ಹಾಸ್ಯ ದಿಗ್ಗಜ ಉಮೇಶ್ ಚಿತ್ರರಂಗದ ಜರ್ನಿಗೆ 62 ವರ್ಷ: ಫಿಲ್ಮ್ ಚೇಂಬರ್ನಿಂದ ಅಭಿನಂದನೆ
ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜ ಉಮೇಶ್ ಯಾರಿಗೆ ಗೊತ್ತಿಲ್ಲ. ಹಾಸ್ಯ ಪಾತ್ರಗಳಿಂದಲೇ ಸುಮಾರು 6 ದಶಕಗಳ ಕಾಲ ಸಿನಿ ಪ್ರಿಯರನ್ನು ರಂಜಿಸಿದವರು ಇವರು. ಹಾಗಂತ ಕೇವಲ ಸಿನಿಮಾದಲ್ಲಿ ಅಷ್ಟೇ ಅಲ್ಲ. ರಂಗಭೂಮಿ, ಕಿರುತೆರೆಯಲ್ಲೂ ಉಮೇಶ್ ಜನಪ್ರಿಯರು.
ಸ್ಯಾಂಡಲ್ವುಡ್ಗೆ ಬಾಲ ಕಲಾವಿದನಾಗಿ ಉಮೇಶ್ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಆರಂಭ ಆದ ಇವರ ಜರ್ನಿ ಇಂದಿಗೂ ಮುಂದುವರೆದಿದೆ. 'ಮಕ್ಕಳ ರಾಜ್ಯ' ಅನ್ನೋ ಸಿನಿಮಾದಿಂದ ಚಿತ್ರರಂಗ ಪ್ರವೇಶ ಮಾಡಿದ್ದ ಉಮೇಶ್ ಇದೂವರೆಗೂ ಸುಮಾರು 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಹಿರಿಯ ನಟ ಹಾಸ್ಯ ಪಾತ್ರಗಳಿಗೆ ಹೆಚ್ಚು ಜನಪ್ರಿಯರು.
ಸಿನಿಮಾರಂಗದಲ್ಲಿ 62 ವರ್ಷ ಪೂರೈಸಿದ ಹಿರಿಯ ನಟ
ಉಮೇಶ್ ಸುಮಾರು ಆರು ದಶಕಗಳಿಂದ ಕಲಾಸೇವೆ ಮಾಡುತ್ತಿದ್ದಾರೆ. ಇವರ ಹಾಸ್ಯ ಪ್ರವೃತ್ತಿಗೆ ಮರುಳಾಗದವರೇ ಇಲ್ಲ. ಕನ್ನಡದ ಎವರ್ಗ್ರೀನ್ ಸಿನಿಮಾ 'ಗೋಲ್ ಮಾಲ್ ರಾಧಾಕೃಷ್ಣ', 'ಶೃತಿ ಸೇರಿದಾಗ', 'ಹಾಲು ಜೇನು', 'ಶ್ರಾವಣ ಬಂತು', 'ಗುರುಶಿಷ್ಯರು', 'ಮಲಯಮಾರುತ', 'ನೀನು ನಕ್ಕರೆ ಹಾಲು ಸಕ್ಕರೆ', 'ಚೈತ್ರದ ಪ್ರೇಮಾಂಜಲಿ' ಸೇರಿದಂತೆ ಎಂದೂ ಮರೆಯಲಾಗದಂತಹ ಸಿನಿಮಾಗಳಲ್ಲಿ ಉಮೇಶ್ ಅವರ ಪಾತ್ರ ಸಿನಿಪ್ರಿಯರು ಮರೆಯಲು ಸಾಧ್ಯವೇ ಇಲ್ಲ.

ಉಮೇಶ್ ನಟನಾ ಪಯಣಕ್ಕೆ 62 ವರ್ಷ ತುಂಬಿದೆ. ಹಿರಿಯ ನಟನ ಈ ಕಲಾ ಸೇವೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಭಿನಂದನ ಸಲ್ಲಿಸಿದೆ. ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್ ಹಾಗೂ ಪದಾಧಿಕಾರಿಗಳು ಉಮೇಶ್ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.
ಉಮೇಶ್ ಅಭಿನಯಕ್ಕೆ ಮರುಳಾಗದವರೇ ಇಲ್ಲ
ಹಲವು ಸಿನಿಮಾಗಳಲ್ಲಿ ಉಮೇಶ್ ಬಿಟ್ಟ ಡೈಲಾಗ್ ಇಂದಿಗೂ ಫೇಮಸ್. ವರನಟ ಡಾ.ರಾಜ್ ಕುಮಾರ್ ಅಂತಹ ಮೇರು ನಟರೊಂದಿಗೆ ನಟಿಸಿದ ಹೆಗ್ಗಳಿಕೆ ಇವರದ್ದು. 'ಶೃತಿ ಸೇರಿದಾಗ' ಚಿತ್ರದಲ್ಲಿ "ಇದು ಬೊಂಬೆಯಾಟವಯ್ಯಾ.." ಹಾಡಿನಲ್ಲಿ ಉಮೇಶ್ ಅವರ ಅಭಿನಯ ಎಂದಿಗೂ ಮರೆಯಲು ಸಾಧ್ಯವಿಲ್ಲ.
'ಕಥಾಸಂಗಮ'ದ 'ಮುನಿತಾಯಿ'ಯಲ್ಲಿ ತಿಮ್ಮರಾಯಿ ಪಾತ್ರ ಉಮೇಶ್ ಅವರದನ್ನು ಮತ್ತಷ್ಟು ಜನಪ್ರಿಯಗೊಳಿಸಿತ್ತು. ಈ ಪಾತ್ರಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಕೂಡ ದೊರೆತಿದೆ. ಇಲ್ಲಿವರೆಗೂ ಉಮೇಶ್ ಹೆಚ್ಚು ಮಂದಿಗೆ ಕೇವಲ ನಟರಾಗಿ ಗೊತ್ತು. ಆದರೆ, 'ಎಲ್ಲರಂತಲ್ಲ ನನ್ನ ಗಂಡ', 'ಜೇನುಗೂಡು', 'ಚನ್ನ' ಅಂತಹ ಸಿನಿಮಾಗಳನ್ನು ಉಮೇಶ್ ನಿರ್ದೇಶನ ಮಾಡಿದ್ದಾರೆ.

ಇದು ನನ್ನ ಸುದಿ ಎಂದ ಉಮೇಶ್
ಫಿಲ್ಮ್ ಚೇಂಬರ್ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಉಮೇಶ್, "ಇದು ನನ್ನು ಸುದಿನ ಅಂತ ಭಾವಿಸ್ತೀನಿ. ಚಿತ್ರರಂಗ ನನ್ನನ್ನು ಮನೆ ಮಗನಂತೆ ನೋಡಿದೆ. ಅಭಿಮಾನಿ ಅನ್ನದಾತರಿಂದ ಇಲ್ಲಿದ್ದೇನೆ. ಕಲಾಸೇವೆ ಮಾಡೋ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಸುಮಾರು 6 ದಶಕಗಳ ಕಾಲ ಕಲಾಸೇವೆ ಮಾಡುವುದು ದೊಡ್ಡ ಸಾಧನೆಯೇ ಸರಿ. ಅದರಲ್ಲೂ ಇಂದಿಗೂ ಉಮೇಶ್ ಕನ್ನಡ ಚಿತ್ರರಂಗದಲ್ಲಿ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇಳಿವಯಸ್ಸಿನಲ್ಲಿಯೂ ನಟನೆಯನ್ನು ಮುಂದುವರೆಸಿದ್ದಾರೆ. ಇನ್ನೂ ಹೆಚ್ಚು ಸಿನಿಮಾ ನಟಿಸಿ, ಸಿನಿಪ್ರಿಯರನ್ನು ರಂಜಿಸಲಿ ಎಂಬುದೇ ಅವರ ಆಸೆ.


Click it and Unblock the Notifications











