"ಅಣ್ಣಾವ್ರು ಸಿನಿಮಾ ನಿರ್ಮಾಪಕರಿಗೆ ಎರಡು ಕೊಂಬು ಬಂದಿತ್ತು": ದರ್ಶನ್ ಡಿಚ್ಚಿ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ನೇರ ನುಡಿ, ಖಡಕ್ ಮಾತು. ಹಿಂದೆ -ಮುಂದೆ ಫಿಲ್ಟರ್ ಹಾಕೊಂಡು ಯೋಚನೆ ಮಾಡಿ ಮಾತಾಡೋ ವ್ಯಕ್ತಿನೇ ಅಲ್ಲ. ತಮಗನ್ನಿಸಿದ್ದನ್ನು ಅದ್ಯಾರೇ ಇದ್ದರೂ ನೇರವಾಗಿ ಹೇಳುವ ವ್ಯಕ್ತಿತ್ವ. ಈ ಕಾರಣಕ್ಕೆ ದರ್ಶನ್ ಕೆಲವೊಮ್ಮೆ ವಿವಾದಕ್ಕೆ ಸಿಕ್ಕಿಕೊಳ್ಳುವುದೂ ಇದೆ.
ದರ್ಶನ್ ತಮ್ಮ ನೇರ ನುಡಿಯ ಮಾತುಗಳಿಂದ ವಿವಾದಕ್ಕೆ ಸಿಲುಕಿದ್ದಾರೆ. ಅದೇ ವಿವಾದ ಅದ್ಯಾವುದೋ ಸ್ವರೂಪ ಪಡೆದುಕೊಂಡಿದ್ದೂ ಇದೆ. ಆದರೂ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮುನ್ನುಗ್ಗುತ್ತಾರೆ. ಈಗ 'ಕ್ರಾಂತಿ' ಪ್ರಚಾರದಲ್ಲಿರುವ ದಾಸ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡೋದು ಯಾಕೆ ಮುಖ್ಯ ಅನ್ನೋದನ್ನು ವಿವರಿಸಿದ್ದಾರೆ.
ಸಿನಿಮಾನಾ ದಿಢೀರನೇ ರಿಲೀಸ್ ಮಾಡಬಾರದು. ಕೆಲವು ದಿನಗಳ ಮುನ್ನ ಸಿನಿಮಾ ಬಿಡುಗಡೆ ದಿನವನ್ನು ಅನೌನ್ಸ್ ಮಾಡಬೇಕು. ಅದ್ಯಾಕೆ ಈ ಪದ್ಧತಿಯನ್ನು ಪಾಲಿಸಬೇಕು ಅನ್ನೋದಕ್ಕೆ ದರ್ಶನ್ 'ಅಣ್ಣಾವ್ರು' ಸಿನಿಮಾವನ್ನು ಉದಾಹರಣೆಯಾಗಿ ನೀಡುತ್ತಾರೆ. ಅದ್ಯಾಕೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಬೇಕು'
ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ದರ್ಶನ್ ಹಲವು ವಿಷಯಗಳನ್ನು ಮುಕ್ತವಾಗಿ ಚರ್ಚೆ ಮಾಡಿದ್ದಾರೆ. ಅದರಲ್ಲೂ ಸಿನಿಮಾ ರಿಲೀಸ್ ಡೇಟ್ ಅನ್ನು ಮೊದಲೇ ಯಾಕೆ ಅನೌನ್ಸ್ ಮಾಡಬೇಕು ಅನ್ನೋದನ್ನು ತಿಳಿಸಿದ್ದಾರೆ. ತಾವೇ ನಟಿಸಿದ ಮೂರು ಸಿನಿಮಾಗಳ ಬಿಡುಗಡೆಯನ್ನು ಉದಾರಣೆಯಾಗಿ ನೀಡಿದ್ದಾರೆ. ಈ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾಗಿದ್ದರಿಂದ ಆ ಸಿನಿಮಾ ಗತಿ ಏನಾಯ್ತು? ಸಿನಿಮಾ ಬಿಡುಗಡೆಯಲ್ಲಿ ನಿರ್ಮಾಪಕರ ಪಾಲು ಎಷ್ಟು? ಅನ್ನೋದನ್ನು ವಿವರಿಸಿದ್ದಾರೆ. ಅದರ ಸಾರಾಂಶ ಇಲ್ಲಿದೆ.

'ಕ್ರಾಂತಿ' ರಿಲೀಸ್ ಡೇಟ್ ಬೇಗ ಅನೌನ್ಸ್ ಮಾಡಿದ್ದೇಕೆ?
" ಕ್ರಾಂತಿ ಸಿನಿಮಾದ ಡೇಟ್ ಇಷ್ಟು ಬೇಗ ಅನೌನ್ಸ್ ಮಾಡಿದ್ದಕ್ಕೆ ಒಂದು ಕಾರಣ ಹೇಳುತ್ತೇನೆ. ನನ್ನ ಕೆಲವು ಸಿನಿಮಾಗಳ ನಿರ್ಮಾಪಕರಿಗೂ ಡೇಟ್ ಅನೌನ್ಸ್ ಮಾಡಿ ಅಂತ ಹೇಳುತ್ತಲೇ ಇರುತ್ತೇನೆ. ನಾವು ಜನವರಿ 26 ಅಂತ ಹೇಳಿದಾಗ, ಥಿಯೇಟರ್ನವರು ಫ್ರಿ ಆಗುತ್ತಾರೆ. ಆಗ ಬೇರೆ ಸಿನಿಮಾದವರು ಎರಡು ವಾರಕ್ಕೆ, ಮೂರು ವಾರಕ್ಕೆ ಬರೋದು ಮಾಡುತ್ತಾರೆ. ನನ್ನ ಬಳಿ ದೊಡ್ಡ ಸಿನಿಮಾ ಇದೆ. ನಾನು ನಾಳೆ ಡೇಟ್ ಅನೌನ್ಸ್ ಮಾಡ್ತೀನಿ ಅಂದ್ರೆ ಆಗಲ್ಲ. ಡೇಟ್ ಅನೌನ್ಸ್ ಮಾಡೋದ್ರಿಂದ ನಿನ್ನ ಅಭಿಮಾನಿಗಳು ಫಿಕ್ಸ್ ಆಗುತ್ತಾರೆ. ಜನವರಿ 26 ಸಿನಿಮಾ ಬರುತ್ತೆ ನೋಡಬೇಕು ಅಂದುಕೊಳ್ಳುತ್ತಾರೆ." ಎಂದಿದ್ದಾರೆ ದರ್ಶನ್.

'ಅಣ್ಣಾವ್ರು' ನಿರ್ಮಾಪಕರಿಗೆ ಎರಡು ಕೊಂಬು ಬಂದಿತ್ತು!
" ನನ್ನ ಪ್ರೀತಿಯ ರಾಮು ರೆಡಿಯಾಗಿ ಒಂದು ವರ್ಷ ಆಗಿತ್ತು. ನನ್ನ ಪ್ರೀತಿಯ ರಾಮು ರೆಡಿ ಆಯ್ತು. ಅದರ ಹಿಂದೆನೇ ಅಣ್ಣಾವ್ರು ರೆಡಿ ಮಾಡಿದ್ದೆ. ದಾಸನೂ ರೆಡಿ ಆಗಿ ಹೋಗಿತ್ತು. ಮೂರು ಸಿನಿಮಾನೂ ರೆಡಿಯಿತ್ತು. ನನ್ನ ಪ್ರೀತಿಯ ರಾಮು ಈ ವಾರ ಬಂತು. ನಾನು ರಮೇಶ್ ಯಾದವ್ ಅವರಿಗೆ ಸ್ವಲ್ಪ ಮುಂದಕ್ಕೆ ಹೋಗಿ ಅಂದೆ. ಅದಕ್ಕೆ ಅವರು ದರ್ಶನ್ ನಾನು ಮುಂದಕ್ಕೆ ಹೋಗುತ್ತೇನೆ. ಅಣ್ಣಾವ್ರು ಇನ್ನೂ ಮುಂದಕ್ಕೆ ಹೋಗುತ್ತಾರಾ ಅಂತ ಕೇಳಿದ್ರು. ದಯಾನಂದ್ ಅಂತ ಅಣ್ಣಾವ್ರಿಗೆ ಪ್ರಡ್ಯೂಸರ್. ಅವರಿಗೆ ಆಗ ಎರಡು ಕೊಂಬು ಬೇರೆ ಬೆಳೆದಿತ್ತು. ಯಾಕಂದ್ರೆ, ಅಂಬರೀಷಣ್ಣ ಇದ್ದಾರೆ. ದರ್ಶನ್ ಇದ್ದಾರೆ ಅಂತ. ನಮ್ದು ಹಿಂಗೆ ನಮ್ದು ಹಂಗೆ.. ನಾನು ಹಂಗೆಲ್ಲಾ ಮಾಡಲ್ಲ ಅಂತ ಹೇಳಿದ್ದರು. ರಮೇಶ್ ಯಾದವ್ ನನಗೆ ಒಂದು ವಾರ ಮುಖ್ಯ ಅಂದಿದ್ರು. ನನ್ನ ಪ್ರೀತಿಯ ರಾಮು ಈ ವಾರ. ದಾಸ ಮುಂದಿನ ವಾರ. ಅದರ ಮುಂದಿನ ವಾರ ಅಣ್ಣಾವ್ರು. ನನ್ನ ಪ್ರೀತಿಯ ರಾಮು, ಅಣ್ಣಾವ್ರು ಹೋಯ್ತು. ದಾಸ ಮುಂದಕ್ಕೆ ಹೊರಟುಹೋಯ್ತು. ಇದು ನಿರ್ಮಾಪಕರ ತಪ್ಪು. ಈ ಕಾರಣಕ್ಕೆ ಕ್ರಾಂತಿ ಸಿನಿಮಾ ಡೇಟ್ ಅನೌನ್ಸ್ ಮಾಡಿದ್ದೇವೆ." ಎನ್ನುತ್ತಾರೆ ದರ್ಶನ್.

ನನ್ನ ಪ್ರೀತಿಯ ರಾಮು ಓಡಲಿಲ್ಲ.
"ಮೆಜೆಸ್ಟಿಂಗ್ ಸಿನಿಮಾದಿಂದ ಹಿಡಿದು 'ಕ್ರಾಂತಿ'ವರೆಗೂ ನಾನು ಯಾವುದನ್ನೂ ಹುಡುಕಿಕೊಂಡು ಹೋಗಿಲ್ಲ. ಆದರೆ, ಬಂದಿದ್ದು ಯಾವುದನ್ನೂ ಬಿಟ್ಟಿಲ್ಲ. ನನ್ನ ಪ್ರೀತಿಯ ರಾಮು ಸಿನಿಮಾವನ್ನು ಎಲ್ಲರೂ ಟಿವಿಯಲ್ಲಿ ನೋಡಿ ಇಷ್ಟಪಟ್ಟಿದ್ದಾರೆ. ಥಿಯೇಟರ್ನಲ್ಲಿ ಯಾರು ಆ ಸಿನಿಮಾವನ್ನು ನೋಡಿಲ್ವಲ್ಲ. " ಎಂದು ಮತ್ತೆ ಅಂತಹ ಪಾತ್ರ ಮಾಡೋದು ಅನುಮಾನ ಅನ್ನೋ ಸುಳಿವು ನೀಡಿದ್ದಾರೆ.


Click it and Unblock the Notifications











