ರಾಜ್ ಬ್ಯಾನರ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿಯರು
ಡಾ. ರಾಜಕುಮಾರ್ ಒಡೆತನದ ವಜ್ರೇಶ್ವರಿ ಕಂಬೈನ್ಸ್ ಮತ್ತು ಪೂರ್ಣಿಮಾ ಎಂಟರ್ಪ್ರೈಸಸ್ ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರ ನಿರ್ಮಾಣ ಸಂಸ್ಥೆಗಳು. ಈ ಚಿತ್ರ ಸಂಸ್ಥೆಯೊಂದಿಗೆ ಗುರುತಿಸಿಕೊಳ್ಳಬೇಕೆನ್ನುವುದು ಕನ್ನಡದ ಯಾವುದೇ ಕಲಾವಿದರು ಬಯಸುವುದು ಸಹಜ.
ಈ ಸಂಸ್ಥೆಯ ನಿರ್ಮಾಣದ ಚಿತ್ರದ ಮೂಲಕವೇ ಸಿನಿಮಾ ವೃತ್ತಿ ಜೀವನ ಆರಂಭಿಸಬೇಕೆಂದು ಬಂದಂತ ಇತರ ಅವಕಾಶಗಳನ್ನು ಬಿಟ್ಟು ಕಾದ ಉದಾಹರಣೆಗಳೂ ಇವೆ, ಮುಖ್ಯವಾಗಿ ನಟಿಯರು.
ಸಿಗುವ ಮಾಹಿತಿಯ ಪ್ರಕಾರ ಸುಮಾರು ಇಪ್ಪತ್ತಕ್ಕೂ ಹೆಚ್ಚು ನಟಿಯರು ಡಾ.ರಾಜ್ ಬ್ಯಾನರ್ ಮೂಲಕ ಕನ್ನಡ ಬೆಳ್ಳಿತೆರೆಗೆ ಬಲಗಾಲಿಟ್ಟಿದ್ದಾರೆ. ಅದರಲ್ಲಿ ಈಗಲೂ ನಾಯಕ ನಟಿಯಾಗಿ, ಪೋಷಕ ನಟಿಯರಾಗಿ ನಮ್ಮನ್ನು ರಂಜಿಸುತ್ತಿರುವವರು ಕೆಲವರು ಮಾತ್ರ.
ಅವರಲ್ಲಿ ಕೆಲವೊಂದು ನಟಿಯರ ಮಾಹಿತಿ ಸ್ಲೈಡಿನಲ್ಲಿದೆ

ಸುಧಾರಾಣಿ
1978ರಲ್ಲಿ ಕಿಲಾಡಿ ಕಿಟ್ಟು ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಸುಧಾರಾಣಿ, ರಾಜ್ ಬ್ಯಾನರಿನ ಆನಂದ್ (1986) ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾದರು. ಅದರ ಬೆನ್ನಲ್ಲೇ ಸಂಸ್ಥೆಯ ಮನಮೆಚ್ಚಿದ ಹುಡುಗಿ (1987) ಚಿತ್ರದಲ್ಲೂ ಶಿವರಾಜ್ ಕುಮಾರಿಗೆ ನಾಯಕಿಯಾಗಿ ನಟಿಸಿದ್ದ ಸುಧಾರಾಣಿ, ಸದ್ಯ ಪೋಷಕ ನಟಿಯಾಗಿ ನಟಿಸುತ್ತಿದ್ದಾರೆ.

ಆಶಾರಾಣಿ
1986ರಲ್ಲಿ ಬಿಡುಗಡೆಯಾದ ರಥಸಪ್ತಮಿ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಕಾಲಿಟ್ಟ ಆಶಾರಾಣಿ ಖ್ಯಾತ ಖಳನಟ ಶಕ್ತಿಪ್ರಸಾದ್ ಸೊಸೆ. ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ಅರ್ಜುನ್ ಸರ್ಜಾ ಮಡದಿ.

ಮಾಲಾಶ್ರೀ
1989ರಲ್ಲಿ ಬಿಡುಗಡೆಯಾದ ಸಾರ್ವಕಾಲಿಕ ಜನಪ್ರಿಯ ಚಿತ್ರಗಳಲ್ಲೊಂದಾದ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಾಲಾಶ್ರೀ ಮೂಲತ: ಮಲಯಾಳಂ ಮೂಲದವರು. ಅದೇ ವರ್ಷ ಬಿಡುಗಡೆಯಾದ ಗಜಪತಿ ಗರ್ವಭಂಗ ಚಿತ್ರ ಕೂಡಾ ಸೂಪರ್ ಹಿಟ್ ಆಗಿತ್ತು. ಈ ಎರಡೂ ಚಿತ್ರಗಳಲ್ಲಿ ರಾಘವೇಂದ್ರ ರಾಜಕುಮಾರ್ ನಾಯಕನಾಗಿ ನಟಿಸಿದ್ದರು.

ಮೋಹಿನಿ
1991ರಲ್ಲಿ ಬಿಡುಗಡೆಯಾದ ಕಲ್ಯಾಣ ಮಂಟಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ. ಚೆನ್ನೈ ಮೂಲದ ಮೋಹಿನಿ ಹೆಚ್ಚಾಗಿ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ.

ಪ್ರೇಮಾ
ರಾಜ್ ಬ್ಯಾನರಿನ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಮತ್ತೊಬ್ಬ ನಟಿ. 1995ರಲ್ಲಿ ಬಿಡುಗಡೆಯಾದ ಸವ್ಯಸಾಚಿ ಚಿತ್ರದ ಮೂಲಕ ಇನ್ನಿಂಗ್ಸ್ ಆರಂಭಿಸಿದ ಪ್ರೇಮಾ, ಅದೇ ವರ್ಷ ಬಿಡುಗಡೆಯಾದ ಓಂ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದರು.

ಶಿಲ್ಪಾ
ವಜ್ರೇಶ್ವರಿ ಕಂಬೈನ್ಸ್ ನಲ್ಲಿ ಮೂಡಿಬಂದ ಟಿ ಎಸ್ ನಾಗಾಭರಣ ನಿರ್ದೇಶನದ ಜನುಮದ ಜೋಡಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ. ಈ ಚಿತ್ರ 1996ರಲ್ಲಿ ಬಿಡುಗದೆಗೊಂಡಿತ್ತು.

ವಿದ್ಯಾ ವೆಂಕಟೇಶ್
ಶಿವರಾಂ ಕಾರಂತ ಕಾದಂಬರಿ ಆಧಾರಿತ ಚಿಗುರಿದ ಕನಸು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ. ಈ ಚಿತ್ರ 2003ರಲ್ಲಿ ಬಿಡುಗಡೆಯಾಗಿತ್ತು.

ರಕ್ಷಿತಾ
ಶ್ವೇತಾ ಆಲಿಯಾಸ್ ರಕ್ಷಿತಾ ಖ್ಯಾತ ಸಿನಿಮಾಟೋಗ್ರಾಫರ್ ಗೌರೀಶಂಕರ್ ಪುತ್ರಿ. ಪುನೀತ್ ರಾಜಕುಮಾರ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದ ಅಪ್ಪು ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ತನ್ನ ಸಿನಿಮಾ ಜೀವನವನ್ನು ರಕ್ಷಿತಾ ಆರಂಭಿಸಿದ್ದರು.

ರಮ್ಯಾ
ದಿವ್ಯ ಸ್ಪಂದನ ಆಲಿಯಾಸ್ ರಮ್ಯಾ ಪುನೀತ್ ರಾಜಕುಮಾರ್ ಅಭಿನಯದ ಅಭಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ. ಇದುವರೆಗೆ ನಾಲ್ಕು ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡಿರುವ ಸದ್ಯ ನೀರ್ ದೋಸೆ ಚಿತ್ರೀಕರಣದಲ್ಲಿ ಬ್ಯೂಸಿ.


Click it and Unblock the Notifications











