ಉಸಿರು ಮತ್ತು ಬದುಕು ಗೆದ್ದವ ಈ ಬಾರಿ ಮತ್ತೆ ಗೆಲ್ಲಲಿಲ್ಲ: ಬುಲೆಟ್ ಸಾವಿಗೆ ಗೆಳೆಯರ ಕಣ್ಣೀರು
ಏಪ್ರಿಲ್ 2 ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಜನ್ಮದಿನ. ಆದರೆ ಈ ಬಾರಿ ಅವರು ತಮ್ಮ ಹುಟ್ಟು ಹಬ್ಬವನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅದಕ್ಕೂ ಮೊದಲೇ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಗುಣಮುಖರಾಗಿ ಎದ್ದು ಬರುತ್ತಾರೆ. ಆ ಮೂಲಕ ಮರುಹುಟ್ಟು ಪಡೆದುಕೊಳ್ಳುತ್ತಾರೆ ಎಂಬ ಆಶಯಗಳಿದ್ದವು. ಏಕೆಂದರೆ ಹಿಂದೆಯೂ ಅವರು ಹೀಗೆ ಸಾವಿನ ಮನೆಯ ಕದ ತಟ್ಟಿ ಬಂದಿದ್ದರು. ಈ ನಿರೀಕ್ಷೆಗಳೆಲ್ಲ ಹುಸಿಯಾಗಿದೆ.
ರವಿಚಂದ್ರನ್ ನಿರ್ದೇಶನದ 'ಶಾಂತಿ ಕ್ರಾಂತಿ' ಚಿತ್ರದಲ್ಲಿದ್ದ ಮೂರು ಸಾವಿರ ಮಕ್ಕಳಲ್ಲಿ ಬುಲೆಟ್ ಪ್ರಕಾಶ್ ಕೂಡ ಒಬ್ಬರು. ಮಹೇಶ್ ಎಂಬ ಹೆಸರನ್ನು ಬದಲಿಸಿ ಬುಲೆಟ್ ಪ್ರಕಾಶ್ ಎಂಬ ಹೆಸರನ್ನು ಅವರಿಗೆ ಇರಿಸಿದ್ದು ಕ್ರೇಜಿ ಸ್ಟಾರ್ ರವಿಚಂದ್ರನ್. ರವಿಚಂದ್ರನ್ ಅವರೇ ತನ್ನ ಗುರು ಎಂದು ಅವರು ಹಲವು ಬಾರಿ ಹೇಳಿಕೊಂಡಿದ್ದರು. ಹಾಗೆಯೇ ಅವರನ್ನು ತಿದ್ದಿ ತೀಡಿದ ಅನೇಕ ನಟರು ನಿರ್ದೇಶಕರಿದ್ದಾರೆ. ಪ್ರತಿಯೊಬ್ಬರಿಗೂ ಅವರು ಆತ್ಮೀಯರಾಗಿದ್ದರು. ಎಲ್ಲ ಪ್ರಮುಖ ನಾಯಕನಟರ ಜತೆಗೂ ನಟಿಸಿದ್ದರು. ಅವರ ಅಕಾಲಿಕ ಸಾವಿಗೆ ಅವರ ಒಡನಾಡಿಗಳು ಶೋಕ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ.
ಒಳ್ಳೆಯ ನಟ- ಪುನೀತ್
ಬುಲೆಟ್ ಪ್ರಕಾಶ್ ಒಳ್ಳೆ ನಟರು, ತುಂಬಾ ಚೆನ್ನಾಗಿ ಪರಿಚಯ. ಒಟ್ಟಿಗೆ ಅಪ್ಪು, ವೀರ ಕನ್ನಡಿಗ ಚಿತ್ರಗಳಲ್ಲಿ ನಟಿಸಿದ್ದೀವಿ. ಜಾಕಿ ಸಿನಿಮಾದಲ್ಲಿ ಒಳ್ಳೆ ಪಾತ್ರ ಮಾಡಿದ್ರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ.

ಸಾಧು ಕೋಕಿಲಾ ಕಣ್ಣೀರು
ಒಂದು ವಾರದಿಂದ ಗೊತ್ತಿತ್ತು ಹುಷಾರಿಲ್ಲ ಎಂದು. ತುಂಬಾ ಚಿಕ್ಕೋನು ಅವನು. ನನಗಿಂತಲೂ ಹತ್ತು ವರ್ಷ ಸಣ್ಣವನು. ಮಗ ಮಗಳು ಇಬ್ಬರು ಇದ್ದಾರೆ. ಈ ಸಂಗತಿ ತುಂಬಾನೇ ಬೇಸರ ಉಂಟುಮಾಡುತ್ತಿದೆ. ಏನು ಮಾಡಲು ಆಗುತ್ತದೆ. ಒಳ್ಳೆಯ ಕಲಾವಿದ. ದೇವರು ಎಷ್ಟು ಎಂದುಕೊಂಡಿರುತ್ತಾನಾ ಅಷ್ಟೇ ಆಯಸ್ಸು. ನಾವು ಅಂದುಕೊಂಡಿರಲಿಲ್ಲ ಹೀಗೆ ಆಗುತ್ತದೆ ಎಂದು ಸಾಧು ಕೋಕಿಲಾ ಗೆಳೆಯನ ಸಾವಿಗೆ ಮರುಗಿದ್ದಾರೆ.

ದುಷ್ಟ ಶಕ್ತಿಗಳು ಏನು ಸಂಪಾದಿಸಿದರು?
ಇಷ್ಟು ಚಿಕ್ಕ ವಯಸ್ಸಲ್ಲಿ ಸಾಯಬಾರದಿತ್ತು. ಆರೋಗ್ಯ ಹೊಂದಿ ಬರುತ್ತಾರೆ ಎನಿಸುತ್ತಿತ್ತು. ಸುಮಾರು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಮಕ್ಕಳ ಬಗ್ಗೆ ತುಂಬಾ ಆಸೆಗಳನ್ನು ಇಟ್ಟುಕೊಂಡಿದ್ದರು. ತಮ್ಮ ಮನೆಯಲ್ಲಿ ಹರಿಕಥೆಗಳನ್ನು ನಡೆಸುತ್ತಿದ್ದರು. ಆಗ ನಮ್ಮನ್ನು ಕರೆಸುತ್ತಿದ್ದರು. ಕಲಾವಿದರಲ್ಲದೆ ಅದರಾಚೆಗೆ ನಮ್ಮ ನಡುವೆ ಅಂತಹ ಬಾಂಧವ್ಯವಿತ್ತು. ಅವರು ದಪ್ಪಗೆ ಇದ್ದರು. ಹಾಗೆಯೇ ಇದ್ದರೇ ಒಳ್ಳೆಯದಿತ್ತೇನೋ ಎನಿಸುತ್ತದೆ. ಅವರು ತಾವೇ ಹಣ ಹೂಡಿ ಹೀರೋ ಆಗಿ ನಟಿಸಿದ್ದರು. ಯಾರೂ ಅವರ ಬಳಿ ಏನೂ ಕೇಳಲಿಲ್ಲ. ಪರಮಾತ್ಮ ಅವರ ಮನೆಯವರಿಗೆ ಶಕ್ತಿ ಕೊಡಲಿ.
ಕಲಾವಿದರಿಗೆ ಹಠ ಇದ್ದೇ ಇರುತ್ತದೆ. ಹಾಗೆಯೇ ಆಸ್ಪತ್ರೆಯಿಂದ ಹೊರಬಂದ ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸಿ ಗೆದ್ದು ನಿಲ್ಲುವ ಹಠ ಹೊಂದಿದ್ದರು. ಆದರೆ ಕೆಲವರು ಅವರನ್ನು ಖಾಲಿ ಕೂರಿಸಿದರು. ಅವರಿಗೆ ನಡೆಯಲು ಆಗೊಲ್ಲ ಎಂದು ಸುಮ್ಮನೆ ಸುದ್ದಿಗಳನ್ನು ಹರಡಿಸಿದರು. ಅವರೆಲ್ಲ ದುಷ್ಟ ಶಕ್ತಿಗಳು. ಏನು ಸಂಪಾದಿಸಿದರು ಅವರು?- ತಬಲಾ ನಾಣಿ.
ಜಗ್ಗೇಶ್ ಬೇಸರ
ಕಲಾ ಬಂಧು ಬುಲೆಟ್ ಪ್ರಕಾಶ್ ಕಾಲವಾದ ಸುದ್ದಿ ಕೇಳಿ ಬೇಸರವಾಯ್ತು. ಸಾ.ರಾ. ಗೋವಿಂದು ಎರಡು ಗಂಟೆಗೆ ಕರೆ ಮಾಡಿ ಮಾತನಾಡಿದರು. ವೆಂಟಿಲೇಟರ್ನಲ್ಲಿ ಇದ್ದಾರೆ ಎಂದಿದ್ದರು. ವೈಯಕ್ತಿಕ ವಿಚಾರ ಕೂಡ ಹೇಳಿದ್ದರು. ಅದಕ್ಕೆ ಸ್ಪಂದಿಸಿದ್ದೇನೆ. ತುಂಬಾ ಬೇಸರವಾಯ್ತು. ಸಣ್ಣ ಪ್ರಾಯ ಹೀಗೆ ಆಗಬಾರದಿತ್ತು. ಅವನ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಮನೆಯವರ ಜತೆ ನಾವೆಲ್ಲ ಕಲಾ ಬಂಧುಗಳಿದ್ದೇವೆ - ಜಗ್ಗೇಶ್

ನಟನೆ ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದ
ಬುಲೆಟ್ ಪ್ರಕಾಶ್ ನನಗೆ ಆರಂಭದ ದಿನದಿಂದ ಗೊತ್ತು. ತುಂಬಾ ಮಹತ್ವಾಕಾಂಕ್ಷಿ ವ್ಯಕ್ತಿತ್ವ. ನಿರ್ದೇಶಕನ ಎದುರು ಏನೆಲ್ಲ ಮಾಡಿ ಭೇಷ್ ಎನಿಸಬಹುದು, ಎಲ್ಲ ಪ್ರಯತ್ನ ಮಾಡುತ್ತಿದ್ದ. ತಮಾಷೆ ಮಾಡುವವನು ನಗಿಸಲು ಪ್ರಯತ್ನಿಸುವವನು, ಬೈಸಿಕೊಳ್ಳುವವನು. ನಟನಾಗಿ ಹೊರಹೊಮ್ಮಬೇಕು. ಹೆಸರು ಮಾಡಬೇಕು ಎಂಬುದಷ್ಟೆ ತುಡಿತವಿತ್ತು. 'ಓಂಕಾರ' ಸಿನಿಮಾದ ವೇಳೆ ಡಯಾಬಿಟಿಸ್ ಇದ್ದದ್ದು ಗೊತ್ತಾಯಿತು. ಬಳಿಕ ಬಹಳ ಎಮೋಷನಲ್ ಆದ. ಸಣ್ಣ ವಯಸ್ಸಿನಲ್ಲಿಯೇ ಡಯಾಬಿಟಿಸ್ ಬಂದರೆ ತುಂಬಾ ದಿನ ಉಳಿಯೊಲ್ಲ ಎನ್ನುವುದು ಮನದಟ್ಟಾಗಿತ್ತು. ಆಗ ನಾವೆಲ್ಲ ಸಮಾಧಾನ ಮಾಡಿದ್ದೆವು- ನಿರ್ದೇಶಕ ಶಿವಮಣಿ

ಶಾರ್ಟ್ ಕಟ್ ಮಾಡಿದ್ದು ತಪ್ಪಾಯ್ತು
ತುಂಬಾ ಒಳ್ಳೆ ವ್ಯಕ್ತಿ. ಗಾಡ್ ಫಾದರ್ ಇಲ್ಲದೆ, ಅವರದೇ ಬಾಡಿ ಲಾಂಗ್ವೇಜ್ನಲ್ಲಿ ನಟಿಸಿ ಮೇಲೆ ಬಂದರು. ಪ್ರತಿ ಕ್ಷಣವನ್ನು ಎಂಜಾಯ್ ಮಾಡೋರು. ಅವರು ತೆಳ್ಳಗಾಗಲು ಆ ರೀತಿ ಪ್ರಯತ್ನ ಮಾಡಿದ್ದು ಸಮಸ್ಯೆ ಆಯ್ತು. ಶಾರ್ಟ್ ಕಟ್ ಯಾವತ್ತೂ ಸಹಾಯ ಮಾಡೊಲ್ಲ. ಅದನ್ನು ನಾನು ಸಿಕ್ಕಾಗೆಲ್ಲ ಹೇಳುತ್ತಿದ್ದೆ. ಏಕೆಂದರೆ ಅವರಿಗೆ ಶುಗರ್ ಇತ್ತು. ಹಾಗಿದ್ದಾಗ ಮೊದಲು ಲೈಫ್ ಸ್ಟೈಲ್ ಬದಲಿಸಬೇಕು. ಯೋಗ, ವಾಕಿಂಗ್ ಮಾಡಿ ಎಂದಿದ್ದೆ. ಆಯ್ತು ಎಂದಿದ್ದರು- ಕೋಮಲ್

ಉಸಿರು ಮತ್ತು ಬದುಕು ಗೆದ್ದವ
ನಾನು ಅವರು 'ಪರಿಮಳ ಲಾಡ್ಜ್'ನ ಟೀಸರ್ನಲ್ಲಿ ಕೆಲಸ ಮಾಡಿದ್ದೆವು. ಸಿನಿಮಾದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿತ್ತು. ಅವರು ತುಂಬಾ ಆಶಾವಾದಿಯಾಗಿದ್ದರು. ಬದುಕಿನ ಬಗ್ಗೆ ಭರವಸೆ ಇಟ್ಟುಕೊಂಡಿದ್ರು. ಒಳ್ಳೆ ನಟನೆ ಪಾತ್ರ ಮಾಡಬೇಕು. ನಾನೂ ಸಂತೋಷವಾಗಿರಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುತ್ತಿದ್ದರು. ನನ್ನನ್ನು ಕಾಮಿಡಿಯನ್ ಆಗಿ ನೋಡಬೇಡಿ, ನಟನಿದ್ದಾನೆ ಅವನನ್ನು ಹೊರಗೆ ಬರುವಂತೆ ಮಾಡಿ ಎನ್ನುತ್ತಿದ್ದರು. ನನ್ನ ಸಿನಿಮಾದಲ್ಲಿ ಗುಡ್ಡೆ ಮಾಂಸ ಎಂಬ ಪಾತ್ರವಿತ್ತು. ಅವರ ಪಾತ್ರದ ಬಗ್ಗೆ ಪರಕಾಯ ಪಾತ್ರ ಮಾಡುವ ಭರವಸೆ ಇಟ್ಟುಕೊಂಡಿದ್ದರು. ಅವರ ಹೆಸರನ್ನು ಉಸಿರು ಮತ್ತು ಬದುಕು ಗೆದ್ದವ ಎಂದು ಸೇವ್ ಮಾಡಿಕೊಂಡಿದ್ದೆ. ಅವರಲ್ಲಿದ್ದ ನಟ ಇನ್ನೂ ಈಚೆ ಬರಬೇಕಿತ್ತು. ಬದುಕನ್ನು ಸಾರ್ಥಕತೆ ಮಾಡಿಕೊಳ್ಳಬೇಕಿತ್ತು.


Click it and Unblock the Notifications











