ವೆಂಕಟೇಶ್ ಕುಟುಂಬಕ್ಕೆ ಚಿರಂಜೀವಿ ಧನ ಸಹಾಯ
ಹದಿನೈದು ದಿನಗಳ ಹಿಂದೆ ಮಹಬೂಬ್ ನಗರ ಜಿಲ್ಲೆ ಪಾಲೆಂ ಬಳಿ ಸಂಭವಿಸಿದ ಭೀಕರ ವೋಲ್ವೋ ಬಸ್ ದುರಂತದಲ್ಲಿ 45ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದರು. ಈ ಘಟನೆಯಲ್ಲಿ ಅಖಿಲ ಕರ್ನಾಟಕ ಚಿರಂಜೀವಿ ಅಭಿಮಾನಿಗಳ ಸಂಘದ ಅಧ್ಯಕ್ಷ ವೆಂಕಟೇಶ್ ಯಾದವ್ ಸಹ ಸಾವಪ್ಪಿದ್ದರು.
ಕೇಂದ್ರ ಪ್ರವಾಸೋದ್ಯಮ ಸಚಿವ ಚಿರಂಜೀವಿ ಈಗ ವೆಂಕಟೇಶ್ ಕುಟುಂಬಕ್ಕೆ ಧನ ಸಹಾಯ ಮಾಡಿದ್ದಾರೆ. ತಮ್ಮ ಚಾರಿಟಿಬಲ್ ಟ್ರಸ್ಟ್ ಮೂಲಕ ರು.5 ಲಕ್ಷಗಳ ಚೆಕ್ ಕೊಟ್ಟಿದ್ದಾರೆ. ಸೋಮವಾರ (ನ.11) ವೆಂಕಟೇಶ್ ಯಾದವ್ ಅವರ ವೈಕುಂಠ ಸಮಾರಾಧನೆಯ ಕಾರ್ಯಕ್ರಮದಲ್ಲಿ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಭಾಗಿಯಾಗಿದ್ದರು. [ಬಸ್ ದುರಂತದ ಚಿತ್ರಗಳು]

ಇದೇ ಸಂದರ್ಭದಲ್ಲಿ ವೆಂಕಟೇಶ್ ಪುತ್ರಿಯರಿಬ್ಬರಿಗೆ ರು.3 ಲಕ್ಷ, ಪತ್ನಿ ಶಾಂತ, ತಂದೆ ಸುಂದರ ರಾಜ್ ಅವರಿಗೆ ನಟ ರಾಮ್ ಚರಣ್ ತೇಜ, ಅಲ್ಲು ಅರ್ಜುನ್ ತಲಾ ರೂ.1 ಲಕ್ಷ ಡಿಡಿಗಳನ್ನು ನೀಡಿದರು.
ಮದುವೆಯ ಆಹ್ವಾನ ಪತ್ರಿಕೆ ಹಂಚಲು ಹೈದರಾಬಾದ್ಗೆ ತೆರಳಿದ್ದ ನಟ ಚಿರಂಜೀವಿ ಅಭಿಮಾನಿ ಸಂಘದ ಅಧ್ಯಕ್ಷ ಎಸ್.ವೆಂಕಟೇಶ್ ಯಾದವ್ (ಕೋಟೆ) ಹಾಗೂ ಸಹೋದರಿ ಅನಿತಾ ಬಸ್ ದುರಂತದಲ್ಲಿ ಸಾವಪ್ಪಿದ್ದರು.
ಮಕ್ಕಳ ಜತೆ ಮಾತನಾಡಿ ಕಲಾಸಿಪಾಳ್ಯದಲ್ಲಿರುವ ಜಬ್ಬಾರ್ ಟ್ರಾವೆಲ್ಸ್ಗೆ ತೆರಳಿದ ವೆಂಕಟೇಶ್ ಮಂಗಳವಾರ (ಅ.29) ರಾತ್ರಿ 10 ಗಂಟೆ ಸುಮಾರಿಗೆ ಬಸ್ ಹತ್ತಿದ ಬಳಿಕ ಮಕ್ಕಳ ಮೊಬೈಲ್ಗೆ ಕರೆ ಮಾಡಿ, ಬಸ್ ಹತ್ತಿರುವ ವಿಷಯ ತಿಳಿಸಿ ಊಟ ಮಾಡಿ ಮಲಗುವಂತೆ ಹೇಳಿದ್ದರು. ಅದೇ ಅವರ ಕೊನೆಯ ಮಾತು. ಬೆಳಗಾಗುವುದರೊಳಗೆ ಮೊಬೈಲ್ ಸಮೇತ ಅವರು ಜೀವಂತ ಸುಟ್ಟು ಕರಕಲಾಗಿದ್ದರು.


Click it and Unblock the Notifications











