ಜಯನಗರದಲ್ಲಿ ಪೂಜಾಗಾಂಧಿ ಕಾರಿಗೆ ಸ್ಕೂಟರ್ ಡಿಕ್ಕಿ
ನಟಿ ಪೂಜಾಗಾಂಧಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಗುರುವಾರ (ಫೆ.12) ಮಧ್ಯಾಹ್ನ ನಡೆದಿದೆ. ಈ ಘಟನೆ ಬೆಂಗಳೂರು ಜಯನಗರದ ಯಡಿಯೂರು ಕೆರೆ ಬಳಿ ನಡೆದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗುರುವಾರ ಮಧ್ಯಾಹ್ನ 1.30 ರ ಸುಮಾರಿಗೆ ಪೂಜಾಗಾಂಧಿ ಪ್ರಯಾಣಿಸುತ್ತಿದ್ದ ಕಾರು ಅಚಾನಕ್ ಆಗಿ ಅಡ್ಡ ಬಂದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ವರ್ಷಾ ಸಾನಿ (55) ಎಂಬ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ತಲೆಗೂ ಪೆಟ್ಟಾಗಿತ್ತು. ಕೂಡಲೆ ಅವರನ್ನು ಸ್ವತಃ ಪೂಜಾಗಾಂಧಿ ಅವರೇ ಯಡಿಯೂರಿನ ದೀಪಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ತಲೆಗೆ ಪೆಟ್ಟಾಗಿದ್ದ ಕಾರಣ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಯಿತು. ಈಗವರು ಚೇತರಿಸಿಕೊಂಡಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಈ ಅಪಘಾತದ ಘಟನೆಯಿಂದ ಪೂಜಾಗಾಂಧಿ ಅವರು ಆಘಾತಕ್ಕೊಳಗಾಗಿದ್ದರು. ಆದರೆ ಅದೃಷ್ಟವಶಾತ್ ಯಾರಿಗೇನು ಆಗಿಲ್ಲ. ಪೂಜಾಗಾಂಧಿ ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪೂಜಾಗಾಂಧಿ ಅಭಿನಯದ ಅಭಿನೇತ್ರಿ ಚಿತ್ರ ಉತ್ತಮ ಪ್ರಶಂಸೆಗೆ ಪಾತ್ರವಾಗಿತ್ತು.
ಸದ್ಯಕ್ಕೆ ಪೂಜಾಗಾಂಧಿ ಅವರು ಒಂದಷ್ಟು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಅವರ ಮತ್ತೊಂದು ಬಹುನಿರೀಕ್ಷಿತ ಚಿತ್ರ ತಿಪ್ಪಜ್ಜಿ ಸರ್ಕಲ್ ಬಿಡುಗಡೆಯಾಗಬೇಕಿದೆ. ಇದರ ಜೊತೆಗೆ ಹೂವಿ, ಮುತ್ತುಲಕ್ಷ್ಮಿ ಎಂಬೆರಡು ಚಿತ್ರಗಳಲ್ಲೂ ಪೂಜಾಗಾಂಧಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











