12 ಕಿ.ಮೀ ಉದ್ದದ ರಸ್ತೆಗೆ ಪುನೀತ್ ರಾಜ್ಕುಮಾರ್ ಹೆಸರಿಡಲು ಬಿಬಿಎಂಪಿ ಅನುಮೋದನೆ
ಎರಡು ಲೋಕಸಭಾ ಕ್ಷೇತ್ರಗಳು, ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು 14 ಬಿಬಿಎಂಪಿ ವಾರ್ಡ್ ಗಳನ್ನು ಹಾದುಹೋಗುವ 'ಮೈಸೂರು ರಸ್ತೆಯ ನಾಯಂಡ ಹಳ್ಳಿ ಜಂಕ್ಷನ್ ನಿಂದ (ಹೊಸಕೆರೆ ಹಳ್ಳಿ, ದೇವೇಗೌಡ ಪೆಟ್ರೋಲ್ ಬಂಕ್ - ಕದಿರೇನ ಹಳ್ಳಿ ಪಾರ್ಕ್ - ಸಾರಕ್ಕಿ ಸಿಗ್ನಲ್ - ಜೆ.ಪಿ.ನಗರ) ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್" ವರೆಗಿನ 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ 'ಪುನೀತ್ ರಾಜ್ಕುಮಾರ್ ರಸ್ತೆ' ಎಂದು ನಾಮಕರಣ ಮಾಡುವ ಸಂಬಂಧ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರು ಮತ್ತು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರಾದ ಎನ್.ಆರ್. ರಮೇಶ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮತ್ತು ಆಡಳಿತಾಧಿಕಾರಿಗಳಿಗೆ ನೀಡಿದ್ದ ಮನವಿ ಪತ್ರವನ್ನು ಪುರಸ್ಕರಿಸಿ - ನಿಯಮಾನುಸಾರ ಕಂದಾಯ ಇಲಾಖೆಯ ಜಂಟಿ ಆಯುಕ್ತರು ಸಂಬಧ ಪಟ್ಟ ಕಾರ್ಯಪಾಲಕ ಅಭಿಯಂತರರು ಮತ್ತು ಕಂದಾಯ ಅಧಿಕಾರಿಗಳಿಗೆ ಕೂಡಲೇ ಕ್ರಮ ತೆಗೆದುಕೊಂಡು ಕಡತವನ್ನು ಮಂಡಿಸುವಂತೆ ಆದೇಶಿಸಿದ್ದಾರೆ.
Recommended Video
ಅದರಂತೆ, ಸದರಿ 12 ಕಿ.ಮೀ ಉದ್ದದ ರಸ್ತೆಯ ನಕ್ಷೆಯನ್ನು ತಯಾರಿಸಿ ಮತ್ತು ಈ ವ್ಯಾಪ್ತಿಯ ಸಾರ್ವಜನಿಕರಿಂದ ಆಕ್ಷೇಪಣೆಗಳ ಮಹಜರ್ ನಡೆಸಿದ ನಂತರ ಸುಮಾರು 700 ಕ್ಕೂ ಹೆಚ್ಚು ಮಂದಿ ಹಾಗೂ ಸದರಿ ರಸ್ತೆಗೆ ಹೊಂದಿಕೊಂಡಂತಿರುವ 09 ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ಈ ರಸ್ತೆಗೆ ಅಪ್ಪು ಅವರ ಹೆಸರಿಡುವ ಪರವಾಗಿ ಸಹಿ ಮಾಡಿದ್ದರು ಮತ್ತು ಯಾರೊಬ್ಬರೂ ವಿರುದ್ಧವಾಗಿ ಸಹಿ ಮಾಡದೇ ಇದ್ದ ಕಾರಣ - ಮುಖ್ಯ ಆಯುಕ್ತರ ಟಿಪ್ಪಣಿಯಂತೆ ಮಾನ್ಯ ಆಡಳಿತಾಧಿಕಾರಿಗಳಾದ ರಾಕೇಶ್ ಸಿಂಗ್ ಅವರು 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ 'ಪುನೀತ್ ರಾಜ್ಕುಮಾರ್ ರಸ್ತೆ' ಎಂದು ನಾಮಕಾರಣ ಮಾಡುವ ಬಗ್ಗೆ ನಿರ್ಣಯ ಕೈಗೊಂಡು ಅಧಿಕೃತ ಅನುಮೋದನೆ ನೀಡಲಾಗಿದೆ.
ತಮ್ಮದೇ ಸಿನಿಮಾದ ಟ್ರೈಲರ್ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿನೋದ್ ಪ್ರಭಾಕರ್: ಕಾರಣ ಅಪ್ಪು!
ವಿಶೇಷವೆಂದರೆ, ಗೊರಗುಂಟೆ ಪಾಳ್ಯದಿಂದ (ಡಾ ll ರಾಜ್ ಕುಮಾರ್, ಪಾರ್ವತಮ್ಮ ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರ ಸಮಾಧಿಗಳು ಇರುವ ರಸ್ತೆ) ಮೈಸೂರು ರಸ್ತೆಯ ನಾಯಂಡ ಹಳ್ಳಿ ಜಂಕ್ಷನ್ ವರೆಗಿನ ವರ್ತುಲ ರಸ್ತೆಗೆ 2015 ರ ಏಪ್ರಿಲ್ 08 ರಂದು 'ಡಾll ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ' ಎಂದು ಬಿಬಿಎಂಪಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡು ಅಧಿಕೃತವಾಗಿ ರಸ್ತೆಯ ನಾಮಕರಣ ಸಮಾರಂಭವನ್ನು ಮಾಡಲಾಗಿತ್ತು.

ಈಗ ಇದರ ಮುಂದುವರೆದ ಭಾಗವಾಗಿ ನಾಯಂಡ ಹಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ವರೆಗಿನ ವರ್ತುಲ ರಸ್ತೆಗೆ 'ಪುನೀತ್ ರಾಜ್ಕುಮಾರ್ ರಸ್ತೆ' ಎಂದು ನಾಮಕರಣ ಮಾಡಲಾಗುತ್ತಿದೆ.
ಆದಷ್ಟು ಶೀಘ್ರವಾಗಿ ಮಾನ್ಯ ಮುಖ್ಯಮಂತ್ರಿಗಳಿಂದ 'ಪುನೀತ್ ರಾಜ್ಕುಮಾರ್ ರಸ್ತೆ'ಯ ನಾಮಕರಣ ಸಮಾರಂಭವನ್ನು ಡಾ ರಾಜ್ಕುಮಾರ್ ಕುಟುಂಬದ ಎಲ್ಲಾ ಸದಸ್ಯರ ಹಾಜರಾತಿಯಲ್ಲಿ ಏರ್ಪಡಿಸಲಾಗುವುದು ಎಂದು ಬಿಬಿಎಂಪಿ ಸದಸ್ಯ, ಬಿಜೆಪಿ ಮುಖಂಡ ಎಂಆರ್ ರಮೇಶ್ ಹೇಳಿದ್ದಾರೆ.
ಪುನೀತ್ ಮನೆಗೆ ಅರ್ಜುನ್ ಸರ್ಜಾ ಹಾಗೂ ಪತ್ನಿ ಭೇಟಿ: 'ಅಪ್ಪು ಅಗಲಿದ ಮೇಲೆ ಲೈಫೇ ಒಂಥರಾ ಡಿಪ್ರೆಸ್ ಆಗಿತ್ತು'
ಈಗಾಗಲೇ ರಾಜ್ಯದ ಹಲವು ಪಟ್ಟಣ, ನಗರ, ಗ್ರಾಮಗಳಲ್ಲಿ ಸಹ ರಸ್ತೆಗಳಿಗೆ, ವೃತ್ತಗಳಿಗೆ ಪುನೀತ್ ರಾಜ್ಕುಮಾರ್ ಅವರ ಹೆಸರು ಇಡಲಾಗಿದೆ. ಪುನೀತ್ ರಾಜ್ಕುಮಾರ್ ಪುತ್ಥಳಿಗಳನ್ನು ನಿರ್ಮಿಸಲಾಗಿದೆ. ಇದೀಗ ಬಿಬಿಎಂಪಿಯು ಅಧಿಕೃತವಾಗಿ ರಸ್ತೆಗೆ ಪುನೀತ್ ರಾಜ್ಕುಮಾರ್ ಹೆಸರಿಡುವ ಮೂಲಕ ಪುನೀತ್ಗೆ ಗೌರವ ಸಲ್ಲಿಸಿದೆ. ತಂದೆ ರಾಜ್ಕುಮಾರ್ ಅವರ ಹೆಸರಿಟ್ಟಿರುವ ರಸ್ತೆಯ ಮುಂದುವರೆದ ರಸ್ತೆಗೆ ಪುನೀತ್ ರಾಜ್ಕುಮಾರ್ ಹೆಸರಿಟ್ಟಿರುವುದು ವಿಶೇಷ.


Click it and Unblock the Notifications











