ಪದೇಪದೇ ರಿಸ್ಕ್: ಮರುಜನ್ಮ ಪಡೆದ ನಟ ತರುಣ್
ಹೊಸ ಉತ್ಸಾಹಿ ನಿರ್ದೇಶಕ ನಾಗರಾಜ್ ಪೀಣ್ಯ ಹಾಗೂ ನಿರ್ಮಾಪಕ ವಿಜಯ್ ಅವರು ನಾಯಕ ನಟ ತರುಣ್, ನಾಯಕಿಯರಾದ ಮೃದುಲಾ ಹಾಗೂ ಅಖಿಲಾ ಸೇರಿದಂತೆ ಹೊಸಬರ ಪದೇಪದೇ ಚಿತ್ರತಂಡ ಚಿತ್ರದ ಹಾಡುಗಳು ಚೆನ್ನಾಗಿ ಮೂಡಿಬರಬೇಕೆಂದು ಸುತ್ತಲೂ ನೀರು, ನಡುವಲ್ಲೊಂದು ಚಿಕ್ಕ ರಸ್ತೆ ಮಾತ್ರ ಹಾಗೂ ಸುತ್ತಲೂ ಗಡಿ ಕಾಯುವ ಸೈನಿಕರು ಇರುವ ರುದ್ರ-ರಮಣೀಯ ತಾಣ 'ಬುಜ್' ನಲ್ಲಿ ಬೀಡುಬಿಟ್ಟಿತ್ತು.
ಅಲ್ಲಿ ಗಡಿ ಕಾಯುತ್ತಿದ್ದ ಸೈನಿಕರು 'ಆ ಜಾಗ ಬೇಡ, ಭಾರೀ ಡೇಜರ್' ಎಂದರೂ ಕೇಳದೇ 'ಪದೇಪದೇ ಬರಲಾಗದು, ಒಂದೇ ಒಂದು ಶಾಟ್' ಎನ್ನುತ್ತಾ ಸೈನಿಕರ ಮಾತು ಕೇಳದೇ ಹೊರಟೇಬಿಟ್ಟಿತು ಚಿತ್ರತಂಡ. ಶೂಟಿಂಗ್ ಇನ್ನೇನು ಪ್ರಾರಂಭ ಎನ್ನುವ ಹೊತ್ತಿಗೆ ಮಳೆ ಪ್ರಾರಂಭವಾಗಿದೆ. ಮಹಾ ಮಳೆ, ಸುತ್ತಲೂ ದಟ್ಟವಾದ ಕರಿ ಮೋಡ. ಮೊದಲೇ ಸುತ್ತಲೂ ತುಂಬಿಕೊಂಡಿದ್ದ ನೀರು, ಚಿತ್ರತಂಡ ಬಂದ ರಸ್ತೆಯೇ ಕಾಣದಂತೆ ಮೇರೆಮೀರಿ ನೀರು ಹೆಚ್ಚಾಗತೊಡಗಿದೆ. ನಿಂತ ಸ್ಥಳದಿಂದ ಕದಲಾಗದ ಚಿತ್ರತಂಡದವರ ಹೊಟ್ಟೆಯ ಮಟ್ಟಕ್ಕೆ ನೀರು ಬಂತು.
'ಕಾಪಾಡಿ' ಎಂದು ಪದೇಪದೇ ಚಿತ್ರತಂಡ ಕೂಗಿದರೆ ಅದು ಯಾರಿಗೂ ಕೇಳುವಂತಿರಲಿಲ್ಲ. ಚಿತ್ರತಂಡ ಬದುಕುವ ಆಸೆ ಕೈಬಿಟ್ಟು 'ಅಟ್ ಲೀಸ್ಟ್ ತಾವೆಲ್ಲಾ ಸತ್ತಿದ್ದು ಹೇಗೆ ಎಂಬುದು ಈ ವಿಡಿಯೋ ಸಿಕ್ಕರೆ ತಿಳಿಯಲಿ' ಎಂದು ಇದ್ದ ಎಲ್ಲಾ ಕ್ಯಾಮೆರಾ ಆನ್ ಮಾಡಿದ್ದಾರೆ. ಬಹಳಷ್ಟು ಹೊತ್ತು ಇಳಿಯದ ಮಳೆಯಿಂದ ಜೀವದ ಆಸೆ ತೊರೆದಿದ್ದ ಅವರಲ್ಲಿ ಮಂದಹಾಸ ಮೂಡುವಂತೆ ಮಳೆ ಸ್ವಲ್ಪ ಕಡಿಮೆಯಾಯ್ತು, ದೂರದಲ್ಲಿದ್ದ ಸೈನಿಕರು ಅಲ್ಲಿ ಬಂದು 'ಇಂತಹ ಹುಚ್ಚು ಸಾಹಸ ಮಾಡಬೇಡಿ' ಎನ್ನುತ್ತಾ ಚಿತ್ರತಂಡವನ್ನು ರಕ್ಷಿಸಿದ್ದಾರೆ.
ಹೀಗೆ ನಿರ್ದೇಶಕ ನಾಗರಾಜ್ ಪೀಣ್ಯ, ನಾಯಕ ನಟ ತರುಣ್ ಸೇರದಂತೆ 'ಪದೇಪದೇ' ಚಿತ್ರತಂಡ ನಡೆದ ಅನಾಹುತವನ್ನು ಹಾಗೂ ಅದರಿಂದ ತಾವು ಬದುಕಿ ಮರಳಿ ಬಂದ ಪವಾಡ ಸದೃಶ ಘಟನೆಯನ್ನು ನೆನೆದು ಈಗಲೂ ನಿಟ್ಟಿಸಿರು ಬಿಡುತ್ತಿದೆ. ಸೆಪ್ಟೆಂಬರ್ ಮೊದಲವಾರದಲ್ಲಿ ನಡೆದ, ಈಗಲೂ ಆಗಾಗ ಕಾಡುವ ಈ ಮೈ 'ಜುಂ' ಎನ್ನಿಸುವ ಕಹಿಘಟನೆಯನ್ನು ಪ್ರಯತ್ನಿಸಿದರೂ ಚಿತ್ರತಂಡಕ್ಕೆ ಮರೆಯಲಾಗುತ್ತಿಲ್ಲ. ಆದರೂ ಚಿತ್ರತಂಡವು ಏನೂ ಆಗಿಯೇ ಇಲ್ಲವೆಂಬಂತೆ ಶೂಟಿಂಗ್ ಮುಂದುವರಿಸುತ್ತಿದೆ. 'ಸಿನಿಮಾ ನೋಡೋದೇನೋ ಸುಲಭ, ಆದರೆ ಮಾಡೋದು ಎಷ್ಟೊಂದು ಕಷ್ಟ' ಅಲ್ಲವೇ? (ಒನ್ ಇಂಡಿಯಾ ಕನ್ನಡ)


Click it and Unblock the Notifications












