ಕೊರೊನಾ ವೈರಸ್ ಸಂತ್ರಸ್ತರ ಸಹಾಯಕ್ಕಾಗಿ 'ಬೆಳದಿಂಗಳ ಬಾಲೆ'ಯ ಓಟ!
ಕೊರೊನಾ ವೈರಸ್ ಸೋಂಕು ಹರಡಿದ ಬೆನ್ನಲ್ಲೇ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಸಂಬಳವಿಲ್ಲದೆ ಸಾವಿರಾರು ಕುಟುಂಬಗಳು ಬೀದಿವೆ ಬಿದ್ದಿವೆ. ಇನ್ನು ಸಾವಿರಾರು ಮಂದಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದೆ. ಈ ಸಂಕಷ್ಟದ ಸಮಯದಲ್ಲಿ ಬಡಜನರಿಗೆ ಅನೇಕರು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಚಿತ್ರರಂಗದ ಅನೇಕ ತಾರೆಯರು ಜನರಿಗೆ ಆಹಾರ ಧಾನ್ಯಗಳನ್ನು ಇತರೆ ನೆರವುಗಳನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ.
Recommended Video
ಇತ್ತೀಚೆಗೆ ಚಿತ್ರರಂಗಕ್ಕೆ ಮರಳಿರುವ 'ಬೆಳದಿಂಗಳ ಬಾಲೆ' ಖ್ಯಾತಿಯ ನಟಿ ಸುಮನ್ ನಗರ್ಕರ್ ಮತ್ತು ಅವರ ಪತಿ ಕೊರೊನಾ ವೈರಸ್ ಸಂತ್ರಸ್ತರಿಗೆ ನೆರವಾಗಲು ವಿಭಿನ್ನ ಹಾದಿ ತುಳಿದಿದ್ದಾರೆ. ಬೆಂಗಳೂರು ರನ್ನರ್ಸ್ ಆಯೋಜಿಸಿರುವ #Run2020-Move2feed fund raise ಅಭಿಯಾನದಲ್ಲಿ ಸುಮನ್ ನಗರ್ಕರ್ ಕೂಡ ತಮ್ಮ ಪತಿ ಗುರು ಜೊತೆಯಲ್ಲಿ ಭಾಗಿಯಾಗಿದ್ದಾರೆ.

20 ದಿನ 20 ಕಿ.ಮೀ ಓಟ
ಜುಲೈ 1ರಿಂದ 20ವರೆಗೆ ಇಪ್ಪತ್ತು ದಿನಗಳ ಕಾಲ ಈ ರನ್ 2020 ನಡೆಯಲಿದೆ. ಪ್ರತಿ ದಿನವೂ 20 ಮಂದಿ ಓಟಗಾರರು, 20 ಕಿ.ಮೀ. ಓಡುತ್ತಿದ್ದಾರೆ. ಈ ರನ್ನಿಂಗ್ ಜತೆಯಲ್ಲಿ ಅಭಿಯಾನದ ಮೂಲಕ ದೇಣಿಗೆ ಸಂಗ್ರಹಿಸಲಾಗುತ್ತದೆ.

ಕಷ್ಟದಲ್ಲಿರುವವರಿಗೆ ದಿನಸಿ
ಹೀಗೆ ಸಂಗ್ರಹಣೆಯಾದ ಹಣವನ್ನು ಬಳಸಿಕೊಂಡು ಬಡವರಿಗೆ, ದಿನಗೂಲಿ ಕಾರ್ಮಿಕರಿಗೆ, ಕಷ್ಟದಲ್ಲಿರುವವರಿಗೆ ಸಾಯಿ ವಿಶ್ವನಾಥ್ ಮೆಮೋರಿಯಲ್ ಟ್ರಸ್ಟಿನ ಮೂಲಕ ದಿನಸಿಗಳನ್ನು ಸರಬರಾಜು ಮಾಡಲಿದ್ದಾರೆ. ಸುಮನ್ ನಗರ್ಕರ್ ಅವರ ಫೇಸ್ಬುಕ್ ಪುಟದಲ್ಲಿ ಇದರ ಬಗ್ಗೆ ಹೆಚ್ಚಿನ ವಿವರ ನೀಡಲಾಗಿದೆ.

400 ಕಿ.ಮೀ ರನ್ನಿಂಗ್
ಈ ಅಭಿಯಾನದಲ್ಲಿ ಒಟ್ಟು 400 ಕಿ.ಮೀ. ಓಡಲಾಗುತ್ತದೆ. ಮ್ಯಾರಥಾನ್ ರನ್ನರ್ ಕೂಡ ಆಗಿರುವ ಸುಮನ್ ನಗರ್ಕರ್, ಇದರಲ್ಲಿ ಪಾಲ್ಗೊಳ್ಳುತ್ತಿರುವ ರನ್ನರ್ಗಳಲ್ಲಿ ನೀವು ಯಾರನ್ನು ಬೆಂಬಲಿಸುತ್ತೀರಿ ಎಂದು ಹೆಸರು ಉಲ್ಲೇಖಿಸಿ ದೇಣಿಗೆ ನೀಡಬಹುದು ಎಂದು ತಿಳಿಸಿದ್ದಾರೆ.

ನಟನೆ ಮತ್ತು ನಿರ್ಮಾಣ
ಕೆಲವು ವರ್ಷಗಳ ವಿರಾಮದ ನಂತರ ಚಿತ್ರರಂಗಕ್ಕೆ ಮರಳಿರುವ ಸುಮನ್ ಅವರು 'ಬಬ್ರೂ' ಮತ್ತು 'ಬ್ರಾಹ್ಮಿ' ಎಂಬ ಚಿತ್ರಗಳನ್ನು ನಿರ್ಮಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಬೆಂಗಾಲಿ ನಿರ್ದೇಶಕ ಸಂಚಯನ್ ಚಕ್ರಬರ್ತಿಯವರ "ಲಾಕ್ಡೌನ್ ಡೈರೀಸ್" ಹಿಂದಿ ಕಿರುಚಿತ್ರ ಹಾಗೂ ಸಿಂಗಾಪುರ್ ನಲ್ಲಿರುವ ಪ್ರಶಸ್ತಿ ವಿಜೇತ ನಿರ್ದೇಶಕಿ ಶಿಲ್ಪ ಕ್ರಿಷ್ನನ್ ಶುಕ್ಲಾ ಅವರ ಇಂಗ್ಲಿಷ್ ಹಿಂದಿ ಮಿಶ್ರಿತ ಚಲನಚಿತ್ರ "ಡಾಟ್ಸ್" ನಲ್ಲಿ ಕೂಡ ಅಭಿನಯಿಸಿದ್ದಾರೆ.


Click it and Unblock the Notifications











