ಡಾ.ಪುನೀತ್ ರಾಜ್ಕುಮಾರ್ ವಾರ್ಡ್ ಎಂದು ಘೋಷಣೆ: ಪುಣ್ಯ ದಿನ ಎಂದ ಸಿಎಂ!
ಕಳೆದ ಹಲವು ದಿನಗಳಿಂದ ಮಕಹಾಲಕ್ಷ್ಮಿ ಲೇಔಟ್ನ 54 ಹಾಗೂ 55ನೇ ವಾರ್ಡ್ನ ಯಾವುದಾದ್ರೂ ಒಂದು ವಾರ್ಡ್ಗೆ ಅಪ್ಪು ಹೆಸರು ಇಡಬೇಕು. ಡಾ. ಪುನೀತ್ ರಾಜ್ಕುಮಾರ್ ಲೇ ಔಟ್ ಎಂದು ನಾಮಕರಣ ಮಾಡಬೇಕು ಎಂಬುದು ಅಭಿಮಾನಿಗಳ ಆಸೆಯಾಗಿತ್ತು.
ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ನ ವಾರ್ಡ್ಗೆ ಕರ್ನಾಟಕ ರತ್ನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹೆಸರನ್ನು ಇಡುವಂತೆ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದರು. ವಿಧಾನ ಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆಗೆ ಜುಲೈ 05ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದರು. ಆ ಮನವಿಯಂತೆಯೇ ಅಪ್ಪು ಹೆಸರಿಡಲು ಅಧಿಕೃತ ಆದೇಶ ಹೊರಡಿಸಲಾಗಿತ್ತು.
ಅಪ್ಪು ಅಭಿಮಾನಿಗಳ ಆಸೆಯಂತೆಯೇ ಮಹಾಲಕ್ಷ್ಮಿ ಲೇಔಟ್ನ 55ನೇ ವಾರ್ಡ್ಗೆ ಡಾ.ಪುನೀತ್ ರಾಜ್ಕುಮಾರ್ ಹೆಸರಿಡಲಾಗಿದೆ. ಈ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಸ್ವತ: ಸಿಎಂ ಬಸವರಾಜ ಬೊಮ್ಮಯಿ ಘೋಷಣೆ ಮಾಡಿದ್ದಾರೆ.

ಇದು ಪುಣ್ಯ ದಿನ ಎಂದ ಸಿಎಂ
ಮಹಾಲಕ್ಷ್ಮಿ ಲೇ ಔಟ್ನ 55ನೇ ವಾರ್ಡ್ಗೆ ಡಾ.ಪುನೀತ್ ರಾಜ್ಕುಮಾರ್ ಎಂದು ಅಧಿಕೃತವಾಗಿ ಘೋಷಣೆ ಮಾಡಲು ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಅಪ್ಪು ಅಭಿಮಾನಿಗಳ ಆಸೆಯನ್ನು ಸಿಎಂ ನೆರವೇರಿಸಿದ್ದಾರೆ. ಈ ವೇಳೆ " ಮೇರು ನಟ, ನನ್ನ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ವಾರ್ಡ್ಗಿಟ್ಟು ಕಾರ್ಯಕ್ರಮ ಮಾಡಿರುವಂತದ್ದು. ಇದೆಲ್ಲವೂ ಅಮೃತ ಘಳಿಗೆಯಲ್ಲಿ ಮಾತ್ರ ಆಗುವುದಕ್ಕೆ ಸಾಧ್ಯ. ಆದ್ದರಿಂದ ಇದನ್ನು ಪುಣ್ಯದ ದಿನವೆಂದು ನಾನು ಕರೆದಿದ್ದೇನೆ. " ಎಂದು ಈ ಸಂದರ್ಭದಲ್ಲಿ ಸಿಎಂ ಹೇಳಿದ್ದಾರೆ.

ಇಂತಹ ಕಲಾವಿದ ಸಿಗಲ್ಲ
"ಡಾ.ರಾಜ್ಕುಮಾರ್ ಸಮಾಧಿ, ಡಾ.ಪಾರ್ವತಮ್ಮ ರಾಜ್ಕುಮಾರ್ ಸಮಾಧಿ, ಡಾ.ಪುನೀತ್ ರಾಜ್ಕುಮಾರ್ ಸಮಾಧಿ, ಡಾ. ಅಂಬರೀಷ್ ಸಮಾಧಿ ಅಲ್ಲೇ ಇದೆ. ನೀವೆಲ್ಲಾ ಒತ್ತಾಯ ಮಾಡಿ ಈ ವಾರ್ಡ್ಗೆ ಪುನೀತ್ ರಾಜ್ಕುಮಾರ್ ಹೆಸರನ್ನು ಇಡಬೇಕು ಎಂದು ಮನವಿ ಸಲ್ಲಿಸಿದ್ರಿ. ಅದರಂತೆ ಈ ವಾರ್ಡ್ಗೆ ಕಾವೇರಿ ನಗರ ಎನ್ನುವ ಬದಲು ಪುನೀತ್ ರಾಜ್ಕುಮಾರ್ ಎಂದು ನಾಮಕರಣ ಮಾಡುತ್ತಿದ್ದೇವೆ. ಇಂತಹ ಕಲಾವಿದ ಮತ್ತೊಬ್ಬರು ಸಿಗೋದಿಲ್ಲ. ಅವರ ಸಾಧನೆ ಏನು ಅನ್ನೋದು ಅವರು ಕಾಲವಾದ ದಿನದಿಂದ ಇವತ್ತಿಗೂ ಗೊತ್ತಾಗುತ್ತಿದೆ. ಪ್ರತಿ ಭಾನುವಾರ 25 ಸಾವಿರ ಮಂದಿ ಅವರ ಸಮಾಧಿ ಬಳಿ ಬರುತ್ತಾರೆ." ಎಂದು ಸ್ಥಳೀಯ ಶಾಸಕ ಹಾಗೂ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ಅಪ್ಪು ಅಭಿಮಾನಿಗಳ ಹರ್ಷ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ವಾರ್ಡ್ ಹೆಸರು ಇಂದು (ಜುಲೈ17) ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇನ್ನುಂದೆ ಕಾವೇರಿನಗರ ವಾರ್ಡ್ ಡಾ. ಪುನೀತ್ ರಾಜ್ಕುಮಾರ್ ವಾರ್ಡ್ ಆಗಿ ಅಧಿಕೃತವಾಗಿ ಕರೆಸಿಕೊಳ್ಳಲಿದೆ. ಅಧಿಕೃತ ಘೋಷಣೆಯಾದ ಬಳಿಕ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಈ ಸಮಾರಂಭದಲ್ಲಿ ಖುಷಿಯಾಗಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಪುನೀತ್ ವಾರ್ಡ್ ಬಂದಿದ್ದೇಗೆ?
ಬಿಬಿಎಂಪಿ ಕೆಲವು ದಿನಗಳಿಂದ ನೂತನ ವಾರ್ಡ್ಗಳನ್ನು ವಿಂಗಡಣೆ ಪ್ರಕ್ರಿಯೆಯನ್ನು ಆರಂಭಿಸಿತ್ತು. ಈ ವೇಳೆ ಬೆಂಗಳೂರು ನಗರದ ಮಹಾಲಕ್ಷ್ಮಿ ಲೇ ಔಟ್ನ 54 ಅಥವಾ 55ನೇ ವಾರ್ಡ್ಗೆ ಪುನೀತ್ ರಾಜ್ಕುಮಾರ್ ಹೆಸರಿಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದರು. ಆ ಮನವಿಗೆ ಬಿಬಿಎಂಪಿ ಹಾಗೂ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಿತ್ತು. ಸುಮಾರು 243 ವಾರ್ಡ್ಗಳನ್ನೊಳಗೊಂಡ ಒಳಗೊಂಡ ನೂತನ ವಾರ್ಡ್ ನಾಮಕರಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಇದರಲ್ಲಿ ಮಹಾಲಕ್ಷ್ಮಿ ಲೇ ಔಟ್ನ ಕಾವೇರಿನಗರ ವಾರ್ಡ್ ನಂ 55ಕ್ಕೆ ಡಾ. ಪುನೀತ್ ರಾಜ್ಕುಮಾರ್ ವಾರ್ಡ್ ಎಂದು ನಾಮಕರಣ ಮಾಡಲಾಗಿದೆ.


Click it and Unblock the Notifications











