"ನನ್ನ ತಾಯಿ ಏನು ಬೇಡಿಕೊಂಡಿದ್ಲೋ ಗೊತ್ತಿಲ್ಲ.. ಬಾಲಯ್ಯ ಜೊತೆ ನಟಿಸೋ ಅವಕಾಶ ಸಿಕ್ತು" ದುನಿಯಾ ವಿಜಯ್!
'ಸಲಗ' ಸಿನಿಮಾ ಬಳಿಕ ದುನಿಯಾ ವಿಜಯ್ ಟಾಲಿವುಡ್ ಸಿನಿಮಾ ನಟಿಸುತ್ತಿರೋದು ಗೊತ್ತೇ ಇದೆ. ಲೆಜೆಂಟ್ ಬಾಲಕೃಷ್ಣ ನಟಿಸಿದ 107ನೇ ಸಿನಿಮಾ 'ವೀರ ಸಿಂಹ ರೆಡ್ಡಿ'ಯಲ್ಲಿ ಖಳನಾಯಕನಾಗಿ ನಟಿಸೋಕೆ ಅವಕಾಶ ಸಿಕ್ಕಿತ್ತು. ಅದೇ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ.
ಕಳೆದ ಕೆಲವು ದಿನಗಳಿಂದ ದುನಿಯಾ ವಿಜಯ್ ಇದೇ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಮಾಧ್ಯಮಗಳಲ್ಲಿ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ತಿಂಗಳು ಹುಟ್ಟುಹಬ್ಬವಿರೋದ್ರಿಂದ ವಿಜಯ್ ತಂದೆ ತಾಯಿ ಪುಣ್ಯಭೂಮಿ ಬಳಿಕ ಕಾಣಿಸಿಕೊಂಡಿದ್ದರು. ಈ ವೇಳೆ ಬಾಲಯ್ಯ ಜೊತೆ ನಟಿಸೋಕೆ ಸಿಕ್ಕ ಅವಕಾಶವನ್ನು ಬಿಚ್ಚಿಟ್ಟಿದ್ದಾರೆ.
'ಸಲಗ' ಬಳಿಕ ದುನಿಯಾ ವಿಜಯ್ಗೆ ಲೆಜೆಂಡ್ ಬಾಲಕೃಷ್ಣ ಸಿನಿಮಾ 'ವೀರ ಸಿಂಹ ರೆಡ್ಡಿ'ಯಲ್ಲಿ ವಿಲನ್ ರೋಲ್ಗೆ ಅವಕಾಶ ಸಿಕ್ಕಿತ್ತು. ಇಷ್ಟು ದೊಡ್ಡ ಅವಕಾಶ ಸಿಗುವುದಕ್ಕೆ ಅಮ್ಮ ಹಾರೈಕೆನೇ ಕಾರಣವೆಂದು ದುನಿಯಾ ಹೇಳಿದ್ದಾರೆ. ಅಷ್ಟಕ್ಕೂ ತಾಯಿ ಬಗ್ಗೆ ವಿಜಯ್ ಏನಂದಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ನನ್ನ ತಾಯಿ ಏನು ಬೇಡಿಕೊಂಡಿದ್ದಳೋ ಗೊತ್ತಿಲ್ಲ'
"ಬಾಲಯ್ಯ ಎಷ್ಟು ದೊಡ್ಡ ನಟ ಗೊತ್ತಾ? ಅದು ಎಲ್ಲರಿಗೂ ಗೊತ್ತು. ಇಡೀ ಪ್ರಪಂಚಕ್ಕೇ ಗೊತ್ತು. ಅವರ ತಂದೆ ಎನ್ಟಿಆರ್ ಸರ್.. ಅವರೆಲ್ಲ ಎಷ್ಟು ದೊಡ್ಡ ನಟರು. ನಾವೆಲ್ಲ ತುಂಬಾ ಚಿಕ್ಕವರು. ಅಂತಹ ಅವಕಾಶ ಸಿಕ್ಕಾಗಬೇಡ ಅನ್ನಬಾರದು ಅಂತ ನನಗೆ ಅನಿಸಿತ್ತು. ಅಂತಹ ಮಹಾನ್ ನಟನ ಮುಂದೆ ವಿಲನ್ ಕ್ಯಾರೆಕ್ಟರ್ ಮಾಡಿಸುತ್ತಾರೆ ಅಂದ್ರೆ, ನನ್ನ ತಾಯಿ ಏನು ಬೇಡಿಕೊಂಡಿದ್ದಳೋ ಗೊತ್ತಿಲ್ಲ. ನಾನು ನಿಜವಾಗಲೂ ತುಂಬಾನೇ ಖುಷಿಯಾಗಿದ್ದೇನೆ." ಎಂದು ದುನಿಯಾ ವಿಜಯ್ ಹೇಳಿದ್ದಾರೆ.

'ಅಮ್ಮ ತೀರಿಕೊಂಡ ಮೇಲೆ ಈ ಸಿನಿಮಾ ಸಿಕ್ತು'
"ನಮ್ಮ ಅಮ್ಮ ಎಷ್ಟು ಬೇಡಿಕೊಂಡ್ರೋ ಗೊತ್ತಿಲ್ಲ. ನನಗೆ ಹಂಗೆ ಒಳ್ಳೆಯದಾಯ್ತು. ಅವರಿಗೆ ಇದೆಲ್ಲ ಗೊತ್ತೇ ಇಲ್ಲ. ಅವರು ತೀರಿಕೊಂಡು ಬಿಟ್ರು. ಆಮೇಲೆ ಈ ಎಲ್ಲಾ ಬೆಳವಣಿಗೆಗಳು ಆಯ್ತು. ನನ್ನ ತಾಯಿ ಬಗ್ಗೆ ಅದಕ್ಕೆ ಹೇಳ್ತಾ ಇರ್ತಿನಿ. ನಾನು ನಿಜವಾಗಿಯೂ ನೋಡಿದ ದೇವರು ಅವರು." ಎನ್ನುತ್ತಾರೆ ದುನಿಯಾ ವಿಜಯ್.

'ಜೈ ಬಾಲಯ್ಯ. ಜೈ ಜೈ ಬಾಲಯ್ಯ '
" ಒಂದು ಸಣ್ಣ ಮಗುವಿನಿಂದ ಹಿಡಿದು ವಯಸ್ಸಾಗಿರುವವರೆಗೂ ಜೈ ಬಾಲಯ್ಯ. ಜೈ ಜೈ ಬಾಲಯ್ಯ ಅಂತಾರೆ. ನಿಮಗೆ ಗೊತ್ತಾಗಲ್ಲ. ಆ ಸ್ಪಾಟ್ನಲ್ಲಿ ಇದ್ದರೆ ಒಂಥರಾ ರೊಮಾಂಚನ ಆದಂಗೆ ಆಗುತ್ತೆ. ಬಾಲಯ್ಯ ತುಂಬಾನೇ ದೊಡ್ಡ ಲೆಜೆಂಡ್ ಅವರು. ಹಾಗಾಗಿ ಅವರ ಮುಂದೆ ನಾವು ಯಾವತ್ತಿದ್ದರೂ ಚಿಕ್ಕವರೇ. ಹಂಗಿರೋದೇ ವಾಸಿ." ಎಂದು ಬಾಲಕೃಷ್ಣ ಅವರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಹೇಳಿದ್ದಾರೆ.

'ಜೈ ಕನ್ನಡ ಮಾತೆ ಅಂತೀನಿ'
"ನಾನು ಹುಟ್ಟಿದ್ದು ಕರ್ನಾಟಕದಲ್ಲಿ.. ಕನ್ನಡ ಸಿನಿಮಾ ಮಾಡಿದೆ. ಕನ್ನಡ ಸಿನಿಮಾ ಇವತ್ತು ಭಾರತದಾದ್ಯಂತ ಗೊತ್ತಾಗಿದೆ. ಅದು ಖುಷಿ ವಿಷಯ ಇವತ್ತು. ನನಗೆ ನಾನೊಬ್ಬ ಕನ್ನಡಿಗ ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆಯಿದೆ. ಯಾವುದೇ ಭಾಷೆಯ ನೆಲೆದ ಮೇಲೆ ನಿಂತಲೂ ಜೈ ಕನ್ನಡ ಮಾತೆ ಅಂತೀನಿ. ಕನ್ನಡ ಮಾತೆ ನನ್ನ ತಾಯಿಗೆ ಸಮ. ನಾನು ತೆಲುಗು, ತಮಿಳು ಹಾಗೂ ಉರ್ದು ಮಾತಾಡುವ ಸ್ನೇಹಿತರ ಜೊತೆನೇ ನಾನು ಬೆಳೆದಿದ್ದು, ಕರ್ನಾಟಕದಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರಂತೆಯೇ ಇದ್ದೇವೆ. ಅಲ್ಲಿ ಹೋದ ತಕ್ಷಣ ಕೈ ಕರ್ನಾಟಕ ಮಾತೆ ಅಂತ ಹೇಳ್ಬೇಕು ಅನಿಸಿತು." ಎನ್ನುತ್ತಾರೆ ದುನಿಯಾ ವಿಜಯ್.


Click it and Unblock the Notifications











