹೆಸರು ಉಲ್ಲೇಖಿಸಿಲ್ಲ. ಆದರೆ ಅವರು ಅದರಲ್ಲಿ ಬಳಸಿರುವ ಪದಗಳು ಆ ನಟ ಯಾರು ಎಂಬ ಸುಳಿವು ನೀಡುತ್ತದೆ. ವರ್ಷಗಳ ಹಿಂದೆ 'ಮೀ ಟೂ' ಅಭಿಯಾನ ನಡೆದ ಸಂದರ್ಭದಲ್ಲಿ ತಾರಕಕ್ಕೇರಿದ ಜಗಳವನ್ನು ನೆನಪಿಸಿಕೊಂಡರೆ ಚೇತನ್ ಪರೋಕ್ಷವಾಗಿ ಹೆಸರಿಸಿರುವುದು ಯಾರನ್ನು ಎನ್ನುವುದು ತಿಳಿಯುತ್ತದೆ.
ನಾಯಿ ನರಿ ಕ್ರಿಮಿ ಕೀಟ
''ಕನ್ನಡ ಚಲನಚಿತ್ರ ನಟರೊಬ್ಬರು ಮಹಿಳೆಯೊಬ್ಬರನ್ನು ಪದೇ ಪದೇ 'ನಾಯಿ, ನರಿ, ಕ್ರಿಮಿ, ಕೀಟ' ಎಂದು ಕರೆಯುತ್ತಾರೆ'' ಎಂದು ಚೇತನ್, ಸುಮಾರು ಎರಡು ವರ್ಷದ ಹಿಂದೆ ನಟ ಧ್ರುವ ಸರ್ಜಾ ಹೇಳಿದ್ದ ಮಾತನ್ನು ನೆನಪಿಸಿದ್ದಾರೆ.

ನಾಯಕಿಯ ಕೂದಲು ಎಳೆಯುತ್ತಾರೆ
'ನಂತರ ಅವರು ಹಾಡೊಂದರಲ್ಲಿ ನಟಿಸುವಾಗ ಅಲ್ಲಿ ಪ್ರಣಯದ ಹೆಸರಿನಲ್ಲಿ ನಾಯಕಿಯ ಕೂದಲನ್ನು ಎಳೆಯುತ್ತಾರೆ. ನಾಯಕಿಯನ್ನು ಕರೆಂಟ್ ಶಾಕ್ ಮತ್ತು ತುಂಡು ತುಂಡಾಗಿ ಕತ್ತರಿಸುವ ಬೆದರಿಕೆ ಹಾಕುತ್ತಾರೆ. ಅಲ್ಲದೆ ಮಹಿಳೆಯರ ಮೇಲೆ ಹಲ್ಲೆ ಮಾಡುತ್ತಾರೆ. ಒಪ್ಪಿಗೆ ಇಲ್ಲದಿದ್ದರೂ ಒತ್ತಾಯಿಸುವುದು ಕಿರುಕುಳ' ಎಂದು ಚೇತನ್ ಹೇಳಿದ್ದಾರೆ.

ಖಾಯಿಲೆ, ಅಜ್ಞಾನ ಮತ್ತು ವಿಪರ್ಯಾಸ
'ನಿನ್ನೆ ಅವರು ಧಾರ್ಮಿಕತೆಯನ್ನು ವೈಭವೀಕರಿಸುವ ಮುಖೇನ ಅಂಬೇಡ್ಕರ್ ಜಯಂತಿ ಶುಭಾಶಯಗಳನ್ನು ಬರೆಯುತ್ತಾರೆ. ಖಾಯಿಲೆ, ಅಜ್ಞಾನ ಮತ್ತು ವಿಪರ್ಯಾಸ' ಎಂದು ಚೇತನ್ ತೀಕ್ಷ್ಣವಾಗಿ ಹೇಳಿದ್ದಾರೆ. ಧ್ರುವ ಸರ್ಜಾ 'ಅಂಬೇಡ್ಕರ್ ಜಯಂತಿಯ ಶುಭಾಶಯ' ಹೇಳಿ ಟ್ವೀಟ್ ಮಾಡಿದ್ದರು. ಜತೆಗೆ ತಮ್ಮ ಎಂದಿನ 'ಜೈ ಆಂಜನೇಯ' ಟಿಪ್ಪಣಿಯ ಮೂಲಕ ಧಾರ್ಮಿಕ ನಂಬಿಕೆಯನ್ನೂ ಪ್ರದರ್ಶಿಸಿದ್ದರು.
ಅದು ಪಾತ್ರವಷ್ಟೇ, ನಿಜವಲ್ಲ...
ಇದು ನಟ ಧ್ರುವ ಸರ್ಜಾ ಅವರನ್ನು ಗುರಿಯಾಗಿರಿಸಿ ಹೇಳಿರುವುದು ಎಂದು ಅನೇಕರು ಊಹಿಸಿದ್ದಾರೆ. ಇನ್ನು ಕೆಲವರು 'ಡಾಲಿ' ಧನಂಜಯ ಇರಬಹುದೇ ಎಂದು ಕೇಳಿದ್ದಾರೆ. ಅನೇಕರು 'ಅದೊಂದು ಸಿನಿಮಾದ ದೃಶ್ಯವಷ್ಟೇ. ಸಿನಿಮಾದ ಪಾತ್ರವನ್ನು ಇಲ್ಲೇಕೆ ತರುತ್ತೀರಿ? ನೀವೂ ರೌಡಿಸಂ ಪಾತ್ರಗಳನ್ನು ಮಾಡಿ ಈಗ ಸಾಮಾಜಿಕ ಸಂದೇಶದ ಮಾತನಾಡುತ್ತೀರಲ್ಲ?' ಎಂದು ಪ್ರಶ್ನಿಸಿದ್ದಾರೆ.

ಮಾವನ ಬೆಂಬಲಕ್ಕೆ ಬಂದಿದ್ದ ಧ್ರುವ
2018ರ ಅಕ್ಟೋಬರ್ನಲ್ಲಿ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ 'ಮೀ ಟೂ' ಆರೋಪ ಮಾಡಿದ್ದಾಗ, ಮಾವನ ಬೆಂಬಲಕ್ಕೆ ನಿಂತಿದ್ದ ಧ್ರುವ ಸರ್ಜಾ, 'ನಾಯಿ, ನರಿ, ಕ್ರಿಮಿ, ಕೀಟಗಳು ಹೇಳಿದ್ದನ್ನೆಲ್ಲಾ ನಾನು ಕೇಳುವುದಿಲ್ಲ' ಎಂದು ಶ್ರುತಿ ಹರಿಹರನ್, ಅವರ ಬೆಂಬಲಕ್ಕೆ ನಿಂತಿದ್ದ ಚೇತನ್ ವಿರುದ್ಧ ಕಿಡಿಕಾರಿದ್ದರು.


Click it and Unblock the Notifications











