'ಕಾಗೆ ಬಂಗಾರ' ಹೈಜಾಕ್ ಆಯ್ತಾ? ಸೂರಿ ಸಿನಿಮಾ ಶೀರ್ಷಿಕೆ ಬೇರೊಬ್ಬರ ಕೈಗೆ?
'ದುನಿಯಾ' ಸೂರಿ ನಿರ್ದೇಶನದಲ್ಲಿ 'ಕಾಗೆ ಬಂಗಾರ' ಸಿನಿಮಾವಾಗಲಿದೆ ಎಂಬ ಅಧಿಕೃತ ಘೋಷಣೆಯಾಗಿ ಐದು ವರ್ಷಗಳಾಗುತ್ತಾ ಬಂದಿದೆ. ತಮ್ಮ ವಿಭಿನ್ನ ಪ್ರಯೋಗಾತ್ಮಕ ಸಿನಿಮಾಗಳ ಮಾಲಿಕೆಯಲ್ಲಿ ಮೊದಲನೆಯ ಕುಡಿಯನ್ನು 'ಕೆಂಡಸಂಪಿಗೆ' ಮೂಲಕ ಹೊರತಂದಿದ್ದ ಸೂರಿ, ಚಿತ್ರದ ಅಂತ್ಯದಲ್ಲಿ ಮುಂದುವರಿದ ಕಥಾನಕದ ಭಾಗವಾಗಿ 'ಕಾಗೆ ಬಂಗಾರ'ದ ಸುಳಿವು ನೀಡಿದ್ದರು.
'ಕೆಂಡಸಂಪಿಗೆ' ಬಳಿಕ ಸೂರಿ 'ಕಾಗೆ ಬಂಗಾರ'ವನ್ನು ಸಂಪೂರ್ಣವಾಗಿ ಮರೆತವರಂತೆ ಮನರಂಜನಾತ್ಮಕ ಸಿನಿಮಾಗಳ ಹಾದಿಗೆ ಮರಳಿದ್ದರು. ಆದರೆ 'ಕೆಂಡಸಂಪಿಗೆ'ಯ ಪರಿಮಳಕ್ಕೆ ಮಾರುಹೋಗಿದ್ದ ಸಿನಿ ರಸಿಕರು ಅವರಿಗೆ 'ಕಾಗೆ ಬಂಗಾರ'ದ ನೆನಪನ್ನು ಆಗಾಗ ಮಾಡಿಸುತ್ತಿದ್ದರು. ಸೂರಿ ಕೂಡ, 'ಅದೊಂದು ಕೆಲಸ ಇದೆ. ಬೇಗ ಮಾಡುತ್ತೇನೆ' ಎಂದು ಮೈಕೊಡವಿ ಮತ್ತೆ ಸುಮ್ಮನಾಗುತ್ತಿದ್ದರು. ಇತ್ತೀಚೆಗೆ ತೆರೆ ಕಂಡ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಮತ್ತೆ 'ಕಾಗೆ ಬಂಗಾರ'ದ ಆಸೆ ಹುಟ್ಟಿಸುವ ಹೊಳಪು ತೋರಿಸಿದ್ದರು. ಆದರೆ ಅವರ 'ಕಾಗೆ ಬಂಗಾರ'ಕ್ಕೂ ಮುನ್ನವೇ ಮತ್ತೊಂದು 'ಕಾಗೆ ಬಂಗಾರ' ಶುರುವಾಗಿರುವುದು ಗೊಂದಲ ಮೂಡಿಸಿದೆ.

ಇದು ದಿನೇಶ್ ಗೌಡರ 'ಕಾಗೆ ಬಂಗಾರ'
ಇದೇ ಶುಕ್ರವಾರ 'ಕಾಗೆ ಬಂಗಾರ'ದ ಮುಹೂರ್ತ ವಿಜಯಪುರದ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿದೆ. ಆದರೆ ಇದು ಸೂರಿ ನಿರ್ದೇಶನದ 'ಕಾಗೆ ಬಂಗಾರ' ಚಿತ್ರವಲ್ಲ. ದಿನೇಶ್ ಗೌಡ ಎಂಬುವವರ ನಿರ್ದೇಶನದ ಸಿನಿಮಾ ಇದು.

ಶೀರ್ಷಿಕೆ ಕೈತಪ್ಪಿತೇ?
ರಾಜಶೇಖರ್ ಮತ್ತು ನಟರಾಜು ಎಂಬುವವರು ಈ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಮುನೇಗೌಡ್ರು ಮತ್ತು ಕೃಷ್ಣಪ್ಪ ಬಿವಿಕೆ ಎಂಬುವವರು ನಿರ್ಮಾಪಕರಾಗಿದ್ದಾರೆ. 'ಕಾಗೆ ಬಂಗಾರ' ಚಿತ್ರಕ್ಕೆ ಇನ್ಸೈಡ್ ಫೀಲಿಂಗ್ಸ್ ಎಂಬ ಸಬ್ ಟೈಟಲ್ ನೀಡಲಾಗಿದೆ. ಶೀರ್ಷಿಕೆ ರಿಜಿಸ್ಟರ್ ಮಾಡಿಸಿದ್ದ ಬಳಿಕ ಅವಧಿ ಮುಗಿದಿದ್ದರೆ ಅದು ಬೇರೊಬ್ಬರ ಪಾಲಾಗುತ್ತದೆ. 'ಕಾಗೆ ಬಂಗಾರ' ಕೂಡ ಹೀಗೆಯೇ ಆಗಿರಬಹುದು.

'ಕಾಗೆ ಬಂಗಾರ' ಕಥೆ ಅಪ್ರಸ್ತುತ ಎಂದಿದ್ದ ಸೂರಿ
ದುನಿಯಾ ಸೂರಿ 2016ರಲ್ಲಿ ಕಾಗೆ ಬಂಗಾರ ಚಿತ್ರ ತೆರೆಗೆ ಬರುತ್ತದೆ ಎಂದು ತಿಳಿಸಿದ್ದರು. ಬಳಿಕ ಒಂದೊಂದೇ ಕಮರ್ಷಿಯಲ್ ಸಿನಿಮಾಗಳಲ್ಲಿ ಮಗ್ನರಾಗಿದ್ದರು. 'ಟಗರು' ಚಿತ್ರದ ಬಳಿಕ ಮತ್ತೆ 'ಕಾಗೆ ಬಂಗಾರ' ಶುರುವಾಗುತ್ತದೆ ಎನ್ನಲಾಗಿತ್ತು. ಬಳಿಕ ಡಿಮಾನೆಟೈಸೇಷನ್ ಕಾರಣದಿಂದ 'ಕಾಗೆ ಬಂಗಾರ'ದ ಕಥೆ ಅಪ್ರಸ್ತುತ ಎನಿಸಲಿದೆ. ಹೀಗಾಗಿ 'ಕಾಗೆ ಬಂಗಾರ' ಮತ್ತು ಅದರ ನಂತರದ 'ಬ್ಲ್ಯಾಕ್ ಮ್ಯಾಜಿಕ್' ಎರಡೂ ಚಿತ್ರಗಳನ್ನು ಮಾಡುವುದಿಲ್ಲ ಎಂದೇ ಒಮ್ಮೆ ಸೂರಿ ತಿಳಿಸಿದ್ದರು.

ಪಾಪ್ ಕಾರ್ನ್ನಲ್ಲಿ 'ಕಾಗೆ ಬಂಗಾರ'ದ ಹೊಳಪು
ಹೀಗೆ ಪದೇ ಪದೇ ಹೇಳಿಕೆ ಬದಲಿಸುತ್ತಿದ್ದ ಸೂರಿ, 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದ ವೇಳೆ ಪುನಃ 'ಕಾಗೆ ಬಂಗಾರ' ಚಿತ್ರವನ್ನು ಕೈಗೆತ್ತಿಕೊಳ್ಳುವ ಸುಳಿವು ನೀಡಿದ್ದರು. ಪ್ರಶಾಂತ್ ಸಿದ್ಧಿ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಬೇಕಿತ್ತು. 'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರ ನೋಡಿದ ಅನೇಕರು ಅದರಲ್ಲಿ ಸೂರಿ 'ಕಾಗೆ ಬಂಗಾರ'ದ ಛಾಯೆ ನೀಡಿದ್ದಾರೆ. ಹೀಗಾಗಿ ಅವರು ಈ ಸಿನಿಮಾ ಮಾಡುತ್ತಾರೆ ಎಂಬ ನಿರೀಕ್ಷೆಗಳನ್ನು ಹಂಚಿಕೊಂಡಿದ್ದರು.
ಊರಿಗೊಂದು ಮಂಡಳಿಯಾದರೆ...
ಈ ನಿರೀಕ್ಷೆಗಳ ನಡುವೆಯೇ ದಿನೇಶ್ ಗೌಡ ಎಂಬ ನಿರ್ದೇಶಕರ 'ಕಾಗೆ ಬಂಗಾರ' ಸೆಟ್ಟೇರುತ್ತಿದೆ. ಯೋಗರಾಜ್ ಭಟ್, ಸೂರಿ ಮುಂತಾದ ನಿರ್ದೇಶಕರ ಜತೆಗೆ ಕೆಲಸ ಮಾಡಿರುವ, ನಿರ್ದೇಶಕ ವೀರು ಮಲ್ಲಣ್ಣ 'ಹೊಸ ಕಾಗೆ ಬಂಗಾರ'ದ ಪೋಸ್ಟರ್ ಕಂಡು ಅಚ್ಚರಿಪಟ್ಟುಕೊಂಡಿದ್ದಾರೆ. 'ಒಂದು ಭಾಷೆಯ ಚಿತ್ರರಂಗಕ್ಕೆ ಒಂದೇ ಚಲನಚಿತ್ರ ಮಂಡಳಿ ಇರಬೇಕು. ಏರಿಯಾಗೊಂದು ಊರಿಗೊಂದು ಚಲನಚಿತ್ರ ಮಂಡಳಿಗಳಾದರೆ ಹಿಂಗೆ ಆಗೋದು.. ಮೊನ್ನೆವರೆಗೆ 'ಕಾಗೆಬಂಗಾರ' ಸೂರಿ ಅವರ ಸಿನೆಮಾ ಆಗ್ತದೆ ಅನ್ಕೊಂಡಿದ್ವಿ.. ಈಗ 'ದಿನೇಶ್ ಗೌಡ್ರ' ಸಿನೆಮಾ ಆಗ್ತಿದೆ.. ಏನೋಪಾ ಒಂದೂ ಅರ್ಥವಾಗೊವಲ್ದು..' ಎಂದು ವೀರು ಹೇಳಿದ್ದಾರೆ.

ಸೂರಿಯೇ ಉತ್ತರ ನೀಡಬೇಕು
ಹಾಗಾದರೆ ಸೂರಿ ಅವರ 'ಕಾಗೆ ಬಂಗಾರ'ದ ಕಥೆ ಏನಾಗಲಿದೆ? ತಮ್ಮ ಸಿನಿಮಾವನ್ನು ಐದು ವರ್ಷಗಳಿಂದ ಮುಂದೂಡುತ್ತಲೇ ಬರುತ್ತಿರುವುದರಿಂದ ಉಂಟಾಗಿರುವ ಈ ಸಮಸ್ಯೆಗೆ ಸೂರಿ ಅವರೇ ಪರಿಹಾರ ನೀಡುತ್ತಾರೆಯೇ? ಎಂಬ ಪ್ರಶ್ನೆಗಳು ಮೂಡಿವೆ. ತಮ್ಮ ಕಮರ್ಷಿಯಲ್ ಸಿನಿಮಾಗಳ ಅನಿವಾರ್ಯತೆಗಳ ನಡುವೆ ಭಿನ್ನ ಕಥಾಹಂದರ ಹಾಗೂ ನಿರೂಪಣೆಯ ಸಿನಿಮಾ ಮಾಡುವ ಕನಸನ್ನು ಸೂರಿ ಹಲವು ಬಾರಿ ಹಂಚಿಕೊಂಡಿದ್ದಾರೆ. ಅವರು ಕನಸುಗಳನ್ನು ಕಂಡ ಪ್ರೇಕ್ಷಕರು 'ಕೆಂಡಸಂಪಿಗೆ'ಯಿಂದಾಗಿ 'ಕಾಗೆಬಂಗಾರ'ದ ಮೇಲೆ ತಾವೂ ಕನಸು ಕಟ್ಟಿಕೊಂಡಿದ್ದಾರೆ. ಆ ಕನಸಿಗೆ 'ಪಾಪ್ ಕಾರ್ನ್...' ಚಿತ್ರದ ದೃಶ್ಯಗಳು ನೀರು ಗೊಬ್ಬರ ಹಾಕಿವೆ. ಪ್ರೇಕ್ಷಕರ ಪ್ರಶ್ನೆಗಳಿಗೆ ಸೂರಿ ಅವರೇ ಉತ್ತರಿಸಬೇಕು.


Click it and Unblock the Notifications











