ಯುವಕರಿಗೆ ಸ್ಫೂರ್ತಿಯಾಗಲು ರೈತನಾಗಲು ನಿರ್ಧರಿಸಿದ ನಟ ನಿಖಿಲ್ ಕುಮಾರಸ್ವಾಮಿ
ನಟನಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಪರಿಪೂರ್ಣ ಕೃಷಿಕನಾಗುತ್ತಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಹೆಚ್ಚಿನ ಸಮಯವನ್ನು ಪತ್ನಿ ಜತೆಗೆ ತೋಟದ ಮನೆಯಲ್ಲಿಯೇ ಕಳೆದಿರುವ ನಿಖಿಲ್, ಅಜ್ಜನಂತೆ ತಾವೂ 'ಮಣ್ಣಿನಮಗ'ನಾಗಿ ಗುರುತಿಸಿಕೊಳ್ಳಲು ಹೊರಟಿದ್ದಾರೆ.
Recommended Video
ರೈತಾಪಿ ಬದುಕು ಬಹಳ ಶ್ರೇಷ್ಠವಾದದ್ದು. ಆದರೆ ರೈತರಿಗೆ ಸಿಗಬೇಕಾದ ಗೌರವ, ಮನ್ನಣೆ, ಆರ್ಥಿಕ ಬೆಳವಣಿಗೆ ಸಿಗುತ್ತಿಲ್ಲ ಎಂದು ನಿಖಿಲ್ ಬೇಸರ ವ್ಯಕ್ತಪಡಿಸಿದ್ದಾರೆ. ಹಳ್ಳಿಗಳಿಂದ ಬಂದು ನಗರಗಳಲ್ಲಿ ಕೆಲಸ ಮಾಡುತ್ತಿರುವ ವಿದ್ಯಾವಂತ ಯುವಕರು ಮರಳಿ ಕೃಷಿಗೆ ಹೋಗುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿರುವ ನಿಖಿಲ್, ಇದರ ಮೂಲಕ ರೈತಾಪಿ ಜೀವನ ಬದಲಾಗಲಿ. ಅವರಿಗೆ ಸೂಕ್ತ ಪ್ರಾತಿನಿಧ್ಯ, ಗೌರವ ಲಭಿಸುವಂತಾಗಲಿ ಎಂದು ಆಶಿಸಿದ್ದಾರೆ.
ಇದರ ನಡುವೆ ನಿಖಿಲ್ ಸ್ವತಃ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ತಮ್ಮ ಜಮೀನಿನಲ್ಲಿ ಕೃಷಿ ಕಾರ್ಯಗಳನ್ನು ಮಾಡುವ ಮೂಲಕ ಯುವಜನರಿಗೆ ಸ್ಫೂರ್ತಿಯಾಗಲು ಹೊರಟಿದ್ದಾರೆ. ರೈತರ ಬದುಕು ಬದಲಾಗಲಿ ಎಂಬ ಕನಸು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ನಗರಕ್ಕೆ ಬರುವವರೇ ಹೆಚ್ಚು
ನಮ್ಮ ದೇಶ ಕೃಷಿ ಪ್ರಧಾನವಾದ ದೇಶವಾಗಿದ್ದು, ರೈತ ಈ ದೇಶದ ಬೆನ್ನೆಲುಬು ಎಂದು ಗೌರವ ಸಲ್ಲಿಸುತ್ತೇವೆ. ಆದರೆ ರೈತರ ಮಕ್ಕಳು ರೈತರಾಗಿ ಅವರ ಕೃಷಿಭೂಮಿಯಲ್ಲಿ ದುಡಿಯಲು ಹಿಂಜರಿದು ನಗರದ ಕಡೆಗೆ ವಲಸೆ ಬಂದು ಬದುಕು ಕಟ್ಟಿಕೊಳ್ಳಲು ಹವಣಿಸುವವರ ಸಂಖ್ಯೆಯೇ ಹೆಚ್ಚು ಎಂದು ನಿಖಿಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಕೃಷಿ ಭೂಮಿ ಪಾಳು
ತಾವು ಕಲಿತ ವಿದ್ಯಾಭ್ಯಾಸದ ಆಧಾರದ ಮೇಲೆ ನಗರಗಳಲ್ಲಿ ಕೆಲಸವೊಂದನ್ನು ಸಂಪಾದಿಸಿ ಜೀವನ ನಡೆಸುವವರು ಒಂದು ಕಡೆಯಾದರೆ, ಇನ್ನು ಕೆಲವರು ಸ್ವಂತ ಉದ್ಯೋಗ ಅಥವಾ ಕೂಲಿ ಕೆಲಸವನ್ನಾದರೂ ನಗರದಲ್ಲಿ ಮಾಡಿಕೊಂಡು ಜೀವನ ನಡೆಸಲು ನಗರಗಳ ಕಡೆಗೆ ಮುಖಮಾಡುವವರು ಇನ್ನೊಂದು ಕಡೆ. ಇದರ ಪರಿಣಾಮವಾಗಿ ಹಳ್ಳಿಗಳಲ್ಲಿರುವ ಕೃಷಿಭೂಮಿಗಳು ಪಾಲು ಬೀಳುತ್ತಿವೆ. ನಗರದಲ್ಲಿ ವೃತ್ತಿ ಸ್ಪರ್ಧೆ ತಾರಕಕ್ಕೇರಿದೆ ಎಂದು ನಿಖಿಲ್ ಹೇಳಿದ್ದಾರೆ.

ರೈತನ ಮಗ ರೈತನಾಗುವುದು ಬೇಡ!
ಡಾಕ್ಟರ್ ತನ್ನ ಮಗ ಡಾಕ್ಟರ್ ಆಗಲಿ, ಪೊಲೀಸ್ ತನ್ನ ಮಗನೂ ತನ್ನಂತೆಯೇ ಪೊಲೀಸ್ ಆಗಲಿ ಸರ್ಕಾರಿ ನೌಕರ ತನ್ನ ಮಗನೂ ಸರ್ಕಾರಿ ನೌಕರನಾಗಲಿ ಎಂದು ಆಸೆ ಪಡುತ್ತಾನೆ. ಆದರೆ ನಮ್ಮ ದೇಶದ ರೈತ ತನ್ನ ಮಗನೂ ರೈತನಾಗಲಿ ಎಂದು ಎಂದೂ ಬಯಸದ ಪರಿಸ್ಥಿತಿ ಇದೆ. ತಾನು ಪಟ್ಟ ಕಷ್ಟ ತನಗೇ ಕೊನೆಯಾಗಲಿ ನನ್ನ ಮಕ್ಕಳಿಗೆ ಈ ಕಷ್ಟ ಬೇಡ ಎಂದು ಸಾಲ ಮಾಡಿಯಾದರೂ ಮಕ್ಕಳನ್ನು ಓದಿಸಿ ಉದ್ಯೋಗಕ್ಕಾಗಿ ನಗರಗಳಿಗೆ ಕಳುಹಿಸುತ್ತಾರೆ. ರೈತರಿಗೆ ತಾವು ಏನೇ ಬೆಳೆದರೂ ಅದಕ್ಕೆ ಬೆಲೆ ನಿಗದಿ ಮಾಡುವ ಅಧಿಕಾರವೂ ಆತನಿಗಿಲ್ಲ ಎನ್ನುವುದು ನಿಖಿಲ್ ಅವರಿಗೆ ಬೇಸರ ಮೂಡಿಸಿರುವ ಸಂಗತಿ.

ರೈತನಾಗುವುದು ಸೌಭಾಗ್ಯ ಎನ್ನುವಂತಾಗಬೇಕು
ಜೀವಮಾನವಿಡೀ ದುಡಿದು ಬದುಕುವ ರೈತನಿಗೆ ಈ ದೇಶದ ಮೊದಲ ಗೌರವ ಸಿಗಬೇಕಿದ್ದು, ಸರ್ಕಾರಿ ಅಧಿಕಾರಿಗಳು ಹಾಗೂ ಬ್ಯಾಂಕ್ ನೌಕರರು ರೈತರು ತಮ್ಮ ಕಚೇರಿಗೆ ಬಂದಾಗ ಗೌರವದಿಂದ ನಡೆಸಿಕೊಳ್ಳಬೇಕು. ಜಮೀನಿನಲ್ಲಿ ಮುಳ್ಳು ಚುಚ್ಚಿ ಮಣ್ಣಿಗೆ ರಕ್ತದ ಅಭಿಷೇಕವಾದರೂ ಮರುದಿನ ಅದೇ ಜಮೀನಿನಲ್ಲಿ ಕೆಲಸ ಮಾಡುವ ರೈತನಿಗೆ ಘನತೆಯ ಬದುಕನ್ನು ಕಟ್ಟಿ ಕೊಡಬೇಕಿದೆ. ರೈತರ ಮಕ್ಕಳು ಕೃಷಿಭೂಮಿಯಲ್ಲಿ ಕೆಲಸ ಮಾಡುವುದು ಒಂದು ಗೌರವ ಅನ್ನುವ ಪರಿಸ್ಥಿತಿ ನಿರ್ಮಾಣವಾಗಬೇಕು. ರೈತನಾಗಿ ಬದುಕುವುದು ದೌರ್ಭಾಗ್ಯವಲ್ಲ ಬದಲಾಗಿ ಅದೊಂದು ಸೌಭಾಗ್ಯ ಅನ್ನುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ಆಶಿಸಿದ್ದಾರೆ.

ರೈತರಿಗೆ ಎದ್ದು ಕೈ ಮುಗಿಯುತ್ತಾರೆ
ನಗರದಿಂದ ಮತ್ತೆ ಊರುಗಳಿಗೆ ಹಿಂದಿರುಗಿ ತಮ್ಮ ತಮ್ಮ ಕೃಷಿಭೂಮಿಗಳಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ನಿಮಗೆಲ್ಲರಿಗೂ ಯಶಸ್ಸು ಸಿಗಲಿ. ರೈತನ ಮಗನೆಂದು ಹೆಮ್ಮೆಯಿಂದ ಹೇಳಿ. ವಿದ್ಯಾಭ್ಯಾಸವಿರುವ ಯುವಕರು ವ್ಯವಸಾಯಕ್ಕಾಗಿ ಜಮೀನಿಗಿಳಿದರೆ ಮಧ್ಯವರ್ತಿಗಳ ಮೋಸವೂ ಕಡಿಮೆಯಾಗಲಿದೆ. ಆಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲಿ ಬಳಸಿಕೊಳ್ಳುವ ಅವಕಾಶವಿದೆ. ಕೃಷಿಯಲ್ಲೆ ಉನ್ನತ ಪದವಿ ಪಡೆದ ರೈತರ ಮಕ್ಕಳೇ ದೇಶದ ಕೃಷಿನೀತಿಯನ್ನು ನಿರ್ಧರಿಸುವಂತಾಗಲಿ. ಇದರ ಜೊತೆಗೆ ಸರ್ಕಾರಗಳು ಸಹಾ ಕೃಷಿ ಚಟುವಟಿಕೆಗಳಿಗೆ ಸೂಕ್ತ ಪ್ರೋತ್ಸಾಹವನ್ನು ನೀಡಿದರೆ ದೇಶದಲ್ಲಿ ರೈತನೆಂದರೆ ಎದ್ದು ಕೈಮುಗಿಯುವ ದಿನಗಳು ದೂರವಿಲ್ಲ ಎಂಬ ಕನಸನ್ನು ಹಂಚಿಕೊಂಡಿದ್ದಾರೆ.

ಕೃಷಿ ಶುರುಮಾಡಿದ್ದೇನೆ
ನಾನು ಸಹಾ ರೈತನ ಮಗನಾಗಿದ್ದು ನಮ್ಮ ಜಮೀನಿನಲ್ಲಿ ವ್ಯವಸಾಯ ನಡೆಸಬೇಕೆಂದು ನಿರ್ಧರಿಸಿ ನಮ್ಮ ತೋಟದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದೇನೆ. ಇದೇ ರೀತಿ ನಗರದಿಂದ ಹಳ್ಳಿಗಳಿಗೆ ಹಿಂತಿರುಗಿ ವ್ಯವಸಾಯದಲ್ಲಿ ತೊಡಗಿರುವ ಎಲ್ಲಾ ರೈತರ ಮಕ್ಕಳಿಗೂ ಯಶಸ್ಸು ಸಿಗಲಿ ಎಂದಿದ್ದಾರೆ ನಿಖಿಲ್.


Click it and Unblock the Notifications











