ಮಿಡ್ ನೈಟ್ ಟಿವಿ ಮಸಾಲಾಗಳಿಗೆ ಕತ್ತರಿ. A ನಿದು?

ಸಸ್ಪೆನ್ಸ್, ಹಾರರ್, ಥ್ರಿಲ್, ಸಾಹಸ ಪ್ರಧಾನ ಚಿತ್ರಗಳನ್ನು ನಿರ್ಮಿಸುತ್ತಿರುವ ಬಹಳಷ್ಟು ಕನ್ನಡ ನಿರ್ಮಾಪಕರ ಪಾಲಿಗೆ ಸೆನ್ಸಾರ್ ಬೋರ್ಡಿನ ಈ ನಿರ್ಧಾರ ಒಂದು ರೀತಿಯಲ್ಲಿ ಮರಣಶಾಸನವೇ ಸರಿ.
ವಿಚಿತ್ರ ಸಂಗತಿಯೇನಂದರೆ ಇಡೀ ಭಾರತ ಚಿತ್ರರಂಗವೇ ಬೋರ್ಡಿನ ಈ ಕಠಿಣ ನಿರ್ಧಾರದಿಂದ ದಂಗು ಬಡಿದಿದ್ದರೆ ಕನ್ನಡ ಚಿತ್ರದ ನಿರ್ಮಾಪಕರಿಗೆ ಈ ನಿರ್ಧಾರದ ಬಗ್ಗೆ ಅರಿವೇ ಇರದಿರುವುದು ಸೋಜಿಗವೇ ಸರಿ. ಕರ್ನಾಟಕ ಚಲನಚಿತ್ರ ಮಂಡಳಿ ಅಥವಾ ಮಂಡಳಿಯ ಯಾವ ಸದಸ್ಯರೂ CBFC ಈ ನಿರ್ಧಾರದ ವಿರುದ್ದ ಇದುವರೆಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿಲ್ಲ.
ಬೋರ್ಡಿನ ಈ ನಿರ್ಧಾರದಿಂದ 'ಎ' ಸರ್ಟಿಫಿಕೇಟ್ ಪಡೆದ ಚಿತ್ರಗಳು ಯಾವುದೇ ವಾಹಿನಿಯಲ್ಲಿ ಪ್ರಸಾರ ಕಾಣುವ ಹಾಗಿಲ್ಲ. ಇದುವರೆಗೆ ರಾತ್ರಿ 11ಗಂಟೆಯ ನಂತರ ಇಂಥಹ ಚಿತ್ರಗಳು ಪ್ರಸಾರ ಕಾಣುತ್ತಿದ್ದವು.
ಈ ಹಿಂದೆ ಎ ಸರ್ಟಿಫಿಕೇಟ್ ನೀಡಿದ ಚಿತ್ರಗಳನ್ನು ಮರುಪರಿಶೀಲಿಸಿ ಬೋರ್ಡ್ ನಿರ್ಧಾರ ಕೈಗೊಳ್ಳುತ್ತಿತ್ತು. ಅದಕ್ಕೂ ಬ್ರೇಕ್ ಹಾಕಿದ ಬೋರ್ಡ್ ಕಟ್ಟುನಿಟ್ಟಾಗಿ ಈ ಹೊಸ ಪದ್ದತಿಯನ್ನು ಅಳವಡಿಸ ಬೇಕೆನ್ನುವ ಆಜ್ಞೆ ಹೊರಡಿಸಿದೆ.
ಬೋರ್ಡ್ ಮರುಪರಿಶೀಲಿಸಿ, ಇನ್ನೊಮ್ಮೆ ಸರ್ಟಿಫಿಕೇಟ್ ನೀಡಿದ ನಂತರವಷ್ಟೇ ಶಿವರಾಜ್ ಕುಮಾರ್ ಅಭಿನಯದ ಜೋಗಿ, ಸುದೀಪ್ ಅಭಿನಯದ ಗೂಳಿ, ದರ್ಶನ್ ಅಭಿನಯದ ಕಲಾಸಿಪಾಳ್ಯ, ಉಪೇಂದ್ರ ಅಭಿನಯದ ಮಸ್ತಿ ಮುಂತಾದ ಚಿತ್ರಗಳು ವಾಹಿನಿಯ ಪ್ರೈಮ್ ಟೈಮ್ ನಲ್ಲಿ ಪ್ರಸಾರ ಕಂಡಿತ್ತು. ಇಲ್ಲವಾದಲ್ಲಿ ಹಿಂದಿನ ನಿಯಮಗಳ ಪ್ರಕಾರ ರಾತ್ರಿ 11ಗಂಟೆಯ ನಂತರ ಪ್ರಸಾರವಾಗಬೇಕಿತ್ತು.
ಬೋರ್ಡಿನ ಈ ನಿರ್ಧಾರದಿಂದ ಈ ವರ್ಷದ ಯಶಸ್ವಿ ಚಿತ್ರ ದಂಡುಪಾಳ್ಯ ಚಿತ್ರ ವಾಹಿನಿಯಲ್ಲಿ ಪ್ರಸಾರವಾಗುವ ಹಾಗಿಲ್ಲ. ಮುಖ್ಯವಾಗಿ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಚಿತ್ರ ನಿರ್ಮಾಪಕರಿಗೆ ಬೋರ್ಡಿನ ಈ ನಿರ್ಧಾರದಿನ ಸರೀ ಹೊಡೆತ ಬೀಳಲಿದೆ. ಯಾಕೆಂದರೆ ಟಿವಿ ರೈಟ್ಸ್ ನಲ್ಲಿ ಬರುವ ಆದಾಯವನ್ನು ನಿರ್ಮಾಪಕರು ಬಹುವಾಗಿ ಅವಲಂಬಿಸಿರುತ್ತಾರೆ.


Click it and Unblock the Notifications











