ರೀ ಅನುಪ್ ಭಂಡಾರಿ, ಸುದೀಪ್ ನನ್ನ ಮಗರೀ.. ಅವನಿಗ್ಯಾಕೆ ಭಯ?- ರವಿಚಂದ್ರನ್
ಕಿಚ್ಚ ಸುದೀಪ್ ಸಿನಿಮಾ 'ವಿಕ್ರಾಂತ್ ರೋಣ' ಆರ್ಭಟ ಆರಂಭ ಆಗಿದೆ. ಫ್ಯಾಂಟಸಿ ಲೋಕದ ಥ್ರಿಲ್ಲಿಂಗ್ ಎಕ್ಸ್ಪೀರಿಯನ್ಸ್ಗೆ ಇನ್ನೊಂದು ತಿಂಗಳು ಬಾಕಿ ಇದೆಯಷ್ಟೆ. ಆಗಲೇ ಚಿತ್ರತಂಡ ಪೂರ್ಣ ಪ್ರಮಾಣದಲ್ಲಿ ಅಖಾಡಕ್ಕಿಳಿದಿದೆ. ಅನೌನ್ಸ್ ಮಾಡಿದ ದಿನಕ್ಕಿಂತ ಒಂದು ದಿನ ಮುನ್ನವೇ ಟ್ರೈಲರ್ ಅನ್ನು ಚಿತ್ರರಂಗದ ಆತ್ಮೀಯರಿಗೆ ಹಾಗೂ ಮಾಧ್ಯಮಕ್ಕೆ ತೋರಿಸಲಾಗಿದೆ.
'ವಿಕ್ರಾಂತ್ ರೋಣ' ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ಜೊತೆ ಶಿವರಾಜ್ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ,ರಿಷಬ್ ಶೆಟ್ಟಿ, ಸೃಜನ್ ಲೋಕೇಶ್ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ 'ವಿಕ್ರಾಂತ್ ರೋಣ' ಸಿನಿಮಾದ ನಿರ್ದೇಶಕ ಅನುಪ್ ಭಂಡಾರಿಯನ್ನು ಗದರಿದ್ದಾರೆ. ಅಷ್ಟಕ್ಕೂ ಅನುಪ್ ಭಂಡಾರಿಯನ್ನು ಕ್ರೇಜಿಸ್ಟಾರ್ ಬೈದಿದ್ದೇಕೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಅನುಪ್ಗೆ ರವಿಚಂದ್ರನ್ ಬೈದಿದ್ದೇಕೆ?
"ಅನುಪ್ ಭಂಡಾರಿ ಎಲ್ಲಿ? ನಿಮಗೆ ಬೈಯ್ಯ ಬೇಕು ಒಂದು ನಿಮಿಷ ನಿಂತ್ಕೊಳ್ಳಿ. ಏನೋ ಹೇಳಿದ್ರಲ್ಲ ಡೈಲಾಗ್. ಭಯ ಅಂತೆಲ್ಲಾ ಬಳಸಿದ್ದೀರಾ ನೀವು. ಅವನು ರವಿಚಂದ್ರನ್ ಮಗರೀ.. ಅವನಿಗೆ ಭಯ ಇರುವುದಕ್ಕೆ ಸಾಧ್ಯನೇ ಇಲ್ಲ. ಅದು ಹೇಳುವುದೇ ಬೇಕಾಗಿಲ್ಲ. ಭಯ ಇದ್ದಿದ್ದರೆ ವಿಕ್ರಾಂತ್ ರೋಣ ಸಿನಿಮಾನೇ ಆಗುವುದಿಲ್ಲ. ನಿಮಗೆ ವಿಆರ್ ಅಂದ್ರೆ ವಿಕ್ರಾಂತ್ ರೋಣ ಅಂತ ಅಷ್ಟೇ ಗೊತ್ತು. ವಿಆರ್ ಅಂದ್ರೆ ವಿ ರವಿಚಂದ್ರನ್ ಅಂತ ಕೂಡ ತಿಳಿದುಕೊಳ್ಳಬೇಕು." ಎಂದು ರವಿಚಂದ್ರನ್ ಪತ್ರಿಕಾಗೋಷ್ಠಿ ವೇಳೆ ಗದರಿದ್ದಾರೆ.

ತಂದೆ ನೆನೆದ ಕ್ರೇಜಿಸ್ಟಾರ್
"ನನಗೆ ಪ್ರೇಮಲೋಕ ಸಿನಿಮಾ ನೋಡಿದಾಗ, ನನ್ನ ತಂದೆ ತಬ್ಬಿಕೊಂಡು ಭುಜದ ಮೇಲೆ ಅತ್ತಿದ್ದನ್ನು ಇವತ್ತಿಗೂ ಮರೆಯುವುದಿಲ್ಲ ನಾನು. ಈ ಸಿನಿಮಾ ಪೂರ್ತಿ ನೋಡಿದ ಮೇಲೆ ಆ ದಿನ ನನಗೆ ತಂದೆ ಸ್ಥಾನ ಬರತ್ತೆ ಅಂತ ಅಂದ್ಕೊಂಡಿದ್ದೀನಿ ನಾನು. ನನ್ನ ಮಕ್ಕಳಿಗೆ ಚಾಲೆಂಜ್ ಮಾಡಿದ್ದೇನೆ ನಾನು. ನನ್ನನ್ನು ಅಳಿಸಿ ಅಂತ. ನನಗೆ ಅಳುವುದಕ್ಕೆ ಬರೋದಿಲ್ಲ. ತಾಕತ್ತಿದ್ದರೆ ಅಳಿಸಿ ನೀವು. ಒಳ್ಳೆ ಸಿನಿಮಾ ಮಾಡಿದರೆ ಮಾತ್ರ ಅಳಿಸುವುದಕ್ಕೆ ಸಾಧ್ಯ."

ಸ್ಯಾಂಡಲ್ವುಡ್ಗೆ ದೃಷ್ಟಿ ತೆಗೆಯಬೇಕು
"ಕನ್ನಡ ಇಂಡಸ್ಟ್ರಿಗೆ ಎಲ್ಲಾರೂ ಸೇರಿ ಒಂದು ದೃಷ್ಟಿ ತೆಗಿಬೇಕು. ಎಲ್ಲರೂ ಕನಸುಗಾರ, ಕನಸುಗಾರ ಹೇಳುತ್ತಿದ್ರಿ. ಈ ನಾನೊಬ್ಬ ಇಲ್ಲ. ನನ್ನ ಜೊತೆ ಕನಸು ಕಾಣುವವರು ತುಂಬಾ ಜನ ಇದ್ದಾರೆ. ಮೇಲೊಂದಿಷ್ಟು ಜನ ಕೂತಿದ್ದಾರೆ. ಇಲ್ಲೂ ಇದ್ದಾರೆ. ಎಲ್ಲರೂ ತಮಗೆ ತಾವೇ ಚಾಲೆಂಜ್ ಹಾಕಿಕೊಳ್ಳುತ್ತಿದ್ದಾರೆ. ಒಳ್ಳೆಯ ವಾತಾವರಣವಿದು. ಒಂದು ಒಗ್ಗಟ್ಟು ಚೆನ್ನಾಗಿ ಕಾಣಿಸುತ್ತಿದೆ. ಬುರ್ಜ್ ಖಲೀಫಾಗಿಂತಲೂ ಎತ್ತರಕ್ಕೆ ಬೆಳೆಯಬೇಕು ಅನ್ನುವುದನ್ನು 'ವಿಕ್ರಾಂತ್ ರೋಣ' ತೋರಿಸುತ್ತಿದೆ.

ರಣಧೀರ ನೆನಪಿಸಿಕೊಂಡಿದ್ದೇಕೆ?
"ರಣಧೀರ ಸಿನಿಮಾ ನೆನಪಾಗುತ್ತೆ ನನಗೆ. ಚಿಕ್ಕ ಮಕ್ಕಳಿಗೆ ಕಥೆ ಹೇಳಿಕೊಂಡು ಸಿನಿಮಾ ಶುರು ಮಾಡಿದ್ದೆ ಹೇಗಿತ್ತು ಅಂತ. 30 ವರ್ಷ ಆದ್ಮೇಲೆ ಇನ್ನೊಂದು ವರ್ಷನ್ ಅನ್ನು ನನ್ನ ಮಗ ಇನ್ನೊಂದು ಪ್ರಪಂಚಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ಸಿನಿಮಾ ಇನ್ನೊಂದು ಲೆವೆಲ್ಗೆ ತೆಗೆದುಕೊಂಡು ಹೋಗುತ್ತೆ. ನಮ್ಮೆಲ್ಲರಿಗೂ ಈ ಸಿನಿಮಾ ಬಗ್ಗೆ ಹೆಮ್ಮೆಯಿದೆ."


Click it and Unblock the Notifications











