ತೆಲುಗಿಗೆ ರೀಮೇಕ್ ಆಗಲಿದೆ ದಯಾಳ್ ಪದ್ಮನಾಭನ್ 'ಆ ಕರಾಳ ರಾತ್ರಿ': ಈ ಮೂವರಲ್ಲಿ ನಾಯಕಿ ಯಾರು?
ದಯಾಳ್ ಪದ್ಮನಾಭನ್ ನಿರ್ದೇಶನದ 'ಆ ಕರಾಳ ರಾತ್ರಿ' 2018ರಲ್ಲಿ ಬಿಡುಗಡೆಯಾಗಿತ್ತು. ಅನುಪಮಾ ಗೌಡ, ಜಯರಾಂ ಕಾರ್ತಿಕ್, ರಂಗಾಯಣ ರಘು, ವೀಣಾ ಸುಂದರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಸಿನಿಮಾ ಕಮರ್ಷಿಯಲ್ಲಾಗಿ ದೊಡ್ಡ ಯಶಸ್ಸು ಪಡೆದುಕೊಳ್ಳದೆ ಇದ್ದರೂ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನಿಮಾ ಈಗ ಟಾಲಿವುಡ್ ಪ್ರವೇಶಿಸುತ್ತಿದೆ.
ನಿರ್ದೇಶನದ ದಯಾಳ್ ಪದ್ಮನಾಭನ್ ಅವರೇ ತೆಲುಗಿನಲ್ಲಿಯೂ ಆಕ್ಷನ್ ಕಟ್ ಹೇಳಲಿದ್ದಾರೆ. ತೆಲುಗಿನಲ್ಲಿ ಖ್ಯಾತನಾಮರ ತಾರಾಬಳಗವನ್ನು ಇರಿಸಿಕೊಂಡು ಸಿನಿಮಾ ಮಾಡಲು ಅವರು ಬಯಸಿದ್ದಾರೆ. ಅದಕ್ಕಾಗಿ ಹೆಸರಾಂತ ನಟ, ನಟಿಯರ ಮುಂದೆ ಆಫರ್ ಇರಿಸಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆಗಳು ನಡೆದಿವೆ. ಲಾಕ್ಡೌನ್ ಮುಗಿದ ಬಳಿಕ ಚಿತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಚಾಲನೆ ಸಿಗುವ ಸಾಧ್ಯತೆಗಳಿವೆ. ಮುಂದೆ ಓದಿ...

ಅಲ್ಲು ಅರವಿಂದ್ ನಿರ್ಮಾಣ
ತೆಲುಗಿನ ಪ್ರಸಿದ್ಧ ನಿರ್ಮಾಪಕ ಅಲ್ಲು ಅರವಿಂದ್ 'ಆ ಕರಾಳ ರಾತ್ರಿ'ಯ ತೆಲುಗು ಅವತರಣಿಕೆಯನ್ನು ನಿರ್ಮಿಸುತ್ತಿದ್ದಾರೆ. ಗೀತಾ ಆರ್ಟ್ಸ್ ಸಂಸ್ಥೆ ಮೂಲಕ ಈಗಾಗಲೇ ಅನೇಕ ಹಿಟ್ ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ. ಮಗ ಅಲ್ಲು ಅರ್ಜುನ್ ಜತೆ ಸೇರಿ 'ಆಹಾ' ಎಂಬ ಓಟಿಟಿ ಆರಂಭಿಸಿದ್ದಾರೆ. ಅದಕ್ಕಾಗಿ ಸಿನಿಮಾ ಮತ್ತು ವೆಬ್ ಸೀರೀಸ್ಗಳನ್ನು ಕೂಡ ನಿರ್ಮಿಸುತ್ತಿದ್ದಾರೆ.

ಅನುಪಮಾ ಗೌಡ ಪಾತ್ರಕ್ಕೆ ಯಾರು?
ಪರಿಪಕ್ವ ಅಭಿನಯ ಬಯಸುವ ಪಾತ್ರವನ್ನು ಕನ್ನಡದಲ್ಲಿ ಅನುಪಮಾ ಗೌಡ ಸಮರ್ಥವಾಗಿ ನಿರ್ವಹಿಸಿದ್ದರು. ಅವರ ಪಾತ್ರಕ್ಕೆ ಯಾವ ನಟಿ ಸೂಕ್ತ ಎಂಬ ಲೆಕ್ಕಾಚಾರ ಹಾಕಿರುವ ದಯಾಳ್, ಮೂವರು ನಾಯಕಿಯರಿಗೆ ಆಫರ್ ನೀಡಿದ್ದಾರಂತೆ. ಅಮಲಾ ಪೌಲ್, ಶ್ರುತಿ ಹಾಸನ್ ಮತ್ತು ತ್ರಿಷಾ ಕೃಷ್ಣನ್ ಮೂವರಲ್ಲಿ ಒಬ್ಬರು ನಾಯಕಿಯಾಗುವ ಸಾಧ್ಯತೆ ಇದೆ.

ಇನ್ನೆರಡು ಪ್ರಮುಖ ಪಾತ್ರಗಳು
ವೀಣಾ ಸುಂದರ್ ನಟಿಸಿದ್ದ ಪಾತ್ರಕ್ಕೆ ರಾಧಿಕಾ ಶರತ್ ಕುಮಾರ್ ಮತ್ತು ರಂಗಾಯಣ ರಘು ನಿಭಾಯಿಸಿದ್ದ ಪಾತ್ರಕ್ಕೆ ಸಾಯಿಕುಮಾರ್ ಅವರನ್ನು ಸಂಪರ್ಕಿಸಲಾಗಿತ್ತು. ಇಬ್ಬರೂ ಕಥೆಯನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಈ ಎರಡು ಪಾತ್ರಕ್ಕೆ ಅವರೇ ಪಕ್ಕಾ ಆಗುತ್ತಾರೆ ಎನ್ನಲಾಗಿದೆ. ಇನ್ನು ಜೆ.ಕೆ. ನಿಭಾಯಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಯಾರು ನಿರ್ವಹಿಸಲಿದ್ದಾರೆ ಎನ್ನುವ ಕುತೂಹಲ ಉಳಿದಿದೆ.

ಇನ್ನೂ ಎರಡು ಸ್ಕ್ರಿಪ್ಟ್ ರೆಡಿ
ದಯಾಳ್ ನಿರ್ದೇಶನದ 'ಒಂಬತ್ತನೇ ದಿಕ್ಕು' ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಲಾಕ್ಡೌನ್ಗೂ ಮೊದಲೇ ಸೆನ್ಸಾರ್ಗೆ ಕಳುಹಿಸಲಾಗಿತ್ತು. ಆದರೆ ಸೆನ್ಸಾರ್ ಮಂಡಳಿ ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿಲ್ಲ. ಈ ಬಿಡುವಿನ ಅವಧಿಯಲ್ಲಿ ಅವರು 'ಮಾರುತಿ ನಗರ ಪೊಲೀಸ್ ಸ್ಟೇಷನ್', 'ಮಾಯಾವತಿ' ಸ್ಕ್ರಿಪ್ಟ್ಗಳನ್ನು ಬರೆದಿದ್ದಾರೆ. ಲಾಕ್ಡೌನ್ ಮುಗಿದ ಬಳಿಕ ಇವುಗಳು ಸಿನಿಮಾ ರೂಪಕ್ಕೆ ಇಳಿಯಲಿವೆ.


Click it and Unblock the Notifications











