ಅಪ್ಪು ಬಗ್ಗೆ ಕೆಟ್ಟದಾಗಿ ಬೈದಿದ್ದ ಯುವಕ: ಸಮಾಧಿ ಮುಂದೆ ನಿಲ್ಲಿಸಿ ಕ್ಷಮೆ ಕೇಳಿಸಿದ ಪುನೀತ್ ಫ್ಯಾನ್ಸ್!
ಕಳೆದ ಎರಡು ಮೂರು ವಾರಗಳಿಂದ ದರ್ಶನ್ ಅಭಿಮಾನಿಗಳು ಹಾಗೂ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ನಡುವೆ ಕಿತ್ತಾಟ ನಡೆಯುತ್ತಿರೋದು ಗೊತ್ತೇ ಇದೆ. ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ದರ್ಶನ್ ಅಭಿಮಾನಿಗಳು ಅಪ್ಪು ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದರು.
ಈ ಪ್ರಕರಣದ ಬಳಿಕ ದರ್ಶನ್ ಅಭಿಮಾನಿಗಳು ಹಾಗೂ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಮಧ್ಯೆ ಇನ್ನು ಕಿತ್ತಾಟ ನಡೆಯುತ್ತಲೇ ಇದೆ. ಇನ್ನೇನು ತಣ್ಣಗಾಯ್ತು ಅನ್ನುವಾಗಲೇ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡ ಯುವಕನೊಬ್ಬ ಪುನೀತ್ ರಾಜ್ಕುಮಾರ್ಗೆ ಕೆಟ್ಟದಾಗಿ ಬೈದು ವಿಡಿಯೋ ಮಾಡಿದ್ದ. ಆ ವಿಡಿಯೋ ನೋಡಿ ಅಪ್ಪು ಫ್ಯಾನ್ಸ್ ಕಿಡಿಕಾರಿದ್ದರು.
ಕಳೆದ ಒಂದು ವಾರದಿಂದ ಕಿಡಿಗೇಡಿ ಪುನೀತ್ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಆದ್ರೀಗ ಕೊನೆಗೂ ಅವನನ್ನು ಹುಡುಕಿ ಕರೆತಂದಿದ್ದಾರೆ. ಅಪ್ಪು ಪುಣ್ಯಭೂಮಿ ಮುಂದೆ ಕ್ಷಮೆ ಕೇಳಿಸಿದ್ದಾರೆ.

ಅಪ್ಪುಗೆ ಬೈದಿದ್ದ ಯುವಕ ಹೇಳಿದ್ದೇನು?
"ಒಂದು ವಾರದ ಹಿಂದೆ ಅಪ್ಪ ಬಾಸ್ ಬಗ್ಗೆ ಒಂದು ಕೆಟ್ಟ ವಿಡಿಯೋ ಮಾಡಿದ್ದೆ. ಕುಡಿದು ಬಿಟ್ಟು ಫೇಸ್ ಬುಕ್ನಲ್ಲಿ ಕೆಟ್ಟ ಕೆಟ್ಟ ವಿಡಿಯೋ ವಿಡಿಯೋ ನೋಡಿ ಹೀಗೆ ಮಾಡಿದ್ದೆ. ಅವತ್ತಿಂದ ಅಪ್ಪು ಫ್ಯಾನ್ಸ್ ಫೋನ್ ಮಾಡುತ್ತಲೇ ಇದ್ದರು. ಅವತ್ತಿಂದ ನಾನು ಅಲ್ಲಿ ಇಲ್ಲಿ ತಿರುಗಾಡಿಕೊಂಡು ಇದ್ದೆ. ಇವತ್ತು ಇಲ್ಲಿಗೆ ಕರ್ಕೊಂಡು ಬಂದಿದ್ದಾರೆ. ಅಪ್ಪು ಅವರಿಗೆ, ಅಣ್ಣಾವ್ರಿಗೆ ಕ್ಷಮೆ ಕೇಳುತ್ತೇನೆ." ಎಂದು ಯುವಕ ಅಪ್ಪು ಪುಣ್ಯಭೂಮಿ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

'ಅವತ್ತು ಕುಡಿದಿದ್ದೆ. ಎಲ್ಲರಿಗೂ ಬೈದಿದ್ದೆ'
ಒಂದು ವಾರದ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ಬರುತ್ತಿದ್ದ ವಿಡಿಯೋ ಹಾಗೂ ಪೋಸ್ಟ್ ಅನ್ನು ನೋಡಿ ಕೆಟ್ಟಾಗಿ ಬೈದಿದ್ದೆ. ಅಲ್ಲದೆ ಅಂದು ಕುಡಿದಿದ್ದರಿಂದ ಬೈದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. "ಅವತ್ತು ಕುಡಿದಿದ್ದೆ. ಎಲ್ಲರಿಗೂ ಬೈದಿದ್ದೆ. ಸಿಟ್ಟಲ್ಲಿ ಗೊತ್ತಾಗಿಲ್ಲ ಅವತ್ತು ಎಲ್ಲರಿಗೂ ಕೆಟ್ಟ ಕೆಟ್ಟದಾಗಿ ಬೈದಿದ್ದೆ. ಇವತ್ತು ಎಲ್ಲರಿಗೂ ಕ್ಷಮೆ ಹೇಳುತ್ತೆ. ರಾಜವಂಶಕ್ಕೆ, ಶಿವಣ್ಣ ಅವರಿಗೆ ತಪ್ಪಾಯ್ತು ಅಂತ ಕೇಳಿಕೊಳ್ಳುತ್ತೇನೆ." ಎಂದು ದರ್ಶನ್ ಅಭಿಮಾನಿ ಹೇಳಿದ್ದಾನೆ.

'ಮಹಿಳೆಯಿಂದ ತರಾಟೆ'
" ಅಪ್ಪು ಕರ್ಮ ಮಾಡಿ ಮೇಲೆಕ್ಕೆ ಹೋದ್ರಾ? ನೀನು ಏನು ಪುಣ್ಯ ಮಾಡಿ ಹಿಂಗಿದ್ದೀಯ ನೋಡು. ನಿನ್ನ ಯೋಗ್ಯತೆಗೆ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದೀಯ. ಹೆತ್ತ ತಾಯಿಗೆ ಅನ್ನ ಹಾಕೋಕೆ ಯೋಗ್ಯತೆ ಇಲ್ಲದವನು ನೀನು. ನೋಡು ನಮ್ಮಲ್ಲಿ ಯಾರೂ ಅಂತಹವರು ಇಲ್ಲ. ಒಂದು ಹೇಳ್ತೀನಿ ಕೇಳು ನಿನಗೆ 40 ವರ್ಷ ಆಗೋ ಹೊತ್ತಿಗೆ ನೀನು ಸತ್ತೋಗಿರ್ತಿಯಾ. ಆಗ ನಿನ್ನ ಹೆಂಡ್ತಿನಾ ಯಾರೋ ನೋಡಿಕೊಳ್ತಾರೆ." ಇದೇ ವೇಳೆ ಯುವಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಗೃಹಮಂತ್ರಿಗೆ ಮನವಿ
ಕೆಲವು ದಿನಗಳ ಹಿಂದಷ್ಟೇ ರಾಜವಂಶದ ಅಭಿಮಾನಿಗಳು ಫಿಲ್ಮ್ ಚೇಂಬರ್ಗೆ ಮುತ್ತಿಗೆ ಹಾಕಿದ್ದರು. ದರ್ಶನ್ ಅವರನ್ನು ಫಿಲ್ಮ್ ಚೇಂಬರ್ಗೆ ಕರೆಸಿ, ಅವರ ಅಭಿಮಾನಿಗಳಿಗೆ ಬುದ್ಧಿ ಹೇಳಿಸುವಂತೆ ಒತ್ತಡ ಹೇರಿದ್ದರು. ಆ ಸಂಬಂಧ ಮೊನ್ನೆ ಸಂಜೆ (ಜನವರಿ 4) ಗೃಹಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.


Click it and Unblock the Notifications











