'ಧರಣಿ ಮಂಡಲ ಮಧ್ಯದೊಳಗೆ' ಮೆಚ್ಚಿದ ಡಾಲಿ: 'ಗುಲ್ಟು' ಸಿನಿಮಾ ನವೀನ್ ಫ್ಯಾನ್ ಎಂದ ಶ್ರುತಿ ಹರಿಹರನ್!
ಸ್ಯಾಂಡಲ್ವುಡ್ ಈಗ ಕಂಟೆಂಟ್ ಬೇಸ್ಡ್ ಸಿನಿಮಾವನ್ನು ಹೆಚ್ಚು ನಿರ್ಮಾಣ ಮಾಡುತ್ತಿದೆ. ಹೊಸಬರು ಇರಲಿ, ಹಳೆಬರೇ ಇರಲಿ. ಕಥೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದೆ. ಇದು ಉತ್ತಮ ಬೆಳವಣಿಗೆ ಎನಿಸಿದರೂ, ಪ್ರೇಕ್ಷಕರು ಮೆಚ್ಚಿದಾಗಲೇ ಅದು ಯಶಸ್ಸಿನ ಹಾದಿ ಹಿಡಿಯುತ್ತೆ.
ಸದ್ಯ ಯುವ ಪ್ರತಿಭೆಗಳೇ ಸೇರಿ ನಿರ್ಮಾಣ ಮಾಡಿರುವ ಸಿನಿಮಾ 'ಧರಣಿ ಮಂಡಲ ಮಧ್ಯದೊಳಗೆ'. ಕಳೆದ ವಾರದ ಬಿಡುಗಡೆಯಾದ ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಯಾಂಡಲ್ವುಡ್ನ ಸೆಲೆಬ್ರೆಟಿಗಳು ಕೂಡ ಈ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಡಾಲಿ ಧನಂಜಯ್ ಹಾಗೂ ನಟಿ ಶ್ರುತಿ ಹರಿಹರನ್ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾವನ್ನು ಶ್ರೀಧರ್ ಶಿಕಾರಿಪುರ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ ಕೂಡ ಹೌದು. ಈ ಸಿನಿಮಾ ಈಗ ಎಲ್ಲೆಡೆ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ ನಟ ಡಾಲಿ ಧನಂಜಯ್ ಹಾಗೂ ನಟಿ ಶ್ರುತಿ ಹರಿಹರನ್ ಕೂಡ ಸಿನಿಮಾ ನೋಡಿ ಥ್ರಿಲ್ ಆಗಿದ್ದಾರೆ.

'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ನಟಿ ಶ್ರುತಿ ಹರಿಹರನ್ ಸಿಕ್ಕಾಪಟ್ಟೆ ಇಷ್ಟ ಆಗಿದೆ. " ಟೈಟಲ್ ಕೇಳಿದಾಗಲೇ ಸಿನಿಮಾದಲ್ಲಿ ಏನಿರಬಹುದು ಎಂಬ ಕುತೂಹಲವಿತ್ತು. ಆದರೆ, ಸಿನಿಮಾ ನೋಡಿದ ಮೇಲೆ ಇಷ್ಟೊಂದು ಇಷ್ಟವಾಗುತ್ತೆ ಎಂದು ನಿರೀಕ್ಷೆಯೇ ಮಾಡಿರಲಿಲ್ಲ. ಸ್ಕ್ರೀನ್ ಪ್ಲೇ, ಕಲಾವಿದರ ಅಭಿನಯ ತುಂಬಾ ಅದ್ಭುತವಾಗಿದೆ. ಪ್ರತಿ ಪಾತ್ರಗಳು ನಮಗೆ ಹತ್ತಿರ ಅನ್ನಿಸುತ್ತೆ. ನಿರ್ದೇಶಕರು ಸಿನಿಮಾ ಹೆಣೆದ ರೀತಿ, ಬರವಣಿಗೆ ತುಂಬಾ ಚೆನ್ನಾಗಿದೆ. ಪ್ರತಿ ಪಾತ್ರಕ್ಕೂ ಕಥೆಯಲ್ಲಿ ನ್ಯಾಯ ಒದಗಿಸಿದ್ದಾರೆ. ನವೀನ್ ಶಂಕರ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ನಿರ್ಮಾಪಕ ಓಂಕಾರ್ ಕೂಡ ಅದ್ಭುತವಾಗಿ ನಟಿಸಿದ್ದಾರೆ. 'ಗುಳ್ಟು' ಚಿತ್ರದಿಂದಲೇ ನಾನು ನವೀನ್ ಶಂಕರ್ ಫ್ಯಾನ್. ನವೀನ್ ಕನ್ನಡ ಇಂಡಸ್ಟ್ರಿಯ ಅದ್ಭುತ ನಟ." ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸದಾ ವಿಭಿನ್ನ ಕಥೆಗಳ ಹುಡುಕಾಟದಲ್ಲಿ ಇರುವ ಡಾಲಿ ಧನಂಜಯ್ ಕೂಡ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಈ ಸಿನಿಮಾ ಬಗ್ಗೆ ಎಷ್ಟು ಮಾತನಾಡಿದ್ರು ಕಡಿಮೆಯೇ. ಸಿನಿಮಾದ ಪ್ರತಿಕ್ಷಣನೂ ತುಂಬಾ ಚೆನ್ನಾಗಿತ್ತು. ರೈಟಿಂಗ್, ಕ್ಯಾಮೆರಾ ವರ್ಕ್ ಎಲ್ಲವೂ ಅದ್ಭುತ. ನಿರ್ದೇಶಕ ಶ್ರೀಧರ್ ಶಿಕಾರಿಪುರ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಗಿಫ್ಟ್. ಪ್ರತಿಯೊಬ್ಬ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದು ಗೆಲ್ಲಬೇಕಾಗಿರೋ ಸಿನಿಮಾ. ಈ ಸಿನಿಮಾ ನೋಡಿ ಮೆಚ್ಚಿ ಒಂದು ಚಾನೆಲ್ ದೊಡ್ಡ ಆಫರ್ ಕೊಟ್ಟಿದೆ. ನಾಳೆ ಟಿವಿಯಲ್ಲೋ, ಓಟಿಟಿಯಲ್ಲೋ ಬಿಡುಗಡೆಯಾದ ಮೇಲೆ ನೋಡಿ ಚಿತ್ರಮಂದಿರದಲ್ಲಿ ಸಿನಿಮಾ ಮಿಸ್ ಮಾಡಿಕೊಂಡ್ವಿ ಅನ್ನೋದಕ್ಕಿಂತ ಈಗಲೇ ಸಿನಿಮಾ ನೋಡಿ" ಎಂದಿದ್ದಾರೆ ಧನಂಜಯ್.

'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಡಿಸೆಂಬರ್ 2ರಂದು ರಿಲೀಸ್ ಆಗಿದೆ. ನವೀನ್ ಶಂಕರ್ ಜೊತೆ ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಒಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ನಟಿಸಿದ್ದಾರೆ.


Click it and Unblock the Notifications











